ಶನಿವಾರ, ಜುಲೈ 27, 2013

ನಂಬಿಕೆ


                                                                             ನಂಬಿಕೆ

ತ್ತೀಚಿನ ದಿನಗಳಲ್ಲಿ  ನಾನು ಈ ಚೆನ್ನೈ ಮತ್ತೆ ಬೆಂಗಳೂರುಗಳ ನಡುವೆ ಬಹುವಾಗಿ ಪ್ರಯಾಣ ಮಾಡುತ್ತಿದ್ದೇನೆ ಕೆಲಸದ ನಿಮಿತ್ತ. ಇಂಥಹ ಹಲವು ಪ್ರಯಾಣಗಳನ್ನು ನಾನು ಬಸ್ಸು, ಟ್ರೈನ್ ಹಾಗು ಕಾರುಗಳಲ್ಲಿ ಮಾಡಿದ್ದೆನಾದರು , ರೈಲು ಪ್ರಯಾಣದ ಅನುಭವವೇ ಒಂದು ರೀತಿಯಲ್ಲಿ ಹಿತವಾಗಿರುತ್ತೆ ಅನ್ನುವುದು ನನ್ನ ಭಾವನೆ. ನಾನೇಕೆ ಹೀಗೆ ಹೇಳುತ್ತಿದ್ದೇನೆ ಎಂದರೆ, ಒಂದೊಂದು ಸಾರಿ ನಾವು ರೈಲು ಏರಿದರೂ ಒಂದೊಂದು ರೀತಿಯ ಅನುಭವಗಳು ನಮಗಾಗುತ್ತವೆ.ಹಲವು ರೀತಿಯ ವ್ಯಾಪಾರ-ವಹಿವಾಟುಗಳನ್ನು, ಅನೇಕ ಬಗೆಯ ಮಾತು-ಮೋಜುಗಳನ್ನು, ದೊಡ್ಡವರನ್ನು ,ಸಣ್ಣವರನ್ನು, ಬೇರೆ ಬೇರೆ ಜಾತಿ-ದರ್ಮಗಳನ್ನು ಬೇದ ಭಾವವಿಲ್ಲದೆ ಒಂದೆಡೆ ಸೇರಿಸುವುದು ನಮ್ಮ ಈ ರೈಲುಗಳು ಎಂದರೆ ತಪ್ಪಾಗಲಾರದು. ನಿಜ ಹೇಳಬೇಕೆಂದರೆ ವಿವಿದ ರೀತಿಯ ಜಾತಿಗಳು, ಧರ್ಮಗಳು, ಎಲ್ಲ ದ್ವೇಷ ಅಸೂಯೆಗಳನ್ನು ಮರೆತು ಅಕ್ಷರಶ ಜೊತೆಯಾಗಿ ಕಲೆಯುವುದು, ಕೂರುವರು, ತಿನ್ನುವರು, ಹರಟುವುದು, ಮಲಗುವುದು, ಮೇಲೂ-ಕೀಳೆನ್ನದೆ ಮುಂದೆ ಸಾಗುವುದು  ಈ ರೈಲು ಡಬ್ಬಿಗಳಲ್ಲಿ ಮಾತ್ರ. ಜೊತೆಗೆ  ಆಗ್ಗಿಂದಾಗೆ  ರುಚಿ ಇರುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ವಾಸನೆಯನ್ನು ಮಾತ್ರ ಅದ್ಬುತವಾಗಿ  ಬೀರುವ ಆ ರೈಲು ತಿಂಡಿಗಳು ಕೂಡ ನಮ್ಮನ್ನು ರೈಲು ಪ್ರಯಾಣಕ್ಕೆ ಪ್ರೇರೇಪಿಸುತ್ತವೆ. ಹಾಗಾಗಿ ನನಗೆ ಇತ್ತೀಚಿನ ದಿನಗಳಲ್ಲಿ ಈ ರೈಲು ಪ್ರಯಾಣ ಸಕತ್ ಇಶತವಾಗುತ್ತೆ. 

            ಹೀಗೆ ನಾನು ಮಾಡಿರುವ ಅನೇಕ ರೈಲು ಪ್ರಯಾಣಗಳಲ್ಲಿ ನನಗೂ ಕೂಡ ಬಗೆಬಗೆಯ ಅನುಭವಗಳಾಗಿವೆ, ಇಂಥಹ ಅನೇಕದರಲ್ಲಿ, ಒಂದು ದಿನ ನನಗಾದ ಒಂದು ಸಣ್ಣ ಅನುಭವವನ್ನು ಮಾತ್ರ ನಿಮ್ಮ ಮುಂದೆ ಬಿಚ್ಚಿಡುವ ಸಲುವಾಗಿ ಈ ಲೇಖನ ಬರೆಯುವ ಮನಸ್ಸನ್ನು ನಾನು ಮಾಡಿದೆ. ಈ ಕಾಲದಲ್ಲಿ ನಾವೆಷ್ಟೇ ಓದಿದ್ದರು ಅದು ಕೇವಲ ಓದು, ಹೊಟ್ಟೆವರಿಯಲು ನಾವು ಮಾಡಿಕೊಂಡ ದಾರಿ ಮಾತ್ರ,  ನಮಗರಿಯದ ವಿಷಯಗಳು ಬಹಾಳೋಷ್ಟಿವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕಾದ ವಿಚಾರ. ಹಾಗೆಯೇ ನಮಗರಿಯದ ಅದೆಷ್ಟೋ ವಿಷಯಗಳನ್ನು ನಾವು ನಮ್ಮ ಅನುಭವಗಳಿಂದಾನೋ ಅಥವಾ ನೋಡಿಯೋ ಕಲಿಯಬಹುದು. ನನಗನಿಸಿದ ಮಟ್ಟಿಗೆ ಅಂಥಹ ಅನೇಕ ಅನುಭವಗಳು ನಮ್ಮ ಜೀವನದ ದಿಕ್ಕುಗಳನ್ನೇ ಒಮ್ಮೊಮ್ಮೆ  ಬದಲಾಯಿಸಬಹುದು,  ಜೀವನವನ್ನು ನೋಡುವ, ರೂಪಿಸಿಕೊಳ್ಳುವ  ರೀತಿಯನ್ನೂ ಕೂಡ ಬದಲಾಯಿಸಬಹುದು.


             ಅದೊಂದು ದಿನ ಮಧ್ಯಾನ , ಬರೀ ಮಧ್ಯಾಹ್ನ ಅಲ್ಲ , ಮಟಮಟ ಮದ್ಯಾಹ್ನ , ಆಫಿಸ್ ಬಿಟ್ಟು , ಸುಮಾರು ೩.೨೦ಕ್ಕೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ಸೇರಿದೆ. ಬೇಸಿಗೆ ಚೆನ್ನೈಯಲ್ಲಿ ಹೊತ್ತಿ ಉರಿಯುತ್ತಿತ್ತು , ಬಿಸಿಲ ಜಳ ಬಿಡದೆ ದಾರಿಯುದ್ದಕ್ಕೂ ನನ್ನನ್ನು ಕಾಡಿದ್ದರೆ , ನಿಲ್ದಾಣದಲ್ಲಿ ನನ್ನನು ಬಿಸಿಲ ಧಗೆ ಕಾಡಲಾರಂಬಿಸಿತ್ತು. ಅಪ್ಪ.... ಅಂತು-ಇಂತು ನಿಲ್ದಾಣ ಸೇರಿದೆ, ಇನ್ನೈದು ದಿನ ಈ ಚೆನ್ನೈ ಸಹವಾಸ ಸಾಕೆಂದು ನಿಟ್ಟುಸಿರು ಬಿಟ್ಟು, ಒಂದು ಬಾಟಲ್ ನೀರು ತಗೊಂಡು, ನಿಂತಿದ್ದ ಲಾಲ್ ಬಾಗ್ express ರೈಲನ್ನೆರಿದೆ. ಇನ್ನು ರೈಲು ಹೊರಡಲು ೧೫ ನಿಮಿಷ ಬೇಕಿತ್ತು. ಅಬ್ಭಾ ಅದೆಷ್ಟು ಸೆಕೆ ರೈಲಿನಲ್ಲಿ ಎಂದರೆ ದೇಹದ ಎಲ್ಲ ಭಾಗಗಳಲ್ಲೂ ನೀರಿನ ಬುಗ್ಗೆಗಳು ಆಷ್ಟೊತ್ತಿಗೆ ಚಿಮ್ಮತೊಡಗಿದ್ದವು. ಇರುವೆಲ್ಲ ರಂದ್ರಗಳಲ್ಲೂ ಬೆವರೋ ಬೆವರೋ. ಆ ಬೆವರಧಾರೆಯಲ್ಲಿಯೇ ರೈಲಿನಲ್ಲಿ ನಾನು ಮುಂಚಿತವಾಗಿ ಕಾಯಿದಿರಿಸಿದ ಜಾಗ ಗುರುತಿಸಿ ನನ್ನ ಬ್ಯಾಗ್ ಇಟ್ಟೆ ಕೂತೆ. ರೈಲು ಒಳ್ಳೆ ಓವೆನ್ ತರಾ ಆಗಿತ್ತು ಆ ಬಿಸಿಲಿನ ಹೊಡೆತಕ್ಕೆ. ಹಾಗಾಗಿ ಹೊರಡುವುದಕ್ಕೆ ಇನ್ನು ಸಮಯವಿದ್ದುದ್ದರಿಂದ ಕೆಳಗಿಳಿದು ಬೆವರೋರಸಿಕೊಳ್ಳಲು ಕರ್ಚಿಫ್ ತಗೆದರೆ ಅದು ತೆಗೆಯುವ ಮೊದಲೇ ಜೇಬಿನಲ್ಲಿ ನೆನೆದು ಹೋಗಿತ್ತು ! . 

             ಬೆಂಗಳೂರಿನಲ್ಲಿ ದುಡಿಯುವ ಜನರು ಕೂಡ ಬೆವರು ಸುರಿಸುವುದಿಲ್ಲ , ಆದರೆ  ಚೆನ್ನೈಯಲ್ಲಿ ಎಲ್ಲರು ಬೆವರು ಸುರಿಸೇ ಸುರಿಸುತ್ತಾರೆ , ಅದೆಷ್ಟು ದುಡಿಯುತ್ತರೋ ಇಲ್ಲವೋ ಗೊತ್ತಿಲ್ಲ. ರೈಲಿನಲ್ಲಿ ಬರುವ ಬಿಕ್ಷುಕರಿಗೆ ಬೆಂಗಳೂರಿನಲ್ಲಿ ಹೇಳುವ ಹಾಗೆ " ಬೆವರು ಸುರಿಸಿ ದುಡಿಯೋದು ಬಿಟ್ಟು , ಬಿಕ್ಷೆ ಕೇಳ್ತೀರಲ್ಲ, ನಿಮಗೆ ನಾಚಿಕೆ ಆಗೋಲ್ಲವಾ " ಅಂತ ಅಪ್ಪಿತಪ್ಪಿಯೂ ಹೇಳಿದರೆ,  ಅವರು ನಮ್ಮ ಮುಖಕ್ಕೇ ತುಪುಕ್ ಅಂತ ಉಗುದು "ಅಯ್ಯ ತಂಬಿ, ನೋಡು ನಾವು ಕೂಡ ಹೇಗೆ ಬೆವರು ಸುರಿಸುತ್ತೇವೆ " ಎಂದು ತಮ್ಮ ಬೆವರಿನ ಸೌಗಂಧವನ್ನು ನಮ್ಮ ಮೂಗಿಗೆ ಸೂಸಿ, ಮುಖಕ್ಕೆ ಬೆವರ ಪ್ರೋಕ್ಷಣೆ  ಕೂಡ ಮಾಡಿ ಬಿಡುವರು. ಸೂರ್ಯ ಚಂದ್ರರನ್ನೂ ನೋಡಿರದ ಜೀವಿಯು ಈ ಭಾಮಿಯ ಮೇಲೆ ಇದ್ದರೂ  ಇರಬಹುದು ಆದರೆ ಚೆನ್ನೈಲ್ಲಿ ಬೆವರದ ಪುಣ್ಯಾತ್ಮನಿಲ್ಲ.  ಚೆನ್ನೈ ಅಲ್ಲಿ ನಮ್ಮಂಥ ಇಂಜಿನಿಯರ್ಸ್ ಕೂಡ ಬೆವರು ಸುರಿಸೆ ದುಡಿಯಬೇಕು !....  ಅಷ್ಟೊತ್ತಿಗೆ ಸ್ವಲ್ಪ ಸಮಯ ಕಳೆಯಿತು, ರೈಲು ಕೂಗಿದಾಕ್ಷಣ , ಹೋಗಿ ನನ್ನ ಜಾಗದಲ್ಲಿ ಕೂತುಕೊಂಡೆನು. ರೈಲು ನಿದಾನವಾಗಿ ಚಲಿಸತೊಡಗಿದಾಗ ನಿಜವಾಗಿಯೂ ನಿಟ್ಟುಸಿರು ಬಿಟ್ಟು ಬೀಸುವ ಬಿಸಿಗಾಳಿಗೆ ಮುಖವೊಡ್ಡಿ ಕೂರುವ ಅದೃಷ್ಟವನ್ನು ಶಪಿಸುತ್ತ ಬೆಂಗಳೂರಿನ ಕಡೆ ಪ್ರಯಾಣವನ್ನು ಆರಂಭಿಸಿದೆ.

           ಅಷ್ಟೊತ್ತಿಗೆ ಅನೇಕ , ಚಟುವಟಿಕೆಗಳು ರೈಲಿನಲ್ಲಿ ಆರಂಭಗೊಂಡಿದ್ದವು. ರೈಲು ಓಡಲು ಶುರುಮಾಡಿತೆಂದರೆ ರೈಲಿನಲ್ಲಿ ಬೇರೆಯೇ ಜಗತ್ತೇ ಸೃಷ್ಟಿಯಾಗುತ್ತೆ. ಒಮ್ಮೆಯೂ ಮುಖಗಳನ್ನು ನೋಡಿಕೊಂಡಿರದ ಅನೇಕರು ಸ್ನೇಹಿತರಾಗುತ್ತಾರೆ, ಮಾತುಗಳು ಶುರುವಾಗುತ್ತವೆ, ರಾಜಕೀಯ, ಪ್ರಪಂಚದ ಆಗುಹೋಗುಗಳೆಲ್ಲ ರೈಲ ಡಬ್ಬಿ ಸೇರುತ್ತವೆ. ಮಾರಾಟಗಾರರು ಅನೇಕ ಬಗೆಯ ವಸ್ತುಗಳನ್ನು ತಂದು ಮಾರುತ್ತಾರೆ. ಪೆನ್ನು, ಪುಸ್ತಕ, ಹಣ್ಣು-ಹಂಪಲುಗಳು, ಬಟ್ಟೆಬರೆ, ಅಲಂಕಾರಿಕೆ ವಸ್ತುಗಳು, ಆಟಿಕೆಗಳು, ತಿಂಡಿ-ತಿನಿಸುಗಳು,ದವಸ-ದಾನ್ಯಗಳು ಇನ್ನು ಅನೇಕ ಬಗೆಯ ವ್ಯಾಪಾರ ನಡೆಯುತ್ತೆ. ಇದೆಲ್ಲ ಅದೆಷ್ಟು ಜನರ ಹೊಟ್ಟೆಪಾಡಿಗೆ ಸಹಾಯವಾಗುತ್ತೋ ದೇವರಿಗೆ ಗೊತ್ತು. ಕೆಲವರು ಈ ಎಲ್ಲ ವಸ್ತುಗಳನ್ನೊತ್ತು ಮಾರಿ, ಕಷ್ಟ ಪಟ್ಟು ಸಂಪಾದಿಸಿದರೆ, ಇನ್ನು ಕೆಲವರು ಬೇರೆ ರೀತಿಯಾಗೆ ಸಂಪಾದಿಸುತ್ತಾರೆ. ಮಂಗಳಮುಖಿಗಳು ಗುಂಪಾಗಿ  ಬಂದರೆ ಸಾಕು ಜನ ಚಕಾರವೆತ್ತದೆ ತೆಪ್ಪಗೆ ದುಡ್ಡು ತೆಗೆದು ಕೊಡುತ್ತಾರೆ. ಮತ್ತೆ ಅನೇಕ ಸೋಗಲಾಡಿಗಳು ನನಗದಿಲ್ಲ-ಇದಿಲ್ಲ ಅನ್ನುತ್ತ, ದೇಹ ನ್ಯೂನತೆಗಳು ಇರದಿದ್ದರೂ ಇರುವ ಹಾಗೆ ತೋರಿಸಿ ಹೆಣ್ಣುಮಕ್ಕಳ, ಚಿಕ್ಕಮಕ್ಕಳ ಕನಿಕರಗಿಟ್ಟಿಸಿ ಖಾಸು ಸಂಪಾದಿಸುತ್ತಾರೆ. ಈ ರೀತಿಯ ಲೋಕವೇ ರೈಲಿನಲ್ಲಿ ಪ್ರತಿ ಸಾರಿಯೂ ಸೃಷ್ಟಿಯಾಗುತ್ತೆ. ಅದೇ ರೀತಿ ಆ ದಿನವೂ  ಪ್ರಯಾಣದ ಒಂರ್ದಗಂಟೆಯಲ್ಲಿಯೇ ಇದೆಲ್ಲವೂ  ನನ್ನ ಕಣ್ಮುಂದೆ ಬಂದಿತು. 

              ಮೇಲೆ ಹೇಳಿದ ರೀತಿಯಲ್ಲಿ ಈ ವ್ಯಾಪಾರ-ವಹಿವಾಟುಗಳು ರೈಲಿನಲ್ಲಿ ಬಹು ಸಹಜವಾಗಿ ನಡೆಯುತ್ತವೆ ಮತ್ತು ಈ ರೀತಿಯ ವ್ಯಾಪಾರ  ಅಲ್ಲಿ ತೀರ ಸಾಮಾನ್ಯದ ವಿಷಯವೂ ಕೂಡ. ಆದರೆ ಆ ದಿನ ಮಾತ್ರ  ನನಗೆ ಒಂದು ಆಶ್ಚರ್ಯ ಕಾದಿತ್ತು. ಸಾಮಾನ್ಯವಾಗಿ ನಾನು ರೈಲಿನಲ್ಲಿ ಏನನ್ನು ಖರೀದಿಸುವುದಿಲ್ಲ ಆದರೆ ನನಗೆ ಅವತ್ತು ಒಂದು ವಸ್ತುವಿನ ಅಗತ್ಯತೆ ತೀರ ಕಾಡತೊಡಗಿತ್ತು. ಅದೇನಪ್ಪ ಅಂದರೆ ಇಳಿಯುವ ಬೆವರೋರೆಸಲು ಅಗತ್ಯವಾಗಿ ಬೇಕಿದ್ದ ಕರ್ಚಿಫ್. ನನ್ನ ಬಳಿ ಇದ್ದದ್ದು ತೊಯ್ದು , ಗಮ್ಮೆನ್ನುತ್ತಿತ್ತು. ಹಾಗಾಗಿ ದೂರದಲ್ಲಿ " ಕರ್ಚೀಫ್ ಕರ್ಚೀಫ್ , ಕರ್ಚೀಫ್ " ಎಂದು ಕೂಗುತ್ತ ಬರುತ್ತಿದ್ದವನನ್ನು ನೋಡಿದೆ. ಹತ್ತಿರ ಬಂದಾಗಲೇ ನನಗೆ ಗೊತ್ತಾಗಿದ್ದು ಆ ಮನುಷ್ಯ ಕಣ್ಣಿಲ್ಲದ ಕುರುಡನೆಂದು. ನೋಡಿದ ತಕ್ಷಣವೇ ಕನಿಕರ ಬಂತಾದರೂ , ಕಷ್ಟಪಟ್ಟು ದುಡಿಯುವ ಆತನ ಮನೋಭಾವ ನನಗೆ ತುಂಬಾ ಮೆಚ್ಚಿಗೆಯಾಯಿತು. ಆತ ತನ್ನ ಒಂದು ಕೈಯಲ್ಲಿ ಒಂದು ಮಾಧರಿಯ , ಮತ್ತೊಂದು ಕೈಯಲ್ಲಿ ಮತ್ತೊಂದು ಮಾಧರಿಯ ಕರ್ಚಿಫ್ ಇಟ್ಟುಕೊಂಡಿದ್ದ. ಜೊತೆಗೆ ಹೆಗಲಿಗೊಂದು ಚೀಲ, ಚೀಲದಲ್ಲಿ ಮತ್ತೊಷ್ಟು ಬಗೆಯ ಕರ್ಚೀಫುಗಳು ಇದ್ದವು. ಸುಮಾರು ೪೦ ವರ್ಷದ ಪ್ರಾಯವಿರಬಹುದು, ಮುಖದಲ್ಲಿ ನಿರಾಸೆಯ ಒಂದಂಶವೂ ಇರಲಿಲ್ಲ. ನೋಡಿದಾಕ್ಷಣವೇ ತಿಳಿಯುತ್ತಿತ್ತು ಆತ ಹುಟ್ಟು ಕುರುಡನೆಂದು. ನಾ "ಇಲ್ಲಿ ತಿರುಗಿ" ಅಂದಾಕ್ಷಣ " ಆತ ನನ್ನ ಕಡೆ ತಿರುಗಿ ಕರ್ಚೀಫ್ ಬೇಕಾ ಸಾರ್ " ಎಂದಾಗಲೇ ನನಗೆ ತಿಳಿಯಿತು ಆತ ಬಹು ಚುರುಕಾದ ಮನುಷ್ಯನೆಂದು. ತನ್ನ ಎಡಗೈಯನ್ನು ಮುಂದೆ ಚಾಚಿ " ಇದು ತಗೊಳ್ಳಿ ಸಾರ್, ಒಳ್ಳೆ quality ಬಟ್ಟೆ , ಒಳ್ಳೆ ಬಣ್ಣ , ಚೆನ್ನಾಗಿ ಬಾಳಿಕೆ ಬರುತ್ತೆ ಸಾರ್ " ಎಂದಾಗ ನನಗೇನೋ ಒಂದು ಬಗೆಯ ವಿಚಿತ್ರ ಅನುಭವ, ಈತನಿಗೆ ಕಣ್ಣಿಲ್ಲ ಆದರೂ  ವ್ಯಾಪಾರ ಮಾಡುತ್ತಿದ್ದಾನೆ ಎಂದು. ಅವನ ಆ ಮಾರ್ಕೆಟಿಂಗ್ style ನನಗೆ ತುಂಬಾ ಹಿಡಿಸಿತು. ಆತನ attitude ನಾ ಕುರುಡ ಎಂದು ಕರುಣೆಗಿಟ್ಟಿಸಿ ವ್ಯಾಪಾರ ಮಾಡುವ ರೀತಿಯಲ್ಲಿ ಇರಲಿಲ್ಲ. ಅದೊಂದು ಬಗೆಯ ಬೇರೇನೇ ತರಹ ಇತ್ತು. 

              ಆತನು ಹೇಳಿದ ಹಾಗೆ ನಾನು ಆತನ ಎಡಗೈಯ ಮೇಲಿಂದ ಒಂದು ಕರ್ಚೀಫ್ ತಗೆದುಕೊಂಡು ಒಂದದಿನೈದು  ಸೆಕೆಂಡ್ ನೋಡುತ್ತಿದ್ದೆ , ಅಷ್ಟರಲ್ಲಿ ಆತ " ಯಾಕೆ ಸಾರ್ ಇಷ್ಟ ಆಗಲಿಲ್ಲವಾ , ಹಾಗಾದರೆ ನನ್  ಬ್ಯಾಗ್ ಅಲ್ಲಿ ಇರೋದನ್ನ ತಗೊಳ್ಳಿ ಸಾರ್, ತುಂಬಾ ಚೆನ್ನಾಗಿವೆ , ಸ್ವಲ್ಪ costly ಆಗುತ್ತೆ " ನಸು ನಗುತ್ತಲೇ  ಹೇಳಿದ. ನಾ ೫-೬ ಸೆಕೆಂಡ್ ಕಾಲ ಏನನ್ನು ನಿರ್ಧರಿಸದೆ ಇದ್ದಾಗ ಆತ ಚುರುಕಾಗಿ ನನ್ನ ಮನಸ್ಸನ್ನು ಅರಿತು ಬೇರೆ ಮಾದರಿ ಕರ್ಚೀಫ್ ನೋಡಿ ಅಂತ ಹೇಳಿದ.  ಇದು ಆತನ ವ್ಯಾಪಾರ ಚತುರತೆಯನ್ನು ತೋರಿಸಿತಿತ್ತು. ನಾನು ಆತನ ಚೀಲದೊಳಗೆ ಕೈಹಾಕಲು ಸ್ವಲ್ಪ ಹಿಂದೆ ಮುಂದೆ ಮಾಡಿದಾಗ , " ಪರವಾಗಿಲ್ಲ ತಗೋಳಿ ಸಾರ್, ನೀವೇ ತಗೋಳಿ " ಎಂದನು. "ಇದೇನಪ್ಪ ಯಾವ ನಂಬಿಕೆ ಮೇಲೆ ಈ ಮನುಷ್ಯ ಈ ರೀತಿ ಹೇಳುತ್ತಾನೆ " ಅಂತ ನನ್ನ ಮನಸ್ಸಿನಲ್ಲಿ ಒಂದು ಪ್ರಶ್ನೆ ಎದ್ದಿತು.  ನಾ ಚೀಲದಲಿದ್ದ ಒಂದನ್ನು ತಗೆದು ನೋಡಿದೆ  ಅದು ಇಷ್ಟವಾಯಿತು. " ಇದು ನನಗಿರಲಿ " ಅಂತ ಹೇಳಿ , " ಈ ಕರ್ಚೀಫ್ ಗೆ ಎಷ್ಟು ? " ಎಂದು ಕೇಳಿದೆ. ಮೊದಲು ಇಡಿದಿದ್ದ ಆ ಕರ್ಚೀಫ್ ಅನ್ನು ಆತನ ಎಡಗೈ ಮೇಲೆ ಹಾಕಿದೆ ನಾ. " ಸಾರ್ ಅದು ೫೦ ರುಪಾಯಿ , ಸ್ವಲ್ಪ costly ದು ಸಾರ್, ಆದ್ರೆ ತುಂಬಾ ಒಳ್ಳೆಯದು" ಎಂದು ಹೇಳಿದಾಗ. ನನಗೆ ಚೌಕಾಷಿ ಮಾಡಲು ಮನಸ್ಸು ಒಪ್ಪಲಿಲ್ಲ. ಸರಿ "ನಾ ಇದನ್ನೇ ತಗೊಂತೀನಿ " ಎಂದು , ನನ್ನ ಪರ್ಸ್ ತೆಗೆದು ನೋಡಿದೆ. ೫೦ ರುಪಾಯಿ ನೋಟು ಇರಲಿಲ್ಲ ಬದಲು ೧೦೦ , ೫೦೦ ರೂಪಾಯಿಗಳು ಇದ್ದವು. " ಚೇಂಜ್ ಇದೆಯಾ ನಿಮ್ಮತ್ರ " ಎಂದಾಗ " ಇಲ್ಲ ಸಾರ್ , ನೀವೇ ಸ್ವಲ್ಪ  ನೋಡಿ ಸಾರ್ " ಎಂದು ಹೇಳಿದ ಆ ಮನುಷ್ಯ. ಅಷ್ಟರಲ್ಲಿ ಅಲ್ಲಿ ಇಲ್ಲಿ ತೆಗೆದು ಹತ್ತರ ಮೂರು , ಇಪ್ಪತ್ತರ ಒಂದು ನೋಟು ಸೇರಿಸಿ ಒಟ್ಟು ೫೦ ರುಪಾಯಿಗಳನ್ನೂ ನಾನು ಆತನಿಗೆ ಕೊಟ್ಟೆನು. ಆತ "thank ಯು ಸಾರ್, ಇವು ಯಾವ್ಯಾವ ನೋಟುಗಳು ಸಾರ್ " ಅಂದು ನನ್ನ ಕಡೆಗೆ ಕೈ ಚಾಚಿ ಕೇಳಿದ. ನಾನು ೩ ಹತ್ತು ರುಪಾಯಿಗಳನ್ನು ಮೊದಲು ಆತನ ಕೈಗೆ ಇಟ್ಟಾಗ  " ಸ್ವಲ್ಪ ತಡೀರಿ ಸಾರ್ ಎಂದು, ಅವುಗಳನ್ನು ಒಂದು ಜೇಬಿನಲ್ಲಿ ಇಟ್ಟುಕೊಂಡನು. ಮತ್ತೊಮ್ಮೆ ನಾ ಕೊಟ್ಟ ೨೦ ರುಪಾಯಿ ನೋಟನ್ನು ಮತ್ತೊಂದು ಜೇಬಿನಲ್ಲಿ ಇಟ್ಟುಕೊಂಡಾಗ ಆತ ನೋಟುಗಳನ್ನು ವಿಂಗಡಿಸಲು ಈ ರೀತಿಯಾಗಿ ಮಾಡಿದ ಎಂದೆನಿಸಿತು. 

             ನಾನು ತಕ್ಷಣವೇ "ಸರಿಯಾಗಿ ನೋಡಿಕೊಳ್ರಿ, ಸರಿಯಾಗಿ ಕೊಟ್ಟಿದೇನೋ ಇಲ್ಲವ ಅಂತ , ಮತ್ತೆ ನಾನು ಒಂದನ್ನೇ ತೆಗೆದುಕೊಂಡಿರೋದು " ಎಂದು ಆತನಿಗೆ ನಂಬಿಕೆ ಬರಲು ಹೇಳಿದೆ. ಅದಕ್ಕೆ ಆತ "ಸಾರ್ ನಾನು ನಿಮ್ಮನ್ನ ನಂಬುತ್ತೇನೆ ಸಾರ್ " ಎಂದು ಬಹು ನಮ್ರತೆಯಿಂದ ಹೇಳಿದ. " ಅಲ್ಲಪ್ಪಾ ಆದರರೂ ನನ್ನ ಸಮಾಧಾನಕ್ಕೆ ನಾ ಹೇಳಿದ " ಎಂದಾಗ , " ಆತ ನಂಬಿಕೆಯಿಂದಲೇ ಸಾರ್ ನನ್ನ ವ್ಯಾಪಾರ ಮತ್ತೆ ಜೀವನ ನಡಿತ ಇರೋದು, ನಾ ಎಲ್ಲರನ್ನು ನಂಬಲೇ ಬೇಕು ಸಾರ್ " ಎಂದ. ಹಾಗ ನಮ್ಮನ್ನೇ ನೋಡುತ್ತಾ ಇದ್ದ ವಯಸ್ಸಾದ ಅಜ್ಜಿಯೊಂದು " ಆತ ದೇವರನ್ನು ನಂಬಿ ವ್ಯಾಪಾರ ಮಾಡುತ್ತಾನೆ ,  ಹಾಗಾಗಿ ದೇವರು ಆತನನ್ನು ಚೆನ್ನಾಗಿಯೇ ಇಟ್ಟಿದ್ದಾನೆ " ಎಂದಿತು. ಆ ಕ್ಷಣಕ್ಕೆ ಆತ ನಸುನಗುತ್ತಲ್ಲೇ" ಇಲ್ಲ ಅಮ್ಮ , ಕಾಣದ , ನಮ್ಮ ಸುತ್ತ-ಮುತ್ತ ಇರದ ಆ ದೇವರನ್ನು ನಂಬಿದರೆ ನನ್ನ ಹೊಟ್ಟೆ ತುಂಬಲ್ಲ, ನನ್ನ ಸುತ್ತ ಮುತ್ತ ಇರೋ ಈ ಜನರನ್ನ ನಂಬಿದರೆ ಮಾತ್ರ ನನ್ನ ಹೊಟ್ಟೆ ತುಂಬುತ್ತದೆ " ಎಂದು ತನ್ನೆಲ್ಲ ಅನುಭವ , ಸಂಕಟ , ಬುದ್ದಿವಂತಿಕೆ , ಆಶಾಭಾವಗಳನ್ನು ಬೆರೆಯಿಸಿ ಆ ಮಾತನ್ನಾಡಿ ಮುಂದೆ ಸಾಗಿದ ಆ ಕುರುಡು ಮನುಷ್ಯ  " ಕರ್ಚೀಫ್ ಕರ್ಚೀಫ್ " ಅನ್ನುತ್ತ . 

