ಭಾನುವಾರ, ನವೆಂಬರ್ 6, 2011

ಕನ್ನಡ ರಾಜ್ಯೋತ್ಸವದ ಉದ್ದೇಶ ಮತ್ತು ನಮ್ಮ ಕರ್ತವ್ಯ

                             
ಸ್ನೇಹಿತರೆ

ಮೊದಲಿಗೆ ನಿಮಗೆಲ್ಲರಿಗೂ, ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ , ನಮ್ಮೆಲರ ಹೆಮ್ಮೆಯ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು. ನಮಗೆಲ್ಲ ಗೊತ್ತಿರುವ ಹಾಗೆ ಈ ಹಬ್ಬ ನಿಜವಾಗಿಯೂ ಒಂದು ರೀತಿಯ ಹೆಮ್ಮೆಯ ಹಬ್ಬ, ಕನ್ನಡ ನಾಡಿಗಾಗಿ ದುಡಿದವರ, ಕನ್ನಡ ನಾಡಿನಲ್ಲಿ ಹುಟ್ಟಿ ದೇಶ-ವಿದೇಶದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ  ಸಾಧನೆಗೈದ ಕನ್ನಡಿಗರ,ಕನ್ನಡ ಸಾಹಿತ್ಯ-ಸಂಗೀತದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಹಿರಿಯರನ್ನು ಸ್ಮರಿಸುವ, ನೆನೆಯುವ, ಗೌರವಿಸುವ ದಿನ. ಹಾಗೆಯೇ ಸಾದನೆಯ ಹಾದಿಯಲ್ಲಿರುವ  ಕಿರಿಯರನ್ನು-ಯುವ ಜನಾಂಗವನ್ನು ಪ್ರೋತ್ಸಾಹಿಸುವ ಸುದಿನ.


                 ಕನ್ನಡ ರಾಜ್ಯೋತ್ಸವದ ದಿನದಂದು ಒಬ್ಬ ಸಾಮಾನ್ಯ ಕನ್ನಡಿಗನಿಂದ ಇಡಿದು ರಾಜ್ಯದ ಮೊದಲ ಪ್ರಜೆಯು ಕೂಡ ಈ ಹಬ್ಬದ ನಿಜವಾದ ಮಹತ್ವವನ್ನು ಅರಿತು ಆಚರಿಸಿದರೆ ಮಾತ್ರ ಈ ಹಬ್ಬವನ್ನು ಆಚರಿಸುವ ಉದ್ದೇಶಕ್ಕೆ ಒಂದು ಅರ್ಥ ಇರುತ್ತದೆ ಎನ್ನುವುದು ನನ್ನ ಭಾವನೆ. ಆದರೆ ನಿಜವಾಗಿಯೂ ನಾವು ಈ ರೀತಿ ಈ ಹಬ್ಬವನ್ನು ಪ್ರತಿವರ್ಷವೂ ಆಚರಿಸುತ್ತಾ ಇದ್ದೀವಾ ??? ಹೀಗೆ ಆಚರಿಸುವುದರ ಬಗ್ಗೆ ಯೋಚನೆಯನ್ನಾದರೂ ಮಾಡಿದ್ದೇವಾ ???. ರಾಜ್ಯೋತ್ಸವದ ದಿನ ನಮ್ಮ ಕರ್ನಾಟಕ ಘನ ಸರ್ಕಾರ ಒಂದೊಷ್ಟು ಕ್ಷೇತ್ರದಲ್ಲಿ ಕೆಲಸ ಮಾಡಿರುವವರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಪ್ರಕಟಿಸಿ, ಮತ್ತೆ ಪ್ರಧಾನಮಾಡಿ ತಮ್ಮ ಕರ್ತವ್ಯ ಇಷ್ಟೇ  ಎಂದು ಸರ್ಕಾರ ಕೈ ತೊಳೆದುಕೊಳ್ಳುತ್ತದೆ.  ಪ್ರತಿ ವರ್ಷ ಆ ಪ್ರಶಸ್ತಿ ಪ್ರಧಾನ ಸಮಾರಂಬ ಗೊಂದಲದ ಗೂಡಾಗುತ್ತಿತ್ತು, ಸದ್ಯ ಈ ಭಾರಿ ೫೦ ಅರ್ಹರಿಗೆ  ಮಾತ್ರ ಪ್ರಶಸ್ತಿ ಕೊಟ್ಟಿರುವುದು ಸ್ವಲ್ಪ ಸಮಾಧಾನದ ಸಂಗತಿ. ಸಾಮನ್ಯ ಜನರಾದ ನಾವು ಕೂಡ ಆ ದಿನವನ್ನು ಒಂದು ಕೇವಲ ರಜಾ ದಿನದಂತೆಯೇ ರಜೆ ಕಳೆದು ನಮ್ಮ ಪಾಡಿದೆ ನಾವು ಇದ್ದು ಬಿಡುತ್ತೇವೆ. ಕೆಲ ಕನ್ನಡ ಪರ ಸಂಘಟನೆಗಳು ಮಾತ್ರ ಆ ದಿನ ಈ ಹಬ್ಬವನ್ನು ಆಚರಿಸುವುದನ್ನು ರೂಡಿ ಮಾಡಿಕೊಂಡಿದ್ದಾರೆ .
