ಸೋಮವಾರ, ಮೇ 30, 2011

Travel experience

                  ನಮ್ಮ ಕಾಕನ್ ಮದ್ವೆ ಮತ್ತು ಉತ್ತರ ಕರ್ನಾಟಕ ಪ್ರವಾಸ...

ಅಂತು ಇಂತು ನಮ್ಮ ಸ್ನೇಹಿತ  ಕಾಕನ ( ವೀರೇಶ್ ) ಮಧುವೆಯ ದಿನ ಬಂದೆ ಬಿಟ್ಟಿತ್ತು, ದೂರದ ಅಂದರೆ ಉತ್ತರ ಕರ್ನಾಟಕ ಒಂದು " ಕೊಡೇಕಲ್ಲ " ಎಂಬ ಹಳ್ಳಿಯಲ್ಲಿ  ನೆಡೆಯುತ್ತಿದ್ದ ಈ ಮಧುವೆಗೆ ಬಾರಿ ಜನ ಸಮ್ಮೂಹವೆ ನೆರೆದಿತ್ತು. ಸುರಿಯುವ ಹುರಿ ಬಿಸಿಲು, ಎತ್ತ ನೊಡಿದರು ಕಲ್ಲಿನಿಂದ ಕಟ್ಟಿದ್ದ ಮಾಳಿಗೆ ಮನೆಗಳು, ಮನೆಯ ಮುಂದೆ ನಿಂತುಕೊಂಡು ವಧು-ವರರಿಗೆ ಅವರು ಅಶೀರ್ವದಿಸುತ್ತಿದ್ದ ರೀತಿ , ವಧು-ವರರನ್ನು ಅಲ್ಲಿಯ ಸಂಪ್ರದಾಯದಂತೆ ಸಿಂಗರಿಸಿದ್ದ ಬಗೆ ನಿಜವಾಗಿಯು ವಿಬಿನ್ನವಾಗಿತ್ತು. ಬೆಂಗಳೂರಿಂದ ಹೋಗಿದ್ದ ನಮಗಿದೊಂದು ಬೇರೆಯ ತರಹನಾದ ಪರಿಸರವೆ ಆಗಿತ್ತು. ಅತಿಯಾದ ಆ ಬಿಸಿಲು ಇದ್ದರು ಸಹ ಕಾಕನ ಮಧುವೆಯ ಬರದಲ್ಲಿ ನಾವು ಸುರಿಯುವ ಬಿಸಿಲನ್ನು ಲೆಕ್ಕಿಸದೆ, ಬೆವೆರನ್ನು ಹರಿಸಿ,ಮಧುವೆಯಲ್ಲಿ , ಮೆರವಣಿಗೆಗಳಲ್ಲಿ ಭಾಗಿಯಾಗಿ ನಗಲೊಲ್ಲದ ಕಾಕನ ಮುಖದಲ್ಲಿ  ಆಗೊಮ್ಮೆ ಈಗೊಮ್ಮೆ ನಗು ತರಿಸುತ್ತ ಮಧುವೆ ಮಾಡಿ ಮುಗಿಸಿಯೇ ಬಿಟ್ಟೆವು :). ಮಹೂರ್ತದ ನಂತರ ಕಾಕ ಮತ್ತು ಅವರ ಧರ್ಮಪತ್ನಿ ಮಿಸಸ್ ಕಾಕ ಅವರನ್ನು ಮಾತಾಡಿಸಿಕೊಂಡು ಉತ್ತರ ಕರ್ನಾಟಕ ಶೈಲಿಯ ಮಧುವೆಯ ಊಟ ,ಸಜ್ಜೆ ರೊಟ್ಟಿ, ಪೂರಿ, ಕಾಳು ಪಲ್ಯ,ಲಾಡು, ಅನ್ನ -ಸಾಂಬಾರು , ಮಜ್ಜಿಗೆ ಎಲ್ಲವನ್ನು ಗಡತ್ತಾಗಿ ಸೇವಿಸಿ, ನಮ್ಮ ಪೂರ್ವ ನಿಯೋಜಿತ  ಉತ್ತರ ಕರ್ನಾಟಕ  ಪ್ರವಾಸಕ್ಕೆ  ಸಜ್ಜಾದೆವು.  

                                                        
              ಇದಕ್ಕೂ ಮೊದಲು ಮಧುವೆ ನೆಡೆದ "ಕೊಡೇಕಲ್ಲ" ಗ್ರಾಮದ ಬಸವಣ್ಣನ ದೇವಸ್ತಾನ ಮತ್ತು ಲಿಂಗಸೂರಿನಿಂದ ಈ ಊರಿಗೆ ಬರುವ ದಾರಿಯಲ್ಲಿ ನಾವು ನೋಡಿದ ಮೌನೇಶ್ವರ ದೇವಾಲಯಗಳು ಪಕ್ಕಾ ಹಿಂದೂ ದೇವಾಲಯಗಳಾದರೂ ಸಹ, ಅವು ಇದ್ದದ್ದು ಮಾತ್ರ ಮುಸ್ಲಿಮ್ ದೇವಾಲಯಗಳಂತೆ. ಇಂಡೊ-ಇಸ್ಲಾಮಿಕ್ ಶೈಲಿಯೆಂದರೆ ತಪ್ಪಾಗುವುದಿಲ್ಲ. ಅವು ಈ ರೀತಿ ಕಟ್ಟಿರುವುದಕ್ಕೆ ಕಾರಣಗಳು ಅನೇಕ ಇವೆ. ಕೆಲವು ಇತಿಹಾಸಕಾರರ ಪ್ರಕಾರ ಇವು ಸುಲ್ತಾನರ ಆಳ್ವಿಕೆಯ ಸಮಯದಲ್ಲಿ , ಮುಸ್ಲಿಮರ ಪ್ರಭಾವದಿಂದ ಈ ರೀತಿಯಾಗಿ ಬದಲಾವಣೆಗೊಂಡಿರುವುವು ಎಂಬ ವಾದ ಒಂದುಕಡೆ, ಆದರೆ ಇನ್ನೊಂದೆಡೆ ಇದು ಹಿಂದೂ-ಮುಸ್ಲಿಮರ ಭಾವೈಕೈತೆಯ ಸಂಕೇತ ಎಂಬ ಇತಿಹಾಸವು ಇದೆ. ಅದೇನೇ ಇರಲಿ ನಾವು ಅವುಗಳನ್ನು ನೋಡಿ ಆಶ್ಚರ್ಯಚಕಿತರಾದದಂತು ನಿಜ.  ಸಮಯ ಮಧ್ಯಾನ 2.30 ರ ಸಮಯ. ನಾವೆಲ್ಲರೂ ನಮ್ಮ ಕಾಕನ ಸಂಭಂದಿಕರಿಗೆ ನಮಸ್ಕಾರಗಳನ್ನು ತಿಳಿಸಿ , ಕೊಡೇಕಲ್ಲ ಗ್ರಾಮಕ್ಕೆ ವಿಧಾಯ ಹೇಳಿ, ನಾವು ಹೊರಟಿದ್ದು ಬಿಜಾಪುರದ ಕಡೆಗೆ. 