                ಆ ಕ್ಷಣದಲ್ಲಿ ನಾ ಅಬ್ಭಾ "ಎಂಥಹ ಮಾತನ್ನು ಆಡಿದ ಆ ಮುನುಷ್ಯ ,  ಆ ಮಾತಿನಲ್ಲಿ ಅದೆಷ್ಟು ಅರ್ಥವಿದೆ , ನಾವೆಲ್ಲರೂ ಕಣ್ಣುಗಳಿದ್ದು , ಪ್ರಪಂಚವನೆಲ್ಲ ನೋಡಿಯೂ ಕೂಡ ಒಬ್ಬರನ್ನೊಬ್ಬರು ನಂಬುವುದಿಲ್ಲ, ಯಾರು ಏನು ಹೇಳಿದರು , ಕೊಟ್ಟರು ಅವರನ್ನು ನಂಬದೆ , ಅದನ್ನು ನಮ್ಮ ಕಣ್ಣಿನಿಂದ ಪರೀಕ್ಷಿಸಿದ ಮೇಲೆಯೇ ಒಪ್ಪುತ್ತೇವೆ. ನಮ್ಮ ನಮ್ಮಲ್ಲಿ ಪರಸ್ಪರ ನಂಬಿಕೆಗಳು ಕೂಡ ಇರುವುದಿಲ್ಲ, ಒಬ್ಬರನ್ನೋಬರು ಒಪ್ಪುವುದೂ ಇಲ್ಲ. ಮನುಷ್ಯರನ್ನೊಂತು ಮಾತ್ರ ನಾವು ಅದೇಕೋ ಅಷ್ಟಾಗಿ ನಂಬುವುದೂ ಇಲ್ಲ .  ಬದಲಾಗಿ ನಮಗೆ ಗೊತ್ತಿರದ, ನೋಡದ ದೇವರನ್ನು ಮಾತ್ರ ನಂಬುತ್ತೇವೆ. ಆದರೆ ಈ ಮನುಷ್ಯ ಮಾತ್ರ ನಿಜ ಸತ್ಯವನ್ನರಿತು ನಮ್ಮ ಸುತ್ತ ಮುತ್ತಲಿರುವ ಜನರನ್ನು ನಂಬುತ್ತಾನೆ , ಆದ್ದರಿಂದಲೇ ಯಾರು ಆತನಿಗೆ ದ್ರೋಹ  ಬಗೆಯುವುದಿಲ್ಲ , ಮೋಸ ಮಾಡುವುದಿಲ್ಲ. ಕಣ್ಣಿರದ ಆತನಿಗೆ ಸುತ್ತಲಿನ ಜನರೇ ದೇವರುಗಳು , ಆತ ಎಲ್ಲರಲ್ಲೂ ದೇವರನ್ನೇ ಕಾಣುತ್ತಾನೆ , ಹಾಗಾಗಿ ಎಲ್ಲರನ್ನು ನಂಬುತ್ತಾನೆ , ನಿಜವಾಗಿಯೂ ಆತನ ಮಾತೆ ಸತ್ಯ " ಎಂದು ನನಗೂ ಅನ್ನಿಸಿತು. 

          ಇನ್ನುಳಿದ ಪ್ರಯಾಣದುದ್ದಕ್ಕೂ ಆತನ ಆ ಮಾತುಗಳು ನನ್ನನು ಅನೇಕೆ ವಿಚಾರಗಳ ಗಂಟಲ್ಲಿ ಸಿಕ್ಕಿಸಿ ಹಾಕಿಸಿದ್ದವು. ಆತ ಆ ಕ್ಷಣಕ್ಕೆ ನನಗೆ ಮಹಾನ್ ತತ್ವಜ್ಞಾನಿಯಂತೆ ಕಂಡನು ಕೂಡ. ಆತನ ಆ ಮಾತುಗಳ ಅರ್ಥ , ತಾತ್ಪರ್ಯ , ವಿಮರ್ಶೆಯಲ್ಲೇ ನಾನು ನನ್ನ ಆ ದಿನದ ಪ್ರಯಾಣವನ್ನ ಸವೆಸುತ್ತಿದ್ದಂತೆ , ನನ್ನ ಚಿಂತನೆಯು  ಕೂಡ ಹೊಸ "ನಂಬಿಕೆ"ಯ ಹಾದಿ ತುಳಿದಿತ್ತು.  

ನಿಮಗಾಗಿ 
ನಿರಂಜನ್ 

ಶನಿವಾರ, ಜುಲೈ 20, 2013

ಆಷಾಡದ ಆ ದಿನ


                                                                       ಆಷಾಡದ ಆ ದಿನ .... 

ಷಾಡದ ಒಂದು ದಿನ, ಬೆಳ್ಳಂಬೆಳಗ್ಗೆಯ ಸಮಯ, ಸುತ್ತಲೂ ಮೋಡಗಳು, ಬೀಸುತ್ತಿತ್ತು ತಂಪಾದ  ಚಳಿಗಾಳಿ, ಹಕ್ಕಿ-ಪಕ್ಕಿಗಳೆದ್ದು ಸಂಗೀತ ಸುಧೆಯನ್ನೇ ಹರಿಸುತ್ತಿದ್ದವು. ಮಳೆರಾಯ ಆಗ ತಾನೇ ಪ್ರಕೃತಿಯ ಮೈ ತೊಳೆದು ಸುಮ್ಮನಾಗಿದ್ದಾನೆ. ಗಿಡ ಮರ ಬಳ್ಳಿಗಳ ಎಲೆಗಳು ನೀರಹನಿಗಳನ್ನುಟ್ಟು ಸಿಂಗಾರಗೊಂಡು ನಿಂತಿವೆ. ತಂಗಾಳಿಯೊಮ್ಮೆ ಗಿಡ-ಮರಗಳಿಗೆ ಖಚಗುಳಿಯಿಟ್ಟರೆ, ಅವು ನುಲಿದು, ನಲಿದು, ಕುಣಿದು ಬಚ್ಚಿಟ್ಟುಕೊಂಡಿದ್ದ ನೀರಹನಿಗಳನ್ನು ಭೂಮಿಗೆ ಸುರಿಸುತ್ತಿದ್ದವು. ಆ ದೃಶ್ಯ ಹೇಗಿತ್ತು ಎಂದರೆ ನೀರ ಹನಿಗಳು ಭೂಮಿಗೆ ಬಿದ್ದರೆ  ಮಣಿ-ಮುತ್ತುಗಳೇ   ಧರೆಗುರುಳುವಂತೆ ಕಾಣುತ್ತಿತ್ತು. 

               ನನಗೆ ಒಟ್ಟಾರೆ ಆ ದಿನ ಸ್ವರ್ಗವೇ ಭೂಮಿಯನ್ನು ಬಿಗಿದಪ್ಪಿದ ಹಾಗೆ ಭಾಸವಾಗಿತ್ತು. ಇಂಥಹ ವಾತವರಣದ  ಸವಿಯ ಸವಿಯುವ ಮನಸ್ಸನ್ನು ಕೊಟ್ಟ , ನೋಡಿದ ಅಂದವನ್ನು ಹಾಗೆಯೇ ಕದಿಯುವ ಹೃದಯವನನ್ನೂ ನನ್ನೊಳು ಇರಿಸಿದ, ಈ ರೀತಿಯ ಸುಂದರ ದಿನಗಳನ್ನು ನನಗೆ ಅನುಭವಿಸಲೆಂದೇ ಸೃಷ್ಟಿಸುವ ಆ ಕಾಣದ  ಗಾರುಡಿಗನಿಗೆ ಮನದಲ್ಲೇ ಒಂದು ಕ್ಷಣ ವಂದಿಸಿದೆ. ಇಂಥಹ ವಾತಾವರಣವನ್ನು ನಾನೇನು ಮೊದಲು ನೋಡುತ್ತಿಲ್ಲ,ಅನುಭವಿಸುತ್ತಿಲ್ಲ. ಆದರೂ ಇಂತಹ ದಿನಗಳು ಮಾತ್ರ ನನ್ನನ್ನು ಬಹುವಾಗಿ ಸೆಳೆಯುತ್ತವೆ, ಸೂರೆಗೊಳ್ಳುತ್ತವೆ. ಪ್ರತಿಸಲವೂ ನನಗೆ ಇದರಲ್ಲೊಂದು ನವ ನವೀನತೆ ಕಾಣುತ್ತದೆ. ಈ ರೀತಿಯ ಪ್ರಕೃತಿಯಿಂದ ನಾನು ಬೇಗನೆಯೇ ಆಕರ್ಷಿತನಾಗುತ್ತೇನೆ, ಮನಸ್ಸು ಪುಳಕಗೊಳ್ಳುವುದರ ಜೊತೆಗೆ ಹಗುರವೂ ಆಗುತ್ತೆ, ಅದೇನೇ ದುಃಖ ದುಮ್ಮಾನಗಳಿದ್ದರು ಆ ಕ್ಷಣಕ್ಕೆ ಅವು ದೂರಸರಿದು, ಖುಷಿ, ಶಾಂತಿ, ಪ್ರೀತಿಗಳು ಹತ್ತಿರವಾಗುತ್ತವೆ. ನಿಜ ಹೇಳಬೇಕೆಂದರೆ ಈ ರೀತಿಯ ವಾತಾವರಣ ಅದೇನೋ ಗೊತ್ತಿಲ್ಲ, ನನನ್ನೂ ಮಲಗಲೂ  ಬಿಡೋಲ್ಲ, ಸುಮ್ಮನಿರಲೂ ಬಿಡುವುದಿಲ್ಲ. ಈ ವಿಷಯದ ಬಗ್ಗೆ ನನಗೆ ಸ್ವಲ್ಪವೂ ಬೇಸರ ಇಲ್ಲ. ಈ ರೀತಿಯ ಮನೋಭಾವ ನನಗೆ ದೇವರು ಕೊಟ್ಟ ವರವೆಂದು ನಾನು ತಿಳಿದಿದ್ದೇನೆ. ಇದು ನನ್ನ ಭಾಗ್ಯವೂ ಕೂಡ , ಅದ್ಯಾವ ಜನ್ಮದದಲ್ಲಿ ಅಂಥಹ ಅದೇನು ಘನ ಕಾರ್ಯ ಮಾಡಿದ್ದೇನೋ ಏನೋ ಗೊತ್ತಿಲ್ಲ, ಆದರೆ ಆ ಜನ್ಮದಲ್ಲಿ ಮಾತ್ರ ಈ ರೀತಿಯ ಸುಂದರ ಪ್ರಕೃತಿಯ ಸವಿಯುವ ಮನಸ್ಸುನ್ನೂ  ಕೇಳದಿದ್ದರೂ ಆ ದೇವರು ಕೊಟ್ಟಿದ್ದಾನೆ. ಆತನಿಗೆ ಮತ್ತೊಮ್ಮೆ ನನ್ನ ಹೃದಯಾಂತರಾಳದ  ನಮನ. 

              ವಾತವರಣ ಹೀಗಿದ್ದಾಗ ಅದೇಗೆ ನಾ ಮನೆಯಲ್ಲಿ ಜೊಲ್ಲು ಸುರಿಸಿಕೊಳ್ಳುತ್ತಾ, ನನ್ನ ಉಸಿರು ನಾನೇ ಕುಡಿಯುತ್ತ, ಹೊದಿಕೆಯಲ್ಲಿ ಗೂಡಲ್ಲಿ ಮುದುರಿ ಮಲಗಲಿ ? ಬೀಳುವ ಬೆಳಕಿನಿಂದ , ಬೀಸುವ ಗಾಳಿಯಿಂದ ಅದೇಗೆ ನಾನು ನನ್ನನ್ನು ವಂಚಿಸಿಕೊಳ್ಳಲಿ. ಹೀಗೆ ನಾ ಮಾಡಿದ್ದೆ ಆದರೆ ಅದು ನಾ ಮಾಡಿಕೊಂಡ ಮೂರ್ಖತನವಾಗುತ್ತೆ. ಒಂದು ವೇಳೆ ಪಡುವಣದಲ್ಲಿ ಸ್ವಾಮಿಯು ಮೂಡಿದಾಗಲೂ ನಾನು ಮಲಗಿ ಒಳ್ಳೆಯ ವಾತಾವರಣವನ್ನು ಅನುಭವಿಸದಿದ್ದರೆ ಅದು  ಸೌಂದರ್ಯವೀರುವ ನನ್ ಕಂಗಳಿಗೆ ನಾನ್ ಮಾಡುವ ಮೋಸ ಎಂದೆನಿಸುತ್ತದೆ. ಹಾಗಾಗಿ ಆ ದಿನ ನಾ ಮನೆಯಲ್ಲಿ ಒಂದು ಲೋಟ ತಣ್ಣನೆ ನೀರನ್ನು ಕುಡಿದು, ಬಿಸಿಯ ಕಾಫೀ ಹೀರಿ , ಕೈಯಲ್ಲೊಂದು ಕೊಡೆಹಿಡಿದು ಸಣ್ಣ ವಿಹಾರಕ್ಕೊರಟೆ.



         ಹಾಗೆ ನೆಡೆಯುವಾಗ ನನಗೋ "ಆಹಾ ಎಂಥಹ ವಾತವರಣವಿದು" ಎಂದು ಅನ್ನಿಸುತಿತ್ತು. ಮನಸ್ಸು ಕವಿವರ್ಯ್ಯನಾಗಿ ಬಚ್ಚಿಟ್ಟುಕೊಂಡಿದ್ದ ಭಾವನೆಗಳಿಗೆ ಬಣ್ಣವಚ್ಚಿ ರೂಪು ನೀಡುತ್ತಿತ್ತು. ಏನು ನೋಡಿದರು ನನಗೆ ಎಲ್ಲವೂ ಚಂದವಾಗಿಯೇ ಕಾಣುತ್ತಿದ್ದವು. ಪ್ರತಿಯೊಂದರಲ್ಲೊಂದು ಶುದ್ದತೆ ಕಾಣುತಿತ್ತು. ಅಷ್ಟರಲ್ಲೇ ದೂರದಲ್ಲೊಂದು ಒಂಟಿ ಮನೆ ಕಂಡಿತು. ಅಕ್ಕ-ಪಕ್ಕ ಸ್ವಲ್ಪ ಖಾಲಿ ಜಾಗ, ಖಾಲಿ ಜಾಗದ ತುಂಬೆಲ್ಲ ಹಸಿರು ಹುಲ್ಲು ಬೆಳೆದಿತ್ತು.ಅಲ್ಲೊಂದು ಇಲ್ಲೊಂದು ತುಂಬೆ ಗಿಡಗಳು ಹುಲ್ಲ ನಡುವೆ ರಾರಾಜಿಸುತ್ತಿದ್ದವು. ಬಹು ಮಳೆಯಿಂದಾಗಿ ಮನೆಯ ಕಾಂಪೌಂಡ್ಗೆ  ಪಾಚಿ ಕಟ್ಟಿದಂತಾಗಿ ಹಸಿರು ಹತ್ತಿತ್ತು, ಅನೇಕ ಬಳ್ಳಿಗಳೂ ಅದರ ಮೇಲೆ ಹಬ್ಬಿದ್ದವು. ಅದೇ ಕಾಂಪೌಂಡ್ ಕೊನೆಯಲ್ಲಿ ಒಂದು ದೊಡ್ಡ ಮಲ್ಲಿಗೆ ಬಳ್ಳಿ ಮನೆಯ ಮಹಡಿಯ ಕಡೆ ಹಬ್ಬಿ , ಮೊದಲ ಮಹಡಿಗೂ ತಲುಪಿತ್ತು. ಸೊಂಪಾಗಿ ಬೆಳೆದಿದ್ದ ಅದು ಹಚ್ಚ ಹಸುರಾಗಿತ್ತು. ಬೆಳಗುಜಾವದ ಮಳೆಯಲ್ಲಿ ಜಳಕಮಾಡಿ, ತನ್ನ  ಮೊಲ್ಲೆಯ ಮಗ್ಗುಗಳಿಂದ ತನ್ನನ್ನೇ ಅಲಂಕರಿಸಿಕೊಂಡಿತ್ತು.  ಆ ಮನೆಯೂ ಸುಂದರವಾಗಿದ್ದರೂ ಕೂಡ ಆ ಕಡೆ ನೋಡಿದರೆ ಮೊದಲು ಗಮನ ಹರಿಯುವುದು ಬೆಳೆದು ನಿಂತಿದ್ದ ಆ ಮಲ್ಲಿಗೆ ಬಳ್ಳಿಯ ಕಡೆಗೆ ಹೊರತು ಆ ಮನೆಯ ಮೇಲಲ್ಲ. 

                ಆದರೆ ಆ ದಿನ ಮಾತ್ರ ನನಗೆ ಕಂಡಿದ್ದು ಆ ಬಳ್ಳಿಯ ಜೊತೆಗಿದ್ದ ಮತ್ತೊಂದು ನೀಟಾದ  ಸೌಂದರ್ಯದ ಗಂಟು. ನಿಜ ಅವಳು ಸಕತ್ ಸೌಂದರ್ಯದ ಗಣಿಯೇ ಆಗಿದ್ದಳು. ಆ ದೇವರು ಇದ್ದ ಬದ್ದ ಅಂದ-ಚಂದವನನೆಲ್ಲ ಒಟ್ಟುಗೂಡಿಸಿ ಗಂಟೊಂದನ್ನು ಅಲ್ಲಿರಿಸಿದ್ದನು ಎಂದು ಭಾಸವಾಯಿತು ಅವಳನ್ನು ನೋಡಿದೊಡನೆ. ನೋಡಿದ ತಕ್ಷಣಕ್ಕೆ ಅನ್ನಿಸುತ್ತಿತ್ತು ಅವಳು ಆಗತಾನೆ ಸ್ನಾನ ಮುಗಿಸಿ ಬಂದಿಹಳೆಂದು. ತನ್ನ ನೀಳಗೂದಲುಗಳನ್ನು ಹಾಗೆಯೇ ಕಟ್ಟಿ, ಕಟ್ಟಿಗೊಂದು ಸಣ್ಣ ಸೇವಂತಿಗೆ ಮುಡಿದು, ಚಿಕ್ಕ ಕುಂಕುಮದ ಬೊಟ್ಟು ಹಣೆಗೆ ಇಟ್ಟು , ಶುಭ್ರ ಹಳದಿ ಬಟ್ಟೆಯುಟ್ಟು, ಕೈಯಲ್ಲೊಂದು ಸಣ್ಣ ಕವರ್ ಹಿಡಿದು ಆ ಮಲ್ಲಿಗೆ ಬಳ್ಳಿಯ ಬಳಿ ಅವಳು ನಿಂತಿದ್ದಾಳೆ. ಒಮ್ಮೆ ಅವಳ ಆ ಸೌಂದರ್ಯ ಆ ಮಲ್ಲಿಗೆ ಹೂವ್ ಬಳ್ಳಿಯ ಮತ್ತು  ಆ ಪ್ರಕೃತಿಯ ಸೌಂದರ್ಯಕ್ಕೆ ಸವಾಲಾಕಿದಂತೆ ಕಂಡರೂ ಮತ್ತೊಂದೆಡೆ ಅವಳ ಚೆಂದ ಅಲ್ಲಿಯ ಆ ಪ್ರಕೃತಿಗೇನೆ ಅಂದವನ್ನು  ತಂದುಕೊಟ್ಟಂತೆ ಅನ್ನಿಸುತಿತ್ತು. ಒಟ್ಟಾಗಿ ಹೇಳುವುದಾದರೆ ಒಬ್ಬರ ಚೆಲುವು ಮತ್ತೊಬ್ಬರಿಗೆ ಪೂರಕವಾಗಿದ್ದವು.    

                 ಆದರು ಅವಳು ಮಲ್ಲಿಗೆ ಬಳ್ಳಿಯ ಹೂವು ಕೀಳಲು ಅಲ್ಲಿ ನಿಂತೊಡನೆ ಇಡೀ ಮಲ್ಲಿಗೆ ಬಳ್ಳಿಯೇ ಅವಳ ಆ ಸೌಂದರ್ಯಕ್ಕೆ ಶರಣಾಗಿ ಆ ದಿನ ಕೊಂಚ ಸಪ್ಪೆಯಾಗಿ ಖಂಡಿತು. ಅವಳು ಹೂ ಕೀಳಲು ಕೈ ಎತ್ತುವ ಮೊದಲೇ ಆ ಮಲ್ಲಿಗೆ ಬಳ್ಳಿಯೆ ಭಾಗಿ ತನ್ನನ್ನು ತಾನು ಅವಳಿಗೆ ಅರ್ಪಿಸಿ, ತನ್ನೆಲ್ಲ ಹೂವುಗಳನ್ನು ಅವಳಿಗೆ ಸಮರ್ಪಿಸಿ ಸಾರ್ಥಕ ಗೊಳ್ಳುವಂತೆ ನಡೆದುಕೊಳ್ಳುತ್ತಿದೆಯೆಂದು ನನಗೆ ಭಾಸವಾಗುತಿತ್ತು. ಆ ಕ್ಷಣಕ್ಕೆ ನಾನು ಆ ಪ್ರಕೃತಿಯೋಲ್ಲಿ ಮತ್ತೊಂದು ಸೌಂದರ್ಯದ ನಿಕ್ಷೇಪವನ್ನು ಕಂಡಂತೆ ಆಯಿತು. ಅವಳು ಬಳ್ಳಿಯನ್ನು ಮುಟ್ಟಿ, ತನ್ನ ಕೋಮಲ ಕೈಯಿಂದ ಒಂದು ಮೊಲ್ಲೆಯ ಹೂವನ್ನು ಕಿತ್ತರೆ, ಇಡೀ ಗಿಡವೇ ಇಡಿಯಿಂದ-ಮುಡಿವರೆಗೆ ಪುಳಕಗೊಂಡು ಮೇಲಿಂದ ಮತ್ತೊಷ್ಟು ಹೊವನ್ನು ಅವಳ ಮೇಲೆ ಸುರಿಸುತಿತ್ತು. ಬಳ್ಳಿಯ ಎಲೆಗಳು ಕೂಡ ನೀರ ಮುತ್ತುಗಳನ್ನು ಅವಳ ಮೇಲುದುರಿಸುತ್ತಿದ್ದವು. ಒಟ್ಟಾರೆ ಅವಳು ಅಲ್ಲೊಂದು ಸಹಜ ಸೌಂದರ್ಯದ ಬಲೆಯನ್ನೇ  ಬೀಸಿ ಪ್ರಕೃತಿಗೆ ಮತ್ತು ನನ್ನ ಕುಣಿಯುವ ಮನಸ್ಸಿಗೆ ಸವಾಲೆಸಿದಿದ್ದಳು. 

          ಕ್ಷಣ ಮಾತ್ರದಲ್ಲೇ ಸಾಕೊಷ್ಟು ಹೂವು ಬಿಡಿಸಿ ಕೊಂಡಳು. ಅದೇನೋ ಗೊತ್ತಿಲ್ಲ ಈ ಹೆಣ್ಣು ಮಕ್ಕಳಿಗೆ ಹೂವುಗಳೆಂದರೆ ಅದೆಲ್ಲಿಲ್ಲದ ಪ್ರೀತಿ. ಅದರಲ್ಲಿ ಈ ಮಲ್ಲಿಗೆ ಹೂವೆಂದರೆ ಅಬ್ಬಾ ಅದೆಷ್ಟು ಮೋಹ. ಅದಕ್ಕೆ ಅವಳೇನು ಹೊರತಾಗಿರಲಿಲ್ಲ. ಮಲ್ಲಿಗೆ ಮುಡಿದು ಸೌಂದರ್ಯವನ್ನೇ ಮುಡಿಗೇರಿಸಿಕೊಳ್ಳುವ ಖಾತರ ಅವಳಿಗಿದ್ದರೆ, ಅವಳ ಸೌಂದರ್ಯಕ್ಕೆ ಆ ಬಳ್ಳಿಯೆ ಸೋತು, ತಾವೇ ಅವಳ ಮುಡಿಯೇರಲು ಹೂವುಗಳು ಹಾತೊರೆಯುತ್ತಿವೆ , ಎಂದು ನನಗನಿಸಿತು. ಅವಳ ಮುಖದಲ್ಲೇನೋ ಒಂದು ರೀತಿಯ ಖುಷಿ , ಹೇಳಲಾಗದ ಆನಂದ ಕಾಣಿಸುತ್ತಿತ್ತು. ಮಲ್ಲಿಗೆ ಹೂವ ಸುಹಾಸನೆಯ ಸುಖವನ್ನು ಅವಳು ಅನುಭವಿಸಿವಂತೆ ಕಂಡಳು. ಅವಳು ತನ್ನನ್ನು ತಾನೇ ಮರೆತು ಅಲ್ಲಿದ್ದಳು ಎಂದೆನಿಸಿತು ನನಗಾಗ. ತನ್ನನ್ನು ತಾನೇ ಮರೆತಂತೆ ಅವಳು ಕಾನುತಿದ್ದಳು. ಇದೆಲ್ಲ ನೆಡೆದ ಒಂದೈದು ನಿಮಿಷವಾದಮೇಲೆ ಅವಳು ಆ ಅದ್ಭುತ ಮೂಡ್ ಇಂದ ಹೊರಬಂದು, ತಕ್ಷಣಕ್ಕೆ ಅಲ್ಲೇ ನಿಂತಿದ್ದ ನನ್ನನ್ನು ಗಮನಿಸಿದಳು. ಅಲ್ಲಿಯವರೆಗೂ ಅವಳು ನನ್ನನ್ನು ನೋಡಿಯೇ ಇರಲಿಲ್ಲ. ನಾಚಿಕೆಯಾಯಿತೋ, ಗಾಬರಿಯಾಯಿತೋ, ನಾ ಅರಿಯೇ ಆ ಕ್ಷಣದಲ್ಲೇ ಗೇಟ್ ಹತ್ತಿರ ಹೋಗಿ , ನನ್ನನ್ನೇ ನೋಡುತ್ತ ತಡವರಿಸಿಕೊಂಡು ಗೇಟ್ ಚಿಲುಕ ತಗೆದು ಹೊಳಹೊಕ್ಕು, ಮತ್ತೊಮ್ಮೆ ತಿರುಗಿ ನೋಡಿದಳು. ಅವಳ ಆ ಮುಗ್ದ ನೋಟವಂತೂ ಮಾತ್ರ ವರ್ಣಿಸಲು ನನ್ನಿಂದ ಅಸಾದ್ಯ. ಅಷ್ಟರಲ್ಲಿ ಬಚ್ಚಿಟ್ಟುಕೊಂಡ ಬಯಕೆಯೊಂದು ಹಾಗೆಯೇ  ಆಕ್ಷಣಕ್ಕೆ ಹೃದಯದ ಕದ ತಟ್ಟಿದಂತಾಯಿತು. ಅವಳು ಅಲ್ಲಿಂದ ಮರೆಯಾದರೂ ಕೂಡ ನನ್ನ ಹೃದಯದೊಳಗೊಕ್ಕಿದ್ದಳು. 

                  ನಾ ನೋಡಿದ್ದು, ನಿಜವೋ , ಕನಸೋ ಎಂಬತೆ ಇತ್ತು ಆ ಸೌಂದರ್ಯಗಳ ಸಮಾಗಮ. ಅಲ್ಲಿದ್ದ ಅವಳು ಅಲ್ಲಿಲ್ಲ ಈಗ , ಅಲ್ಲೇ ಇದ್ದ ನಾನು ಆಲ್ಲಿರಲಿಲ್ಲ ಆಗ. ವಾಸ್ತವಕ್ಕೆ ಮರಳಲು ಇಷ್ಟವಿರಲಿಲ್ಲ , ಹಾಗೆಯೇ  ಅದನ್ನೇ ನೆನೆಯುತ್ತ, ಮತ್ತೆ ಮುನ್ನುಗ್ಗಿ ಮಲ್ಲಿಗೆ ಬಳ್ಳಿಯ ಬಳಿ ಹೋದೆ. ಮಾತಿಲ್ಲದೆ ನಿಂತೆ ಮಲ್ಲಿಗೆಯ ವಾಸನೆ ಗಮ್ಮೆನ್ನುತಿತ್ತು, ಬಳ್ಳಿಯು ಅವಳಿಗಾಗೆ ಅದನ್ನು ಸೂಸಿತ್ತೋ ಎಂದೆನಿಸಿತು. ಹರಳದ ಮೊಗ್ಗುಗಳನ್ನವಳು ಗಿಡದಲ್ಲೇ ಇರಿಸಿದ್ದಳು. ನಾ ಆ ಮೊಗ್ಗುಗಳ  ಕೇಳಿದೆ " ನೀವೇಕೆ ಇನ್ನು ಹರಳಿಲ್ಲ ? ಹರಳಿದ್ದರೆ ಅವಳ ಮುಡಿ ಸೇರಬಹುದಿತ್ತಲ್ಲ ?". ಅದಕ್ಕೆ ಆ ಮಲ್ಲೇ ಮೊಗ್ಗುಗಳು ನಾಚಿ ಹೇಳಿದವು " ಹರಳುವ ಮುನ್ನವೇ ಆಕೆ ಬಂದಳು, ತನ್ನ ಮುಖವನೊಮ್ಮೆ ನಮ್ಮುಂದೆ ಹರಳಿಸಿದಳು, ಬೀಸಿದಳು ತನ್ನ ನಗುವಿನ  ಬಲೆಯನ್ನು, ಬೀಗಿದಳು ಸೌಂದರ್ಯದ ಮುಖಹೊತ್ತು, ಮರೆತೆವು ನಾವು ನಮ್ಮನ್ನೇ, ಸೋಲೊಪ್ಪಿ, ಹೇಗಿದ್ದೇವೋ ಹಾಗೆ ಉಳಿದೆವು" , " ಅವಳ ಚೆಲುವ ಬಲೆಯಲ್ಲಿ ನಾವು ಸೆರೆಯಾಗಿ , ಮುಗ್ದ ಮೊಗದ ಮುಂದೆ ನಾಚಿ , ಹರಳದೇ ದುಂಡು ಮಲ್ಲಿಗೆಯಾಗೆ ಉಳಿದೆವು" ಎಂದವು ಹತ್ತಿರದಿಂದ ಅವಳನ್ನು ಕಂಡಿದ್ದ ಆ ಮುಗ್ಗು ಮಲ್ಲಿಗೆ ಹೂವುಗಳು. ನಿಜ ಹೇಳಬೇಕೆಂದರೆ ಅಲ್ಲಿ ಸೋತಿದ್ದು ಮೊಲ್ಲೆಗಳಲ್ಲ , ಪ್ರಪಂಚವನ್ನೇ ಮರೆತು ನಿಂತಿದ್ದ ನಾನು. ಇದು ಆ ಪ್ರಕೃತಿಯ ಪ್ರಭಾವವೋ , ಅವಳ ಸೌಂದರ್ಯವೋ , ಸೌಂದರ್ಯವನ್ನು ಮೆಚ್ಚುವ ನನ್ನ ಮನಸ್ಸೋ ನಾ ಮಾತ್ರ ಅರಿಯೆ. 