        
               ಕನ್ನಡ ರಾಜ್ಯೋತ್ಸವವೆಂದರೆ, ಇದು ಕೇವಲ ಕನ್ನಡ ಪರ ಸಂಘಟನೆಗಳಿಗೆ, ಕೆಲಸ ಸಾಹಿತಿಗಳಿಗೆ, ಕನ್ನಡ ಚಲನಚಿತ್ರ ನಟರಿಗೆ ಮಾತ್ರ ಉತ್ಸವವಲ್ಲ. ಉತ್ಸವ ಎಂದರೆ ಬರಿ ಆ ದಿನ ತಾಯಿ ಭುವನೇಶ್ವರಿ ದೇವಿ  ಚಿತ್ರಕ್ಕೆ ಸಲ್ಲಿಸುವ ಪೂಜೆಯಷ್ಟೇ ಅಲ್ಲ, ಕನ್ನಡ ಭಾವುಟಗಳ ಪ್ರದರ್ಶನಗಳು ಅಲ್ಲ , ಕನ್ನಡ ಚಲನಚಿತ್ರಗಳ ಹಾಡುಗಳನ್ನು ಬೀದಿ ಬೀದಿಯಲ್ಲಿ ರಸಮಂಜರಿ ಕಾರ್ಯಕ್ರಮಗಳನ್ನಾಯೋಜಿಸಿ ಹಾಡುಗಳನ್ನು  ಹಾಡಿ-ಕುಣಿಯುವುದು ಅಲ್ಲ , ಬೇರೆ ಭಾಷಿಗರನ್ನು ಬಯ್ಯುವ ಅಥವಾ ನಿಂದಿಸುವ ದಿನವಂತೂ ಅಲ್ಲವೇ ಅಲ್ಲ. ಸರಿ ಇವೆಲ್ಲವನ್ನು  ಕೂಡ ಮಾಡಲಿ ಆದರೆ ಇವುಗಳ ಜೊತೆಗೆ ನಾವು ಮಾಡಬೇಕಿರುವ ಕೆಲಸಗಳು ಸಾಕಷ್ಟಿವೆ. ಆ ದಿನದ  ನಿಜವಾದ ಆಚರಣೆಗಳು  ಎಂದರೆ , ನಾಡು-ನುಡಿಯ ಬಗ್ಗೆ ಚಿಂತನೆ, ನಾಡಿಗಾಗಿ ನಮ್ಮ ಕೊಡುಗೆಯಾ ಬಗ್ಗೆ ಸಾಮಾನ್ಯರು ಕೂಡ ಯೋಚಿಸಬೇಕು, ರಾಜ್ಯಕ್ಕಾಗಿ ನಾವು ದುಡಿಯುವ ಬಗ್ಗೆ ಚಿಂತನೆ ನಡೆಸಬೇಕು ,ನಾಡು ಹೆದರಿಸುತ್ತ ಇರುವ  ಸಮಸ್ಯಗಳ ಬಗ್ಗೆ ಬರಿ ಚರ್ಚಿಸದೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಆ ದಿನವೇ ಶುರುಮಾಡಬೇಕು.ಆದರೆ ನಾವು ನಿಜವಾಗಿಯೂ ಈ ನಿಟ್ಟಿನಲ್ಲಿ ನಾವು ಸಾಗುತ್ತಿದ್ದೆವೆಯಾ ? ಈ ಕೆಲಸಗಳನ್ನು ನಿಯತ್ತಾಗಿ ಮಾದುತ್ತಿದ್ದೆವೆಯಾ ?? ಕನ್ನಡಿಗರಾದ ನಾವೇ ಹೀಗೆ ಮಾಡಿದರೆ , ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸುವರೆ ????
