ಗುರುವಾರ, ಆಗಸ್ಟ್ 5, 2010

ಸ್ಪೂರ್ತಿ !!!


ಮಳೆಗಾಲದ ಆ ದಿನ ನಾ ಬೆಳೆಗ್ಗೇ ಎದ್ದು ಹೊರಗೆ ನೋಡಿದಾಕ್ಷಣ , ಇನ್ನೂ ಸ್ವಲ್ಪವತ್ತು ಕೂಡ ನಾ, ನಿದ್ದೆ ಮಾಡಿದ್ದರೆ ಇಷ್ಟೊಂದು ಸುಂದರವಾದ ಮುಂಜಾನೆಯನ್ನು ಕಳೆದುಕೊಳ್ಳುತಿದ್ದೇನಲ್ಲ ಎಂದೆನಿಸಿತು !!!!!

                ಆಹಾ ಹೊರಗೆ, ಇಷ್ಟೊಂದು ಸುಂದರವಾಗಿದ್ದ ವಾತಾವರಣ, ಭೂಮಿಗೆ ಎಲ್ಲಿ ನೋವಾಗುತ್ತೋ ಎಂದು ಮೃದುವಾಗಿ ಸುರಿಯುತ್ತಿರುವ ಆ ಜುಬ್ಬು ಮಳೆ ಹನಿಗಳು, ಮಳೆ ಹನಿಗಳನ್ನು ಬಾಚಿ ತಬ್ಬಲುಮೈಯೊಡ್ಡಿ ನಿಂತ ಹಸಿರು ಬಾಳೆಗಿಡದೆಲೆಗಳು, ಮಳೆ ಹನಿಗಳನ್ನು ತನ್ನೋಡಲಲ್ಲಿ ಹಿಡಿದಿಡಲು  ತವಕದಲಿ ನಿಂತಿದ್ದ  ಹಸಿರು ಗರಿಕೆ ಹುಲ್ಲು ಕಡ್ಡಿಗಳು,ಮಳೆಯ ಪೂರ್ಣಾನಂದವನ್ನು ಅನುಭವಿಸುತ್ತಾ ಇದ್ದ ಆ ಜೋಡಿ ಗುಬ್ಬಿಗಳು, ಸೂರ್ಯನನ್ನು ಮರೆಮಾಚಿದ  ಆ ಕಾರ್ಮೋಡಗಳು, ಮೋಡವನ್ನು ಛೇದಿಸಿ ಹೊರಗೆ ಬರಲು ಪ್ರಯಾಸಪಟ್ಟು ಸುಸ್ತಾದಂತೆ ಕಾಣುತಿದ್ದ ಸಪ್ಪೆ ಸೂರ್ಯ ರಷ್ಮಿಗಳು, ಅದೇ ಪ್ರಯತ್ನದಲ್ಲಿ ಸೂರ್ಯ ರಷ್ಮಿಗಳು ಸೋತು ಸುರಿಸಿದ ಬೆವರ ಹನಿಗಳೆ ಈ ಸುಂದರ ಮುಂಜಾವಿನ  ಮಳೆ ಎಂದೆನಿಸುತ್ತಿತ್ತು !! ಅಬ್ಬಾ ಒಟ್ಟಾರೆ  ಹೇಳುವುದಾದರೆ ಅದೊಂದು ಸಾಮಾನ್ಯ ದಿನವಾಗಿರಲಿಲ್ಲ. ನಾ ಸವಿಯಲು ನನಗೆ ಪ್ರಕೃತಿ ಕೊಟ್ಟ ಅದೊಂದು ಸುಂದರ ದಿನವೆಂದು ನನಗನಿಸುತ್ತಿತು !!!! 
                  ಅಷ್ಟರಲ್ಲಿ ಮನೆಯ ಒಳಗಿನಿಂದ ಅಮ್ಮ ಟೀ ಕುಡಿಯಲು ಕರೆದರು,ಒಲ್ಲದ ಮನಸಿನ್ನಿಂದ ಒಳಗೆ ಹೋಗಿ ಟೀ ಕುಡಿಯುತ್ತಿರುವಾಗ ಟೀವೀ ವಾರ್ತೆಯಲ್ಲೂ ರಾಜ್ಯದೆಲ್ಲೆಡೆ ಭಾರಿ ಮಳೆಯಾಗಿರುವ ಸುದ್ದಿ ಬರುತಿತ್ತು, ಎಂದಿನಂತೆ ಕಾವೇರಿ ನದಿಯನ್ನು ತೋರಿಸುತ್ತಾ ಇದ್ದರು. ನಮಗೆಲ್ಲ ಗೊತ್ತಿರುವ ಹಾಗೆ ನಾವು ಕರ್ನಾಟಕ ಯಾವುದೇ ಭಾಗದಲ್ಲಿದ್ದರು  ನಮ್ಮ ಕಾವೇರಿಯ ಮೇಲೆ ನಮಗೆ ಎಲ್ಲಿಲ್ಲದ ಅಭಿಮಾನ ಮತ್ತು ವ್ಯಾಮೋಹ ಅಲ್ಲವೇ , ಅದಕ್ಕಾಗಿ ನಾನು ಅದರ ವಿಷಯವನ್ನು ಗಮನವಿಟ್ಟು ನೋಡಿದೆ. ಸುಂದರವಾದ K.R.S ಡ್ಯಾಮ್, ಅಲ್ಲಿ  ನಿಂತಿರುವ ಆ ನೀರು, ಅದು ಬರಿ ನದಿಯಾಗಿ ಕಾಣಲಿಲ್ಲ ನನಗೆ ಅದು ಸಾಗರದಂತಿತ್ತು. ಅದನ್ನು ನೋಡಿದ ತಕ್ಷಣ ನನಗೆ ನೆನಪಾಗಿದ್ದು ಮತ್ತೊಂದು ಸಾಗರ, ಅದು ಬಾರಿ ಸಾಗರವಲ್ಲ ಜ್ಞಾನ ಸಾಗರ,ಕಾಯಕ ಯೋಗಿ, ಮತ್ತ್ಯಾರೂ ಅಲ್ಲ ಅದರ ನಿರ್ಮಾತೃ Sir M.V.  ನಾವೆಲ್ಲ ಸದಾ ಅವರನ್ನು ನೆನೆಪಿಸಿಕೊಂಡರು ಕೂಡ ನಾವು  ಈ ದಿನ ಅವರ ಸಾಧನೆಯನ್ನು ಸ್ಮರಿಸಲೇಬೇಕು . Sir M.Vಯವರು ನಮ್ಮಂತೆ ಹೊಟ್ಟೆಪಾಡಿಗೆ,ಹಣಗಳಿಸಲು, ಎಂಜಿನೀರ್ ಆದವರಲ್ಲ. ದೇಶದ ಹಿತಕ್ಕಾಗಿ ,ನಮ್ಮೆಲ್ಲರ ಒಳಿತಿಗಾಗಿ,ಸಂಪನ್ಮೂಲಗಳ ಸಂಪೂರ್ಣ ಬಳಕೆಗಾಗಿ, ಬಾಲ್ಯದಲ್ಲಿ ಎಷ್ಟೇ ಕಷ್ಟ ಇದ್ದರು, ದೇವರೇ ಅವರಿಗೆ ಆ ಶಕ್ತಿ ಕೊಟ್ಟು ಅವರನ್ನು ಎಂಜಿನೀರ್ ಮಾಡಿದ್ದ ಅನ್ನಿಸುತ್ತೆ. ಅದೇ ರೀತಿ ಅವರು ಕೂಡ ದೇಶದ ಕೆಲಸಗಳನ್ನು ವೈಯಕ್ತಿಕ ಕೆಲಸಗಳಷ್ಟೇ ಶ್ರದ್ದೆ ಮತ್ತು ಬುದ್ದಿವಂತಿಕೆಯಿಂದ ಮಾಡಿದರು. ಅವರು ಓದಿದ್ದು ಸಿವಿಲ್ ಇಂಜಿನಿಯರಿಂಗ್ ಆದರೂ ಅವರು ತಮ್ಮ ಕಾರ್ಯ ಕ್ಷೇತ್ರವನ್ನು ಬರಿ ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ಸೀಮಿತಗೊಳಿಸದೇ, ಬ್ಯಾಂಕಿಂಗ್,ಟೆಕ್ಸ್‌ಟೈಲ್,ಇನ್‌ಫ್ರಾಸ್ಟ್ರಕ್ಚರ್ ಮತ್ತಿತರ ಕ್ಷೇತ್ರಗಳಿಗೂ ವಿಸ್ತರಿಸುತ್ತಾರೆ. ಇವೆಲ್ಲವಕ್ಕೂ ಸಾಕ್ಷಿ ಎಂಬಂತೆ ಇಂದು ಬೃಹದಾಕಾರವಾಗಿ ಬೆಳೆದು ನಿಂತಿರುವ ಭದ್ರಾವತಿ ಉಕ್ಕಿನ ಕಾರ್ಖಾನೆ, ಮಹಾತ್ಮ ಗಾಂಧಿ ಪವರ್ ಹೌಸ್,ಜೋಗ್,  KRS  ನಂತಹ ಡ್ಯಾಮುಗಳು ,ಬ್ಯಾಂಕುಗಳು ಮತ್ತು ಇನ್ನೂ ಹತ್ತು ಹಲವು !!!  ಅವರ ದೂರದೃಷ್ಟಿ ಹೇಗಿತ್ತೆಂದರೆ 1930 ರಲ್ಲೇ ಅವರು ಇಂಗ್ಲೆಂಡ್ ಇಂದ ಭಾರತಕ್ಕೆ ಅನೇಕ ಬಗೆಯ ಟೆಕ್ಸ್‌ಟೈಲ್ ( ಜವಳಿ ) ಯಂತ್ರಗಳನ್ನು   ತರಿಸುತ್ತಾರೆ , ಇದು ಬಟ್ಟೆ ಉದ್ಯಮದ ಬೆಳವಣಿಗೆಗೆ ಅಥವಾ ಕ್ರಾಂತಿಗೆ ನಾಂದಿಯಾಗುತ್ತದೆ. ವೈಯಕ್ತಿಕವಾಗಿ  ಕೂಡ ಅವರು ತುಂಬಾ ಶಿಸ್ತು ಬದ್ಧ ಹಾಗೂ ಸದಾ ಚಟುವಟಿಕೆಯುಕ್ತ  ಜೀವನವನ್ನು ನೆಡೆಸುತ್ತಾರೆ. ಇಂತವರ ಜೀವನ ನಮ್ಮೆಲರಿಗೂ ಆದರ್ಶವಾಗಬೇಕಿದೆ. ಇವರು ಹುಟ್ಟಿದ ನಾಡಲ್ಲಿ ನಾವು ಹುಟ್ಟಿದ್ದೇವೆ ಮತ್ತೆ ಅವರ ಯೋಜನೆಗಳ ಲಾಭ ಪಡೆಯುತ್ತಿರುವುವ ನಾವೆಲ್ಲರೂ ತುಂಬಾ ಭಾಗ್ಯಶಾಲಿಗಳು. ಅವರು  ಮಾಡಿದಷ್ಟು ಕೆಲಸಗಳನ್ನು ಅಥವಾ ಆ ರೀತಿಯ ಜೀವನವನ್ನು ನಮ್ಮಿಂದ ಮಾಡಲು ಹಾಗೂ ನೆಡೆಸಲು ಆಗುವಿದಿಲ್ಲವೆಂಬುದು ನಿಜ. ಅವರ ಜೀವನವನ್ನು ಬರಿ ಓದಿ ತಿಳಿಡಿಕೊಳ್ಳುವುದರ ಜೊತೆಗೆ ಅಥವಾ ಸಾಧನೆಗಳನ್ನು ಹಾಡಿ ಹೊಗಳುವುದರ ಜೊತೆಗೆ, ಅವರ ಕೆಲವೇ ಕೆಲವು ಅಂಶಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ ನಾವು ಉತ್ತಮ ಮತ್ತು ಸಾರ್ಥಕ ಜೀವನವನ್ನು ನೆಡೆಸಬಹುದು ಅಂತ ನನ್ನ ಅನಿಸಿಕೆ.
                Sir M.V ಅವರ  ಬಗ್ಗೆ ಯೋಚಿಸುತ್ತಾ  ಈ ಬ್ಲಾಗನ್ನು  ಉಪಾಂತ್ಯದವರೆಗೆ  ಬರೆದು ಮುಗಿಸುವ ಹೊತ್ತಿಗೆ ಅಮ್ಮ ಬಿಸಿ ಬಿಸಿ ತಿಂಡಿ ಮಾಡಿ ಕರೆದರು, ಅದು ಆರುವ ಮೊದಲೇ ಸ್ವಾಹ ಮಾಡಿ, ಅಂದಿನ ಅದ್ಭುತ ವಾತಾವರಣವನ್ನು ಸವಿಯಲು ನಾ ಕೊಡೆ ಹಿಡಿದು ಹೊರಗೆ ಹೋಗಿ , ಪ್ರಕೃತಿಯಲ್ಲಿ ಒಂದಾದೆ !!!!!

ನಿಮಗಾಗಿ,
ನಿರಂಜನ ಮೂರ್ತಿ ಏಚ್ ಓ