ನಿಮಗಾಗಿ 
ನಿರಂಜನ್ 

ಭಾನುವಾರ, ಜುಲೈ 14, 2013

ಹಿತವಾದ

                                                                             ಹೊದಿಕೆ 

ನಾವೆಲ್ಲರೂ ಮೊದಲಿಂದಲೂ ರೂಡಿಸಿಕೊಂಡು ಬಂದಂತೆ , ನಮ್ಮೆಲ್ಲರಿಗೂ ರಾತ್ರಿ ಮಲಗುವಾಗ ಅವಶ್ಯವಾಗಿ ಬೇಕಾಗುವುದು ಯಾವ ವಸ್ತು ?? ಅದು ಖಂಡಿತವಾಗಿಯೂ ಹೊದಿಕೆಯಲ್ಲದೆ ಮತ್ತೇನು ಅಲ್ಲ. ಚೆನ್ನಾಗಿರುವ, ಒಜ್ಜಿಕೊಂಡರೆ ಮೈ-ಕೈ-ಕಾಲು ಮುಚ್ಚುವ, ಒಳ್ಳೆ ಬಣ್ಣದ, ಸಾಕೊಷ್ಟು ಅಗಲವಾದ, ಬೆಸಿಗೆಯಾದರೆ ತೆಳ್ಳನೆಯ, ಚಳಿಗಾಲದಲ್ಲಿ ದಪ್ಪವಾದ, ಶುಭ್ರವಾದ , ಒಳ್ಳೆಯ ಹತ್ತಿಯುಪಯೋಗಿಸಿ ಅದ್ಭುತ ನೇಕಾರ-ಕಲಾವಿದ ತಯಾರಿಸಿದ ಕಸೂತಿಯನ್ನೊಳಗೊಂಡ ಹೊದಿಕೆ ಎಂದರೆ ಯಾರು ತಾನೇ ಬೇಡವೆಂದಾರು ?. ರಾತ್ರಿ ಮಲಗಿದಾಗ ಹೊದಿಕೆಯನ್ನು ಒಜ್ಜಿಕೊಲ್ಲದಿದ್ದರು ಅದು ತಮ್ಮ ಕಾಲ ಬಳಿ ಇರಲೇಬೇಕು. ಅದು ಪಕ್ಕದಲ್ಲೋ, ಹತ್ತಿರದಲ್ಲೋ, ಅವರಿಗೆ ಕೈಗೆ ಬೇಕೆಂದಾಗ ಸಿಗುವಂತಾದರು ಇರಬೇಕು ಅವರ ಹೊದಿಕೆ. ಒಂದೊತ್ತಿನಲ್ಲಿ ಬೇಕೆನಿಸಿದರೆ ಅದು ಗೊತ್ತಿಲ್ಲದೇ ಖಂಡಿತವಾಗಿ ಅವರ ಮೈ ಮೇಲಿರುತ್ತೆ, ಇಲ್ಲವಾದರೆ ಹೊದಿಕೆಯ ಮೇಲೆ ಅವರೇ ಇರುತ್ತಾರೆ .. ಇಲ್ಲಾ...  ಕಾಲಿನ ಮೇಲಾದರು ಹೊದಿಕೆ ಇದ್ದೆ ಇರುತ್ತೆ. ಈ ಕಾಲ ಆ ಕಾಲ, ಯಾವ ಕಾಲವಾದರು ಹೊದಿಕೆ... ಒಂದೊಳ್ಳೆಯ... ಅಚ್ಚುಕಟ್ಟಾದ ಹೊದಿಕೆ ಇರಲೇಬೇಕು. ಇಲ್ಲದೆ ಹೋದರೆ ನಿದ್ದೆ ಬರೋಲ್ಲ. ರಾತ್ರಿಗಳನ್ನು ಕಲ್ಪಿಸಿಕೊಳ್ಳಲು ಸಾದ್ಯವಿಲ್ಲ. ಅದು ಚಳಿಗಾಲದ ರಾತ್ರಿಯೊಂತು ಹೊದಿಕೆ ಬೇಕೇ ಬೇಕು.   

           ಕೆಲವರು ಹೇಳುವ ರೀತಿಯಲ್ಲಿ, ಹೊದಿಕೆ ಇಲ್ಲದೆ ಅವರು ಮಲಗಿದ ದಿನಗಳಿಲ್ಲವಂತೆ. ಹೊದಿಕೆ ಇಲ್ಲದ ದಿನಗಳನ್ನು ನೆನೆಯಲು ಕೂಡ ಸಾದ್ಯವಿಲ್ಲವಂತೆ.  ಏನ್ ಇರಲಿ ಬಿಡಲಿ ತೆಳ್ಳಗಿನ,ಶುದ್ದವಾದ, ಅಂದ ಚಂದದ ಒಂದು ಹೊದಿಕೆ ಬೆಸಿಗೆ , ಮಳೆ, ಚಳಿಗಾಲಗಳ  ರಾತ್ರಿಗಳಲಿ ಬೇಕೇ ಬೇಕು. ಮೆತ್ತನೆಯ ಸ್ವಲ್ಪ ತೆಳ್ಳಗಿರುವ ಹೊದಿಕೆ ಬೇಸಿಗೆಗೆ ಬೇಕೆನಿಸಿದರೆ, ಚಳಿಗಾಲದಲ್ಲೋ "ಒಂದಿಷ್ಟು ಸ್ವಲ್ಪ ದಪ್ಪ ಇದ್ದರೆ ಮಜಾ ಇರುತ್ತೆ,  ಕೈತುಂಬಾ ಸಿಕ್ಕರೆ ಮೈತುಂಬಾ  ಒಜ್ಜಿಕೊಳ್ಳಬಹುದು" ಎಂದು ಎಲ್ಲರಿಗೂ ಅನ್ನಿಸುತ್ತೆ. ಹೊದಿಕೆಯೊಂದಿಗೆ ಮಲಗುವುದೇ ಒಂದು ರೀತಿಯ ಬೆಚ್ಚನೆ ಅನುಭವ. ವಾತಾವರಣ ಹೇಗೆ ಇರಲಿ, ಮೈ ಬಿಗಿಹಿಡಿದು ಹೊದಿಕೆಯನ್ನು ಇಡಿದೆಳೆದುಕೊಂಡು ಮೈ ಸುತ್ತಿಕೊಳ್ಳುತ್ತೇವೋ ಇಲ್ಲವೋ, ಆದರೆ ಒಂದು ಹೊದಿಕೆ ಮಾತ್ರ ಸದಾ ಜೊತೆಯಿದ್ದರೆ ಒಳ್ಳೆಯದು ಅಲ್ಲವೇ ?. ಸಂಪೂರ್ಣ ಒಜ್ಜಿಕೊಳ್ಳದಿದ್ದರು ಅದನ್ನು ಕಾಲ ಮೇಲಾದರೂ ಹಾಕಿ ಮಲಗುವ ರೂಡಿ ಇದ್ದರೆ ಒಳ್ಳೆಯದೆಂದು ನಮ್ಮ ಹಿರಿಯರು ಕೂಡ ಹೇಳುವ ನೆನಪಂತೂ ನನಗೂ ಕೂಡ ಇದೆ. ಏಕೆಂದರೆ ಹೊದಿಕೆ ಕೊರೆಯುವ ಚಳಿಯಿಂದ, ಹೊತ್ತಲ್ಲದ ಹೊತ್ತಲ್ಲಿ ಎಲ್ಲೆಂದರಲ್ಲಿ ನುಗ್ಗುವ ಸೊಳ್ಳೆಗಳಿಂದ ನಮಗೆ ರಕ್ಷಣೆ ನೀಡುವುದರಲ್ಲಿ ಎರೆಡು ಮಾತಿಲ್ಲ.

           ಈ ಹೊದಿಕೆ ಎಂಬುದು ನಾವು ಹೇಳಿದ ಹಾಗೆ ಕೇಳುತ್ತೆ ಅಂತ ಅನ್ನಿಸುವುದಿಲ್ಲವೇ ತಮಗೆ ?. ನಾವು ಹೇಗೆ ಉಪಯೋಗಿಸಿದರು ಅದು ಸುಮ್ಮನಿರುತ್ತದೆ, ನಾವು ಬಿಗಿ ಇಡಿದೊಷ್ಟು ನಮ್ಮ ಬಳಿಯೇ ಇರುತ್ತೆ , ಹಿತವೆನ್ನುವಷ್ಟು ನಮ್ಮನ್ನು ಸುತ್ತುತ್ತದೆ. ಈ ಎಲ್ಲ ಕಾರಣಗಳಿಗಾಗಿ ಹೊದಿಕೆಯನ್ನು ಎಲ್ಲರು ಇಷ್ಟ ಪಡುತ್ತಾರೆ. ಹೊದಿಕೆಗೆ ಅನೇಕ ಪರ್ಯಾಯಗಳಿದ್ದರು ಹೊದಿಕೆಯ ಮಜವೇ ಬೇರೆ. ಅದೇ ರೀತಿ ಹೊದಿಕೆಗಳಲ್ಲಿ ಅನೇಕ ಬಗೆಗಳೂ ಕೂಡ ಇವೆ. ಸಾಂಪ್ರಾದಾಯಿಕ ಹೊದಿಕೆಗಳಿಂದ ಇಡಿದು ಇತ್ತೀಚಿಗೆ ಮಾರುಕಟ್ಟೆಗೆ ಬಂದಿರುವ ADVANCED, ಜಿಂಗ್-ಚಾಕ್ ಹೊದಿಕೆಗಳು ನಮಗೆ ಸಿಗುತ್ತವೆ. ಕೆಲವರಿಗೆ ಸಾಂಪ್ರದಾಯಿಕ ಹೊದಿಕೆ ಬೇಕೆನಿಸಿದರೆ, ಕೆಲವರಿಗೆ ಜಿಂಗ್-ಚಾಕ್ ಹೊದಿಕೆಗಳು ಇಷ್ಟವಾಗುತ್ತವೆ. ಆದರೆ ಪ್ರತಿ ರಾತ್ರಿ ಮಲಗುವ ಮೊದಲು ನಮಗೆ ನೆನಪಾಗುವುದು ಇಷ್ಟದ ದೇವರಗಳಲ್ಲ, ಆ ದಿನದ ಘಟನೆಗಳಂತೂ ಅಲ್ಲವೇ ಅಲ್ಲ, ನಮ್ಮ ನೆಚ್ಚಿನ ಹೊದಿಕೆಗಳು ಮಾತ್ರ ಹಾಗೆ ನಮ್ ಕಣ್ ಮುಂದೆ ಬಂದು ಬಿಡುತ್ತವೆ. ಕೆಲವರಂತು ಕೆಲವು ಹೊದಿಕೆಗಳನ್ನು ತಮ್ಮ favorite ಗಳಾಗಿ  ಮಾಡಿಕೊಂಡಿರುತ್ತಾರೆ. ಹೊದಿಕೆಗಳನ್ನು ಯಾರು ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಇಷ್ಟ ಕೂಡ ಪಡುವುದಿಲ್ಲ,  ಅದು ಒಳ್ಳೆಯ ಅಭ್ಯಾಸ ಕೂಡ,  ಅದಕ್ಕೆ ನನ್ನ ತಂಟೆ ತಕರಾರೊಂತು ಇಲ್ಲವೇ ಇಲ್ಲ. ಇದಕ್ಕೆ ಕಾರಣಗಳು ಅನೇಕ. ಅದರ ಮೇಲಿನ ಅತಿಯಾದ ಪ್ರೀತಿ, ನಿಚ್ಚಿನ ಬಣ್ಣ, ಅದರ ಉದ್ದ-ಅಗಲ ಮತ್ತು ಗಾತ್ರಗಳು ಹೆಚ್ಚಿನ ಪಾತ್ರವಹಿಸುತ್ತವೆ. ಕೆಲವರಂತೂ ಕಾರಣಗಳಿಲ್ಲದೆ ಹೋದರು ಕೆಲವು ರೀತಿಯ ಹೊದಿಕೆಗಳನ್ನು ತುಂಬಾ ಇಷ್ಟ ಪಡುತ್ತಾರೆ.  
                
                ಈ ಮಳೆಗಾಲ , ಚಳಿಗಾಲಗಳು ಬಂದವೆಂದರೆ ಮಾತ್ರ ಎಲ್ಲರಿಗೂ ಬೇಕೇ ಬೇಕು ಹೊದಿಕೆ, ಅದರಲ್ಲೂ ಹೀಗಿರುವ ಇಂಥಹ ವಾತವರಣದಲ್ಲಿ ಯಾರಿಗೆ ಬೇಡ ಅಂದ ಚಂದದ ಬೆಚ್ಚಗಿಡುವ ಸುಂದರ ಹೊದಿಕೆಗಳು ?. ದೂರದೃಷ್ಟಿಯುಳ್ಳವರು ಈ ಕಾಲಗಳು ಆರಂಭವಾಗುವ ಮೊದಲೇ ಇವುಗಳ ವ್ಯವಸ್ತೆ ಮಾಡಿಕೊಳ್ಳುತ್ತಾರೆ. ಬುದ್ದಿವಂತ ತಂದೆ-ತಾಯಿಗಳು ಮಕ್ಕಳು ಒಪ್ಪುವ ಹೊದಿಕೆಗಳನ್ನು ಅವರೇ ತಂದು ಮಕ್ಕಳಿಗೆ ಹೊದಿಸುತ್ತಾರೆ. ಕೆಲವರು ಸ್ಥಳಿಯವಾಗಿ ಸಿಗುವ ಹೊದಿಕೆಗಳನ್ನು ಹೊದ್ದುಕೊಂಡು ತೃಪ್ತಿ ಪಟ್ಟರೆ, ಇನ್ನೂ ಕೆಲವರು "ಈ ಹೊದಿಕೆ ಕಾಶ್ಮೀರಿ ಶಾಲ್ ಹಾಗಿದ್ದರೆ ಹೇಗೆ ಇರುತ್ತಿತ್ತು ! " ಎಂದು ಇಲ್ಲದರ ಬಗ್ಗೆ ಯೋಚಿಸುತ್ತಾರೆ. ಪ್ರಜ್ಞಾವಂತ ಜನರು ಹೊದ್ದ ಹೊದಿಕೆಯಲ್ಲೇ ಸಂತುಷ್ಟರಾಗಿ ಹಾಯಾಗಿ ಬೆಚ್ಚಗೆ ಮಲಗುತ್ತಾರೆ. ಆಷಾಡದ ಗಾಳಿಯಲ್ಲೊಂತು ಹೊದಿಕೆಗಳು ಅತ್ಯವಶ್ಯಕ, ಅದರಲ್ಲೂ ಈ ಆಷಾಡದ ವಿರಹಿಗಳಿಗೆ ಬೇಕೇ ಬೇಕು ಅವರ ಆ... ಹೊದಿಕೆ. 

          ನಿಮಗೆ ಗೊತ್ತಾ ? ವಯಸ್ಸಿಗೆ ತಕ್ಕನಾಗಿ ಹೊದಿಕೆಗಳ ಮೇಲೆನ  ಪ್ರೀತಿಯೂ  ಕೂಡ ಬದಲಾಗುತ್ತದೆ. ಒಂದೊಂದು ವಯಸ್ಸಿನಲ್ಲಿ ಒಂದೊಂದು ತರಹದ ಹೊದಿಕೆಗಳು ನಮ್ಮನ್ನು ಆಕರ್ಷಿಸುತ್ತವೆ. ಇದಕ್ಕೆಲ್ಲ ಕಾರಣ ಹೊದಿಕೆಯ ಉಪಯೋಗ , ಅದರ ಅಂದ-ಚಂದ. ಕೊನೆಯಾದಾಗಿ ಹೇಳಬೇಕೆಂದರೆ ಹೊದಿಕೆ ಬೇಕೇ ಬೇಕು ಮಲಗುವಾಗ ಅದು ನಮ್ಮದೇ ಆಗಿದ್ದರೆ ಚೆನ್ನ, ಒಂದೇ ಇದ್ದಾರೆ ಹಿತ, ಒಳ್ಳೆಯದಾದ್ರೆ ಸಂತೋಷ , ಶುಭ್ರವಾಗಿದ್ದರೆ ಆರೋಗ್ಯ. 

ನಿಮಗಾಗಿ 
ನಿರಂಜನ್ 


ಶನಿವಾರ, ಜುಲೈ 6, 2013

ನನ್ನದಲ್ಲ


             ನನ್ನದಲ್ಲ

ರಳದಿದ್ದದ್ದು  ಕಣ್ಣು , ನಗದಿದದ್ದು ಬಾಯಿ
ಅಪರಾದವಂತೆ  ಮುಗ್ದ  ಮುಖದ್ದು.

ಜೋರು ಬೀಸಿದ್ದು ಗಾಳಿ, ಬಿದ್ದದ್ದು ಕಲ್ಲು
ಅಪರಾದವಂತೆ ಹಳೇ ಗುಡಿಯದ್ದು.

ಕಲ್ಲಲ್ಲಿತ್ತು ದೋಷ ,ಆತ ಕಲಿತಿರದ ಶಿಲ್ಪಿ
ವಕ್ರವಂತೆ  ಶಿಲ್ಪದ ಕಣ್ಮುಖಗಳು..

ಅವೇನು ಬಯಸಿ ಪಡೆದಿದ್ದವೆ ಇದೆಲ್ಲವನ್ನು
ವಿಧಿಯಾಟವಲ್ಲದೆ ಇದು ಮತ್ತೇನು.. 
 
ತಲೆ ತಗ್ಗಲೇ ಬೇಕಾಗಿದೆ ಮಾಡದ ತಪ್ಪಿಗೆ ,
ಸಹಕರಿಸದೇ ನಾ ಸುಮ್ಮನಿರಲೇ.....

ನಿಮಗಾಗಿ 
ನಿರಂಜನ್ 


ಮಂಗಳವಾರ, ಜೂನ್ 18, 2013

ಪ್ರೇಮ


                                                                               ಪ್ರೇಮ 

ನಮ್ಮಲ್ಲಿ ಕೆಲವರಿಗೆ ಮದುವೆ ಆಗಿರಬಹುದು, ಕೆಲವರು ಇನ್ನೇನು ಇಷ್ಟರಲ್ಲೇ ಆಗಬಹುದು. ಈ ಮದುವೆ ಆಗದವರು, ಆದವರನ್ನು "ಹೇಗಿರುತ್ತೆ ??" ಅದರ ಸವಿಯೆಂದು ಕೇಳಿದಾಗ , ಮದುವೆಯಾದವರ ಉತ್ತರ "ಆಗಿ ನೋಡಿ", "ಆರಮಾಗಿರೋ ಯಾಕೋ ನಿಂಗೆ ಅದೆಲ್ಲ ?? " , "ಇನ್ನು ಸ್ವಲ್ಪ ದಿನ ಹೀಗೆ ಇರೋ, ಯಾಕೆ ಮೈಯ್ಮೇಲೆ ಎಳೆದು ಕೊಳ್ತಿಯ " . ಇನ್ನು ಕೆಲವರು "ಎಷ್ಟೋ ನಿನ್ ವಯಸ್ಸು , ಆಗು ಸ್ವಲ್ಪ ವರ್ಷ ಬಿಟ್ಟು ಆಗು, ಈಗಲೇ ಯಾಕೆ ಬೇಕು ಅದೆಲ್ಲ ". ಹೀಗೆ ಇನ್ನೂ ಅನೇಕ , ಚಿತ್ರ ವಿಚಿತ್ರ ಉತ್ತರಗಳು ಬಹುವಾಗಿ ಸಿಗುತ್ತವೆ. ಕೆಲವರಂತೂ "ಮೊದ್ಲು ಮೊದ್ಲು ಎಲ್ಲ soooper ಆಗಿ ಇರುತ್ತೆ , ಆಮೇಲೆ ನೋಡು ಶುರುವಾಗೋದು" ಅಂತೆಲ್ಲ ಹೇಳುತ್ತಾರೆ. ಅದೇನು ಮೊದ್ಲು ಮೊದ್ಲು ಸಕತ್ ಆಗಿರುತ್ತೆ , ಆಮೇಲೆ ಅದೇನು ಶುರುವಾಗುತ್ತೆ , ಅದರ ಕಷ್ಟ ಏನು , ಅದೇಗಿರುತ್ತೆ ಅದರ ಸುಖ ಎಂದು ಯಾರು ಹೇಳೋಲ್ಲ. ಹೇಳುವಷ್ಟು ಹಿತವಾಗಿರುತ್ತೋ ಇಲ್ಲವೋ ನನಗೊಂತು ಗೊತ್ತಿಲ್ಲ. ಇಲ್ಲ ಹೇಳದಿರುವಷ್ಟು ಮಜವಾಗಿರುತ್ತೋ ಏನೋ ಅದೂ ಕೂಡ  ನನಗೆ ಗೊತ್ತಿಲ್ಲ. ಅದನ್ನು ನಾವೇ ಖುದ್ದು ಅನುಭವಿಸಿದ ಮೇಲೆಯೇ ನಮಗೆ ತಿಳಿಯಬಹುದು. ಆದರೂ  ಕೆಲವರು ತೀರ ಹತ್ತಿರದವರು ಅಷ್ಟು-ಇಷ್ಟು ಹೇಳುವವರು ಇದ್ದೆ ಇರುತ್ತಾರೆ. ಕೆಲವರ ಪ್ರಕಾರ ಶುರುವಿನಲ್ಲಿ ಎಲ್ಲವು ಈ ರೀತಿ ಇರುತ್ತಂತೆ. 
                                                          ತುಂಬಿದೆ ಚೆಲುವೆ ಜೇನು ನಿನ್ನ ತುಟಿಗಳಲಿ
                                                          ಸುಮ್ಮನೆ  ಹೇಗಿರಲಿ ನಾನು, ಹಾಗೆ ನೋಡುತಲಿ.....

                                                           ಚಿಮ್ಮುತಿಹವು ನಿನ್ನ ಕಂಗಳು ಕಾಂತಿಯನು
                                                           ಬೆಳದಿಂಗಳಲ್ಲದೆ ಅದು ನನಗೆ ಮತ್ತೇನು ....

                                                           ಸುರಿದಂತೆ ಸಿಹಿಯಾದ ಸೋನೆ ನೀ ನಕ್ಕರೆ
                                                           ಹೃದಯದಾಳವ ಒಡ್ಡದೆ ನಾ ಸುಮ್ಮನಿರೆ ....

                                                           ಮಾತಲ್ಲವೇ ಅಲ್ಲವವು,ಮುತ್ತಿನ ಸರಮಾಲೆ
                                                           ಪ್ರೇಮ ಮೂರ್ತಿ ನಾ,ಸಿಂಗಾರಗೊಳ್ಳದಿರಲೇ..

                                                           ನೀ ನನಗೆ ಸಂಪೂರ್ಣ ಸದಾ ಚೇತನುತ್ತೇಜನ
                                                           ತುಂಬಿರು ನನ್ನದಲ್ಲದ ಹೃದಯದಲಿ ಅನುದಿನ..

           ಸ್ವಲ್ಪ ದಿನ  ಕಳೆದ ಮೇಲೆ , ಅವರಿಬ್ಬರ ನಡುವೆ  ಬೇಸಗೆ ಬಂದು , ಭಾವನೆಗಳು ಬಿಸಿಲಿಗೆ ಬತ್ತಿದ  ಮೇಲಂತೂ ಇಬ್ಬರಿಗೂ ಯಾಕೋ ಒಬ್ಬರ ಮೆಲೋಬ್ಬರಿಗೆ ಅಷ್ಟಕ್ಕೇ ಅಷ್ಟೇ ಆಗಿ. ಇಬ್ಬರಲ್ಲಿ ಒಬ್ಬರು ಅಥವಾ ಇಬ್ಬರು ಹೀಗೆ ಅನ್ನುತಾರಂತೆ .  

                                                         ಮೊದ  ಮೊದಲು ಸುರಿಯುತಿದ್ದೆ  ಜೇನಹನಿ
                                                         ಈಗೇಕೆ ಹರಿಯುವಂತೆ ಮಾಡುವೆ ಕಣ್ಣೀರಹನಿ...

                                                         ಹೇಳುತಿದ್ದೆ ನೀನೆ ನನಗೆ , ನಿನ್ನದೆಲ್ಲವು ಇಷ್ಟ
                                                         ಮತ್ತೇಕೆ ಪಡುವೆ ಈಗ ಜೊತೆಯಲಿರಲು ಕಷ್ಟ .... 

ಆದರೆ ಸ್ನೇಹಿತರೆ ನಿಜ ಹೇಳಬೇಕೆಂದರೆ , ಈ ಪ್ರೀತಿ ಬರಿ ದೈಹೀಕವಾಗಿರದಿದ್ದರೆ ಕಡೆಯತನಕವೂ ಅದು ನಮ್ಮ ಜೊತೆಯಲ್ಲೇ ಇರುತ್ತೆ. ನಾವು ಬಿಟ್ಟರು ಅದು ನಮ್ಮನ್ನು ಬಿಡದು. ಬರೀ  ದೇಹಾಕರ್ಷಣೆಯ result ನಮ್ಮ ಪ್ರೀತಿಯಾಗಿದ್ದರೆ , ನಮಗೆ ವಯಸ್ಸಾದಂತೆ ಪ್ರೀತಿಗೂ ವಯಸ್ಸು ಆಗುತ್ತೆ. ಆದರೆ ನಮ್ಮ ಪ್ರೀತಿ ಮನಸ್ಸುಗಳ, ಭಾವನೆಗಳ , ಪರಸ್ಪರ ಗೌರವಗಳ result ಆಗಿದ್ದರೆ, ನಮಗೆ ವಯಸ್ಸು ಆದೊಷ್ಟು ನಮ್ಮ ಪ್ರೀತಿ ಗಟ್ಟಿಗೊಳ್ಳುತ್ತೆ,ವಯಸ್ಸು ಆದೊಷ್ಟು ಅದು ಪರಿ ಪಕ್ವವಾಗುತ್ತೆ , ಸಾಣಿಯಾಗುತ್ತೆ. ಕೊನೆಯಾದಾಗಿ ಹೇಳಬೇಕೆಂದರೆ ಪ್ರೀತಿಗೆ ಆದಿ-ಅಂತ್ಯಗಳಿಲ್ಲ.                                                    

                                                    " ನಾನು ನೀನೆನ್ನದಿರಬೇಕು, ಪ್ರೀತಿಗಳೊಂದಾಗ ಬೇಕು
                                                       ಜೊತೆಕಳೆದಂತೆ ಪ್ರೀತಿಯು ಬೆಳೆದು ಹಿರಿದಾಗ ಬೇಕು 
                                                      ಇಬ್ಬರು ಕಲೆತು, ಆ ಪ್ರೀತಿಯೋಳಗೊಂದಾಗ ಬೇಕು "
  
ನಿಮಗಾಗಿ 
ನಿರಂಜನ್ 

ಶುಕ್ರವಾರ, ಜೂನ್ 14, 2013

ನರಿಯಂತೆ ಇರಬೇಕು

                                           
                                                           ಬುದ್ದಿವಂತಿಕೆ 

ಒಂದಾನೊಂದು ಕಾಲದಲ್ಲಿ , ಒಬ್ಬ ರೈತನಿದ್ದ . ಅವನ ಬಳಿ ಒಂದು ಕಟ್ಟು ಮಸ್ತಾದ  ಕುದುರೆಯೊಂದಿತ್ತು . ಕುದುರೆಯು  ಯವ್ವನದಲ್ಲಿ ತನ್ನ ಶಕ್ತಿಯನ್ನೆಲ್ಲ ವ್ಯಯಿಸಿ , ಕಷ್ಟ ಪಟ್ಟು  ರೈತನಿಗಾಗಿ ದುಡಿಯುತ್ತಿತ್ತು. ರೈತನೂ ಕೂಡ ಕುದುರೆಯನ್ನು ಚೆನ್ನಾಗಿ ನೋಡಿಕೊಳ್ಳುತಿದ್ದ. ಕೆಲಕಾಲ ಕಳೆದ ನಂತರ ಕುದುರೆಗೆ ಸಹಜವಾಗಿ ವಯಸ್ಸಾಯಿತು. ರೈತನಿಗೆ ಇನ್ನು ಮೇಲೆ ಈ ವಯಸ್ಸಾದ  ಕುದುರೆಯಿಂದ ನನ್ನ ಒಕ್ಕಲುತನಕ್ಕೆ ಉಪಯೋಗವಿಲ್ಲ ಎಂಬ ಭಾವನೆ ಬೆಳೆಯಿತು.  ಒಂದು ದಿನ ಕುದುರೆಯನ್ನು ಕರೆದು ಹೇಳುತ್ತಾನೆ "ಉಪಯೋಗ ಇಲ್ಲದ ನಿನ್ನನ್ನು ಸಾಕಲು ನನ್ನಿಂದ ಆಗುವುದಿಲ್ಲ , ಇನ್ನು ಮುಂದೆ ನಿನ್ನ ದಾರಿಯನ್ನು ನೀನು ನೋಡಿಕೋ , ಈ ದಿನವೇ ನನ್ನ ಮನೆಯನ್ನು ಬಿಟ್ಟು ಹೊರಡು " . ಗಾಬರಿಗೊಂಡ ಕುದುರೆ "ರೈತನೇ ನನ್ನ ಜೀವನವೆಲ್ಲ ನಾನು ನಿನಗಾಗಿಯೆ ದುಡಿದಿದ್ದೇನೆ, ನಿನ್ನ ಹೊರತು ನನಗೆ ಬೇರೆ ಯಾರು ಗೊತ್ತಿಲ್ಲ , ನನಗೆ ನಿನ್ನ ಮನೆಯಲ್ಲಿಯೇ ಇರಲು ಅವಕಾಶ ಕೊಡು ", ಎಂದಾಗ ಕುದುರೆಯ ಮಾಲೀಕ ಬಹುವಾಗಿ ಯೋಚಿಸಿ , ಕುದುರೆಯನ್ನು ಮನೆಯಿಂದ ಹೊರಗಟ್ಟಲು ಬುದ್ದಿವಂತಿಕೆಯಿಂದ ಒಂದು ಉಪಾಯ ಮಾಡುತ್ತಾನೆ. 