                ನವಂಬರ್  ೧ ಬಂತೆಂದರೆ , ನಮಗೆ ತಟ್ಟನೆ ನೆನಪು ಆಗುವುದು ಆ ದಿನದ ರಜೆ ಮತ್ತು ಅದರ ಮಜಾ ಅಷ್ಟೇ. ನಿಜವಾದ ಹಬ್ಬದ ಅರ್ಥ ಮತ್ತು ಆ ದಿನದ ಜವಾಬ್ದಾರಿಗಳನ್ನು ನಾವು ಗಾಳಿಗೆ ತೂರಿದ್ದೇವೆ. TV ಮಾಧ್ಯಮಗಳು ಬರಿ ಒಂದೆರೆಡು ಕನ್ನಡ ಅಭಿಮಾನ ತೋರಿಸುವ ಹಳೆ ಕನ್ನಡ ಹಾಡುಗಳನ್ನು-ಸಿನಿಮಾಗಳನ್ನು ಬಿತ್ತರಿಸಿ ತಮ್ಮ ಆ ದಿನದ ಕೆಲಸವನ್ನು "ನಮ್ಮದಿಷ್ಟೇ ಕನ್ನಡಾಭಿಮಾನ" ಎಂದು ಮುಗಿಸುತ್ತವೆ. ನಾವು ಕೂಡ ಆ ದಿನವೆಲ್ಲ ಟೀವೀ ಮುಂದೆ ಕುಳಿತುಕೊಂಡು ಉದಯ,ಉಷೆ TVಗಳಲ್ಲಿ ಬರುವ ಜಮಾನದ ಕನ್ನಡ ಸಿನಿಮಾ - ಹಾಡುಗಳನ್ನು , ಸಿನೆಮ ನೋಡುವುದು ನಮ್ಮ ಕೆಲಸವಾಗಿದೆ. ಕೆಲವು ಸುದ್ದಿ ವಾಹಿನಿಗಳು ಬರಿ  ಬೆಳಗಾವಿಯಲ್ಲಿ ನಡೆಯುವ ಮರಾಠಿ ಸಂಘಟನೆಯ ಪುಂಡಾಟಿಕೆ, ಅದಕ್ಕೆ ನಮ್ಮ ಕನ್ನಡ ಸಂಘಟನೆಗಳ ಕೀಳು ಮಟ್ಟದ ಪ್ರತಿಕ್ರಿಯೆಗಳ ಬಗ್ಗೆ, ಅಲ್ಲಿ ಇಲ್ಲಿ ಕನ್ನಡರಿಗೆ, ಕನ್ನಡ ಭಾವುಟಗಳಿಗೆ ಆದ ಅವಮಾನಗಳ ಬಗ್ಗೆ ಮಾತ್ರ ಭರ್ಜರಿ ಪ್ರಸಾರಗಳನ್ನು ಮಾಡುತ್ತವೆ. ಎಲ್ಲೋ ಮಾದ್ಯಮಗಳು ತಾವು ಮಾಡಬೇಕಾಗಿರುವ ಕೆಲಸವನ್ನು ಸರಿಯಾಗಿ ಮಾಡದೆ, ಜನರಿಗೆ ಸ್ಪೂರ್ತಿಯಾಗುವ ಮತ್ತು ಒಳ್ಳೆಯ ವಿಚಾರಗಳ ಬಗ್ಗೆ ಗಮನ ಕೊಡದೆ, ಅಚ್ಚು-ಕಟ್ಟಾದ ಸಮಾಜದ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ ಎಂಬುದು ತುಂಬಾ ಬೇಸರದ ಸಂಗತಿ. ರಾಜ್ಯೋತ್ಸವದ ಆ ಒಂದು ತಿಂಗಳು ಬರಿ ಬೆಳಗಾವಿಯಲ್ಲಿ ಅಲ್ಲಿ ಕಲ್ಲು ತೂರಾಟ, ಇಲ್ಲಿ ಚಾಕು ಇರಿತ, ಬರಿ ಇಂತಹ ವಿಷಯಗಲ್ಲೇ ಮಾದ್ಯಮಗಳು ಕಾಲ ಕಳೆದು ಬಿಡುತ್ತವೆ . ಪತ್ರಿಕೆ ಮತ್ತು ಟೀವಿ ಮಾಧ್ಯಮಗಳು ಇರುವ ಸಮಸ್ಯೆಗಳಿಗೆ ಎಣ್ಣೆ ಸುರಿಯದೆ , ಸರಿಯಾದ ಚರ್ಚೆಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಾಡಿನ ಒಳ್ಳೆ ಸಾಧಕರ ಬಗ್ಗೆ , ಸಂಸ್ಕೃತಿಯ ಬಗ್ಗೆ ಜನರಿಗೆ ಸುದ್ದಿ ಹಾಗು ದೃಶ್ಯ ಪ್ರಸಾರಗಳನ್ನು ಮಾಡಬೇಕು.ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವ, ಭಾಷೆಯ ಸೊಗಡನ್ನು ಪ್ರಚುರ ಪಡಿಸುವ ಕಾರ್ಯ ಕ್ರಮಗಳಿಗೆ ಹೊತ್ತು ನೀಡಬೇಕು, ರಾಜ್ಯದ ಏಳಿಗೆಗೆ ಪೂರಕವಾಗುವ ಚರ್ಚೆಗಳಿಗೆ ಪತ್ರಿಕಾ ಮತ್ತು TV ಮಾದ್ಯಮಗಳು ವೇದಿಕೆ ಆಗಬೇಕು, ನಾಡಿನ ಜನತೆಯ ಕಷ್ಟ ಸುಖಗಳ ಬಗ್ಗೆ ಸರ್ಕಾರಕ್ಕೆ ಅರಿವು ಮೂಡಿಸಬೇಕು, ಸಮಾಜದ ನಿಜವಾದ ದ್ವನಿ ನಮ್ಮ ಮಾಧ್ಯಮಗಳಾಗಬೇಕು. ಆದರೆ ಆ ಕೆಲಸ  ನಿಜವಾಗಿಯೂ ಮಾಧ್ಯಮಗಳಿಂದ ಆಗುತ್ತಿದೆಯೇ ??? .
             ಒಬ್ಬ ಸಾಮಾನ್ಯ ಕನ್ನಡಿಗನಾದ ನನಗೆ ಅನಿಸಿದ್ದು , ಆ ದಿನ ಬರಿ ಮರಾಠಿ-ಮಲೆಯಾಳಿಗಳನ್ನೂ , ತಮಿಳರನ್ನೂ , ತೆಲುಗರನ್ನೂ ಕನ್ನಡ ಮಾತನಾಡುವುದಿಲ್ಲ, ನಮ್ಮ ರಾಜ್ಯಕ್ಕೆ ಬಂದು ಕನ್ನಡದಲ್ಲಿ ಮಾತನಾಡುವುದಿಲ್ಲ , ಅವರು ನಮ್ಮ ದ್ವೇಷಿಗಳು , ಎಂದೆಲ್ಲ ದೂಷಿಸದೆ, ನಾವು ಮಾಡಬೇಕಾಗಿರುವ ಸಾಮಾನ್ಯ ಮತ್ತು ಸರಳ ಕೆಲಸಗಳ ಬಗೆ ಗಮನ ಕೊಡಬೇಕು. ಒಬ್ಬ ಕನ್ನಡಿಗ  ಮತ್ತೊಬ್ಬ ಕನ್ನಡಿಗನನ್ನು ಪ್ರೀತಿಸುವುದು-ಪ್ರೋತ್ಸಾಹಿಸುವುದು, ಕನ್ನಡಿಗ ಕನ್ನಡ ಪುಸ್ತಕಗಳನ್ನು ಓದುವುದು , ಕನ್ನಡಿಗ ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವುದು, ಪರ-ಭಾಷಿಗರಿಗೆ ನಮ್ಮ ರಾಜ್ಯದ ಬಗ್ಗೆ ,ನಮ್ಮ ಭಾಷೆಯ ಬಗ್ಗೆ,ನಮ್ಮ ರಾಜ್ಯದ ಇತಿಹಾಸದ ಬಗ್ಗೆ ಹೆಮ್ಮೆಯಿಂದ ಒಂದಿಷ್ಟು ಮಾಹಿತಿ ಕೊಡುವುದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ಪ್ರಚಾರ ಮಾಡುವುದು. ಬೇರೆ ಬೇರೆ ಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ , ಅನೇಕ ಸಾದನೆಗಳನ್ನು ಮಾಡಿರುವ ಸಾಧಕರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನಾಡಿ ಸುತ್ತ ಮುತ್ತಲಿನ ಜನರಿಗೆ ಅವರ ಬಗ್ಗೆ ತಿಳಿಸುವುದು. ಕನ್ನಡ ಸಾಹಿತ್ಯ-ಸಂಗೀತದ  ಬಗ್ಗೆ ನಮ್ಮ ಯುವ ಜನಾಂಗಕ್ಕೆ ಆಸಕ್ತಿ  ಕುಗ್ಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ನಾವು ಆ ಆಸಕ್ತಿಯನ್ನು, ಅಭಿರುಚಿಯನ್ನು ಬೆಳೆಸಿಕೊಳ್ಳುವತ್ತ ಕಾರ್ಯಪ್ರವ್ರುತ್ತಾರಾಗಬೇಕು. ಇದೆಲ್ಲಕ್ಕೂ ಮೊದಲು ನಾವು ಮೊದಲು ಕನ್ನಡ ಭಾಷೆಯನ್ನೂ ಸ್ವಚ್ಚವಾಗಿ ,ಅಚ್ಚುಕಟ್ಟಾಗಿ ಮಾತನಾಡುವುದು, ಒಳ್ಳೆ ಒಳ್ಳೆ ಕನ್ನಡ ಪುಸ್ತಕಗಳನ್ನು ಓದುವುದು ನಿಜವಾಗಿಯೂ ಮಾಡಬೇಕಾಗಿರುವ ಮೊದಲ ಕೆಲಸವಾಗಿದೆ. ಕನ್ನಡ ಭಾಷೆಯ ಬಗ್ಗೆ ಒಳ್ಳೆಯ ಭಾವನೆ ,ಸಾಹಿತ್ಯ -ಸಂಗೀತದಲ್ಲಿ ಒಳ್ಳೆಯ ಅಭಿರುಚಿ ನಮ್ಮೆಲರಿಗೂ,ಮುಖ್ಯವಾಗಿ  ಚಿಕ್ಕ ಚಿಕ್ಕ ಮಕ್ಕಳಿಗೆ ಬಂದರೆ ನಿಜವಾಗಿಯೂ ಕನ್ನಡ ರಾಜ್ಯೋತ್ಸವದ ಉದ್ದೇಶ ಸಾಕಾರವಾಗುತ್ತದೆ. ಇದನ್ನು ಸಾರ್ಥಕಗೊಳಿಸುವ ಜವಾಬ್ದಾರಿ ನಮ್ಮೆಲರ ಮೇಲೆ ಇದೆ. ನಾವು ಆ ದಾರಿಯಲ್ಲಿ ಸಾಗಲೇ ಬೇಕಾಗಿದೆ.

 ಸ್ನೇಹಿತರೆ ಮೇಲೆ ಹೇಳಿರುವ ಎಲ್ಲ ಅಂಶಗಳು ಕೇವಲ ನನ್ನ ಭಾವನೆಗಳು ಮತ್ತು ವಯ್ಯಕ್ತಿಕ ಅನಿಸಿಕೆಗಳು ಮಾತ್ರ , ನಾ ಇಲ್ಲಿ ಯಾರ ಕನ್ನಡ ಅಭಿಮಾನ, ಪ್ರೀತಿ  ಮತ್ತು ಬದ್ದತೆಯನ್ನು ಪ್ರಶ್ನಿಸಿಲ್ಲ, ಇವೆಲ್ಲ ನನ್ನ ಆಲೋಚನೆಗಳು ಅಷ್ಟೇ.

ನಿಮಗಾಗಿ
ನಿರಂಜನ್

2 ಕಾಮೆಂಟ್‌ಗಳು: