ಮಂಗಳವಾರ, ಫೆಬ್ರವರಿ 22, 2011

ಗಿರಿಯ ಕೀರ್ತಿ - Sooper Experience

                                       ಗಿರಿಯ ಕೀರ್ತಿ .......

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ನನಗೇನೂ ಹೊಸದಾದ ಪ್ರವಾಸಿ ತಾಣವಾಗಿರಲಿಲ್ಲ, ಆದರೂ ಸ್ನೇಹಿತರೊಂದಿಗೆ ಹೋದಾಗ ಅದರ ಅನುಭವವೇ ಬೇರೆ , ಅದೇ ರೀತಿ ಈ ಬಾರಿ ಅಲ್ಲಿಗೆ  ಹೋದಾಗ ಆದ ಅನುಭವ ಮಾತ್ರ ವಿಬಿನ್ನ . ಅದಕ್ಕೆ ಕಾರಣ ನಾನು ಅಲ್ಲಿ ಬೇಟಿ ಮಾಡಿದ ಒಬ್ಬ ಮನುಷ್ಯ. ಪ್ರತಿಬೆಗೆ ಹಾಗೂ ಬುದ್ದಿವಂತಿಕೆಗೆ ಎಲ್ಲೆಗಳಿಲ್ಲ, ಪೇಟೆ, ಗ್ರಾಮಗಳು ಎಂಬ ಬೇದವಿಲ್ಲ,ಪಧವಿಗಳು ಬೇಕಿಲ್ಲ ಕಲಿಯುವ ಮನಸ್ಸಿದ್ದರೆ ನಾವು ಎಲ್ಲಿದ್ದರೂ,ಹೇಗಿದ್ದರು ಸಾದಿಸಬಹುದು ಎಂಬುದಕ್ಕೆ ಆ ಮನುಷ್ಯನೇ ನಮಗೆ ಉದಾಹರಣೆಯಾಗುತ್ತಾನೆ.
            ನಾ ಕಂಡ ಸುಂದರ ಪ್ರವಾಸಿ ತಾಣಗಳಲ್ಲಿ ಅತ್ಯಂತ ಸುಂದರ ಹಾಗೂ ಎತ್ತರವಾದ ಪ್ರದೇಶಗಳಲ್ಲಿ ಮುಳ್ಳಯ್ಯನಗಿರಿಯು ಒಂದು. ಸಂಜೆಯ ಸಮಯ, ಬೀಸುವ ಗಾಳಿ, ಸೂರ್ಯಾಸ್ತಕ್ಕೆ  ಕೆಲವೇ ಕೆಲವು ಗಂಟೆಗಳು ಬಾಕಿ ಇವೆ, ಗಿರಿಯೆನ್ನೇರುತ ಸಾಗಿದ ನಾವು ಹಾದಿಯುದ್ದಕ್ಕೂ ಫೋಟೋ ಸೆಶೆನ್ನುಗಳು, ಹಾಸ್ಯ ಚಟಾಕಿಗಳು , ಅಲ್ಲಿಯ ವಾತಾವರಣದ ಬಗ್ಗೆ ಮಾತನಾಡುತ್ತಾ ಹೋಗುತ್ತಿದ್ದ ನಮಗೆ ಒಂದು ಕಡೆ ಚಿಕ್ಕಮಗಳೂರಿನ ಸುಂದರ ದೃಶ್ಯ ಮತ್ತೊಂದೆಡೆ ಕಣ್ಣಾಯಿಸಿದಷ್ಟು ದೂರ ಕಾಣುವ ಗಿರಿಸಾಲುಗಳು , ಅವುಗಳಲ್ಲಿ  ಮರೆಯಾಗಲು ಹವಣಿಸುತ್ತಿದ್ದ  ಸೂರ್ಯ , ಗೂಡು ಸೇರಲು ಹಾರುತಿದ್ದ ಹಕ್ಕಿಗಳು ಇದೆಲ್ಲ ಒಂದು ರೀತಿಯಲ್ಲಿ ನಮಗೆ ಮುದ ನೀಡುವಂತಿದ್ದವು. ಗಿರಿ ತುದಿಯನ್ನು ತಲುಪುತ್ತಿದ್ದಂತೆ ದೇವರ ದರ್ಶನಕ್ಕೆ ಮುಂದಾದೆವು, ಅಷ್ಟರಲ್ಲಿ ಎಲ್ಲೋ ಯಾರದೋ ಗಾನ ಸುಧೆ ನಮ್ಮ ಕಿವಿಗೆ ಬೀಳುತಿತ್ತು. ಏನಪ್ಪಾ ಇಲ್ಲಿಯೂ ಕೂಡ ಈ ರೀತಿಯ ಪ್ರತಿಬೆ,ಯಾರಿಗೂ ಅಂಜದೆ ಇಷ್ಟೊಂದು ಇಂಪಾಗಿ ಹಾಡುತ್ತಿದ್ದಾರೆ ಎಂದು ಅಂದುಕೊಳ್ಳುತ್ತ, ಕೈ ಕಾಲು ತೊಳೆಯಬೇಕೆನ್ನುತಿದ್ದಂತೆ ಹಾಡುವ ವ್ಯಕ್ತಿಯೆ ಸಂಗೀತವನ್ನು ನಿಲ್ಲಿಸಿ ಕತ್ತಲ ಕಿಟಕಿಯಿಂದ  “ ಸಾರ್ ದಯವಿಟ್ಟು ನೀರನ್ನು ಕೈ ಕಾಲು ತೊಳೆಯುವುದರಲ್ಲಿ ಪೋಲು ಮಾಡ ಬೇಡಿ, ಎತ್ತರವಾದ ಪ್ರದೇಶವಾದ್ದರಿಂದ ನೀರಿಗಾಗಿ ಸ್ವಲ್ಪ ಕಷ್ಟಪಡಬೇಕಾಗುತ್ತೆ “ ಎಂದಾಗ ನಮಗೂ ಅದು ನಿಜವೆನಿಸಿ, ಬರಿ ದಣಿವಾರಿಸಿಕೊಂಡು ದೇವರ ದರ್ಶನ ಪಡೆದು ದೇವರ ಮುಂದೆ ಒಂದು ಸಣ್ಣ ಪ್ರಾರ್ಥನಾ ಗೀತೆಯನ್ನು ಹಾಡಿದೆವು. ಅದು ಮುಗಿಸಿ ಪ್ರಕೃತಿಯ ಆನಂದವನ್ನು ಅನುಭವಿಸಲು ಹೊರ ಬರುವ ಹೊತ್ತಿಗೆ ನಮ್ಮ ಹಿಂದೆಯೇ ಬಂದು, ಪ್ರಾರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ನಮ್ಮನ್ನು ಪರಿಚಯ ಮಾಡಿಕೊಂಡ ವ್ಯಕ್ತಿಯೆ ನಾ ಹೇಳಿದ ಮೇಲಿನ ಆ ಅಪರೂಪದ ಮನುಷ್ಯ ಕೀರ್ತಿ. ತೆಳುವಾದ ಕಾಯ, ನಡು ಬೈತೆಲೆ, ಸಾಮಾನ್ಯ ಉಡುಪು, ಹೊಳೆವ ದೊಡ್ಡ ಕಣ್ಣು,ಕೃಷ್ಣ ವರ್ಣ, ಮೇಲು ನೋಟಕ್ಕೆ ಅಪ್ಪಟ ಗ್ರಾಮೀಣ ಪ್ರದೇಶದ ರಾಯಭಾರಿಯಂತಿದ್ದ ಆತ , ನಾವಾಡಿದ್ದ ಸಾಮಾನ್ಯ ಸಂಗೀತಕ್ಕೆ ಮಾರು ಹೋಗಿ, ನಮ್ಮೊಡನೆ ಆತ ಮಾತನಾಡಿದ್ದು, ಸ್ಥಳದ ಬಗ್ಗೆ ವಿವರಣೆ ನೀಡಿದ್ದು, ಆತನ ಮಾತುಗಾರಿಕೆ, ಭಾಷೆಯ ಮೇಲಿದ್ದ ಹಿಡಿತ,ಅದಕ್ಕೆ ತಕ್ಕಂತ ಭಾವ, ಆತನ ಬುದ್ದಿವಂತಿಕೆ ನಿಜವಾಗಿಯೂ ನನ್ನನ್ನು ಮೂಕನನ್ನಾಗಿಸಿದ್ದವು. ಕೆಲವು ಗಂಟೆಗಳ ಕಾಲ ಆತ ನಮ್ಮನು ಸೆರೆ ಹಿಡಿದಿದ್ದ ರೀತಿ ನಿಜಕ್ಕೂ ವಿಬಿನ್ನವಾಗಿತ್ತು.  ಬಿಡಿ ಬಿಡಿಯಾಗಿ ಸ್ಥಳ ಮಹಿಮೆಯನ್ನು ನಿರೂಪಿಸಿದ  ಶೈಲಿಯಂತು ಬಿನ್ನವಾಗಿತ್ತು. ಅಷ್ಟರಲ್ಲಿ ಸೂರ್ಯಾಸ್ತದ ಸಮಯವಾದ್ದರಿಂದ , ಆತ ನಮ್ಮನು ಒಂದು ಜಾಗಕ್ಕೆ ಕರೆದೊಯ್ದು ಅಲ್ಲಿಯ ಸೂರ್ಯಾಸ್ತವನ್ನು ವರ್ಣಿಸುವ ಜೊತೆಗೆ "ಸೂರ್ಯಪಾನ" ಎಂಬ ಒಂದು ಪ್ರಾಚೀನ ಸಾಧನೆಯ ಮೇಲೆ ಬೆಳಕು ಚೇಲಿದ್ದು  ಆತನ ಪಾಂಡಿತ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು. ಇದೆಲ್ಲದರ ಜೊತೆಗೆ ಆತನಿಗಿದ್ದ ಪೇಟೆ ಜೀವನ, ಸಾಫ್ಟ್‌ವೇರ್ ಮತ್ತು ಇಲ್ಲಿ ಕೆಲಸ ಮಾಡುವ ನಮ್ಮ ಜೀವನ ಶೈಲಿಯ ಬಗ್ಗೆ ಆತನಿಗಿದ್ದ ಕೆಲವೊಂದು ಸಂಶಯಗಳು , ಈ ಬಗ್ಗೆ ಆತ ಮಾತನಾಡಿದ್ದು, ತನ್ನ ಮನದಲ್ಲಿದ್ದ ಕೆಲವು ಪ್ರಶ್ನೆಗಳನ್ನು ನಮಗೂ ಕೇಳಿ, ನಮ್ಮ ಬಗ್ಗೆ ನಾವೇ ಯೋಚನೆ ಮಾಡಿಕೊಳ್ಳುವಂತಹ ಮಾತುಗಳಾಡಿದ ಆತ ನಿಜವಾಗಿಯೂ ಒಬ್ಬ ಚಿಂತಕನಂತೆ ನನಗೆ ಕಾಣತೊಡಗಿದ.

              ನನಗೆ ಈ ಬಾರಿ ಮುಳ್ಳಯ್ಯನಗಿರಿಯಲ್ಲಿ ವಿಶಿಷ್ಟವಾಗಿ ಕಂಡಿದ್ದು ಆ ಪ್ರತಿಭಾವಂತ ಯುವಕ ಕೀರ್ತಿ ಮಾತ್ರ ಹಾಗೂ ಆತನ ಮನೋಭಾವ. ಹೊರಡುವ  ಹೊತ್ತಿಗೆ ಆತ ನಮ್ಮ ಜೊತೆ ಹಾಡಿದ ಒಂದು ಹಾಡು ನಿಜಕ್ಕೂ ಆತನಿಗೆ ಸಂಗೀತದಲ್ಲೂ ಇದ್ದ ಆಸಕ್ತಿ ತೋರಿಸುತ್ತಿತ್ತು ಮತ್ತು ಆತ ಒಬ್ಬ ರಂಗಕರ್ಮಿಯು ಕೂಡ ಎಂದು ನಮಗೆ ತಿಳಿಯಿತು. ಅಷ್ಟುಹೊತ್ತಿಗೆ ಆತನೊಂದಿಗೆ ಸಾಕಷ್ಟು ಸಮಯ ಕಳೆದು, ಕತ್ತಲಾಗುತ್ತಿದ್ದರಿಂದ ಬೇಡದ ಮನ್ನಸ್ಸಿನಿಂದ ಆತನಿಗೆ ವಿದಾಯ ಹೇಳಿ ಹೊರಟಾಗ ನನ್ನ ತಲೆಯಲಿ ಇದ್ದದ್ದು ಆ ಮನುಷ್ಯ ಮತ್ತು  ಆತನು ಕೇಳಿದ ಕೆಲವು ಪ್ರಶ್ನೆಗಳು, ಉತ್ತರಕ್ಕಾಗಿ ಕೆಲವು ದಿನಗಳು ಹುಡುಕುತ್ತಲೇ ಇದ್ದೇ. ಸಿಕ್ಕ ಸ್ವಲ್ಪ ಸಮಯದಲ್ಲೇ ಈತ ತನ್ನ ಪ್ರಭಾವವನ್ನು ನಮ್ಮ ಮೇಲೆ ಬೀರಿದ್ದಂತೂ ನಿಜ ಮತ್ತೆ ಕೆಲವು ಪ್ರಶ್ನೆಗಳನ್ನು ನಮ್ಮಲ್ಲಿಯೇ ಮೂಡುವಂತೆ ಮಾಡಿ ಒಂದು ರೀತಿಯಲ್ಲಿ ಆತ ನಮ್ಮ ಯೋಚನೆಯ ದಾರಿಯನ್ನು ಬದಲಾಯಿಸಿದ್ದು ನಿಜಕ್ಕೂ ಅಚ್ಚರಿತರುವಂತಿತ್ತು.
                                                                                     His Questions :

1. As a villager i m not contributing to global warming then why should i suffer from that ???

2. As engineers do u really need all those comfortable s which r contributing to Global warming ???

3. When u say technology , why common man still has no access to it ?? , By Showing no network coverage phone on spot.

4. We say our economy improved a lot by IT and GDP is very high,, but why that has not improved us yet ??? does that make any sens to me ???
5. As IT industry is very young and we r not facing any probs now,, but what would happen after some years ??

ನಿಮಗಾಗಿ.......
ನಿರಂಜನ್