            ಮರುದಿನ ಬಂದು ತನ್ನ ವಯಸ್ಸಾದ ಕುದುರೆಗೆ " ನೋಡು ನಿನಗೆ ನಾನು ಒಂದು ಕಡೆಯ ಅವಕಾಶ ಕೊಡುತ್ತೇನೆ ,ನೀನು ನನಗೆ ಕಾಡಿನಿಂದ ಒಂದು ಗಂಡು ಹುಲಿಯ ಚರ್ಮ ತಂದು ಕೊಡಬೇಕು , ಹಾಗೇನಾದರು ನೀನು ಚರ್ಮವನ್ನು ತಂದು ಕೊಟ್ಟರೆ ಮಾತ್ರ ನಾನು  ನಿನಗೆ ಸಾಯುವವರೆಗೆ ನನ್ನ ಮನೆಯಲ್ಲಿ ನಿನ್ನನ್ನು ಇಟ್ಟುಕೊಂಡು , ಮೇವು ಹಾಕುತ್ತೇನೆ " ಎಂದು ಹೇಳುತ್ತಾನೆ.  ರೈತನೋ  " ಈ ಕುದುರೆಗೆ ಇಂಥಹ ಕಷ್ಟದ ಕೆಲಸ ಮಾಡಲು ಸಾದ್ಯವಿಲ್ಲ , ಒಂದು ವೇಳೆ ಈ ಕೆಲಸ ಮಾಡಲು ಕುದುರೆ ಕಾಡಿಗೆ ಹೋದರೆ ಅದು ಅಲ್ಲಿನ  ಕಾಡು ಮೃಗಗಳಿಗೆ ಆಹಾರವಾಗುವುದೊಂತು ಖಚಿತ , ಒಟ್ಟಿಗೆ ಈ  ವಯಸ್ಸಾದ ಕುದುರೆ ಮನೆಯಿಂದ ತೊಲಗಿದರೆ ಸಾಕು " ಎಂದು ಯೋಚಿಸಿದ್ದ. 

        ರೈತನ ಈ ಶರತ್ತನ್ನು ಸ್ವೀಕರಿಸಿದ ಕುದುರೆ ಕಾಡಿಗೆ ಹೊರಡುತ್ತೆ. ಕಾಡಿನಲೆಲ್ಲ ಹುಲಿಯನ್ನು ಹುಡುಕಲು ಶುರು ಮಾಡುತ್ತದೆ.  "ಹುಲಿಯು ಸಿಕ್ಕರೂ  ನಾನು ಅದನ್ನು ಕೊಲ್ಲಲು  ಸಾದ್ಯವೇ , ಅದು ನನ್ನನ್ನು ತಿನ್ನದೇ ಬಿಡುವುದೇ , ಹುಲಿಯನ್ನು ಕೊಂದು ನಾನು ಹೇಗೆ ಅದರ ಚರ್ಮವನ್ನು ರೈತನಿಗೆ ಕೊಡುವುದು " ಎಂದು ಯೋಚಿಸುತ್ತ ಅಲ್ಲೇ ಇದ್ದ ಒಂದು ಮರದ ಕೆಳಗೆ ನಿಂತುಕೊಳ್ಳುತ್ತದೆ. ಎಷ್ಟು ಯೋಚಿಸಿದರು ಅದಕ್ಕೆ ಏನು ಉಪಾಯ ತೋಚುವುದಿಲ್ಲ . ಅಷ್ಟರಲ್ಲೇ ಅಲ್ಲಿಗೊಂದು ಬುದ್ದಿವಂತ ನರಿ ಬಂದು, ಯೋಚಿಸುತ್ತ ನಿಂತ ಮುದಿ ಕುದುರೆಯನ್ನು ನೋಡಿ ಅದರ ಸಂಕಷ್ಟವನ್ನು ಕೇಳಿ ತಿಳಿಯುತ್ತದೆ. ಕುದುರೆಯ ಮೇಲೆ ಕನಿಕರ ಬಂದು ಕುದುರೆಗೆ ಸಹಾಯ ಮಾಡಲು ನಿರ್ದರಿಸಿ , ಒಂದು ಉಪಾಯ ಮಾಡುತ್ತದೆ. ಉಪಾಯದ ಪ್ರಕಾರ ನರಿಯು "ನೋಡಪ್ಪ  ಕುದುರೆ, ನೀನು ಈಗ ಅಲ್ಲಿ ಕಾಣುವ ನದಿಯ ದಡದಲ್ಲಿ ಸತ್ತು ಬಿದ್ದ ಹಾಗೆ ನಟಿಸಬೇಕು. ನಾನು ಹೇಳುವವರೆಗೂ ನೀನು ಮೇಲೆಳುವಂತಿಲ್ಲ. ನಾನು ಹೇಳಿದ ತಕ್ಷಣವೆ ನೀನು ಮೇಲೆದ್ದು ಓಡಬೇಕು " ಎಂದು ಹೇಳಿತು . ಕುದುರೆಯು ಅದಕ್ಕೊಪ್ಪಿ ಸತ್ತಹಾಗೆ ನಟಿಸ ತೊಡಗಿತು.

          ಅಷ್ಟರಲ್ಲಿ ನರಿಯು ದೂರದಲಿದ್ದ , ಕಾಡಿನ ಎಲ್ಲ ಪ್ರಾಣಿಗಳಿಗೂ ಉಪದ್ರವವಾಗಿದ್ದ , ಒಂದು ಹುಲಿಯ ಬಳಿಗೆ ಹೋಗಿ " ಹುಲಿರಾಯ , ಅಲ್ಲೊಂದು ಕುದುರೆಯು ಈಗ ತಾನೇ ಸತ್ತು ಬಿದ್ದಿದೆ. ನೀನು ಬಂದರೆ ತಿನ್ನಬಹುದು , ನೀನು ಉಳಿಸಿ ಬಿಟ್ಟದ್ದನ್ನು ನಾನು ತಿನ್ನುವೆ ,  ಕಾಡಿನ ರಾಜನಾದ ನಿನಗೆ ಕಷ್ಟ ಪಡದೆ ಬೇಟೆ ಸಿಕ್ಕರೆ ಬಿಟ್ಟು ಬಿಡುವೆಯಾ  " ಎಂದಾಗ , ಏನನ್ನು ಯೋಚಿಸದೆ ಆ ಹುಲಿಯು ನದಿಯ ದಡಕ್ಕೆ ಬಂದು , ಕುದುರೆ ಬಿದ್ದಿರುವುದನ್ನು ನೋಡಿ " ಕಷ್ಟ ಪಡದೆ ಒಳ್ಳೆಯ ಬೇಟೆ ಸಿಕ್ಕಿದೆ" ಎಂದು ಮನಸ್ಸಿನಲ್ಲೇ ಖುಷಿ ಪಡುತ್ತದ್ದೆ. ಇನ್ನೇನು ಹುಲಿಯು ಕುದುರೆಯ ಕುತ್ತಿಗೆಗೆ ಬಾಯಿ ಹಾಕ ಬೇಕು , ಅಷ್ಟರಲ್ಲಿ ನರಿಯು  "ಅವಸರ ಮಾಡಬೇಡ ಹುಲಿರಾಯ,  ನಾವು ಇಲ್ಲೇ ಇದನ್ನು ತಿನ್ನಲು ಶುರು ಮಾಡಿದರೆ ಬೇರೆ ಪ್ರಾಣಿಗಳು ಬಂದು ಪಾಲು ಕೇಳಬಹುದು. ಹಾಗಾಗಿ ನಾವು ಅಲ್ಲಿ ಕಾಣುವ ದೊಡ್ಡ  ಪೊದೆಯ ಹಿಂದೆ ಇದನ್ನು ಎಳೆದೊಯ್ದು , ಅಲ್ಲಿ ಬಚ್ಚಿಟ್ಟುಕೊಂಡು ತಿನ್ನೋಣ " ಎಂದು ಹೇಳುತ್ತದೆ. ಅದಕ್ಕೊಪ್ಪಿದ ಹುಲಿಗೆ " ನೋಡು ನಾನು ಈ ಕುದುರೆಯ ಬಾಲಕ್ಕೆ ನಿನ್ನ ಬಾಲ ಕಟ್ಟುತ್ತೇನೆ , ಬೇಗನೆ ನೀನು ಇದನ್ನು ಪೊದೆಯ ಹಿಂದಕ್ಕೆ ಎಳೆದುಕೊಂಡು ಹೋಗು , ನಾವಿಬ್ಬರು ಅಲ್ಲಿ ಇದನ್ನು ತಿನ್ನೋಣ" ಎಂದಿತು. ಇಂದೆ-ಮುಂದೆ ಯೋಚಿಸದ ಹುಲಿ ತನ್ನ ಬಾಲವನ್ನು ಕೊಟ್ಟು ತಿರುಗಿ ನಿಲ್ಲುತ್ತದೆ. ನರಿಯು ಬಿದ್ದಿದ್ದ ಕುದುರೆಯ ಬಾಲಕ್ಕೆ ಹುಲಿಯ ಬಾಲದ ಜೊತೆಗೆ ಒಂದು ಕಾಲನ್ನು ಕೂಡ ಕಟ್ಟಿ , ತಾನು ಮೊದಲೇ ಹೇಳಿದಂತೆ ಕುದುರೆಗೆ "ಏಳಪ್ಪ  ಕುದರೆ , ಮೇಲೇಳು ,  ಮೇಲೆದ್ದು  ನಿನ್ನ ಮನೆಗೆ ಓಡಿ  ಹೋಗು. ಎಲ್ಲಿಯೂ ನಿಲ್ಲಬೇಡ , ಜೋರಾಗಿ ಓಡು " ಎಂದು ಹೇಳಿತು. ತಕ್ಷಣಕ್ಕೆ ಕುದುರೆಯು ಚಂಗನೆ ಜಿಗಿದು ಕಟ್ಟಿದ್ದ ಹುಲಿಯನ್ನು ಶರವೇಗದಲ್ಲಿ ಜಗ್ಗಿಕೊಂಡು  ಹೋಗತೊಡಗಿತು. ಕಲ್ಲು, ಮುಳ್ಳುಗಳನ್ನು ಲೆಕ್ಕಿಸದೆ ತನ್ನ ಉಳುವಿಗಾಗಿ ಕುದುರೆಯು ಶಕ್ತಿ ಮೀರಿ ಓಡಿತು.ಹುಲಿಗೆ ಆ ಗಂಟನ್ನು ಬಿಡಿಸಿಕೊಳ್ಳಲಾಗಲಿಲ್ಲ. ಈ ಎಳೆತದಿಂದ ಬಹುವಾಗಿ ಗಾಯಗೊಂಡ ಹುಲಿಯು ಅರ್ಧ ದಾರಿಯಲ್ಲಿ ಪ್ರಾಣ ಬಿಟ್ಟಿತು.  

         ಕುದುರೆಯು ಹುಲಿಯನ್ನು ಎಳೆದುಕೊಂಡೆ ಬಂದು ರೈತನ ಮನೆ ಮುಂದೆ ಬಂದು ನಿಂತಿತು. ರೈತನಿಗೋ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಆದರೆ ಹುಲಿಯ ಚರ್ಮ ಸಿಕ್ಕ ಸಂತೋಷದಿಂದ ಕುದುರೆಯನ್ನು ಮತ್ತೆ ಮನೆಯಲ್ಲೇ ಇಟ್ಟುಕೊಂಡನು. 

            ಸ್ನೇಹಿತರೆ ಈ ಕತೆಯನ್ನು ನಾನು ಏಕೆ ಇಲ್ಲಿ ಹೇಳಿದೆ ಅಂದರೆ , ಆ ಕುದುರೆಗೆ ಬಂದ ಸಂಕಷ್ಟದಂತೆಯೇ ನಮಗೂ ಕೂಡ ಜೀವನದಲ್ಲಿ ಸಂಕಷ್ಟ ಬರುವುದು ಖಚಿತ. ಅದರಲ್ಲೂ ಈಗಿನ ಜಾಗತೀಕರಣದ ಪ್ರಭಾವದಲ್ಲಿ , ಖಾಸಗಿ ಕಂಪನಿಗಳು ನಮ್ಮಲ್ಲಿ ಶಕ್ತಿಯಿದ್ದಾಗ ಸರಿಯಾಗಿ ದುಡಿಸಿಕೊಂಡು , ತದನಂತರ unrealistic ಕೆಲಸಗಳನ್ನು ಕೊಟ್ಟು . ಅದನ್ನು ಮುಗಿಸದೆ ಹೋದಾಗ ನಮ್ಮನ್ನು ಕಂಪನಿಗಳಿಂದ ಹೊರದೂಡಲು ಯೋಚಿಸಬಹುದು. ಆಗ ನಾವು ಎದೆ ಗುಂದದೆ , ಬರುವ ಸಂಕಷ್ಟಗಳನ್ನು   ಬುದ್ದಿವಂತಿಕೆಯಿಂದ  ಎದುರಿಸಬೇಕಾಗುತ್ತೆ.  ಮೇಲೆ ಹೇಳಿದ ರೈತನಂತೆ ನಮ್ಮ ಮ್ಯಾನೇಜರ್ಗಳೂ  ಇರಬಹುದು, ಜಾಣ ನರಿಯಂಥಹ ಸ್ನೇಹಿತರು ನಮಗೆ ಕಷ್ಟದಲ್ಲಿ  ಸಿಗಬಹುದು. ಹಾಗಾಗಿ ಸೂಕ್ಷ್ಮಮತಿಗಳಾಗಿ ,ಯುಕ್ತಿಯನ್ನುಪಯೋಗಿಸಿ  ಸಮಸ್ಯಗಳನ್ನೂ ಬಗೆಹರಿಸಿಕೊಳ್ಳಬೇಕು. ಬಿದಿದ್ದ ಕುದುರೆಗೆ ಹೇಗೆ ನರಿಯು ಉತ್ತೇಜಿಸಿ , ಜೀವನದ ಉಳಿವಿಗಾಗಿ ಓಡಿಸುತ್ತೋ ಹಾಗೆ ನಾವು,ಎದೆಗುಂದಿದವರಿಗೆ ಪ್ರೋತ್ಸಾಹ ಕೊಡಬೇಕು. ನಾವೇ ಎದೆಗುಂದಿದ್ದರೆ ಒಳ್ಳೆಯವರ ಸಹಾಯದಿಂದ ಎದ್ದು ಮುಂದೆ ಸಾಗಬೇಕು.   

ನಿಮಗಾಗಿ 
ನಿರಂಜನ್
           

ಸೋಮವಾರ, ಜೂನ್ 10, 2013

ನಮ್ಮ ಬೆಂಗಳೂರು

                             
                                                     ನಮ್ಮ ನಿಜವಾದ ಸ್ವರ್ಗ 

ಬೇಸಗೆ ಸವೆಸಿ ಮಳೆಗಾಲಕ್ಕೆ ಕಾಯುತ್ತಿರುವ ಬೆಂಗಳೂರು ಈಗಾಲೇ ಮಳೆರಾಯನ ಕೃಪೆಗೆ ಪಾತ್ರವಾಗಿದೆ . ಹಾಗೊಮ್ಮೆ ಈಗೊಮ್ಮ ಮಳೆಯೂ ಆರ್ಭಟಿಸಿ ಸುಮ್ಮನಾಗಿದೆ . ಕಳೆದವಾರ ಬಿದ್ದ ಒಳ್ಳೆಯ ಮಳೆ ಬೆಂಗಳೂರನ್ನು ತಣ್ಣಗೆ ಮಾಡಿದ್ದಲ್ಲದೆ, ಜನರಲ್ಲಿ ಒಂದು ರೀತಿಯ ಚೇತನವನ್ನೂ  ಮೂಡಿಸಿದೆ. ಮುಂಬರುವ ಮಳೆಗಾಲದ ಆರಂಭ ಮಾತ್ರ ಚೆನ್ನಾಗಿಯೇ ಆಗಿದೆ ಎಂದು ನಾವೆಲ್ಲರೂ ನಿಟ್ಟುಸಿರು ಕೂಡ ಬಿಟ್ಟಿದ್ದೇವೆ. ನಿಜ ಸ್ನೇಹಿತರೆ, ನಿಜವಾಗಿಯೂ ಇದು ನಮ್ಮೆಲ್ಲರಿಗೂ ಒಂದು ಒಳ್ಳೆಯ ವಿಷಯ. ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲದೆ ರಾಜ್ಯದೆಲ್ಲಡೆಯೂ ಈ ಬಾರಿ ವರುಣ ತನ್ನ ಕೃಪೆಯನ್ನು ತೋರಿದ್ದಾನೆ. ಇದಕ್ಕೆ ಪೂರಕವೆಂಬಂತೆ ಸೂರ್ಯ ಮಳೆಗಾಲದ ಮೋಡಗಳಿಗೆ  ಸೋತು ತನ್ನ ಪ್ರಕರತೆಯನ್ನು ತಗ್ಗಿಸಿಕೊಂಡಿದ್ದಾನೆ, ಎಲ್ಲೆಡೆ ಹಸಿರು ಹಸಿರಾದ ವಾತಾವರಣ ಸೃಷ್ಟಿಯಾಗಿದೆ, ತಣ್ಣನೆ ಗಾಳಿ ಬೀಸತೊಡಗಿದೆ, ಖಗ ಸಂಕುಲವು ಮೈಧುಂಬಿ ನಿಂತಿರುವ ಹಸಿರು ಮರಗಳಲ್ಲಿ ವಿಹರಿಸುತ್ತಿವೆ, ಹೂಗಿಡ ಬಳ್ಳಿಗಳು ಕಣ್ಣಿಗೆ ಎಲ್ಲೆಡೆಯೂ ಕಾಣಸಿಗುತ್ತಿವೆ. ಅಬ್ಭಾ ಇವೆಲ್ಲವೂ  ಸೇರಿ ಬೆಂಗಳೂರಿನ ಸೌಂದರ್ಯವನ್ನು ಮತ್ತೊಷ್ಟು  ಚಿಗುರಿಸಿವೆ ಬೇಸಿಗೆಯ ನಂತರ.


  
               ಇಂಥಹ ಬೆಂಗಳೂರನ್ನು ಬಿಟ್ಟು ನಾನು ಮಾತ್ರ ಕೆಲಸದ ನಿಮಿತ್ತ ವಾರದ ಕೆಲವು ದಿನಗಳು  ಚೆನ್ನೈಯಲ್ಲಿ ಕಳೆಯಬೇಕಿದೆ. ಅಲ್ಲೋ ಬರಿ ಬಿಸಿಲು ಮತ್ತು ಬೆವರು. ಚೆನ್ನೈ ಮುಂದೆ ನಮ್ಮ ಬೆಂಗಳೂರು ನನಗೆ ಸ್ವರ್ಗದಂತೆ ಕಾಣುತ್ತಿದೆ . ಇಂಥಹ ನಗರವನ್ನು ಬಿಟ್ಟು ಅನಿವಾರ್ಯ ಕಾರಣಗಳಿಂದ ನಾನು ಅಲ್ಲಿಗೆ ಅಂದರೆ ಚೆನ್ನೈಗೆ ಓಡಾಡಿಕೊಂಡಿದ್ದೇನೆ. ಬೆಂಗಳೊರಿನ ಬಸ್ ನಿಲ್ದಾಣದಲ್ಲಿ ಬಸ್ ಹತ್ತಬೇಕಾದಾಗ , ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ನನಗೆ ಅದೆಷ್ಟು ಬೇಜಾರು ಆಗುತ್ತೆ ಅಂದ್ರೆ, ತವರು ಬಿಟ್ಟು ಹೋಗುವ ಹೆಣ್ಣು ಮಗಳ ದುಃಖಕ್ಕಿಂತಲೂ ನನಗೆ ಸ್ವಲ್ಪ ಜಾಸ್ತಿಯೇ ದುಃಖ ಆಗುತ್ತೆ. ಇಲ್ಲಿರುವ ಸ್ವರ್ಗದಂಥ ವಾತಾವರಣ, ಪ್ರೀತಿ ತುಂಬಿದ ಮನೆ , ಸ್ನೇಹಿತರನ್ನು ಒಂದು ವಾರದಲ್ಲಿ ೩-೪ ದಿನ ಬಿಟ್ಟು ಅಲ್ಲಿರಬೇಕಲ್ಲ ಎಂದು ಮನಸ್ಸಿಗೆ ತುಂಬಾ ಕಷ್ಟ ಆಗುತ್ತೆ. ಆದರೂ ನಾವು ಹೇರಿರುವ ಬಿಸಿಲ್ಗುದುರೆ ಕರೆದೊಯ್ಯುವ ಕಡೆ ನಾವು ಹೋಗಬೇಕಲ್ಲವೇ, ಅದೇ ರೀತಿ ಏನೇನೋ ಆಸೆಗಳ ಬೆನ್ನರಿ ಅಲ್ಲೊಂದು ಕಾಲು ಇಲ್ಲೊಂದು ಕಾಲು ಇಟ್ಟಿದ್ದೇನೆ.


         ಏಕೆ ಇದೆಲ್ಲ ನಾನು ಬರೆಯುತ್ತೇನೆ ಎಂದು ನೀವು ಅಂದುಕೊಳ್ಳಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ನಾವು ಬಹಳ ದಿನದಿಂದಲೂ ಬೆಂಗಳೂರಿನಲ್ಲಿ ಬದುಕುತ್ತಿದ್ದೇವೆ, ನಮ್ಮ ಜೀವನವನ್ನೇ ನಾವು ಇಲ್ಲಿ ಕಂಡುಕೊಂಡಿದ್ದೇವೆ. ಆದರೂ ನಮಗೆ ಬೆಂಗಳೂರಿನ ಬಗ್ಗೆ ಸ್ವಲ್ಪ ಅಸಮಧಾನ , ಬೇಜಾರು . ಸ್ನೇಹಿತರೆ ನಾನು ಹೇಳುವುದೇನೆಂದರೆ ನಮ್ಮ ದೇಶದ ಬೇರೆ ಯಾವುದೇ ಸಿಟಿಗಳಿಗೆ ಹೋಲಿಸಿದರೆ ನಮ್ಮ ಬೆಂಗಳೂರು ಸ್ವರ್ಗವೇ ಸರಿ. ಇಲಿರುವ ನಾವೆಲ್ಲರೂ ಕೂಡ ಸ್ವರ್ಗ ನಿವಾಸಿಗಳೇ. ಬೆಂಗಳೂರು ನಿಜವಾದ ಸ್ವರ್ಗ ಎಂದು ನಿಮಗೆ ಅನ್ನಿಸಬೇಕಾದರೆ , ಅದರ ನಿಜವಾದ ಅನುಭವ ನಮಗೆ ಆಗಲೇ ಬೇಕೆಂದರೆ ನಾವು ಒಂದು ಬಾರಿ ನಮ್ಮ ದೇಶದ ಬೇರೆ ನಗರಗಳಿಗೆ ಹೋಗಿ ಬರಬೇಕು. ಅಲ್ಲಿಯ ವಿಚಿತ್ರವಾದ ವಾತಾವರಣ ನೋಡಿದ ಮೇಲೆಯೇ ನಮ್ಮ ಬೆಂಗಳೂರಿನ ಬೆಲೆ ನಮಗೆ ನಿಜವಾಗಿಯೂ ತಿಳಿಯುತ್ತದೆ. ಬೆಂಗಳೂರಿನಲ್ಲಿ ಜನಸಂದಣಿ ಜಾಸ್ತಿ ಇರುವುದರಿಂದ ಎಲ್ಲೆಡೆ ಜನರು ಕಾಣಬಹುದು, ಸಂಚಾರ ದಟ್ಟನೆ ಜಾಸ್ತಿ ಅಂತಲೂ ನಮಗೆ ಅನ್ನಿಸಬಹುದು, ಇಲ್ಲಿ ಜೀವನ ನಡೆಸುವುದು ತುಂಬಾ ದುಭಾರಿಯೂ ಅಂತಲೂ  ನಮಗೆ ಅನ್ನಿಸಬಹುದು, ಆದರೆ ನಿಜ ಹೇಳುತ್ತೇನೆ ಇವೆಲ್ಲವೂ ಕೇವಲ ಯಕಶ್ಚಿತ್ ಸಮಸ್ಯೆಗಳು ಮಾತ್ರ. ಬೇರೆ ಎಲ್ಲ ನಗರಗಳಿಗೂ ಹೋಲಿಸಿದರೆ ಇವೆಲ್ಲವು ನಮಗೆ ಸಮಸ್ಯೆಗಳು ಆಲ್ಲವೆ ಅಲ್ಲ. ಆದರೂ ಇವನ್ನೇ ನಾವು ದೊಡ್ಡ ದೊಡ್ಡ ಸಮಸ್ಯೆಗಳೆಂದುಕೊಂಡು ಬೆಂಗಳೂರನ್ನು ಮನ ಬಂದಂತೆ ನಿಂದಿಸಿಕೊಲ್ಲುತ್ತೇವೆ ಮತ್ತು ಅನೇಕ ಬಾರಿ ನಿರಾಶೆಯಿಂದ ಹತಾಶರು ಆಗುತ್ತೇವೆ. ಆದರೆ ಇಲ್ಲಿರುವ ಮೂಲಭೂತ ಸೌಕರ್ಯಗಳು , ಸೌಲಭ್ಯಗಳು , ಜನರು , ಎಲ್ಲವು ಅಧ್ಭುತ. ಇಲ್ಲಿರುವುದೆಲ್ಲವೂ ಯೋಗ್ಯವೇ, ಇಲ್ಲಿ ಸಿಗುವಂತಹ ನೀರು, ಹವಾಮಾನ , ಗಾಳಿ , ಬೆಳಕು ಬೇರೆಲ್ಲೂ ಸಿಗುವುದಿಲ್ಲ. ಇಂಥಹ ಸ್ಥಳದಲ್ಲಿ ನಾವಿದ್ದೇವೆ ಎಂದರೆ ನಿಜವಾಗಿಯೂ ನನಗೆ ಹೆಮ್ಮೆ ಎನ್ನಿಸುತ್ತದೆ. 

          ಚೆನ್ನೈಯಿಂದ ಬೆಂಗಳೂರನ್ನು ತಲುಪುತಿದ್ದಂತೆ ಏನೋ ಒಂದು ತರಹದ ಹಿತವಾದ ಅನುಭವವಂತೂ ನನಗೆ ಅಗುತ್ತೆ. ಇಲ್ಲಿ ಕಾಣಸಿಗುವ ಜನರು ಕೂಡ ಒಳ್ಳೆಯವರಂತೆ, ಹೆಚ್ಚು ಸುಂದರವಾಗಿಯೂ ಕಾಣುತ್ತಾರೆ. ಶುಚಿಯಾದ  ಹೋಟೆಲ್ಗಳು, ಹಿತವಾದ ಕನ್ನಡ ಭಾಷೆ, ಸ್ವಚ್ಚವಾದ ನಗರದ ಬೀದಿಗಳು, ಅತ್ಯುತ್ತಮವಾದ ಬಸ್ ಸೌಕರ್ಯ, ಒಳ್ಳೆಯ ಆಟೋಗಳು, ಆರೋಗ್ಯಕರ ಆಹಾರ ಪರಂಪರೆ , ಇವೆಲ್ಲವೂ ಸೇರಿ ಅಬ್ಭಾ ಬೆಂಗಳೂರನ್ನು ನಿಜವಾಗಿಯೂ ಸ್ವರ್ಗವನ್ನೇ ಮಾಡಿವೆ  ಎಂದು ನನಗನಿಸುತ್ತದೆ. 

         ಆದರೂ ಇದೆಲ್ಲ ಬಿಟ್ಟು ಕೆಲ ದಿನಗಳ ಕಾಲ ದೂರ ಇರಬೇಕಲ್ಲಪ್ಪ ಎಂಬ ನೋವು ನನದೆ ಇದ್ದೆ ಇರುತ್ತೆ , ಮತ್ತೆ ಸಂಪೂರ್ಣವಾಗಿ ಇಲ್ಲಿಗೆ  ಬರೊವರೆಗೆ. ಮತ್ತೊಂದು ವಿಷಯವೇನೆಂದರೆ ಚೆನ್ನೈಗೆ ಅಡ್ಡಾಡೊಕೆ ಶುರು ಮಾಡಿದ ನಂತರ ಬೆಂಗಳೂರಿನ ಸಣ್ಣ ಸಣ್ಣ ವಿಷಯಗಳ,  ಜಾಗಗಳ , ಸೌಕರ್ಯಗಳ ಬಗ್ಗೆ , ಜನರು ಬಗ್ಗೆ , ಬೆಂಗಳೂರಿನ ಪ್ರತಿಯೊಂದರ ಬಗ್ಗೆಯೂ ಹೆಮ್ಮೆ , ಗೌರವ ಮತ್ತು ಪ್ರೀತಿ ತುಂಬಿ ಬರುತ್ತಿದ್ದೆ. ಬೆಂಗಳೂರಿನ ಬೆಲೆ ನನಗೆ ಈಗ ಅರ್ಥವಾಗುತ್ತಿದೆ. ಆದರೂ ವಾರದ ೩-೪ ದಿನಗಳು  ಬೆಂಗಳೂರಿನಲ್ಲೇ ಇರುವ ಅವಕಾಶ ನನಗೆ ಸಿಕ್ಕಿರುವುದು ನನಗೆ ನೆಮ್ಮದಿಯ ವಿಷಯವೇ ಸರಿ. ನಾನು ಅಲ್ಲಿದ್ದರು ಕೂಡ  ನನ್ನ ಮನಸ್ಸು ಇಲ್ಲಿಯೇ, ನಮ್ಮ ಬೆಂಗಳೂರಿನಲ್ಲಿಯೇ ಇರುತ್ತೆ. 


ನಿಮಗಾಗಿ
ನಿರಂಜನ್  

ಭಾನುವಾರ, ಮೇ 5, 2013

ಮತ್ತೊಮ್ಮೆ



             ಮತ್ತೊಮ್ಮೆ

ನಸು ನಗುವೆಯಾ ಮತ್ತೊಮ್ಮೆ ನನ್ನ ಪ್ರೀತಿಯ ಒಲವೆ 
ಚಿಮ್ಮಲಿ ಮಗದೊಮ್ಮೆ ನನ್ನ ಪ್ರೀತಿಯ ಚಿಲುಮೆ

ಮೊದಲ ಆ ನೋಟಗಳು ಪುಟಿದೇಳಿಸುತ್ತಿವೆ
ಮಲಗಿದ್ದ ಮೋಹಕ ಆ ಕನಸುಗಳನ್ನು ,

ಮೊದಲ ಆ ಪಿಸು ಮಾತುಗಳು ಕೆಣಕುತಿವೆ
ಮಂಕಾಗಿ ಬಸವಳೆದ ಆ ಭಾವನೆಗಳನ್ನು ,

ಕಂಗಳಲಿ ಕಂಡ, ಕೈ ಹಿಡಿದು ಕಟ್ಟಿದ ಕನಸುಗಳ
ಗೋಪುರ ಕಾಣೆಯಾಗುವ ಮೊದಲೇ

ನಸು ನಗುವೆಯಾ ಮತ್ತೊಮ್ಮೆ ನನ್ನ ಪ್ರೀತಿಯ ಒಲವೆ 
ಚಿಮ್ಮಲಿ ಮಗದೊಮ್ಮೆ ನನ್ನ ಪ್ರೀತಿಯ ಚಿಲುಮೆ

ನಿಮಗಾಗಿ
ನಿರಂಜನ್ 






ಬುಧವಾರ, ಡಿಸೆಂಬರ್ 26, 2012

ಶಾಂತಿ


                                                            ನನ್ನಲೇ ಇರುವಳು ...... 
ಸ್ನೇಹಿತರೆ , 
ತ್ತೀಚಿಗೆ ನಾನು ತಿರುಪತಿ ಬೆಟ್ಟಕ್ಕೆ ಹೋಗಿದ್ದೆ  ಶಾಂತಿಯನ್ನು ಹರಸಿ. ಕಷ್ಟ ಪಟ್ಟು, ಬೆಟ್ಟ ಏರಿ , ದೇವಾಲಯ ಸೇರಿ, ಸ್ನಾನ ಮಾಡಿ, ಮಡಿಯುಟ್ಟು, ಗೋವಿಂದ ಗೋವಿಂದ ಎಂದು ಆತನ ನಾಮ ಸ್ಮರಣೆ ಮಾಡುತ್ತಾ ,ಸರಧಿ ಸಾಲಿನಲ್ಲಿ ನಾವೂ  ನಿಂತೆವು. ಜನರಲ್ಲಿ ಅದೇನೋ ಒಂದು ಭಕ್ತಿ , ಭಾವ , ಭಯ , ಆಸೆ  ಜೊತೆಗೆ ಅವಸರವೂ ಇತ್ತು  ದೇವರ ದರುಶನ ಪಡೆಯಲು. ಅಂತು-ಇಂತು ದೇವರ ಸನ್ನಿದಿ ಸಮೀಪಿಸಿತು. ನನಗೇನೋ ತವಕ , ದೇವರನ್ನು ಇನ್ನೇನು ನಾನೇ ನೋಡಿ ಬಿಡುತ್ತೇನೆ, ದರುಶನ ಆಗೇ ಬಿಟ್ಟಿತು ಎಂದು. ಆಗಿನ ಕಾಲದಲ್ಲಿ ಪಾಪ ಋಷಿ ಮುನಿಗಳು , ಅನೇಕ ಯೋಗಿಗಳು ವರ್ಷಗಟ್ಟಲೆ ತಪಸ್ಸು ಮಾಡಿದರೂ, ಹಗಲಿರುಳೆನ್ನದೆ ಪೂಜಿಸಿದರು ಸಿಗದ ಈತ ನಮಗೆ ೪ ಗಂಟೆ ಸರದಿಸಾಲಿನಲ್ಲಿ ಕಷ್ಟ ಪಟ್ಟು ಬಂದಿದ್ದಕ್ಕೆ ದರುಶನ ನೀಡಿದ. ನಿಜವಾಗಿಯೂ ತಿಮ್ಮಪ್ಪ ಭಕ್ತರ ಪಾಲಿನ ಬಂಧು. ಜನರಲ್ಲಿ ಈತನ ಮೇಲೆ ಅದೆಷ್ಟು ನಂಬಿಕೆ ಅಂದರೆ "ಈತ ಖಂಡಿತವಾಗಿಯೂ ನಮಗೆ ಬೇಗ ದರುಶನ ಕೊಟ್ಟೆ ಕೊಡುತ್ತಾನೆ"  ಎಂದು ಮೊದಲೇ ಇಂತಿಷ್ಟು ಗಂಟೆಗೆ ನಾವು ವಾಪಾಸು ಹೋಗಬೇಕೆಂದು ಬಸ್ ಕೂಡ ಬುಕ್ ಮಾಡಿರುತ್ತೇವೆ. ಪಾಪ ಆಗಿನ ಕಾಲದ ಋಷಿಮುನಿಗಳು ಸುಮ್-ಸುಮ್ನೆ ವರ್ಷಗಟ್ಟಲೆ time waste ಮಾಡಿದ್ರು ಅಲ್ಲವಾ ??? . 
           ಹೀಗೆ ಮೊನ್ನೆ ಒಬ್ರು ಹೇಳ್ತಾ ಇದ್ರು " ನೋಡಿ ಸಾರ್ ಮೊನ್ನೆ ರಾತ್ರಿ ಇಲ್ಲಿ ೮.೩೦ ಕ್ಕೆ ಬೆಂಗಳೂರು ಬಿಟ್ವಿ, ರಾತ್ರಿ ನಮಗೆ ೩ ಗಂಟೆಗೆ ದೇವರ ದರುಶನ ಆಗೇ ಬಿಡ್ತು , ಅದೆಷ್ಟು ಜಲ್ದಿ ಅಂತೀರಾ , ನನಗೆ ನಂಬೋಕೆ ಸಾದ್ಯವಾಗಲಿಲ್ಲ " ಎಂದಾಗ , ಮತ್ತೊಬ್ಬ " ಎಲ್ಲ ನಿಮ್ಮ ಪುಣ್ಯಾ ಸಾರ್, ನೀವ್ ಮಾಡಿರೋ ಪುಣ್ಯದ ಫಲ" ಎಂದ. ಅದಕ್ಕೆ ಆತ "ಎಲ್ಲಿಯ  ಪುಣ್ಯ ಮಾರಾಯ ಅದು ಪುಣ್ಯ ದ ಫಲ ಅಲ್ಲ... ನಮ್ಮ ಪ್ಯಾಕೇಜ್ ದರ್ಶನದ ಫಲ .... ಕಿತ್ತರು ಬೇಜಾನ್ ದುಡ್ಡ "  ಎಂದಾಗ ಅಲ್ಲಿದ್ದ ನನಗೆ ನಗು ಬಂತು...
            ಬರಿ ದುಡ್ಡಿದ್ದರೆ ಮಾತ್ರ ಅಲ್ಲಿ ದೇವರು ಕಾಣುತ್ತಾನೆ ಅಂತ ಅಲ್ಲ. ದುಡ್ಡು ಕೊಟ್ಟರೆ ಮಾತ್ರ ಬೇಗ ಕಾಣುತ್ತಾನೆ.  ಇಲ್ಲದಿದ್ದರೆ ಅಷ್ಟೇ , ಕಾಯಬೇಕು , ತುಂಬಾ ಕಷ್ಟ ಪಡಬೇಕು.

                                             ದೇವರೋಲಿಯುತ್ತಿದ್ದನಂತೆ 
                                             ತೋರಿದ್ದರೆ ಒಂದಿಷ್ಟು
                                             ಪ್ರೀತಿ, ಭಕುತಿ..... 
                                             ಅದಕ್ಕೆ ವಿರುದ್ದವಾಗಿದೆ
                                             ಈಗಿನ ನಮ್ಮ 
                                             ತಿರುಪತಿ!!!!

                  ದೇವಾಲಯದಲ್ಲಿ ನಾವು ಆತನ ದರುಶನಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದಾಗ ಎತ್ತ ನೋಡಿದರತ್ತ ನಮಗೆ ಕಾಣುತ್ತಿದ್ದದ್ದು ದೇವರ ಚಿತ್ರಗಳಲ್ಲ, ದೇವರ ಮಂತ್ರಗಳೂ ಅಲ್ಲ, ಕಾಣುತ್ತಿದ್ದದ್ದು " ಸರಗಳರಿದ್ದಾರೆ ಎಚ್ಚರಿಕೆ " ಎಂಬ ನಾಮಪಲಕಗಳು. ದೇವರು ನಮಗೆ ಭಕ್ತಿಯ ಜೊತೆಗೆ ಭಯವನ್ನು ಇಟ್ಟಿದ್ದಾನೆ ಎಂಬುದಕ್ಕೆ ಅದೇ ಸಾಕ್ಷಿ. ಕಳ್ಳರನ್ನು ಕೂಡ ಅವನು ಶಿಕ್ಷಿಸದೆ ಸಲಹುತ್ತಾನೆ ಎಂಬುದಕ್ಕೆ ಆ  ಬೋರ್ಡ್ ಗಳೇ ನಿದರ್ಶನಗಳು. ಇದು ಬರೀ  ಅದೊಂದೇ ದೇವಸ್ತಾನದನ ಕತೆ ಅಲ್ಲ ಎಲ್ಲ ಕಡೆಗಳಲ್ಲೂ ಅದು ಹೀಗೇನೆ. ದೇವಾಲಯದೊಳಗೆ ಪಾದ ಇಡುವುದಕ್ಕೂ ಮೊದಲು ಪಾದರಕ್ಷೆಗಳ ಭಯ. ದೇವಾಲಯದೊಳಗೆ ಸರ , ಪರ್ಸುಗಳ ಭಯ ನಮಗೆ ಇದ್ದೆ ಇರುತ್ತದೆ.    


                                           ದೇವಾಲಯಗಳಿಗೋದರೆ 
                                           ಕಳೆದೋಗುತ್ತಿತ್ತು ಪಾಪ,
                                           ಸಿಗುತ್ತಿತ್ತು  ಶ್ರೀರಕ್ಷೆ .....
                                           ಈಗ  
                                           ದೇವಾಲಯಗಳಿಗೆ 
                                           ಹೋದರೆ ಕಳೆಯುವುದೊಂದೇ 
                                           ನಮ್ಮ ಪಾದರಕ್ಷೆ !!!

       ಇತ್ತೀಚಿಗೆ ಈ ಕಳ್ಳತನಗಳು ಮನೆಗಳಲ್ಲಿ ಮಾತ್ರ ಆಗ್ತಾ ಇಲ್ಲ. ಯಾವುದೋ ನ್ಯೂಸ್ ಚಾನಲ್ನಲ್ಲಿ  ತೋರಿಸುತ್ತಾ ಇದ್ದರು , ತಿರುಪತಿ ತಿಮ್ಮಪ್ಪನಿಗೆ ನೀಡಿದ ಕಾಣಿಕೆಯನ್ನು ಎಣಿಸುವ ಮಹಾ ಪುರುಷರೆ ,  ಭಕ್ತರು ಕೊಡೊ ಕಾಣಿಕೆಯನ್ನು ಕದಿಯುತ್ತಾರೆ. ಅವರನ್ನು ತಿಮ್ಮಪ್ಪನೆ ಅಲ್ಲಿ ವಂಶ ಪಾರಂಪರ್ಯವಾಗಿ ಸಾಕಿ ಸಲಹುತ್ತಿದ್ದಾನೆ ಎಂದು. ನಾವು ಮನೆಗಳಲ್ಲಿ ಅಮ್ಮ ದೇವರ ಮೀಸಲು ಅಂತ ಇಟ್ಟ ಒಂದೆರೆಡು ರುಪಾಯಿಗಳನ್ನೇ ಮುಟ್ಟಲು ಹೆದರುತ್ತೇವೆ. ಆದರೆ ಕೆಲವು ಭಕ್ತ ಮಹಾಶಯರು ದೇವರ ಹೃದಯ ಕದಿಯಿರೋ ಎಂದರೆ , ದೇವರಿಗೆ ಬಂಡ ಹಣ, ನಿಧಿ ಕದಿಯುತ್ತಾರೆ. ಕೆಲವೊಂದು ದೇವಾಲಯಗಳಲ್ಲಿ ದೇವರನ್ನೇ ಕದ್ದ ಅನೇಕ ಉದಾಹರಣೆಗಳಿವೆ .  

                                           ಯಮನಿಗೂ  ಭಯವಾಗುತ್ತಿತ್ತಂತೆ
                                           ನೋಡಿದರೆ ದೇವರ
                                           ದಿವ್ಯ ಸನ್ನಿಧಿ....
                                           ಈಗ ಕಳ್ಳ ಕಾಕರಿಗೂ 
                                           ಇಲ್ಲ ಭಯ, ಕದಿಯಲು 
                                           ದೇವರ  ನಿಧಿ!!!

            ಮುಗಿಸುವ ಮುನ್ನ , ಸ್ನೇಹಿತರೆ ನಾನೇನು ತಿರುಪತಿ ತಿಮ್ಮಪ್ಪನ ದ್ವೇಷಿಯಲ್ಲ , ಆದರೆ ಅಲ್ಲಿ ನಾವು ನೆಡೆದು ಕೊಳ್ಳುವ ರೀತಿ, ನನಗೆ ಸರಿ ಬರೋಲ್ಲ. ಅಲ್ಲಿ ಎಲ್ಲ ರೀತಿಯ ವ್ಯವಸ್ತೆಗಳಿವೆ, ಎಲ್ಲವು ಸರಿಯಿದೆ , ಆದರೆ ನಾವೇ ಯಾಕೋ ಸರಿಯಾಗಿ ಅಲ್ಲಿ  ನಡೆದುಕೊಳ್ಳುವುದಿಲ್ಲ. ದೇವರ ಮೇಲೆ ನಮಗೆ ಭಕ್ತಿಗಿಂತ ಭಯ ಜಾಸ್ತಿಯಾಗಿದೆ. ಶಾಂತಿಗಾಗಿ , ಸಮಧಾನಕಾಗಿ ದೇವರ ದರುಶನಕ್ಕೆ ಹೋಗುತ್ತೇವೆ . ಆದರೆ ನಮಗೆ ಅಲ್ಲಿ ಸಿಗುವುದು ಅವಸರ , ಬೇಸರ  ಮತ್ತು ಗಲಾಟೆಗಳು , ಇಲ್ಲ ಸಲ್ಲದ ಮಾತುಗಳು ಮಾತ್ರ.  ಶಾಂತಿ , ಸಮಾಧಾನಗಳನ್ನು  ನಾವು ಹುಡುಕಿಕೊಂಡು ಹೋಗಬೇಕೆ ? ಅವು ದೇವರ ವಿಗ್ರಹ ನೋಡಿದರೆ ನಮಗೆ ಸಿಕ್ಕು ಬಿಡುತ್ತವೆಯೇ ?? ಇವು ಸಿಕ್ಕಿದ ಮೇಲೆಯೇ ನಮಗೆ ಸಂತ್ರುಪ್ತಿದೊರೆಯುತ್ತದೆಯೇ ???... ಇದಕ್ಕೆ ವಿರುದ್ದವಾಗಿ ನಾನು  ನಂಬಿರುವ ತತ್ವವೆಂದರೆ , ನಾವೆಲ್ಲಿರುವೆವೋ ಅಲ್ಲಿಯೇ ಶಾಂತಿ ಸಮಾಧಾನಗಳನ್ನು ತಂದುಕೊಳ್ಳಬೇಕು. ಶಾಂತಿ ಮೊದಲು ನಮ್ಮ ಮನ , ಮನೆಯಲಿದ್ದರೆ  ಎಲ್ಲ ಕಡೆಯೂ ಅದು ನಮಗೆ ಕಾಣುತ್ತದೆ. ನಮಗೆ ಮನೆಯಲ್ಲಿ ಸಿಗುವ ಶಾಂತಿಯೇ ನಿಜವಾದ ಶಾಂತಿ , ಹೊರಗಡೆ ದೊರೆಯುವುದು ಅದರ ನೆರಳು ಮಾತ್ರ.  

                                          ಕೆಲವರೋಗುವರು 
                                          ದೇವಾಲಯಕ್ಕೆ 
                                          ಬೇಕೆಂದು  ಆರತಿ ..
                                          ಕೆಲವರೋಗುವರು 
                                          ದೇವಾಲಯಕ್ಕೆ 
                                          ಬೇಕೆಂದು ಪ್ರಸಾದ ..
                                          ನಾ ಇವರಾಗೆ ಅಲ್ಲ , 
                                          ದೇವಾಲಯಕ್ಕೂ ಹೋಗೋಲ್ಲ 
                                          ಏಕೆಂದರೆ 
                                          ನನ್ನ ಮನೆಯಲ್ಲೇ ಇರುವಳು ನನ್ನ ಶಾಂತಿ !!! 

ನಿಮಗಾಗಿ 
ನಿರಂಜನ್ 

ಮಂಗಳವಾರ, ಡಿಸೆಂಬರ್ 25, 2012

ಸ್ಪೂರ್ತಿ


                                     ನಿಜವಾದ ಸ್ಪೂರ್ತಿ...               
          

ಹೀಗೆ  ಕೆಲವು ದಿನಗಳಿಂದ ತಲೆಯಲ್ಲಿ ಒಂದು ಹುಳ  ಬಿಟ್ಕೊಂಡು  , ಏನಾದ್ರೂ ಮಾಡಿ  ಆ ಹುಳವನ್ನು  ಸಾಕಿ , ಚೆನ್ನಾಗಿ ಬೆಳೆಸಿ, ದೊಡ್ಡದ್ ಮಾಡಿ , ಆ ಹುಳಕ್ಕೆ ಒಂದು ಒಳ್ಳೆ ಗಂಡು ನೋಡಿ ಮಧುವೆ  ಮಾಡ್ಸಿ , ಅದುಕ್ಕೆ ಹುಟ್ಟೋ ಮರಿಗಳ ಜೊತೆ   ಕಾಲ ಕಳಿಬೇಕು. ಆ ಮರಿ ಹುಳಗಳನ್ನೆಲ್ಲ ಒಮ್ಮೆಗೆ ನನ್ನ ತಲೆಯಲ್ಲಿ ಬಿಟ್ಕೊಂಡ್ರೆ  ಲೈಫ್ ಅಲ್ಲಿ ಎಷ್ಟೊಂದು ಮಜಾ ಇರುತ್ತೆ , ಎಷ್ಟು ಥ್ರಿಲ್ಲಿಂಗ್ ಆಗಿ ಇರುತ್ತೆ ಎನ್ನುವ ಯೋಚನಾಲಹರಿಯಲ್ಲೇ ತೇಲುತಿದ್ದೆ.  ಅದಕ್ಕೆ ಸರಿಯಾಗಿಯೇ  ಒಂದು ದಿನ ಯಾಕೋ ತುಬಾ ಬೇಜಾರ್ ಕೂಡ ಆಗಿ , ಈ  ಆಫೀಸ್ ಕೆಲಸಾನೂ ಸಾಕಾಗಿತ್ತು. ನನ್ನದೇ ಏನಾದರು ಸ್ವಂತ ಐಡಿಯಾ ಮೇಲೆ ಸ್ವಲ್ಪ ದಿನ ಕೆಲಸ ಮಾಡ್ಬೇಕು. ಆ ಕೆಲಸದೆಲ್ಲೇ ನಾನು ನನ್ನನ್ನು ಕಾಣಬೇಕು. ನನಗೆ ನಾನೇ ಅಲ್ಲಿ ಎಲ್ಲ ಆಗಿರಬೇಕೆಂದು ಯೋಚಿಸತೊಡಗಿದ್ದೆ. ಇದರ ಜೊತೆಗೆ ನನಗೆ ಅನ್ನಿಸಿದ ಹಾಗೆ ನಾ ಇರಬೇಕು, ಮನಸ್ಸಿಗೆ ಖುಷಿ ಸಿಗೋ ಜಾಗಗಳಿಗೆ ಹೋಗ್ಬೇಕು. ಸಾಕೊಷ್ಟು ಪುಸ್ತಕಗಳನ್ನ ಓದಬೇಕು, ನನ್ನೆಲ್ಲ ಸ್ನೇಹಿತರ ಜೊತೆ ಎಲ್ಲೆಲ್ಲಿಗೆ  ಹೋಗ್ಬೇಕು ಅಂತ ಅನ್ಸುತ್ತೋ  ಅಲ್ಲೆಲ್ಲ ಅಡ್ಡಾಡಿ ಸ್ವಲ್ಪ ದಿನ ಆರಾಮಾಗಿ ಇರ್ಬೇಕು ಅಂತೆಲ್ಲ ನನ್ನ ಮನಸ್ಸು ಬಹುವಾಗಿ ಬಯಸುತ್ತಿತ್ತು. ನನ್ನ ಆಫೀಸ್ ಕೆಲಸ ಮಾಡಿ ಮಾಡಿ ಮನಸ್ಸಿಗೆ ಜಡ್ಡು ಹಿಡಿದು ನನಗೆ ಈ ರೀತಿ ಅನ್ನಿಸುತ್ತಿತ್ತೇನೋ ನನಗೆ ಇನ್ನೂ  ಸರಿಯಾಗಿ ಅರ್ಥ ಆಗಿಲ್ಲ. ನಾ ಇದುವರೆಗೂ ಮಾಡಿದ್ದು ಏನು ಅಲ್ಲ, ಇನ್ನೂ ಮೇಲಾದರೂ ನನಗಿಷ್ಟವಾದದ್ದನ್ನು ನಾ ಮಾಡಲೇಬೇಕು ಎಂಬ ಬಯಕೆ ಮನಸ್ಸಿನಲ್ಲಿ ಬೇರೂರಿತ್ತು. ಅಂದರೆ ಇಷ್ಟು ದಿನ ನಾ ಏನೇನು ಮಾಡಬೇಕು ಅಂತೆಲ್ಲಾ ಬರೀ ಅಂದುಕೊಂಡಿದ್ದೆನೋ ಆ ಆಸೆಗಳೆಲ್ಲ ಒಟ್ಟಿಗೆ ಸೇರಿ ನನ್ನನು ತುಂಬಾ  ಕುಟುಕುತ್ತಿದ್ದವು. ಆ ಕ್ಷಣಕ್ಕೆ ನನ್ನ ಮನಸ್ಸು ವೃತ್ತಿಗಿಂತ  ನನ್ನ ಪ್ರವೃತ್ತಿಗಳ ಕಡೆಗೆ  ಹೆಚ್ಚು ವಾಲುತ್ತಿತ್ತು.

            ಇಷ್ಟೆಲ್ಲಾ ಯೋಚನೆಗಳು ಬಂದಾಗ ಸಮಯ ಇನ್ನು ಹೆನ್ನೆರೆಡು ಆಗಿತ್ತು. ಮಧ್ಯಾನದ ಊಟವೂ ಆ ದಿನ ನನಗೆ  ಬೇಡವಾಗಿತ್ತು.  ಮಾಡುತ್ತಿದ್ದ ಕೆಲಸವು ಸಾಕಾಗಿ, ಯೋಚನೆಯಲ್ಲೇ ಒಂದು ದೊಡ್ಡ ಕಪ್ ಟೀ ಹೀರಿ, cafetaria ದ ಕಿಟಕಿಯಿಂದ  ಹೊರಗೆ ನೋಡಿದಾಗ ,  ಸುತ್ತಲು  ಕಾಣುತ್ತಿದ್ದ ಕಾಂಕ್ರೀಟು ಕಟ್ಟಡಗಳು ನೀರಸವೆನಿಸಿದವು. ಹಾಗ ಆ ಸಮಯಕ್ಕೆ ನನಗೆ ಸ್ವಲ್ಪ ಆಫೀಸ್ ಕೆಲಸದಿಂದ ವಿಶ್ರಾಂತಿಯ ಅಗತ್ಯವಿದೆ ಎಂದೆನಿಸಿತು. ಅದ್ದರಿಂದ ಅಲ್ಲಿಂದ ನೇರವಾಗಿ  ಹೋರಟ ನಾನು ಮನೆಗೆ ತೆರಳಿ, ಸ್ವಲ್ಪ ಹೊತ್ತು ಎಲ್ಲಿಗಾದರು ಹೋಗಿ ಬರಲೆಂದು ನಿರ್ಧರಿಸಿದೆ. ನನಗೆ ಇಷ್ಟವಾದ ಜಾಗ ಇಲ್ಲಿ ಯಾವುದಿದೆ ? ಎಂದು ಯೋಚಿಸುವ ಮೊದಲೇ ನನಗೆ ನೆನಪಾದದ್ದು GKVK (ಗಾಂದಿ ಕೃಷಿ ವಿಶ್ವವಿದ್ಯಾಲಯ). ನನಗೆ ಸಾಕೆನ್ನುವೊಷ್ಟು ಕಾಲ ಅಲ್ಲಿ ಕಳಿಬೇಕು, ಹಿತವಾಗುವೊಷ್ಟು ವಾತಾವರಣವನ್ನು ಅಲ್ಲಿ ಸವಿಯಬೇಕು ಎಂದು ತವಕಿಸುತ್ತ  ಆ ಕೃಷಿ ವಿದ್ಯಾಲಯದ ಕಡೆ ಪ್ರಯಾಣ ಬೆಳೆಸಿದೆ. ಸ್ನೇಹಿತರೆ ನಾನು ಅಲ್ಲಿ ಹೋಗಿ ಏನೇನು ಮಾಡಿದೆ ಅಂತ ಹೇಳುವ ಮೊದಲು , ಈ  GKVK ಬಗ್ಗೆ  ನಿಮಗೆ ಸ್ವಲ್ಪ ಹೇಳಲೇ ಬೇಕು.


          ಈ ೧೮೯೯ ರಲ್ಲಿ ಪ್ರಾರಂಭವಾಗಿ, ಹಂತ ಹಂತವಾಗಿ ಬೆಳೆದು ನಿಂತಿದೆ ಈ ವಿಶ್ವವಿದ್ಯಾಲಯ. ಎತ್ತ ನೋಡಿದರತ್ತ ಹಸಿರುಹೊತ್ತ ಮರಗಿಡಗಳು, ಎಷ್ಟೋ ಬಗೆಯ ಹಣ್ಣಿನ ತೋಟಗಳು, ಹೂಗಿಡಗಳು , ವಿಶಾಲವಾದ ಹೊಲಗಳು , ಜನರಿಗೆ ನಡೆಯಲು ಅಷ್ಟೇ ವಿಶಾಲವಾದ ದಾರಿಗಳು, ಬಿದಿರು , ತೇಗ, ಶ್ರೀಗಂಧ , ಬೇವು , ಮಾವು ,ಅರಳೆ , ಅಶ್ವಥ, ದೊಡ್ದಾಲ   ಇನ್ನು ಅನೇಕ ನೋಡಿರದ, ಕೇಳರಿಯದ  ಹೊಸ ಬಗೆಯ ಕಾಡು ಮರಗಳು ಇಲ್ಲಿ ನಮಗೆ ನೋಡ ಸಿಗುತ್ತವೆ.  ಅತಿಯಾದ ಜನ ಸಂದಣಿ ಇಲ್ಲದ ಈ ಜಾಗದಲ್ಲಿ, ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲದೆ ಬೇರೆ ಯಾರು ಇರುವುದಿಲ್ಲ. GKVK ಬೆಂಗಳೂರಿನಲ್ಲೇ ಇದ್ದರು ಅದು ಬೆಂಗಳೂರಿನಂತಲ್ಲ. ಸಾಕಷ್ಟು ಮರಗಿಡಗಳಿರುವ ಈ ಜಾಗದಲ್ಲಿ ನಾವು ಅನೇಕ ಬಗೆಯ ಪಕ್ಷಿಗಳು ನೋಡ ಬಹುದು, ಅವುಗಳ ಕೂಗು ಕೇಳುವುದಕ್ಕೊಂತು ಇನ್ನೂ ಖುಷಿ ಆಗುತ್ತದೆ. ಬೆಂಗಳೂರಿನಲ್ಲಿ ಈ ತರಹದ ಜಾಗವೂ ಇದೆ ಎಂದು ನಮಗೆ ಆಶ್ಚರ್ಯ ಆಗುವುದೇ ಇರುವುದಿಲ್ಲ , ನಾವು ಒಮ್ಮೆ ಇಲ್ಲಿಗೆ ಬೇಟಿ ನೀಡಿದರೆ.
 
           ನನಗೂ ಮತ್ತು ಈ ಜಾಗಕ್ಕೂ ಬುಹು ದಿನದಿಂದಲೂ  ಒಂದು ರೀತಿಯಾದ ನಂಟು ಇದೆ. ನಾನು ಈಗಲೂ  ವಾರಕ್ಕೆ ಕನಿಷ್ಠ ಮೂರು-ನಾಲ್ಕು ಭಾರಿ ಬಂದು ಹೋಗುವ ಜಾಗ ಇದು. ಶನಿವಾರ ಮತ್ತೆ ಭಾನುವಾರ ಬೆಳಿಗ್ಗೆ   ಜಾಗಿಂಗ್ ಗೆ GKVK ಗೆ ಬರದಿದ್ದರೆ ನನಗೆ ಸಮಾಧಾನವಿರುವುದಿಲ್ಲ. ನನಗೆ ತುಂಬಾ ಬೇಜಾರ್ ಆದಾಗಲೂ,  ಸಕತ್ ಖುಶಿ ಆದಾಗಲೂ ನಾನು ಇಲ್ಲಿಗೆ ಬರುವುದುಂಟು. ಇಲ್ಲಿಗೆ ಯಾವಾಗ ಬಂದರೂ ಒಂದು ದೊಡ್ಡ ವಾಕ್ ಮಾಡಿ , ಇಲ್ಲಿರುವ  ಪ್ರಕೃತಿಯ ಹಿತವನ್ನೀರಿ, ಹಕ್ಕಿ ಪಕ್ಕಿಗಳ ಜೊತೆ oneway ಮಾತ್ ಆಡಿ, ಇಲ್ಲಿಯ ಕ್ಯಾಂಟೀನ್ ಅಲ್ಲಿ ಏನಾದ್ರೂ ತಿಂದು , ಒಂದ್ ಕಪ್ ಕಾಫೀ ಇಲ್ಲವೆ  ಟೀ ಕುಡಿದು ಹೋದರೆ ನನಗೆ ಸಿಗುವ ಸಂತೋಷ ಮತ್ತೆ relaxation , ಇದುವರೆಗೂ ಬೆಂಗಳೂರಿನಲ್ಲಿ ಯಾವ ಜಾಗದಲ್ಲೂ ಸಿಕ್ಕಿಲ್ಲ.  ಹಾಗಾಗಿ ನಾನು ಆ ದಿನ GKVK ಗೆ  ತುಂಬಾ ಇಷ್ಟಪಟ್ಟು ಬಂದಿದ್ದೆ.         

       ಒಮ್ಮೆಮೊಮ್ಮೆ   ನನ್ನ ರೂಮಿನ ಪುಸ್ತಕದ  ಗೂಡಲ್ಲಿರುವ ನನಗೆ ಹೆಚ್ಚು ಇಷ್ಟವಾದ ಪುಸ್ತಕಗಳು, ನಾನು ಎಂಜಿನೀರಿಂಗ್ ಅಲ್ಲಿ ಸರಿಯಾಗಿ ಓದದ ಪುಸ್ತಕಗಳು ಕೂಡ  "ಈಗಲಾದರೂ ನಮ್ಮನ್ನು ಸ್ವಲ್ಪ ತೆಗೆದು ನೋಡೋ , ನಾಳೆ ಈ software ಕ್ಷೇತ್ರದಲ್ಲಿ ನಿನ್ನ ಕೈಯಿಡಿತ್ತೇವೆ" ಎನ್ನುತ್ತವೆ. ಅದೇ ರೀತಿ ಬೈರಪ್ಪ, ತಾರಸು ,ಕುಂವಿ , ಕಾರಂತ, ಬೀಚಿ , ಅನಂತಮೂರ್ತಿಯವರ ಪುಸ್ತಕಗಳೊಂತು" ನೀನು ನಮ್ಮೊಂದಿಗೆ ಯಾಕೋ ಸಮಯವನ್ನೇ ಕಳೆಯುತ್ತಿಲ್ಲ, ನಮ್ಮನ್ನು ಇತ್ತೇಚೆಗೆ ನೀನು ಮರೆತೇ ಬಿಟ್ಟಿದ್ದೀಯ, ಇದರಿಂದ ನಮಗೆ ನಿನ್ ಮೇಲೆ ಬೇಜಾರಾಗಿದೆ " ಎಂದು ಸದಾ ನನ್ನನ್ನು ಮೂದಲಿಸುತ್ತಲೇ ಇರುತ್ತವೆ. ಇಂಥ ಪುಸ್ತಕಗಳ ಗುಂಪಿಂದ, ನನ್ನಿಷ್ಟದ ಒಂದು ಕುವೆಂಪುರವರ ಪುಸ್ತಕವನ್ನು ನಾನು ಆ ದಿನ   ನನ್ನೊಂದಿಗೆ GKVK ಗೆ ತೆಗೆದುಕೊಂಡು ಹೋಗಿದ್ದೆ. GKVK ಯ ಹೊಲಗಳಲ್ಲಿ , ತೋಟಗಳಲ್ಲಿ ಕೂತು ಕುವೆಂಪು ಬರೆದಿರೋ, ಅವರು ಪ್ರಕೃತಿಯನ್ನು ವರ್ಣಿಸಿರೊ  ಪುಸ್ತಕವನ್ನೇ ತಂದು ಅಲ್ಲಿ ಓದುವುದೇ ಒಂದು ರೀತಿಯಲ್ಲಿ ರೋಮಾಂಚನ ನೀಡುತ್ತದೆ.

               ಆ ದಿನ ಮಧ್ಯಾನದಿಂದ ಸಂಜೆ ೩.೩೦ ರ ತನಕ , ಅದೇ ಜಾಗದಲ್ಲಿ, ಎಲ್ಲವನ್ನು ಮರೆತು , ನನಗೆ ಇಷ್ಟವಾದ ಒಂದು ಜಾಗದಲ್ಲಿ ಕೂತು  ಕುವೆಂಪುರವರ "ಪರಿಸರದ ಚಿತ್ರಗಳು" ಎಂಬ ಒಂದು ಪುಸ್ತಕವನ್ನು  ಓದಿದೆ. ಸ್ನೇಹಿತರೆ ಆ ಪುಸ್ತಕದಲ್ಲಿ ಕುವೆಂಪು ತಾವು ಚಿಕ್ಕವರಿದ್ದಾಗ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ತಾವು ಮಾಡಿದ ಸಾಹಸಗಳ ಬಗ್ಗೆ, ಅಲ್ಲಿಯ ಪ್ರಕೃತಿಯ ಬಗ್ಗೆ, ಅಲ್ಲಿಯ ಜನಜೀವನದ ಬಗ್ಗೆ, ಅಲ್ಲಿಯ ಸೂರ್ಯಾಸ್ತ , ಸೂರ್ಯೋದಯಗಳ ಬಗ್ಗೆ ನಿಜವಾಗಿಯೂ ಅದ್ಭುತವಾಗಿ, ಓದುಗನ ಕಣ್ಣಿಗೆ ಕಟ್ಟುವಹಾಗೆ ವರ್ಣನೆ ನೀಡಿದ್ದಾರೆ. ನಾವು ಆ ಪುಸ್ತಕವನ್ನು ಓದಿದರೆ ನಮ್ಮನ್ನು ಅವರು ನೇರವಾಗಿ ಪಶ್ಚಿಮಘಟ್ಟದ ಮಡಿಲಲ್ಲಿರುವ ತಮ್ಮ ಊರಿಗೆನೆ ಕರೆದುಕೊಂಡು ಹೋಗಿ ಬಿಡುತ್ತಾರೆ. ತಮಗೆ ಏನಾದರು ಸ್ವಲ್ಪ ಸಮಯ ಸಿಕ್ಕರೆ ನೀವು ದಯವಿಟ್ಟು ಒಮ್ಮೆ ಆ ಪುಸ್ತಕದಮೇಲೆ ಕಣ್ಣಾಡಿಸಿ , ನಿಮಗೂ ಮಜಾ ಬಂದರೂ  ಬರಬಹುದು.

          ಒಂದೆರೆಡು ಗಂಟೆಗಳ ಕಾಲ ಒಬ್ಬನೇ ಕೂತು ಪುಸ್ತಕ ಓದಿ,  ಸ್ವಲ್ಪ ಹಿತವೆನ್ನಿಸಿದಾಗ , ನೇರವಾಗಿ ನೆಡೆದು ಅಲ್ಲಿಯ ಕ್ಯಾಂಟೀನ್ ಗೆ ಬಂದೆ. ಅಷ್ಟೊತ್ತಿಗೆ ನನ್ನ cousin ಕೂಡ ಅಲ್ಲಿಗೆ ಬಂದಿದ್ದ. ಇಬ್ಬರು ಜೊತೆಯಾಗಿ ತಿನ್ನಲು, ಅದು-ಇದು ತಗೊಂಡು, ಅಲ್ಲೇ ಇದ್ದ ಒಂದು ಟೇಬಲ್ ಮೇಲೆ ಕೂತೆವು.  ಅಷ್ಟೊತ್ತಿಗಾಗಲೇ ನನ್ನ ತಲೆಯನ್ನು ಸಂಪೂರ್ಣವಾಗಿ ಆವರಿಸಿದ್ದು  ನಾ ಓದಿದ ಮಲೆನಾಡಿನ ಚಿತ್ರಗಳು ಪುಸ್ತಕದ ಲೇಖನಗಳು ಮಾತ್ರ. ನಾ ಬರಿ ಕುವೆಂಪುರವರ ವರ್ಣನೆಗಳ , ಆ ಸಾಲುಗಳ ಮೆಲುಕು ಹಾಕುತ್ತ, ನನ್ನೆದುರಿಗೆ ತಟ್ಟೆಯಲ್ಲಿದ್ದ ಅನೇಕ ತಿಂಡಿಗಳನ್ನು ಕೂಡ ಮೆಲುಕು ಹಾಕಿದೆ.
  
         ನಾನು ನನ್ನ causin ಗೆ ನಾ ಓದಿದ ಪುಸ್ತಕದ ಬಗ್ಗೆ ಹೇಳತೊಡಗಿದ. ಅವನಿಗೂ ಕೂಡ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ನಾನು ಹೇಳುವುದನ್ನೆಲ್ಲ ಕೇಳಿದ. ನನಗೆ ಬೆಳಿಗ್ಗೆ ಏಕೆ ಹಾಗೆ ಬೇಜಾರಾಗಿತ್ತು, ಆಫೀಸ್ ಇಂದ ಏಕೆ ಹೀಗೆ ಬೇಗನೆ ಬಂದೆ ಎಂದು ಅವನಿಗೆ ಹೇಳಿದೆ. ಅದಕ್ಕೆ ಅವನು ಕೂಡ ಕೆಲವು ಕಾರಣಗಳನ್ನು ನೀಡಿ ಸಮಾಧಾನದ ಮಾತುಗಳಾಡಿದ. ನಮಗೆ ಅನ್ನಿಸಿದ್ದನ್ನು ನಾವು ಮಾಡದೆ ಇದ್ದರೆ, ಇಷ್ಟವಿಲ್ಲದ ಕೆಲವು ಕೆಲಸಗಳನ್ನು ಮಾಡಿದರೆ, ಒಮ್ಮೊಮ್ಮೆ ಹೀಗೆ ಆಗುವುದುಂಟು ಎಂದು ನನಗೆ ಅನ್ನಿಸಿತ್ತು. ನಾವು ವಾಕ್ ಮಾಡುವಾಗ ಅಲ್ಲಿಯ ವಾತಾವರಣ ನಿಜವಾಗಿಯೂ ನಮ್ಮೆಲ್ಲ ಜಂಜಾಟಗಳನ್ನು ಮರೆಸುತ್ತೆ ,  ಆ ಪ್ರಕೃತಿಯಲ್ಲಿ ನಮ್ಮನ್ನು ತನ್ನಲ್ಲಿ ಒಂದಾಗಿಸಿ ಕೊಳ್ಳುತ್ತೆ ಎನ್ನುವುದು ಆದಿನ ಮತ್ತೊಮ್ಮೆ ನನಗೆ ಹರಿವಾಯಿತು. 


          ಯಾವಾಗಲು ಚಿಟಪಟ ಮಾತಾಡುವ ನಾನು ಆ ಕ್ಷಣಕ್ಕೆ ಅಂತರ್ಮುಖಿಯಾಗಿ ಮಾತಿಲ್ಲದೆ  ಸುಮ್ಮನೆ ನಡೆಯುತ್ತಿದ್ದೆ. ಅಷ್ಟೊತ್ತಿಗೆ ಪಶ್ಚಿಮದಲ್ಲಿ ಸ್ವಾಮೀ ಮುಳುಗುತ್ತಾ , ಪ್ರಕೃತಿಗೆ ಸಂಜೆಯೋತ್ಸಾಹ ನೀಡಿ, ಆಕಾಶಕ್ಕೆ ಕೆಂಬಣ್ಣ ಚೆಲ್ಲಿ , ಪಕ್ಷಿಗಳಿಗೆ ಚೇತನ ನೀಡಿ ಗೂಡು ಸೇರಲು ಪ್ರೇರೇಪಿಸಿದ್ದ. ನನಗೂ ಕೂಡ ಅದೇ ಸೂರ್ಯ, ಆ ಕೆಂಬಣ್ಣ,ಆ ಪಕ್ಷಿಗಳ ಚಿಲಿಪಿಲಿಗಳು, ದೂರದಲ್ಲಿ ಕಿರ್-ಕಿರ್ ಎನ್ನುವ  ಸಂಜೆಯುಳುಗಳ  ಗಾನಗಳು  ಮತ್ತೆ ಹೊಸ ಚೈತನ್ಯ ನೀಡಿದ್ದವು. ನನ್ನೆಲ್ಲ ಯೋಚನೆಗಳು , ಬೇಜಾರುಗಳನ್ನು , ನಾನು ಪಶ್ಚಿಮದಲ್ಲಿ ಮುಳುಗುತಿದ್ದ ಆ ಸೂರ್ಯನಿಗೆ ಸಮರ್ಪಿಸಿ , ಅವನನ್ನೇ ದಿಟ್ಟಿಸುತ್ತ, ಕುವೆಂಪು ಹೇಳಿದ ರೀತಿಯಲ್ಲೇ ಅವನನ್ನು ಬಣ್ಣಿಸಿಕೊಳ್ಳುತ್ತ, ನನ್ನನ್ನೇ ನಾನು ಮರೆತು ಹೋಗಿದ್ದೆ. ನನ್ನ cousin ನನ್ನನ್ನು ಎಚ್ಚರಿಸಿದಾಗಲೇ ನಾನು ಅಲ್ಲಿಂದ ಹೊರಬಂದದ್ದು. ನಿಜ ಸ್ನೇಹಿತರೆ ನಮಗೆ ಅದೆಷ್ಟೇ ಬೇಜಾರಾದರು, ದುಃಖವಾದರೂ ಅದನ್ನು ಮರೆಸೋ ಶಕ್ತಿಯನ್ನು ದೇವರು ಪ್ರಕೃತಿಯಲ್ಲಿ ಮಾತ್ರ ಇಟ್ಟಿದ್ದಾನೆ. ಪ್ರಕೃತಿ ನಮ್ಮೊಳಗಿನ ತೊಳಲಾಟಗಳನ್ನೆಲ್ಲ ತನ್ನದಾಗಿಸಿಕೊಂಡು ನಮಗೆ ಅದಮ್ಯ ಚೇತನ ನೀಡುತ್ತದೆ. ಪ್ರಕೃತಿಯ ಸೌಂದರ್ಯ ಮಾತ್ರ ನಮಗೆ ನಿಜವಾದ ಸ್ಪೂರ್ತಿಯಾಗುತ್ತದೆ.

ನಿಮಗಾಗಿ 
ನಿರಂಜನ್ 

ಬುಧವಾರ, ಡಿಸೆಂಬರ್ 19, 2012

ಪ್ರಳಯ


                                               ಪ್ರಳಯ ಆಗೊದಿಲ್ರಿ  !

ಮೊನ್ನೆ ನಮ್ಮ ಒಬ್ಬ ಅತ್ತೆ ಮನೆಗೆ ಹೋಗಿದ್ದೆ, ನಮ್ಮ ಅತ್ತೆಯವರ ಅತ್ತೆಯವರನ್ನು ಬೇಟಿ ಮಾಡಿದೆ. ಅವರು ಸುಮಾರು 70 ವರ್ಷದ ವೃದ್ದರು, ಯಾವುದೋ ಒಂದು ಬಾರಿ ಚಿಂತೆಯಲ್ಲಿದ್ದರು. ನಾವು ಹೋದಮೇಲೆ ನಮ್ಮನ್ನು ನೋಡಿದ ತಕ್ಷಣವೇ ಅವರ ಮುಖ ಅರಳಿದಂತೆ ಕಂಡರೂ ಅವರಲ್ಲಿ ಏನೋ ಭಯ ಮತ್ತು ದುಃಖ ಆವರಿಸಿತ್ತು. ವಯೋಸಹಜವಾದ ನಡುಕ ದ್ವನಿಯಲ್ಲಿ ಅವರು "ಸದ್ಯ ನೀವ್ ಬಂದ್ರಿ ಬಿಡಪ್ಪ, ನಿಮ್ಮನ್ನ ನೋಡಿದ್ದು ತುಂಬಾ ಚೆನ್ನಾಗಾಯಿತು , ನಿಮ್ಮನ್ನೇನು ನೋಡ್ತಿನೋ ಇಲ್ಲೋ ಅನ್ನೋ ಹಾಗೆ ಆಗಿತ್ತು ", ಇದೇನಪ್ಪ ಅಜ್ಜಿ ಹೀಗೆ ಮಾತಾಡುತ್ತೆ ಅಂತ ಹೌಹಾರಿದ ನಾನು, " ಏನಜ್ಜಿ ಏನ್ ಆಯಿತು ಯಾಕೆ ಹೀಗೆ ಮಾತ್ ಆಡ್ತಾ ಇದ್ದೀಯ ? " ಎಂದಾಗ , ಅಜ್ಜಿ " ಅಯ್ಯೋ ಮಾರಾಯ ನಿಂಗೆ ಗೊತ್ತಿಲ್ಲೇನಪ್ಪ ??? ಈ ತಿಂಗಳು ಅದೇನೋ ಪ್ರಳಯ ಆಗುತ್ತೆ ಅಂತೆ , ನಾವೆಲ್ಲಾ ಸತ್ತೆ ಹೋಗ್ತಿವಂತೆ ???" .
            " ಅಯ್ಯೋ ಅಜ್ಜಿ ಅದೆಲ್ಲ ಸುಳ್ಳು , ಏನು ಆಗೊಲ್ಲಜ್ಜಿ . ಭೂಮಿ ಇನ್ನು ಚಿಕ್ಕ ವಯಸ್ಸಿನದು, ಅದಕ್ಕೆ ಇನ್ನು ವಯಸ್ಸಾಗಿಲ್ಲ. ನಮ್ಮ ಭೂಮಿಗೆ ಸದ್ಯಕ್ಕೆ ಏನು ಆಗೋಲ್ಲ. ಇವೆಲ್ಲ ಕಥೆಗಳು ಕಣಜ್ಜಿ . ಜಾಸ್ತಿ ಯೋಚಿಸಬೇಡ , ಏನೇನೂ ಆಗೋಲ್ಲ , ಆರಾಮಾಗಿ ಇದ್ಬಿಡು" ಅಂತ ನಾ ಸಮಾಧಾನ ಪಡಿಸಲು ಕೆಲವು ಮಾತುಗಳನ್ನ ಹೇಳಿದೆ.

            "ಅಲ್ಲಪ್ಪ ಜನ ದಿನ ಮಾತಾಡ್ತಾರೆ ಈ Tv ಗೆಲ್ಲ ಇದರ ಬಗ್ಗೆ , ಅವ್ರು ಹೇಳೋದು ಸುಳ್ಳು ಅಂತಿಯಾ ?? , ಅವರೆಲ್ಲ ದೊಡ್ಡ ಜನ ಕಣಪ್ಪ , ಪ್ರಳಯ ಆಗೇ ಆಗುತ್ತೆ " ಅಂತ ಅಜ್ಜಿ ಖಂಡಿತವಾಗಿ ನಂಬೆ ಬಿಟ್ಟಿದ್ದರು .

           "ನಮ್ದೇನು ಬಿಡಪ್ಪ , ಪ್ರಳಯ ಆಗ್ಲಿ ಬಿಡ್ಲಿ ಹೋಗಲೇ ಬೇಕಿತ್ತು ,ಹೋಗ್ತಿವಿ , ನನಗೆ ನನ್ನ ಮಕ್ಕಳು, ಮೊಮ್ಮಕ್ಕಳದೆ ಚಿಂತೆ ಕಣಪ್ಪ " ಅಂತ ನಿಜವಾದ ದುಃಖದಲ್ಲೇ ಹೇಳಿದ ಅಜ್ಜಿ ಗೆ " ಇಲ್ಲ ಅಜ್ಜಿ ಏನು ಯೋಚಿಸಬೇಡ, ಏನೇನು ಆಗೋಲ್ಲ " ಎಂದು ಹೇಳಿದರು, ಅಜ್ಜಿ " ಅಲ್ಲಪ್ಪ ನಾವೇನೋ ಮಕ್ಕಳು ಮರಿ ಕಂಡ್ವಿ , ಮಂತ್ಯಾನ ಮಠ ಅಂತ ಸವೆದ್ವಿ , ಆದ್ರೆ ನೀವಿನ್ನು ಚಿಕ್ಕವರು , ಮಧುವೆ ಇಲ್ಲ ಮುಂಜಿನು ಇಲ್ಲ , ಅದೆಂಗೆ ಸಮಾಧಾನ ತಂದುಕೊಳನಪ್ಪ " ಎಂದಾಗ ಸ್ವಲ್ಪ ನಗು ಬಂತಾದರೂ ಈ ಪ್ರಳಯ ಎಂಬ ಭಯ ಬಿತ್ತಿದೊರ ಬಗ್ಗೆ ಸಿಟ್ಟು ಬಂತು.

            ಸ್ನೇಹಿತರೆ, ಈ "ಪ್ರಳಯ ಆಗುತ್ತೆ, ಹಾಗೆ ಆಗುತ್ತೆ " ಎಂಬ ಊಹ-ಪೋಹಗಳ ಸುದ್ದಿ ಎಲ್ಲೆಡೆ ಹಬ್ಬಿದೆ ಎಂದು ನನಗೆ ಗೊತ್ತಿತ್ತು. ಆದರೆ ಈ ಮಟ್ಟಿಗೆ ಅದು ಜನರ ಮೇಲೆ ಪ್ರಭಾವ ಬೀರಿದೆ ಎಂದು ತಿಳಿದಿರಲಿಲ್ಲ. ಈ ಸುದ್ದಿಯನ್ನ ಹಬ್ಬಿಸಿದ ಕೀರ್ತಿ ಮಾತ್ರ ಈ ಕನ್ನಡ ನ್ಯೂಸ್ ಚಾನೆಲ್ಗಳಿಗೆ ಮಾತ್ರ ಸಲ್ಲಲೇ ಬೇಕು.

             ಹೀಗೆ ಮಾತಾಡುವಾಗ ಅಜ್ಜಿಗೊಂದು ಪ್ರಶ್ನೆ ಕೇಳಿದೆ , "ಅಜ್ಜಿ ಈ ಪ್ರಳಯ ಆಗುತ್ತೆ ಅಂದ್ರೆಲ್ಲ ಅದನ್ನ ಯಾರು ಹೇಳಿದ್ರು ?? " ಅಜ್ಜಿ ಥಟ್ ಅಂತ , ತಮ್ಮ ಮಕ್ಕಳ ಮೊಮ್ಮಕ್ಕಳ ಹೆಸರನ್ನು ಈ ರೀತಿ ಸರಾಗವಾಗಿ ಹೇಳುತ್ತೋ ಇಲ್ಲವೋ ಗೊತ್ತಿಲ್ಲ , ಆದ್ರೆ ಒಂದು ಎಂಟು-ಹತ್ತು ಹೆಸರುಗಳನ್ನು ಮಾತ್ರ ಪಟ ಪಟ ಹೇಳಿತು. " ಇದೇನಪ್ಪ ಅಜ್ಜಿ ಈ ರೀತಿ ಹೆಸರುಗಳನ್ನ ನೆನಪಿಟ್ಟುಕೊಂಡು ಹೇಳುತ್ತೆ " ಅಂತ ಅಂದುಕೊಂಡೆ. ಅಜ್ಜಿ ಹೇಳಿದೆ ಹೆಸರುಗಳು ಯಾರದು ಗೊತ್ತೇ ?? ಅಜ್ಜಿ ಹೇಳಿದ್ದು ಬರಿ ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳ ಮತ್ತು ಅದರಲ್ಲಿ ಬರುವ ಎಲ್ಲಾ ಜೋತಿಷಿಗಳು !! .

             ನಿಜ, ಈ ನ್ಯೂಸ್ ಚನ್ನೆಲ್‍ಗಳನ್ನ ನೀವು ಒಂದರ್ದ ಗಂಟೆ ಕೂತು ನೋಡಿದ್ರೆ ಸಾಕು ನಿಮಗೂ ಅರ್ಥಆಗುತ್ತೆ, ಅವು ಹೆಸರಿಗೆ ಮಾತ್ರ ನ್ಯೂಸ್ ಚನ್ನೆಲ್‍ಗಳು. ಆದ್ರೆ ಅವು ಪ್ರಸಾರ ಮಾಡುವುದು ಮಾತ್ರ ಬರಿ ಜ್ಯೋತಿಷ್ಯ ಕಾರ್ಯಕ್ರಮಗಳು, ಬಿಟ್ಟರೆ ಸಿನೆಮಾ ಕಾರ್ಯಕ್ರಮಗಳು. ಬೆಳಿಗ್ಗೆ ಟೀವೀ ಹಚ್ಚಿದರೆ ಸಾಕು ಯಾವ ಚಾನೆಲ್ ನೋಡಿದ್ರೂ ಅಲ್ಲಿ ಬರಿ ಈ ಜ್ಯೋತಿಷಿಗಳದ್ದೆ ಖಾರುಬಾರು. ಖಾವಿ ಬಟ್ಟೆಗಳು, ಮೈಕೈಗೆಲ್ಲ ರುದ್ರಾಕ್ಷಿ ಮಾಲೆಗಳು, ಎಲ್ಲೂ ಜಾಗ ಬಿಡದೆ ಹಚ್ಚಿದ ವಿಭೂತಿ, ಮುಂದೊಂದು ಲ್ಯಾಪ್-ಟಾಪ್, ಜೊತೆಗೊಬ್ಬಳು ರೇಷ್ಮೆ ಸೀರೆ ಧರಿಸಿ ನಗುಮುಖದ ಸುಂದರಿ ಇದು ಎಲ್ಲಾ ಚಾನೆಲ್‌ಗಳಲ್ಲೂ ಬೆಳಿಗ್ಗೆ 7 ರಿಂದ ಹತ್ತರ ತನಕ ನಮಗೆ ಸಿಗುವ ದೃಶ್ಯಗಳು.

              ಈ ಭಾರಿ ಗುರೂಜಿಗಳ ಪಕ್ಕಕೆ ಕೂತ ಆ ಹುಡುಗಿಯರು " ನಮ್ಮ ಗುರೂಜಿಗಳು " ಎಂದು ನಗುಮುಖ ಹೊತ್ತು, ಬಾಯಿ ತುಬಾ ಕರೆಯುತ್ತಾರೆ. ಜನರೋ ಅವರಿಗೆ ತಮ್ಮೆಲ್ಲ ಕಷ್ಟಗಳನ್ನು ದುಃಖದಿಂದ ಬಿದ್ದು ಬಿದ್ದು ಹೇಳಿಕೊಳ್ತಾರೆ, ನಿರೂಪಕಿ ಸುಂದರಿ ಮಾತ್ರ ಜನರ ಸಮಸ್ಯೆಗಳನ್ನ ನಗು ನಗುತ್ತಲೇ ಕೇಳಿ , ಗುರೂಜಿಗೆ ಇನ್ನು ಜಾಸ್ತಿ ನಗುತ್ತಲೇ ಜನರ ಕಷ್ಟಗಳನ್ನು ವೈಭವೀಕರೆಸಿ ಹೇಳುತ್ತಾಳೆ. ಗುರೂಜಿ ಕೂಡ ಸಮಸ್ಯಗಳಿಗೆ ಉತ್ತರಿಸೋದ ನೋಡ್ಬೇಕು , ಬರಿ ಅಡ್ಡಗೋಡೆ ಮೇಲೆ ದೀಪ ಇಡೋಹಾಗೆ ಮಾತ್ ಆಡ್ತಾರೆ. ಒಬ್ಬ ಗುರೂಜಿಯಂತೂ ಕೈ ಅಲ್ಲಿ ಚೂಪಾದ ಈಟಿಯನ್ನು ಇಟ್ಕೊಂಡೇ ಕೂತಿರುತಾರೆ , ಅದ್ಯಾಕೋ ಗೊತ್ತಿಲ್ಲ. ಬಹುಷ್ಯ ಯಾರಾದರೂ ವಿಚಾರವಂತರು ಏನಾದರೂ ಕೇಳಿದರೆ ಅವರು ಅದರಿಂದ ಚುಚ್ಚೆ ಬಿಡುತ್ತಾರೇನೋ ! .ಈ ಚಾನೆಲ್ ಗಳು , ಈ ಜ್ಯೋತಿಷಿ ಗುರೂಜಿಗಳು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದಾರೆ ಎಂದರೆ ನಮಗೆ ನಿಜವಾಗಿಯೂ ಆಶ್ಚರ್ಯವಾಗುತ್ತೆ . ಕೆಲವು ಅಂಕಿ ಅಂಶಗಳ ಪ್ರಕಾರ ಇಂಥಹ ಕಾರ್ಯಕ್ರಮಗಳಿಗೆನೇ ಜಾಸ್ತಿ ವೀಕ್ಷಕರಿದ್ದಾರಂತೆ.

              ಈ ಟೀವಿ ಚಾನೆಲ್ಲುಗಳು " ಇನ್ನೇನು ಪ್ರಳಯ ಆಗೇ ಆಗುತ್ತೆ , ಆಗುವುದರಲ್ಲಿ ಸಂಶಯವೇ ಇಲ್ಲ. ಈ ಪ್ರಳಯ ಆದಾಗ ಏನೆಲ್ಲಾ ಆಗುತ್ತೆ ಅಂತ, ಉಚಿತವಾಗಿ ಸಿಕ್ಕ youtube ಮತ್ತೆ ಕೆಲವು ಇಂಗ್ಲಿಷ್ ಸಿನಿಮಾಗಳ vedio ತುಣುಕುಗಳನ್ನ ಬಳಸಿ, ಜನರಲ್ಲಿ ಭಯದ ಬೀಜಗಳನ್ನೇ ಬಿತ್ತಿದರು. ತಮಗೆ ಏನು ರೋಚಕ ವಿಷಯಗಳು ಇಲ್ಲವೆಂದಾಗ , ಈ ಪ್ರಳಯದ ಮೇಲೆ ಅವರು ಅನೇಕ ಚರ್ಚೆಗಳನ್ನೇ ಮಾಡಿದರು, ಅನೇಕ ಪ್ರಳಯ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡಿದರು. ಜ್ಯೋತಿಷಿಗಳನ್ನು ಕರೆಸಿ ಮುಂದಾಗುವುದನ್ನ ನಾವು ಕರಾರುವಕ್ಕಾಗಿ ಹೇಳ್ತಾ ಇದೀವಿ ಅಂತ ಜನರನ್ನು ನಂಬಿಸಿದರು. ಸ್ನೇಹಿತರೆ ನಿಜ ಹೇಳಬೇಕೆಂದರೆ ಇವರಿಗೆ ತಮ್ಮ ನ್ಯೂಸ್ ಚಾನೆಲ್ಗಳನ್ನು ಸದಾ ಚಟುವಟಿಕೆಯಲ್ಲಿಡುವ ಉದ್ದೇಶದಿಂದ , ಒಂದೊಷ್ಟು ದಿನ "ಈ ಪ್ರಳಯ ಆಗುತ್ತೆ " ಕಾರ್ಯಕ್ರಮ ಪ್ರಸಾರ ಮಾಡಿದರು , ಈಗ ಅವರೇ " ಪ್ರಳಯ ಆಗೋಲ್ಲ " ಅಂತ ಮತ್ತೆ ಕಾರ್ಯಕ್ರಮಗಳನ್ನು ಶುರು ಮಾಡಿದ್ದಾರೆ. ಆ ಜ್ಯೋತಿಶಿಗಲೋ ಹಾಗ "ಪ್ರಳಯ ಆದೆ ಆಗುತ್ತೆ " ಅಂತ ಹೇಳಿ " ಆ ಪೂಜೆ ಈ ಪೂಜೆ, ಆ ಶಾಂತಿ , ಆ ಹೋಮ ಮಾಡಿಸಿ" ಅಂತ ಜನರನ್ನು ಸುಲಿದು , ಈಗ "ಪ್ರಳಯ ಆಗೋಲ್ಲ , ನಾವು ಮಾಡಿರ್ತಕ್ಕಂಥ ಪೂಜೆಗಳಿಂದ ಭಗವಂತ ಶಾಂತಗೊಂಡು ನಮ್ಮನ್ನು ಕಾಯುತ್ತಾನೆ , ನೀವೇನು ಭಯ ಪಡಬೇಡಿ " ಎಂದು ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ.

             ಎಲ್ಲಿಯವರೆಗೂ ನಾವು ಈ ಟೀವಿಗಳಲ್ಲಿ ಬರೋದೆಲ್ಲ ಸತ್ಯ , ಈ ಜ್ಯೋತಿಷಿಗಳು ಹೇಳೋದೆಲ್ಲ ಸತ್ಯ ಅಂತ ನಂಬುತ್ತೇವೋ ಅಲ್ಲಿಯವರೆಗೂ ನಾವು ತಪ್ಪು ಕಲ್ಪನೆಗಳನ್ನು ಮಾಡಿಕೊಂತ , ಭಯದಲ್ಲಿ ಬದುಕುತ್ತೇವೆ. ಅವರು ತೋರಿಸೋದೆಲ್ಲ ನಿಜವಲ್ಲ. ಖಾವಿ ತೊಟ್ಟು ಹೇಳಿದರೆ ಅದು ನಿಜವೂ ಆಗುವುದಿಲ್ಲ.

ನಿಮಗಾಗಿ
ನಿರಂಜನ್

ಮಂಗಳವಾರ, ನವೆಂಬರ್ 13, 2012

ನನ್ನ

  
ಬಿನ್ನಹ 
 ಬೆಳೆಯುವ ಮುನ್ನವೇ ಅಳಿಯುವ ಸೂಚನೆ 
ಕಲೆಯುವ ಮೊದಲೇ ಸರಿಯುವೆ ಎನ್ನುವೆ 

    ಬೇಡವೆಂದರೂ ಬೆನ್ನುಹತ್ತಿ ನೀ ಬರುವೆನೆನ್ನುವೆ 
      ಬೇಕೆಂದಾಗ ಬೆನ್ನುಮಾಡಿ ನೀ ಹೋಗುವೆನೆನ್ನುವೆ 

 ಅರಿಯದೆ ನನ್ನ ನೋವು , ತಿಳಿಯದೆ ಒಲವು
      ಸರಿಯದಿರು ನನ್ನಿಂದ ,ಕೂಡಿರಲಿಚ್ಚೆಯು ದಿನವು 

   ಕಟ್ಟಿರುವ ಕನಸು ಇನ್ನು ಹಸಿಯಾಗಿಯೇ ಇದೆ 
        ನೆಟ್ಟಿರುವ ಪ್ರೀತಿಯ ಬಳ್ಳಿ ಇನ್ನು  ಹಸಿರಾಗಬೇಕಿದೆ 

          ಯಾಕಿಷ್ಟು ಅವಸರ , ಯಾಕಿಷ್ಟು ಕಾತರ , ಯೋಚಿಸು 
                      ನನ್ನ ಜೊತೆಯಲಿರಲು ಸಹಕರಿಸು , ಅಂಗೀಕರಿಸು , ಪ್ರೀತಿಸು ........

                                                              --- ನಿರಂಜನ್ 


ಬುಧವಾರ, ಅಕ್ಟೋಬರ್ 31, 2012

ಅವನ


                                              ಆ ಪುಸ್ತಕ .....

ಹಿಂದಿನ ದಿನ ನಡೆದ ಕೆಲವು ಘಟನೆಗಳಿಂದ ಬೇಜಾರಾಗಿದ್ದ ನಾನು, ಆ ದಿನ ತುಂಬಾ ದುಃಖ ಪಟ್ಟಿದ್ದೆ. ನಾ ಮಾಡಿದ ಸಣ್ಣ ತಪ್ಪು ನನ್ನನ್ನು ಆ ದಿನ ತುಂಬಾ ಹಿಂಸಿಸಿತ್ತು.ಮಾಡಿದ ಅ ಚಿಕ್ಕ ತಪ್ಪು ನಿಜವಾಗಿಯೂ ನನಗೆ ತುಂಬಾನೇ ಬುದ್ದಿ ಕಲಿಸಿತ್ತು.  ಅದೇ ತಪ್ಪನ್ನು ನಾನು ಮತ್ತೆ ಎಂದು ಮಾಡಬಾರದು ಎಂದು ನಿರ್ದರಿಸಿದ ನಾನು ಸ್ವಲ್ಪ ಸಮಾಧಾನಗೊಂಡು, ಒಂದು ಸಣ್ಣ ವಾಕ್ ( walk ) ಮಾಡಲು ನಿರ್ದರಿಸಿದೆ.ಮನೆಯ ಹತ್ತಿರವೇ ಇದ್ದ ನನ್ನ ಸ್ನೇಹಿತ ಕೂಡ ನನ್ನೊಂದಿಗೆ ವಾಕ್ ಬರುವುದಾಗಿ ಹೇಳಿದ. ನಾವಿಬ್ಬರು ಹೀಗೆ ನಡೆದುಕೊಂಡು ಹೋಗುತ್ತಿರುವಾಗ  ನನ್ನ  ಎದುರಿಗೆ ಬರುವ ಚಿಕ್ಕ ಹುಡುಗನೊಬ್ಬ ಒಂದು ಪುಸ್ತಕವನ್ನು ರಸ್ತೆಗೆ ಎಸೆದ, ನಾನು " ಹೇ ಯಾಕೋ ಪುಸ್ತಕವನ್ನು ಎಸೆದೆ " ಅಂತ ಕೇಳಿದ, ತಕ್ಷಣ ಆ ಚಿಕ್ಕ ಹುಡುಗ ನನ್ನ ಮುಖವನ್ನೊಮ್ಮೆ ನೋಡಿ , ಏನೂ ಉತ್ತರಿಸದೆ  ಅಲ್ಲಿಂದ ಕಾಲು ಕಿತ್ತ. ನಾ ಆ ಪುಸ್ತಕವನ್ನು ಕೈಯಲ್ಲಿ ಎತ್ತಿಕ್ಕೊಳ್ಳುವ ಮೊದಲೇ  ಇನ್ನೊಬ್ಬ ಮದ್ಯವಯಸ್ಸಿನ ಯುವಕನೊಬ್ಬನು ಅದರ ಮೇಲೆ ಕಾಲಿಟ್ಟು ನೆಡದೆ ಸಾಗಿದ್ದನು. ಇನ್ನೇನು ಮತ್ತೊಬ್ಬರು ಅದನ್ನು ತುಳಿಯುವ ಮೊದಲೇ ನಾ ಅದನ್ನು ನನ್ನ ಕೈಗೆ ಎತ್ತಿಕೊಂಡಿದ್ದೆ. 


           ಆ ಪುಸ್ತಕ ಒಂದು ಚಿಕ್ಕ ಇಂಗ್ಲಿಷ್ ಪುಸ್ತಕವಾಗಿತ್ತು. ಅದು ಬಹಳ ಮಟ್ಟಿಗೆ ಈಗಿನ LKG ಅಥವಾ UKG ತರಗತಿಯದಿರಬಹುದು. ನಿಜವಾಗಿಯೂ ಸ್ನೇಹಿತರೆ ಅದರ ಮೇಲೆ ಸುಂದರ ಕಾರ್ಟೂನ್ ತರಹದ ಚಿತ್ರಗಳಿದ್ದವು. ಒಳ್ಳೆಯ ಬಣ್ಣಗಳಿಂದ ಚಿತ್ರಿಸಿದ ಆ ಚಿತ್ರಗಳು ನಿಜವಾಗಿಯೂ ನನ್ನನ್ನು ಸಹಜವಾಗಿ ತನ್ನತ್ತ ಸೆಳೆದವು. ಆ ಪುಸ್ತಕದಲ್ಲಿ  ಇದ್ದದ್ದು ಕೇವಲ ಕೆಲವೇ ಪುಟಗಳು. ಎಲ್ಲ ಪುಟಗಳಲ್ಲು ಒಂದೊಂದು ವರ್ಣರಂಜಿತವಾದ ಚಿತ್ರ, ಅದರೊಂದಿಗೆ ಚಿಕ್ಕ ಮಕ್ಕಳಿಗಾಗಿಯೇ ರಚಿಸಿದ ಆರೇಳು ಸಾಲುಗಳ ಮಕ್ಕಳ ಪದ್ಯಗಳು ಕೂಡ ಇದ್ದವು. ಚಿಕ್ಕ ಮಕ್ಕಳ ಪದ್ಯಗಳು ಚಿಕ್ಕದಾಗಿದ್ದರೂ ಪ್ರಾಸಬದ್ದವಾಗಿದ್ದವು ಕೂಡ. ಅದರಲ್ಲಿನ ಒಂದನ್ನು ನಾ 5ನೇ  ತರಗತಿಯಲ್ಲಿ ಓದಿದ ನೆನಪು. ನಿಜವಾಗಿಯೂ ಅವೆಲ್ಲವೂ ಎಷ್ಟು ಚಿಕ್ಕವಾಗಿದ್ದವೋ ಅಷ್ಟೇ ಅರ್ಥಗರ್ಬಿತವಾಗಿದ್ದವು. ಅಲ್ಲಿದ್ದ ಹಿತವಾದ ಪ್ರಾಸಗಳು ನನ್ನ  ಮುಖದಲ್ಲಿ ಒಂದು ಸಣ್ಣನಗುವುಕ್ಕಲು ಕೂಡ  ಕಾರಣವಾಗಿದ್ದವು. ಇಡೀ ನನ್ನ ಬಾಲ್ಯವನ್ನೇ ನನ್ನ ಕಣ್ಮುಂದೆ ತಂದಿಟ್ಟ ಆ 4-5 ಪುಟಗಳ  ಆ ಸಣ್ಣ ಪುಸ್ತಕ, ಬೇಜಾರಾಗಿದ್ದ ನನ್ನ ಮನಸ್ಸನ್ನು ತಿಳಿಗೊಳಿಸಿದ್ದಲ್ಲದೆ , ನನಗೆ ನನ್ನ ಬಾಲ್ಯದ ನೆನಪು ತಂದು ಹಿತ ನೀಡಿತು.  ಪುಸ್ತಕಗಳಿಗೆ ಈ ಶಕ್ತಿ ನಿಜವಾಗಿಯೂ ಇದೆ ಎಂದು ಮತ್ತೆ ನನಗೆ ಮನವರಿಕೆ ಆಯಿತು. ಅಲ್ಲಿದ್ದ ಚಿತ್ರಗಳು, ನಾ ಚಿಕ್ಕವನಿದ್ದಾಗ ರಚಿಸುತ್ತಿದ್ದ ಚಿತ್ರಗಳ ಹಾಗೆಯೇ ಇದ್ದವು. 

               ನಾವು ಚಿಕ್ಕವರಿದ್ದಾಗ ಓದಿದ ಪುಸ್ತಕಗಳಲ್ಲಿ ಈ ರೀತಿಯ ವರ್ಣ ರಂಜಿತ ಚಿತ್ರಗಲಿರುತ್ತಿರಲಿಲ್ಲ, ಆದರೂ ಆ ಪದ್ಯಗಳು ನಮ್ಮನ್ನು ಆ ರೀತಿಯ ಪ್ರಪಂಚಕ್ಕೊಂತು ಕೊಂಡೊಯ್ಯುತ್ತಿದ್ದವು.  ಚಿಕ್ಕ ಮಕ್ಕಳಿಗೆ ಕಲ್ಪಾನಶಕ್ತಿ  ಹೆಚ್ಚಿಸುವ ಈ ರೀತಿಯ ಪದ್ಯಗಳು ಆ ಕ್ಷಣಕ್ಕೆ ನನ್ನನ್ನು ಕೂಡ ಕಲ್ಪನಾ ಲೋಕಕ್ಕೆ ಕರೆದೊಯ್ದವು. ಪುಸ್ತಕಗಳ ಈ ಶಕ್ತಿಯೇ ನನ್ನ ಮತ್ತು ಅವುಗಳ ಸಂಗಕ್ಕೆ ಕಾರಣ. ಕೆಲವರು ಹೇಳುವಂತೆ ಎಲ್ಲ ವಯ್ಯಸಿನ ಮನುಷ್ಯರಲ್ಲೂ ಒಬ್ಬ ಚಿಕ್ಕ ವಯಸ್ಸಿನ ಪುಟ್ಟ ಮಗುವು ಇರುತ್ತಾನೆ ಎಂಬುದು ಅಕ್ಷರಷಃ ನಿಜ ಎಂದು ನನಗೆ ಆ ಪದ್ಯಗಳನ್ನು ಓದಿದಾಗ , ಚಿತ್ರಗಳನ್ನು ನೋಡಿದಾಗ ಅರಿಯಿತು.  ನನ್ನಲ್ಲಿದ್ದ ಆ ಚಿಕ್ಕ ಕಂದ  ಅದೆಷ್ಟು ಖುಷಿ ಪಟ್ಟ ಎಂದರೆ ನಾ ಮನೆಗೆ ಬಂದು ನನ್ನ ಪಕ್ಕದ ಮನೆಯಲ್ಲಿದ್ದ 1ನೇ  ತರಗತಿಯ ಹುಡುಗನ ಪುಸ್ತಕ ಓದಿದೆ.  

             ಪುಸ್ತಕವನ್ನು ಬೀದಿಗೆ  ಎಸೆದ ಆ ಹುಡುಗನ ಮೇಲೆ ಕ್ಷಣ ಕಾಲ ಸಿಟ್ಟು ಬಂದಿದ್ದ ನನಗೆ "ಹೋಗ್ಲಿ ಬಿಡು ಅವನಿಗೆ ಗೊತ್ತಿಲ್ಲ ಅದರ ಬೆಲೆ " ಅಂತ ಅಂದುಕೊಂಡಿದ್ದೆ .  ನಾನು ಪುಸ್ತಕವನ್ನು ಓದಿದ ಮೇಲೆ ನನಗೆ ತಿಳಿಯಿತು ,  ಆ ಹುಡುಗ ಅವನಿಗೆ ಅರಿಯದೆಯೇ ನನಗೆ ಒಂದು ರೀತಿಯಲ್ಲಿ ಸಹಾಯ ಮಾಡಿದ್ದ. ಯಾವುದೋ ವಿಷಯಕ್ಕೆ ಬೇಜಾರಾಗಿದ್ದ ನಾನು ಬೇರೆಯ ವಿಷಯದ ಬಗ್ಗೆ ಗಮನಹರಿಸಲು ಒಂದು ರೀತಿಯಲ್ಲಿ ಕಾರಣನಾಗಿದ್ದ. ನಿಜವಾಗಿಯೂ  ಸ್ನೇಹಿತರೆ ನಿಮಗೂ ಕೂಡ ಸ್ವಲ್ಪ ಸಮಯ ಸಿಕ್ಕರೆ ಚಿಕ್ಕ ಮಕ್ಕಳ ಪುಸ್ತಕಗಳನ್ನು ಓದಿ ನೋಡಿ, ಅವುಗಳೇನು ಬಾರಿ ಕತೆ-ಕಾದಂಭರಿಗಳಾಗಿರುವುದಿಲ್ಲ ಆದರೂ  ಹಲವು ವಿಷಯಗಳ್ಳನ್ನ  ಅವು ಸಾರಿ  ಹೇಳುತ್ತವೆ. ನಿಮ್ಮನ್ನು ನಿಮ್ಮ ಭಾಲ್ಯಕ್ಕೆ ಮತ್ತೊಮ್ಮೆ ಕರೆದೊಯ್ಯುತ್ತವೆ. ನೆನಪುಗಳಲ್ಲೆಲ್ಲ ನಮ್ಮ ಭಾಲ್ಯದ ನೆನಪುಗಳೇ  ಅತೀ  ಹಿತ ನೀಡುವುವು. "ನೋಡಿ , ನಿಮ್ಮ ಮನೆಯ ಹತ್ತಿರವಿರುವ ಅಥವಾ ನಿಮ್ಮ ಮನೆಯಲ್ಲಿಯೇ ಇರುವ ಚಿಕ್ಕ ಮಕ್ಕಳ ಪುಸ್ತಕದ ಮೇಲೆ ಒಮ್ಮೆ ಕಣ್ಣಾಡಿಸಿ, ನಾವು ಕಲಿಯೋದು ಬೇಜಾನ್ ಇದೆ "



ನಿಮಗಾಗಿ 
ನಿರಂಜನ್  

ಬುಧವಾರ, ಅಕ್ಟೋಬರ್ 17, 2012

Just for laugh ....


                                                     ಗೋಪಾಲಣ್ಣನ  ಮಾಲು......

ಬೇಜಾನ್ ದಿನ ಆದ್ಮೇಲೆ , ಮುತ್ತು ಮಾರಿಯಮ್ಮ ದೇವಸ್ತಾನಕ್ಕೆ ಬರ್ತಿದ್ದ ನಮ್ಮ ಲಕ್ಷ್ಮಕ್ಕ ಹಳೆ ಬೆಂಗಳೂರು ಮತ್ತೆ ಹೊಸ ಬೆಂಗಳೂರು  ಬಗ್ಗೆ ಮಾತ್ ಆಡ್ತಾನೆ ಇದ್ಲು. ಇದನ್ನ ಕೇಳಿ ಕೇಳಿ ಸುಸ್ತಾಗಿದ್ದ ಮುರಳಿ , ಸುಮ್ನೆ ಬಸ್ಸಿನ ಕಿಟಕಿಯಿಂದ ಹೊರಗೆ ನೋಡ್ತಾನೆ ಇದ್ದ . ಮುರಳಿ ಏನು ಮಾತಾಡದೆ ಇದ್ರೂ ಲಕ್ಷ್ಮಕ್ಕ ನ  ಬಾಯಿ ಮಾತ್ರ ಬೆಂಗಳೂರಿನ ಜನರ ಬಗ್ಗೆ , ಜನರ ಬಟ್ಟೆ ಬರೆಗಳ ಬಗ್ಗೆ , ಇಲ್ಲಿಯ  ಜನರ  ತಿಂಡಿ ತೀರ್ಥಗಳ ಬಗ್ಗೆ  ಮಾತ್ ಆಡ್ತಾನೆ ಇದ್ಲು. ಮುರಳಿಗೋ ಆಗ್ಲೇ ಸಾಕಾಗಿ ಹೋಗಿತ್ತು. ಯಾರೋ ಈ ನ್ಯೂಸ್ ಚಾನೆಲ್ ಅಲ್ಲಿ ಬರೋ ಜ್ಯೋತಿಷಿ ಹೇಳಿದ್ದ ಅಂತೆ ಲಕ್ಷ್ಮಕ್ಕಗೆ ಈ ಮುತ್ತು ಮಾರಿಯಮ್ಮ ಟೆಂಪಲ್ ಗೆ ಬರಲು. ಅದೇ ಸಮಯಕ್ಕೆ ಮುರಳಿಯ  ಗ್ರಹಚಾರ ಕೆಟ್ಟೋ ಏನೋ ಲಕ್ಷ್ಮಕ್ಕನನ್ನು  ಅನಿವಾರ್ಯವಾಗಿ ತನ್ನ  ಜೊತೆಗೆ   ಕರ್ಕೊಂಡು ಬರಲೇ ಬೇಕಿತ್ತು.
          ಮುರಳಿ ಏನ್ ಮಾತಾಡಿದ್ರು ಕೇಳದ ಲಕ್ಷ್ಮಕ್ಕ , ಬಾಯಿ ತಗುದ್ರೆ ಸಾಕು "ಈ ಹಾಳಾದ್ ಬೆಂಗಳೂರು ಜನ , ಸ್ವಲ್ಪನು ಆಚಾರ, ವಿಚಾರ ಇಲ್ಲ , ನೋಡೋ ಅದೆಂಗೆ ಈ ತರದ ಬಟ್ಟೆ ಬರಿ ಹಾಕೊಂಡು ಬೀದಿ ಬೀದಿ ಸುತ್ತವೇ,,, ಇವಕ್ಕೆ ಅದೇನು ಅನ್ಸೋಲ್ಲವಾ ? ಅದೇ ನಮ್ಮೂರಗೆ ನೋಡು ನಾವು ಹೇಗೆ ಇರ್ತೀವಿ. ಇವುಕ್ಕೆ  ಏನಾದ್ರೂ  ಭಯ ಭಕ್ತಿ ಇದೇನಾ? , ಅಲ್ನೋಡೋ  ಅದು ತುಂಡು ಬಟ್ಟೆ ಹೇಗೆ ತೊಟ್ಕೊಂದೈತಿ" ಅಂದದ್ದೇ ತಡ ಮುರಳಿ ತನ್ನ ಕಣ್ಣುಗಳನ್ನೂ  ಊರಡ್ದಾರ  ಹಗಲಿಸಿ "ಎಲ್ಲಿ ಲಕ್ಷ್ಮಕ್ಕ ??? " ಅಂತ ಬಾಯಿ ತೆಗೆದ.  ಲಕ್ಷ್ಮಕ್ಕ ಆ ವಿಚಿತ್ರ ತುಂಡು ಬಟ್ಟೆ ಹಾಕೊಂಡು , ಬೈಕ್ ಹಿಂದೆ ಕೂತ್ಕೊಂಡು ಹೋಗ್ತಿದ್ದ ಆ ಹುಡುಗಿಯನ್ನು ನೋಡ್ತಾ ಹೇಳ್ತಾಳೆ... 
              " ಅದ್ಯಾಕ ಹಂಗೆ ಅಂಟಿಕೊಂಡು ಕುತ್ಕಬೇಕು ,   ಅವಯ್ಯನ ಮೇಲೆ  ಹಿಂಗೆ ಕೂತರೆ ಆತ ಅದೆಂಗೆ ಗಾಡಿ ಓಡಿಸ್ಬೇಕು ??   ಇನ್ನು ಒಬ್ರು ಹಿಂದೆ ಕೂರೋವಷ್ಟು ಜಾಗ ಐತಿ ನೋಡೋ, ಅದೇನು ಹಿಂಗೋ , ಅದ್ಯಾಕೋ ಈ ತರನೋ ಇಲ್ಲಿ .... " ಅಂತ ಕೇಳ್ತಾನೆ ಇದಾಳೆ ಮುರಳಿಗೆ ,  ಆದ್ರೆ ಉತ್ತರ ಮಾತ್ರ ಅವನಿಂದ ಇಲ್ಲ. ಬಿಟ್ಟ ಬಾಯಿ ಬಿಟ್ಕೊಂಡು , ತೆರೆದ ಕಣ್ಣು ಮುಚ್ಚದೆ ಲಕ್ಷ್ಮಕ್ಕ ತೋರಿಸಿದ ಹುಡುಗಿಯನ್ನೇ ನೋಡುತ್ತಾ  , ಏನನ್ನೋ ತನ್ನ ಕಣ್ಣೊಳಗೆ  ತುಂಬಿ ಕೊಳ್ತಾನೆ ಇದ್ದ ....  ಮಾತಿನ ಮದ್ಯ ಇದನ್ನು ಗಮನಿಸಿದ ಲಕ್ಷ್ಮಕ್ಕ " ಹೇ ಮುರಳಿ , ಏನೋ ಹಾಗೆ ನೊಡ್ತಿಯ , ಏನ್ ಹುಡುಗರೋ ಅವಕ್ಕಂತು ಮಾನ ಮರಿಯಾದೆ ಇಲ್ಲ ನಿಂಗು ಇಲ್ಲೇನೋ  ? ಏನೂ ಮಾತಾಡದೆ ಹಂಗ್ಯಾಕೆ  ನೊಡ್ತಿಯ  ಅವುನ್ನ ?? " ಅಂದಾಕ್ಷಣ  " ಅಕ್ಕ ಅಲ್ಲಿ ಅವರ ಗಾಡಿಯಲ್ಲಿ ಖಾಲಿ ಇರುವ ಜಾಗದಲ್ಲಿ ನಾ ಕೂರೋಕೆ ಯೋಚನೆ ಮಾಡ್ತಾ ಇದೀನಿ ಕಣಕ್ಕ " ಎಂದಾಗ ಲಕ್ಷ್ಮಕ್ಕ  ಅವಾಕ್ಕಾಗಿದ್ದೊಂತು  ನಿಜ...



      ಅಷ್ಟರಲ್ಲೇ ಲಕ್ಷ್ಮಕ್ಕ ಬಾಯಿ ಮೇಲೆ ಕೈ ಇಟ್ಕೊಂಡು " ಇದೇನೋ ಮುರಳಿ ಹೀಗಿದೆ  ದೇವಸ್ತಾನ ??? ಇಷ್ಟು ಬೇಗ ಬಂದೆ ಬಿಡ್ತು ಅಲ್ಲವೋ ನಮ್ಮ ಮುತ್ತು ಮಾರಿಯಮ್ಮನ್ನ ಗುಡಿ ??? " 
      
       "ಇದೇನೋ ಇಷ್ಟು ದೊಡ್ದದೈತಿ , ಏನೋ ಇವು ಈ ಪರಿ ಗೋಪ್ರಗಳು. ಆಯವ್ವಂದು ಬಾರಿ ನೆಡಿತ್ತೈತಿ ಅನ್ನು. ನಮ್ಮವ್ವಂದು  TV ಅಲ್ಲೆಲ್ಲ  ಬರ್ತತಿ ಅಂದ್ರೆ ಏನ್ ಸುಮ್ಕೆಯ ?? ನಮ್ಮವ್ವನ್ ಗುಡಿ ನೋಡೋಯಪ್ಪಾ ಅಂದ್ಲು"

         ಒಂದು ಕ್ಷಣ  ಬಂದ ನಗುವನ್ನು  ಇಡಿದು ಇಟ್ಕೊಂಡ  ಮುರಳಿ "ಅಯ್ಯೋ ಲಕ್ಷ್ಮಕ್ಕ ಇದು ನಿಮ್ಮ  ಮುತ್ತು ಮಾರಮ್ಮನ ಗುಡಿ  ಅಲ್ಲಕ್ಕೊ  , ,ಇದು ದೊಡ್ಡ  ಮಾಲು , ಗೋಪಾಲನ್ ಮಾಲ್ " ಅಂತ ಹೇಳಿದ.

         "ಏನಪ್ಪಾ ಇದು  ನಮ್ಮ ಮಾರಮ್ಮನ್ ಗುಡಿ ಅಲ್ಲವಾ ?? ಗೋಪಾಲನ ಗುಡಿಯೇ ???? ನಮಪ್ಪ ಅದೆಂಥ ದೇವಸ್ತಾನಗೆ ಕುಂತಾನೆ  ನೋಡೋ , ಗೋಪಾಲ ಅಂದ್ರೇನು ಕಡಿಮೇನೆ ... ತಿರುಪತಿ , ತಿರುಪತಿ ತರ  ಇದೆ ನೋಡು ......."

         "ಇಲ್ಲ ಇಲ್ಲ ಲಕ್ಷ್ಮಕ್ಕ ಇದು ನಿಮ್ ಮಾರಮ್ಮನ ಗುಡಿನು ಅಲ್ಲ , ಗೋಪಾಲಣ್ಣ ನ್ನ  ಗುಡಿನೂ ಅಲ್ಲ , ಮಾಲು ಇದು ಗೋಪಾಲನ್  ಮಾಲ್ . " ಅಂತ ಹೇಳಿದ ಮುರಳಿ. 

         "ಮಾಲ ??? ಗೋಪಾಲಣ್ಣನ ಮಾಲ ???? ಹಂಗೆ ಅಂದ್ರೇನಪ್ಪ ,,, ನಾ ಇದೆ ಮೊದ್ಲು ನೋಡು ಕೇಳಿದ್ದು ನೋಡಿದ್ದು ........ "

         ಲಕ್ಷ್ಮಕ್ಕಗೆ  ಇದರ ಬಗ್ಗೆ " ಹೇಗೆ ಹೇಳೋದು  ?? ಏನ್ ಹೇಳೋದು ? ಅಲ್ಲಿ ಜನ ಯಾಕೆ ಬರ್ತಾರೆ  ?  ಹೆಂಗೆ ಬರ್ತಾರೆ ?  ಏನ್ ಮಾಡ್ತಾರೆ ? " ಅಂತ  ತೋಚದ ಮುರಳಿ " ನಾ ಇದರ ಬಗ್ಗೆ ಹೇಳಿದ್ರು ಇವಕ್ಕ ಗೆ ಅದು ಅರ್ಥ ಆಗುತ್ತಾ ? ಅರ್ಥ ಆದ್ರೆ ಸುಮ್ ಸುಮ್ಕೆ ತಲೆ ತಿಂತಾಳೆ. ಇಲ್ಲಿಯ  ಜನಗಳ ಬಗ್ಗೆ ಏನೇನೋ ಅನ್ಕೊಲ್ತಾಳೆ ,  ಹೇಗಾದ್ರು ಮಾಡಿ ಇದರ ಬಗ್ಗೆ ನಾ ಅವಳಿಗೆ ಏನಾದ್ರೂ ಹೇಳ್ಬೇಕು, ಆದ್ರೆ ಅದು ಇಲ್ಲಿ ಇರೋ ತರ ಅಲ್ಲ ಅಂತ ಯೋಚಿಸಿ  " ಹೌದು ಕಣಕ್ಕ  ಇದು ಗುಡಿಯಲ್ಲ ಆದ್ರೆ ಗುಡಿ
ತರ "

     " ಅದೇನೋ ಮುರಳಿ ಗುಡಿ ಅಲ್ಲ ಅಂತಿಯ , ಗುಡಿ ತರ  ಅಂತಿಯಾ ,, ನನಗೇನು ತಿಳಿತಿಲ್ಲ ನೋಡು ...."

     "ಹೌದು  ಲಕ್ಷ್ಮಕ್ಕ .... ಇದು ಗುಡಿ ತರ. ಕೆಲವರಿಗೋ ಇದು ಸಾಕ್ಷಾತ್ ಗುಡಿಯೇ ,,, ತಮ್ಮ ಮನಸ್ಸಿಗೆ ಬೇಕು
ಅನ್ಸಿದಾಗೆಲ್ಲ ಇಲ್ಲಿಗೆ ಬರ್ತಾರೆ , ತಮಗೆ ಬೇಕಾದ ದೇವರನ್ನು ಹಾಗೆ ಪೂಜಿಸುತಾರೆ. ಸ್ವಲ್ಪ ಹೊತ್ತು ಇಲ್ಲೇ ಇದ್ದು ಆಮೇಲೆ ಹೋಗ್ತಾರೆ " .

   " ಹೌದೆ ?? ಅದು ಹೆಂಗೆ ???" 

    "ನೋಡಕ್ಕ....ನಮ್ಮೂರಲ್ಲಿ ನೀವು ಹೇಗೆ ಮಾಡ್ತೀರ ಬೆಳ್ಳಿಗ್ಗೆ  ಎದ್  ತಕ್ಷಣ ದೇವರನ್ನ ನೆನೆಸಿ ಕೊಳ್ತಿಯಾ ತಾನೇ ??? "

   " ಹೌದು ಕಣೋ ಮುರಳಿ ..." 

   " ಇಲ್ಲಿ ಕೂಡ ಹಾಗೆನೆ  ಜನರು ಅಲ್ಲ ಭಕ್ತರು ,, ಬೆಳ್ಳಿಗ್ಗೆ  ಎದ್ದ ತಕ್ಷಣ ತಮ್ಮ ಆ ದಿನದ ದೇವರನ್ನು ನೆನೆಸಿ ಕೊಳ್ತಾರೆ ... ಆಮೇಲೆ  ದೇವರನ್ನು ಬೇಡಿಕೊಳ್ತಾರೆ ?? ದೇವಿ ನಿನ್ನ ದರುಶನ ನನಗೆ ಈ ದಿನ ಬೇಕೇ ಬೇಕು ಅಂತ... ಭಕ್ತರು ಅದೆಷ್ಟು ಭಕ್ತಿಯಿಂದ ಬೇಡಿಕೊಳ್ತಾರೆ ಅಂದ್ರೆ ಆ ದೇವ್ರು ಕೂಡ  ಭಕ್ತನ ಕೋರಿಕೆಗೆ  ಇಲ್ಲ ಅನ್ನೋದೇ ಇಲ್ಲ .... ಆದ್ರೆ ದೇವರಿಗೆ ಆ  ದಿನ ಬೇರೆ ಭಕ್ತರ ಯಾವುದೇ ಕೋರಿಕೆ  ಇರಬಾರದು ಅಷ್ಟೇ ... ಇಲ್ಲಿ ದೇವತೆಗಳು ಹಾಗೆ ಕಣಕ್ಕೋ  ಯಾವಾಗಲು ಸ್ವಲ್ಪ ಬ್ಯುಸಿನೆ , ನಮ್ಮೂರು ಚೌಡಮ್ಮ , ಕೋಟೆ ಬರಮಪ್ಪನ ತರ ಅಲ್ಲ ,,, ಬೆಂಗಳೂರ್ ನೋಡು ಇದು ಅದಕ್ಕೆ ಹೀಗೆ .... "

   "ಹ ಹ ಹ ,,, ಹೌದೆನಪ್ಪ ??? " 

   "ಹೌದು ಕಣಕ್ಕ,  ಒಂದ್ ಸರಿ ಅವ್ರು  ಕೇಳ್ಕೊಂಡ್  ದೇವ್ರು ಅಥವಾ ದೇವತೆ ಸರಿ ನಿಂಗೆ  ಈ ದಿನ ದರ್ಶನ  ಕೊಡ್ತೀನಿ, ಅಂದ್ರೆ ಮುಗಿತು  ಎದ್ವೋ -ಬಿದ್ವೋ  ಅಂತ ದೇವಸ್ತಾನೆಕ್ಕೆ ಬಂದೆ  ಬಿಡ್ತಾರೆ  ಕಣಕ್ಕೊ ...." 

   "ಅಯ್ಯೋ ಅಯ್ಯೋ ಏನ್ ಭಯ ಭಕ್ತಿ  ಏನ್ ಕತೆ , ನಾ ಇಲ್ಲಿ ಜನಕ್ಕೆ ಅದೆಲ್ಲ ಇಲ್ಲವೇ ಇಲ್ಲ ಅಂತ ಅಂದುಕೊಂಡಿದ್ದೆ ಕಣೋ ಮುರಳಿ ....."

   "ಇಲ್ಲಕ್ಕ ಇಲ್ಲ ,,,, ಬೆಂಗಳೂರ್ ಜನ  ಅಂದ್ರೆ ಏನ್ ಸುಮ್ನೆನ , ಇವ್ರು  ಕೂಡ ಮನುಶ್ರೆ ... ಬಾರಿ ಭಕ್ತರು ಇವ್ರು,,, ಒಂದೊಂದಲ್ಲ ಬೇಜಾನ್ ದೇವರುಗಳ ಹತ್ರ ಹೋಗ್ತಾರೆ ಇವ್ರು ,,,,,, ಇವರಿಗೆ  ಎಲ್ಲ ದೇವ್ರುಗಳು ಒಂತರ ಒಂದೇನೆ ... ಒಂದ್ ಒಂದ್ ಸಾರಿ ಬೇರೆರು ಪೂಜೆ ಮಾಡೋ ದೇವರುಗಳನ್ನು ಬಿಡೋಲ್ಲ , ಅವುಕ್ಕು ಪೂಜೆ ಗೀಜೆ ಮಾಡಿ ವರ  ಕೇಳ್ತಾರೆ ,,, ದೇವರು ಸ್ವಲ್ಪ ಉದಾರಿಯಾಗಿದ್ರೆ  ಎಷ್ಟು ಜನ ಭಕ್ತರು ಏನ್ ಕೇಳಿದ್ರು ಇವ್ರು ಕೇಳೋ ವರಗಳಿಗೆಲ್ಲ ಅಸ್ತು ಅಂದು ಬಿಡ್ತಾವೆ , ಅಂತಂತ ಒಳ್ಳೊಳ್ಳೆ ದೇವತೆ ದೇವರುಗಳಿವೆ ಈ ಬೆಂಗಳೂರಲ್ಲಿ ....."

 "ಹಿಂಗೆಲ್ಲ ಇದಿಯೋ ಇಲ್ಲಿ ,,, ನಂಗೆ ಗೊತ್ತೇ ಇರಲಿಲ್ಲ ನೋಡು ಮತ್ತೆ ...."

 "ಹೌದಕ್ಕೋ ... ಬೆಳ್ ಬೆಳಗ್ಗೆ ಎದ್ದು , ಹಂಗು ಹಿಂಗು ದೇವರಿಗೆ ಹರಿಕೆ ಮಾಡಿಕೊಂಡು , ಆ ದೇವರುಗಳು ಇವ್ರು ಕೇಳೋ ವರಗಳಿಗೆ  ಅಸ್ತು ಅಂದ್ರೆ ಮುಗಿತು , ಇಂಥ ಹತ್ತಿರ ಇರುವ ಗುಡಿಗಳಿಗೆ ಬಂದು   ಗುಡಿಯ ಬಾಗ್ಲು ಹತ್ರನೇ ಬಂದು ಕಾಯಿತಿರ್ತಾರೆ. ಒಂದು ಒಂದು ಸಾರಿ ಬಾಗಿಲು ತೆಗೆದೇ ಇರೋಲ್ಲ ಆದರು ಪಾಪ ಭಕ್ತರು ಬಂದು ಬಾಗಿಲ ಹತ್ರನೇ ಗಂಟೆಗಟ್ಟಲೆ  ಕಾಯಿತಾರೆ .."

  "ತಮ್ಮ ತಮ್ಮ ಇಷ್ಟ ದೇವತೆಗಳಿಗೆ ಕಾಯೋದ್ರಲ್ಲೇ ಇವರಿಗೆ ಒಂತರ ಖುಷಿ  ಕಣಕ್ಕ.. ತಮ್ಮ ಇಷ್ಟದ ದೇವರುಗಳು ಕಣ್ಣಿಗೆ ಬಿದ್ರೆ ಸಾಕು , ಭಾವ ಪರವಶರಾಗಿ , ತಾವಿರುವ ಲೋಕವನ್ನೇ ಮರೆತು ದೇವತೆಯ ಸಾನಿದ್ಯಕ್ಕೆ ಹೋಗಿ ಬಿಡ್ತಾರೆ ,,, ಆ ನಮೂನಿ ಪ್ರೀತಿ , ಭಕ್ತಿ ಅವರ ದೇವರುಗಳ ಮೇಲೆ....."  

  "ಇಲ್ಲಿ ನೋಡಕ್ಕ ಹೆಣ್ಣ ಮಕ್ಳು ಗಂಡು ದೇವ್ರನ್ನ ಪೂಜಿಸ್ತಾರೆ , ಗಂಡ ಮಕ್ಳು ಹೆಣ್ ದೇವ್ರನ್ನ ಪೂಜಿಸ್ತಾರೆ..... ಇನ್ನು ಕೆಲವು ವಿಶೇಷ ಭಕ್ತರೂ ಇದಾರೆ ಅವ್ರು ಎಲ್ಲ ತರದ ದೇವರನ್ನು ಪೂಜಿಸ್ತಾರೆ... ಅದಕ್ಕೆಲ್ಲ ಇಲ್ಲಿ ಅವಕಾಶ ಇದೆ...."

 "ಒಂದು ಸಾರಿ ಇಲ್ಲಿ ಗುಡಿ ಒಳಗೆ ಹೋದ್ರೆ ಮುಗಿತು ,,, ಅವರಾಯಿತು ಅವರ ದೇವರಾಯಿತು ಬೇರೆ  ಯಾವುದರ ಬಗ್ಗೇನೂ  ತಲೆ ಕೆಡಿಸಿಕೊಳ್ಳೋಲ್ಲ.. ಅಷ್ಟು ಪ್ರೀತಿ ತಮ್ಮ ತಮ್ಮ ದೇವರುಗಳ ಮೇಲೆ...."

 "ಅಕ್ಕ ನಿಂಗೆ ಗೊತ್ತ ,,, ಇಲ್ಲಿಯ ದೇವರುಗಳೇನು ಕಡಿಮೆ ಅಲ್ಲ ,,, ಬೇಜಾನ್ ಶ್ರೀಮಂತ ದೇವರುಗಳು ಇವು.. ಹಂಗಾಗಿ ಭಕ್ತರು ಕೂಡ ಒಳ್ಳೆ ಒಳ್ಳೆ ಬಟ್ಟೆ ಬರಿಗಳನ್ನು , ಒಡವೆ , ವಸ್ತುಗಳನ್ನೂ ಕೊಟ್ಟು ತಮ್ಮ ಕಡೆಗೆ ಒಲಿಸಿಕೊಳ್ತಾರೆ..  ಇಂಥಹ  ಗುಡಿಯಲ್ಲೇ ದೇವರುಗಳಿಗೆ ಬೇಕಾದ ವಸ್ತುಗಳು ಸಿಗೋ ಜಾಗಗಳಿವೆ. ದೇವರಿಗೆ ಒಳ್ಳೊಳ್ಳೆ ಬಟ್ಟೆ ಕೊಡ್ತಾರೆ , ಒಳ್ಳೊಳ್ಳೆ ಆಭರಣಗಳನ್ನು ತೊಡಿಸಿ ಭಕ್ತರು ತಮ್ಮ ಕಂಗಳಲ್ಲಿ ದೇವರನ್ನ ತುಂಬಿ ಕೊಳ್ತಾರೆ ಪ್ರೀತಿಯಿಂದ ....."

  "ನಿಜ ಕಣೋ ನಾವು ಇಷ್ಟ ಪಡೋ ದೇವರಿಗೆ ನಮಗೆ ಬೇಕಾದ ಬಟ್ಟೆ ಬರಿ, ಆಭರಣಗಳನ್ನು ತೊಡಿಸಿ , ದೇವರಿಗೆ ಪ್ರಿಯವಾದ ಅಡುಗೆನ  ಮಾಡಿ ನೇವೇದ್ಯ  ಮಾಡೋದ್ರಲ್ಲಿ ಏನೋ ಒಂದು ಖುಷಿ ಸಿಗುತ್ತೆ ಕಣೋ ....... ನೋಡೋ ಬೆಂಗಳೂರ್ ಜನ ಕೂಡ ತುಂಬಾ ಒಳ್ಳೇವ್ರು ಕಣೋ ಹಾಗಾದ್ರೆ .. ನಾ ಸುಮ್ನೆ ಏನ್ ಏನೇನೋ ಅಂದುಕೊಂಡಿದ್ದೆ......." 

  "ಹೌದಕ್ಕ ತುಂಬಾ ಒಳ್ಳೇವ್ರು..... ಅಕ್ಕ ಇಂಥ ಮಾಲ್ ಗಳಲ್ಲಿ ಒಳ್ಳೊಳ್ಳೆ ಜಾಗಗಳಿವೆ  ಕಣಕ್ಕ , ದೇವರಿಗೆ ಬಟ್ಟೆ ಬರೆ , ಆಭರಣ , ಪಾದುಕೆಗಳನ್ನೂ  ಕೊಡ್ಸೋಕೆ...  ಈ ಬಟ್ಟೆ ಬರೆ ತೊಡ್ಸಿ , ಆಭರಣ ಹಾಕಿ , ಒಳ್ಳೊಳ್ಳೆ ಮಂತ್ರಗಳನ್ನೇಳಿ ದೇವರನ್ನು ಒಲಿಸಿಕೊಳ್ಲೋದರಲ್ಲಿ ನಿಸ್ಸೀಮರು ಇಲ್ಲಿ ಜನ ...  ಇಷ್ಟೆಲ್ಲಾ  ಆದ ಮೇಲೆ ದೇವರ ಪ್ರಸಾದಕ್ಕೆಂದೇ  ಸಕತ್ ಒಳ್ಳೆ ಜಾಗಗಳು ಇರ್ತಾವೆ ಕಣಕ್ಕ.. ದೇವರ ಪೂಜೆ ಆದ್ಮೇಲೆ ದೇವರುಗಳಿಗೆ ತೀರ್ಥ-ಪ್ರಸಾದ ಅದಮೇಲೆ ನೆ ಭಕ್ತರು  ಇಂಥ ಮಾಲ್ ಗಳಿಂದ ಮನೆಗೆ ಹೋಗೋದು..."

  "ಇಲ್ಲಿ ಒಂದ್ ಒಂದ್ಸಾರಿ ನೋಡ್ಬೇಕು ಕಣಕ್ಕೋ ,, ಭಕ್ತಿಯಲ್ಲಿ ಎಷ್ಟೊಂದು ಜನ ಭಕ್ತರು ತಾವಿರೋ ಲೋಕವನ್ನೇ ಮರೆತು , ತಮ್ಮದೇ ಆದ ಲೋಕಕ್ಕೆ ಹೋಗಿಬಿಡ್ತಾರಕ್ಕ... ಪ್ರೀತಿ ಭಕ್ತಿ ಹೆಚ್ಚಾಗಿ ದೇವರನ್ನು ಅಪ್ಪುತಾರೆ , ಮುದ್ದುತ್ತಾರೆ.. ಇನ್ನು ಅನೇಕ ರೀತಿಗಳಲ್ಲಿ ತಮ್ಮ ಭಕ್ತಿಯನ್ನು ದೇವರಲ್ಲಿ ತೋರಿಸುತ್ತಾರೆ..... "

 "ಹೌದೇನೋ ಮುರಳಿ ಇಷ್ಟೆಲ್ಲಾ ನೆಡೆಯುತ್ತೇನೋ ಇಲ್ಲಿ ???"

" ಹೌದಕ್ಕ ,,,, ಇಲ್ಲಿ ಎಷ್ಟೋ ಜನರು ಕೆಲವು ಭಕ್ತರನ್ನು ನೋಡಲೆಂದೇ ಬರ್ತಾರೆ... ತಮಗೆ ಯಾವ ದೇವರ ಮೇಲೆ ಭಕ್ತಿ ಇಲ್ಲ ಅಂದ್ರು ಇಲ್ಲಿಗೆ ಬಂದು ಒಂದಲ್ಲ ಒಂದು ದಿನ ನಮಗೂ ದೇವರ ಮೇಲೆ ಭಕ್ತಿ ಹುಟ್ಟಬಹುದು , ನಮಗೂ ಒಂದು ಆರಾದ್ಯ  ದೈವ ಸಿಕ್ಕರೂ ಸಿಗಬಹುದು , ಆ ದೈವ ನಾವು ಕೇಳೋದೆಲ್ಲ ಕೊಟ್ಟರು ಕೊಡಬಹುದು ಎಂಬ ಆಶಾ ಭಾವನೆಯೊಂದಿಗೆ ಬರುವವರು ಇದ್ದಾರಕ್ಕ ......"

 "ಈ ರಜ ದಿನಗಳು , ಶನಿವಾರ ಭಾನುವಾರ ಇಲ್ಲಿ ಭಕ್ತರ ನೂಕು ನುಗ್ಗಲು ಕಣಕ್ಕ... ಬಾರಿ ಜನ, ಭಾರಿ ಭಕ್ತಿ ನೋಡೋಕೆ ನಮ್ಮ ಎರೆಡು ಕಣ್ಣು ಸಾಲದು ಅಕ್ಕ....."  

"ನಿಜ ನಿಜ ಕಣೋ ,,,, ಈ ಭಕ್ತಿ ಅಂದ್ರೆ ಅದು ಹಾಗೆ ಕಣೋ ,,, ಒಂದು ಸಾರಿ ಅದು ಬಂದ್ರೆ ಆಯಿತು ಆ ದೇವರನ್ನು ನಾವು ಒಲಿಸಿಕೊಳೋ  ತನಕ ಸುಮ್ನೆ ಇರೋದೇ ಇಲ್ಲ.. ಒಂದಲ್ಲ ಒಂದು ಪೂಜೆ ಮಾಡ್ತಾನೆ ಇರ್ತೀವಿ...  " 

"ಅಕ್ಕ ನಿಂಗೆ ಇನ್ನು ಒಂದು ವಿಷಯ ಹೇಳಲೇ ಬೇಕು ,,,ಇಲ್ಲಿ ಇಂತಹ ಮಾಲ್ ಗಳಲ್ಲಿ ದೇವರುಗಳ , ಬೇರೆ ಭಕ್ತರ ಕತೆಗಳನ್ನು , ಅವರ ಮೇಲೆ ಬಂದ ಚಿತ್ರಗಳನ್ನು ತೋರುಸ್ತಾರೆ ಕಣಕ್ಕ.... ಭಕ್ತರೆಲ್ಲ ಅಲ್ಲಿ ಹೋಗಿ ಅಲ್ಲಿ ಬೇರೆ ಬೇರೆ ದೇವರುಗಳ-ಭಕ್ತರ ಮಹಿಮೆಗಳನ್ನು ನೋಡಿಕೊಂಡು ,, ಅದೇ ರೀತಿ ಅವ್ರು ಕೂಡ ದೇವರನ್ನು ಪೂಜಿಸುತ್ತಾರೆ... ಇಷ್ಟೆಲ್ಲಾ ಇರುತ್ತೆ ನೋಡಕ್ಕ ಇಂಥಹ ಮಾಲ್ಗಳಲ್ಲಿ.... "

" ಮುರಳಿ ,,,, ಒಂದ್ ಮಾತ್ ನಿಂಗೆ  ಹೇಳಲೇಬೇಕು ಕಣೋ   ,,, ಬೆಂಗಳೂರಿಗೆ ಬಂದ್  ಎಷ್ಟೆಲ್ಲಾ ವಿಷಯನೆಲ್ಲ ತಿಳ್ಕೊಂಡಿದಿಯ ಕಣೋ... ತುಂಬಾ ಬುದ್ದಿವಂತ ಆಗಿದಿಯ , ನಮ್ಮೂರಲ್ಲಿದ್ದಾಗ  ನೀ ಹಿಂಗೆ ಇರಲಿಲ್ಲ.. ಈಗ ಎಷ್ಟೊಂದು ದೇವರುಗಳ ವಿಷಯ , ಏನ್ ಆಸಕ್ತಿ ,,, ಖುಷಿ ಆಯಿತು ಕಣೋ...."

" ಹ ಹ ಹ ,,, ಹೌದಕ್ಕ ನಮ್ಮೂರಲ್ಲಿ ಅದೇ ಚೌಡಮ್ಮ , ಮಾರಮ್ಮ ,ಅದೇ ಮಂಚಾಲಮ್ಮ... ನಮಗೆ ಇಲ್ಲಿ ಬಂದಾಗಲೇ ಗೊತ್ತಾಗಿದ್ದು ಅವರನೆಲ್ಲ ಬಿಟ್ಟು ಇನ್ನು  ಅನೇಕ ಹೊಸ ಹೊಸ ದೇವರುಗಳಿವೆ ಅಂತ..."

"ಹೌದೇನೋ ?? ನೀ  ಇಷೆಲ್ಲ ಹೇಳಿದ್ಮೇಲೆ ನಂಗು ಈ ಗೋಪಾಲಣ್ಣನ ಮಾಲ್ ನೋಡ್ಬೇಕು ,ಅಲ್ಲಿಗೆ ಬರೋ ದೇವತೆ ಗಳನ್ನೂ, ಬರೋ ಭಕ್ತರನ್ನು ನೋಡ್ಬೇಕು ಕಣೋ ... ನನ್ನೂ ಅಲ್ಲಿಗೆ ಕರ್ಕೊಂಡು  ಹೋಗೋ...." 

ಪೇಚಿಗೆ ಬಿದ್ದ ಮುರಳಿ " ಅಕ್ಕ ಮೊದ್ಲು ನಿ ಮುತ್ತು ಮಾರಿಯಮ್ಮನ ದರುಶನ ಮಾಡು ಆಮೇಲೆ ನೋಡುವ ಏನ್ ಮಾಡೋದು ಅಂತ..........."  ಹೀಗೆ ಹೇಳಿ ಸದ್ಯಕ್ಕೆ  ಹಾಗೆ ಜಾರಿಕೊಂಡನು......

ನಿಮಗಾಗಿ 
ನಿರಂಜನ್                                              

ಶನಿವಾರ, ಸೆಪ್ಟೆಂಬರ್ 22, 2012

ಬಂದ್ ಬೆನ್ನು ಹತ್ತಿ

                                                          ಬಂದ್ ಬೆನ್ನು ಹತ್ತಿ....... 

ಸ್ನೇಹಿತರೆ , ದೇಶದ ಅರ್ಥ ವ್ಯವಸ್ಥೆಯ   ಬಗ್ಗೆ ಮಾತನಾಡುವ , ದೇಶದ ಏಳಿಗೆಯ ಬಗ್ಗೆ ಕಾಳಜಿ ತೋರಿಸುವ , ದೇಶದ ರಾಜಕೀಯ ವ್ಯವಸ್ತೆಯನ್ನೇ  ಪ್ರಶ್ನಿಸುವ ನಾವು , ಮೊನ್ನೆ ನಡೆದ ಬಂದ್ ಬಗ್ಗೆ ಸ್ವಲ್ವುವೂ  ಯೋಚಿಸಲಿಲ್ಲ , ಒಂದು ದಿನ  ರಜ  ಸಿಕ್ಕಿತಲ್ಲ ಎಂದು ಖುಷಿಯಾದೆವೇ ಹೊರತು ಬೇರೆ ಏನನ್ನು ಯೋಚಿಸಲೇ ಇಲ್ಲ. ನಿಜವಾಗಿಯೂ ನಮಗೆ ಆ ಬಂದ್ ಬೇಕಿತ್ತಾ ??? ಯಾರೋ ದೆಹಲಿಯಲ್ಲಿ ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಂದ್ ಕರೆ ನೀಡಿದರೆ ನಾವು ಅದಕ್ಕೆ ಸ್ಪಂದಿಸಬೇಕಿತ್ತಾ  ?? ಆ ದಿನ ಬಂದ್ ಮಾಡಿದ್ದಕ್ಕೆ ನಮಗೆ ಸಿಕ್ಕಿದ್ದಾದ್ರು ಏನು ??? ಕೇಂದ್ರ ಸರ್ಕಾರವೇನು ತಾನು ಮೊದಲು  ತೆಗೆದುಕೊಂಡ ನಿರ್ಧಾರಗಳನ್ನು ವಾಪಾಸ್  ಪಡಿಯಿತೆ ??? ನಾವು ಇಂಥಹ ಬಂದ್ ಗಳಿಗೆ ನಿಜವಾಗಿಯೂ ಪ್ರೋತ್ಸಾಹಿಸಬೇಕೆ ??? 


                 ನಿಜ , ಸರ್ಕಾರವು  ಹೊಸದಾಗಿ ತರುವ ಯೋಜನಗಳನ್ನು ಮತ್ತು ಸಾಮಾನ್ಯ  ಜನರ ಜೀವನದ ಮೇಲೆ ಪರಿಣಾಮ ಬೀರುವ ಹೊಸ ಕಾನೂನುಗಳನ್ನು ಜಾರಿಗೊಳಿಸಿದಾಗ , ಅವುಗಳನ್ನು  ಪ್ರಶ್ನಿಸುವ , ಆ ಕಾನೂನುಗಳ  ಸಾಧಕ ಬಾಧಕಗಳ ಚರ್ಚಿಸುವ , ತಮ್ಮ ಭಾವನೆಗಳನ್ನು  ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬ ನಾಗರೀಕನಿಗೂ  ಇದೆ .  ಆದರೆ ಆ ಹಕ್ಕನ್ನು ನಾವು ಹೇಗೆ ಚಲಾಯಿಸಬೇಕು , ಹೇಗೆ ಅದನ್ನು ಸರ್ಕಾರಕ್ಕೆ ತಿಳಿಸಬೇಕು ಎಂಬುದಕ್ಕೆ ಅದರದೇ ಆದ ವಿಧಿವಿಧಾನಗಳಿವೆ. ಆದರೆ ಈ ರೀತಿಯಾಗಿ ಇಡೀ ದೇಶವನ್ನೇ ಬಂದ್ ಮಾಡುವುದರಿಂದ , ಸಾಮನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುವುದರಿಂದ , ತನ್ನ ಪಾಡಿಗೆ ತಾನು ನಿಂತ ಬಸ್ಸುಗಳಿಗೆ ಬೆಂಕಿ ಹಚ್ಚುವುದರಿಂದ ನಾವೇನಾದರೂ ಸಾದಿಸಬಹುದೇ ?? ಮೊನ್ನೆ ನಾವು ಮಾಡಿದ ಬಂದ್ ಇಂದ ನಮ್ಮ ದೇಶದ ಅರ್ಥ ವ್ಯವಸ್ತೆಗೆ ದಕ್ಕೆ ಮತ್ತು ನಷ್ಟ ಆಗಿದೆಯೇ ಹೊರತು ಉಪಯೋಗ ವಾಗಿಲ್ಲ ,  12,500  ಕೋಟಿ ನಷ್ಟವನ್ನು ನಾವು ಆ ದಿನ ನಮ್ಮ ದೇಶಕ್ಕೆ ನಾವು ಮಾಡಿದ್ದೇವೆ. ನಾವು ಮಾಡಿದ ನಷ್ಟವನ್ನು  ನಾವಲ್ಲದೆ ಬೇರೆ ಯಾರು ಭರಿಸಬೇಕು ??  ಆ ನಷ್ಟದ ಪರಿಣಾಮ ನಮ್ಮ ಮೇಲಲ್ಲದೆ ಪಾಕಿಸ್ತಾನಕ್ಕೆ ಬೀಳುತ್ತದೆಯೇ ?? .  ಬರುವ ದಿನಗಳಲ್ಲಿ ಸರ್ಕಾರ ಅದರ ಹೊರೆಯನ್ನು ನಮ್ಮ ಮೇಲೆಯೇ ಹೊರಿಸುತ್ತದೆ. ಅದಕ್ಕೆ ತಕ್ಕೆ ಬೆಲೆಯನ್ನು ನಾವೇ ಭರಿಸಬೇಕು. ಬಂದ್ ಮಾಡಿದಾಗ ಬಿಸಿ ತಟ್ಟಿದ್ದು ಸಾಮಾನ್ಯ ಜನರಿಗೆ , ಆ ನಷ್ಟದ ಪರಿಣಾಮವು ಇನ್ನು ಮುಂದೆ ಬೀಳುವುದು ನಮ್ಮ ಮೇಲೆಯೇ. 


                 ಇದನ್ನೆಲ್ಲಾ ಯೋಚಿಸದ ನಾವು ಬಂದ್ ಎಂದಾಕ್ಷಣ ಸ್ವಲ್ಪುವೂ  ಯೋಚಿಸದೆ , ಒಂದು ದಿನ ರಾಜ ಸಿಗುತ್ತಲ್ಲ ಅಂತ ಮಾತ್ರ ಯೋಚಿಸುತ್ತೇವೆ. ಆ ದಿನ ಮನೆಯಲ್ಲಿ ಇದ್ದು ಸಂಪೂರ್ಣವಾಗಿ ಮಲಗಿ , ರೆಸ್ಟ್ ತಗಬೇಕು ಅಂತ ಯೋಚಿಸುತ್ತೇವೆ ಹೊರತು ಅದರ ಪರಿಣಾಮದ ಬೆಗ್ಗೆ ಸ್ವಲ್ಪವು ಯೋಚಿಸಲಿಲ್ಲ. ಆ ದಿನ ನಾವು ಮಾಡಿದ್ದು ಅದೇ . ಸಣ್ಣ ಸಣ್ಣ ಅಂಗಡಿ , ಹೋಟೆಲು , ತರಕಾರಿ ಅಂಗಡಿಗಳನ್ನು , ಚಿಲ್ಲರೆ ವ್ಯಾಪಾರಿಗಳ ವ್ಯಾಪಾರವನ್ನು ನಾವು ಒತ್ತಾಯಮಾಡಿ, ಗಲಾಟೆ ಮಾಡಿ ಮುಚ್ಚಿಸಿ , ಅವರ ದಿನದ ದುಡಿಮೆಗೆ ಕುಂದುಂಟು ಮಾಡಿದೇವೆ ಹೊರತು ಇದರಿಂದ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರಲಿಲ್ಲ. ಅಲ್ಲಿ ಆ ದಿನ ಒಣಗಿಸಿಕೊಂಡಿದ್ದು ನಾವೇ ಹೊರತು ಸರ್ಕಾರ ಕಳೆದು ಕೊಂಡಿದ್ದು ಏನು ಇಲ್ಲ . ಈ ಎಲ್ಲ ಅಂಶಗಳನ್ನು ಗಮನಿಸಿ  ಕೇರಳ ಉಚ್ಚ ನ್ಯಾಯಾಲಯ ಅನೇಕ ಭಾರಿ ಈ ಬಂದ್ ಗಳ ವಿರುದ್ದ ತೀರ್ಪು ನೀಡಿ , ಬಂದ್ ಮಾಡುವುದು ಕಾನೂನು ಬಾಹಿರ , ಬಂದ್ ಕರೆ ನೀಡುವವರ ವಿರುದ್ದ ಶಿಸ್ತು ಕ್ರಮವನ್ನು ಜರುಗಿಸಬಹುದೆಂದು ಮಹತ್ವದ ತೀರ್ಪು ನೀಡಿತ್ತು. ಇದನ್ನೇ ನಮ್ಮ ದೇಶದ ಸರ್ವೋಚ್ಚ್ ನ್ಯಾಯಾಲಯವೂ  ಸಮರ್ಥಿಸಿಕೊಂಡಿತ್ತು. ಮಹಾರಾಷ್ಟ್ರದಲ್ಲಿ  BJP  ಮತ್ತು ಶಿವಸೇನೆಗೆ  ಬಂದ್ ಮಾಡಿಸಿದಕ್ಕೆ ತಲಾ 20 ಲಕ್ಷ ದಂಡವನ್ನೂ  ವಿದಿಸಿತ್ತು.  ಶಾಂತಿಯುತ ಪ್ರತಿಭಟನೆ ನಮ್ಮ ಹಕ್ಕು, ಇದರಲ್ಲಿಯೇ  ನಾವು ನಮ್ಮ ನಿಲುವುಗಳನ್ನು ವ್ಯಕ್ತಪಡಿಸುವುದು ಸರಿಯಾದ ಮಾರ್ಗ.  ಹಾಗಾಗಿ ನಮ್ಮ ದೇಶದ ಸಮಸ್ಯೆಗಳಿಗೆ ಬಂದ್ ಗಳು  ಯಾವಾಗಲು ಪರಿಹಾರ ನೀಡವು. ಚುನಾವಣೆಯ ಸಂದರ್ಭದಲ್ಲಿ ನಾವು ಸ್ವಲ್ಪ ಯೋಚಿಸಿ ಮತ ಚಲಾಯಿಸಿದರೆ ಈ ಎಲ್ಲ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಕ್ಕರೂ ಸಿಗಬಹುದು ಆದರೆ ಈ ಬಂದ್ ಗಳಿಂದ ನಮಗೆ ನಮ್ಮ ದೇಶಕ್ಕೆ ನಷ್ಟವೇ  ಹೊರತು ಮತ್ತ್ಯಾರಿಗೂ ಅಲ್ಲ. 

ನಿಮಗಾಗಿ 
ನಿರಂಜನ್