                                                        
           ಬಿಜಾಪುರ ಆ ಗ್ರಾಮದಿಂದ ಸುಮಾರು 100 km ಗಳು. ಪ್ರಯಾಣವನ್ನು ಆರಂಬಿಸಿದಾಗ, ಹೊರಗಡೆ ಉತ್ತರ ಕರ್ನಾಟಕದ ಬಾರಿ ಬಿಸಿಲು, ಗಾಡಿಯಿಂದ ಹೊಳಗೆ ನುಗ್ಗುತ್ತಿರುವ ಬಿಸಿಗಾಳಿ, ನೋಡಿದಷ್ಟು ದೂರ ಕಾಣುವ ಖಾಲಿ ಹೊಲಗಳು, ಅಲ್ಲೊಂದು ಇಲ್ಲೊಂದು ಬೇವಿನ ಮರಗಳು, ರಸ್ತೆಯ ಬದಿಯಲ್ಲಿ ಇದ್ದ ಜೀಕ್-ಜಾಲಿ ಅಥವಾ ಬಳ್ಳಾರಿ- ಜಾಲಿ, ನಮಗೆಲ್ಲ ನೀರು ಇಳಿಸುತ್ತಿದ್ದವು. ಸಂಜೆ 4.30ರ ಸಮಯಕ್ಕೆ ನಾವು ಬಿಜಾಪುರ ತಲುಪುತಿದ್ದಂತೆ ನಮಗೆ ಕಣ್ಣಿಗೆ ಕಂಡಿದ್ದು ಬಿಜಾಪುರದ "ಗೋಳಗುಮ್ಮಟ" ಬೃಹದಾಕಾರವಾದ ಆ ಬಾರಿ ಸಂಕೀರ್ಣ ನಿಜಕ್ಕೂ ನನಗೆ ಅಚ್ಚರಿ ಮೂಡಿಸುವುದರ ಜೊತೆಗೆ ನಾವು ಚಿಕ್ಕವರಾಗಿದ್ದಾಗ ಓದಿದ "ಬಿಜಾಪುರದ ಗೋಳಗುಮ್ಮಟ" ಪಾಠವನ್ನು ನೆನಪಿಸಿತು.ಆಗ ನಮಗೆ ಪಾಠ ಓದಿದಾಗ ಆದ ಅನುಭವವೇ ಈಗಲೂ ಆಯಿತು. ಒಬ್ಬ ಗೈಡ್ ಸಹಾಯಾದಿಂದ ಅಲ್ಲಿಯ ಇತಿಹಾಸವನ್ನು ತಿಳಿದು. ಅದನ್ನು ಕಟ್ಟಿದವರ ಗಟ್ಟಿತನವನ್ನು ಮೆಚ್ಚಿ , ಬಸವಣ್ಣನವರು ಐಕ್ಯವಾದ "ಕೂಡಲ-ಸಂಗಮ"ದ ಕಡೆಗೆ ಹೋಗಬೇಕೆಂದು ನಿರ್ಧರಿಸಿ, ಅಲ್ಲಿಯೇ ಇದ್ದ ಕುದುರೆಗಾಡಿ ಹೇರಿ ಬಸ್ ನಿಲ್ದಾಣಕ್ಕೆ ಹೋಗುವ ದಾರಿಯುದ್ದಕ್ಕೂ ಒಂದು ಕಡೆ ಕುದುರೆಗೆ ಹಿಂಸೆ ಕೊಡುತ್ತಿದ್ದ ಪಾಪಪ್ರಜ್ಞೆ, ಮತ್ತೊಂದೆಡೆ ಕುದುರೆಗಾಡಿ ಚಾಲಕರ ಹೊಟ್ಟೆಪಾಡು ಎಂಬ ಧರ್ಮಸಕಟ. ಇದನ್ನು ಯೋಚಿಸುತ್ತಿರುವಷ್ಟರಲ್ಲಿ ನಿಲ್ದಾಣವೂ ಬಂದೆ ಬಿಟ್ಟಿತ್ತು. ಮೊದಲು ಗಾಡಿಯಿಂದಿಳಿದು , ಅಲ್ಲಿಯೇ ಇದ್ದ ಹೊಟೆಲ್ನಲ್ಲಿ ಟೀ ಕುಡಿದು, ಕೂಡಲ ಸಂಗಮಕ್ಕೆ ಬಸ್ ಹತ್ತಿ ಹೊರಟಾಗ ನಮ್ಮ ಪುಣ್ಯವೋ , ಅಲ್ಲಿಯ ಜನರ ಪುಣ್ಯವೋ ತುಂತುರು ಮಳೆ ಬರ ತೊಡಗಿತು. ಸುಮಾರು 2.30 ಗಂಟೆಗಳ ಪ್ರಯಾಣ ಮುಗಿಸಿ ಕೂಡಲ ಸಂಗಮ ತಲುಪಿದಾಗ ನಿಜಕ್ಕೂ ವಾತಾವರಣ ತಂಪಾಗಿ ಬಿಸಿಲಿನಿಂದ ದಗೆ ಮತ್ತು ಸೆಕೆ ಇಂದ ಕೊಂಚ ರಿಲೀಫ್ ನೀಡಿತ್ತು. ಅಷ್ಟೊತ್ತಿಗೆ ರಾತ್ರಿ 9 ಗಂಟೆ, ನಾವು ಅಲ್ಲಿಯೇ ಇದ್ದ ಯಾತ್ರಿ ನಿವಾಸದಲ್ಲಿ ರೂಮ್ ಬಾಡಿಗೆ ಪಡೆದು , ಚೆನ್ನಾಗಿ ನಿದ್ದೆ ಮಾಡಿ ಬೆಳ್ಳಿಗ್ಗೆ 7 ರ ಹೊತ್ತಿಗೆ ಸಂಗಮದ ಕಡೆ ವಾಕ್ ಮಾಡಿದ್ದಂತೂ ಒಂದು ಸುಂದರ ಅನುಭವ. ಒಂದು ಕಡೆ ಕೃಷ್ಣ ಮತ್ತು ಘಟಪ್ರಭ ನದಿಗಳು, ಮತ್ತೊಂದೆಡೆ ಮಲಪ್ರಭ ನದಿ, ಸುತ್ತಲು ಮರ ಗಿಡಗಳು, ಆಗತಾನೆ ಬಂದು ಹೋಗಿದ್ದ ಮಳೆ, ಇನ್ನೂ ಮರಗಳ ಎಲೆಗಳಿಂದ ಬೆಳುತಿದ್ದ ಹನಿಗಳು ಕೂಡಲ ಸಂಗಮಕ್ಕೆ ಒಂದು ಎಫೆಕ್ಟ್ ನೀಡಿದ್ದವು. ದೇವಾಲಯವನ್ನೆಲ್ಲ ವೀಕ್ಷಿಸಿ, ದೋಸೆ, ಅಜ್ಜಿ ಮಾಡಿದ್ದ ಗಟ್ಟಿ ಮೊಸರು, ತೋಯಿಸಿದ ಒಗ್ಗರಣೆ ಮಂಡಕ್ಕಿ- ಮೆಣಸಿನಕಾಯಿ ತಿಂದು, ನಾಲಿಗೆ ತುದಿ ಚುರ್ ಅನ್ನುವಂತೆ ಬಿಸಿ ಚಹಾ ಕುಡಿದು ಅಲ್ಲಿಂದ ನಾವು ಹೊರಟು,  ಐಹೊಳೆ,ಪಟ್ಟದಕಲ್ಲು,ಮಹಕೂಟ,ಬನಶಂಕರಿ ಮತ್ತು ಬಾದಾಮಿ ನೋಡಲು ಅಲ್ಲಿಯೇ ಇದ್ದ ಒಂದು ವಾಹನವನ್ನು ಬಾಡಿಗೆ ಮಾಡಿಕೊಂಡು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.


    
  







    


            ನಿಜವಾಗಿಯೂ ನಮಗೆ ಕರ್ನಾಟಕದ ಇತಿಹಾಸ ತಿಳಿಯಬೇಕಾದರೆ, ಇಲ್ಲಿ ಆಡಳಿತ ಮಾಡಿದ ರಾಜ-ಮಹಾರಾಜರ ಸಾಧನಗಳನ್ನು ತಿಳಿಯಲು ಐಹೊಳೆಯನ್ನು ನಾವು ನೋಡಲೇ ಬೇಕು. ಹೇಗೆ ನಮ್ಮಲ್ಲಿರುವ ದೇವಾಲಯಗಳು, ಅರಮನೆಗಳು, ಕೋಟೆ-ಕೊತ್ತಲಗಳು ಬೆಳೆದು ಬಂದವು, ಹೇಗೆ ಶಿಲ್ಪಿಗಳು, ಕಲಾವಿದರು ತಮ್ಮ ಕಲೆಯಲ್ಲಿ, ಕೆಲಸದಲ್ಲಿ ನಿಪುಣತೆ ಸಾಧಿಸಿದರು ಎಂಬುದಕ್ಕೆ ಉತ್ತರ ನಮಗೆ ಐಹೊಳೆಯಲ್ಲಿ ಸಿಗುತ್ತದೆ. ಕ್ರಿ.ಶ 3,4,5 ಶತಮಾನದಲ್ಲೇ ಚಾಲುಕ್ಯ ಹಾಗೂ ಹೊಯ್ಸಳರು ಕಟ್ಟಿದ ಆ ದೇವಾಲಯಗಳು, ನಿಜಕ್ಕೂ ಅದ್ಭುತವಾಗಿವೆ. ಇವೆ ಮುಂದೆ ಹಂಪಿಯ ವಿಜಯನಗರ ದೇವಾಲಗಳಿಗೂ, ಬೇಲೂರು-ಹಳೆ ಬೀಡುಗಳಿಗೂ ಸ್ಪೂರ್ತಿಯಾಗುತ್ತವೆ.  ಒಂದು ರೀತಿಯಲ್ಲಿ ಐಹೊಳೆ ಒಂದು ದೇವಾಲಯಗಳ ಕಟ್ಟುವ ಪ್ರಯೋಗಾಲಯದಂತೆ ಇತ್ತೆಂದು ಇತಿಹಾಸ ಹೇಳುತ್ತದೆ. ಅಲ್ಲಿ ಎತ್ತ ನೋಡಿದರು ಕಾಣುವುದು ಸುಂದರ ದೇವಾಲಯಗಳು  ಮಾತ್ರ. ಹೊಲಗಳ ನಡುವೆ, ಊರಿನ ಮದ್ಯ,  ಮನೆ-ಮನೆಗಳ ನಡುವೆಯೂ ಬರಿ ದೇವಾಲಯಗಳು. ನಿಜ ಹೇಳಬೇಕೆಂದರೆ ಇವುಗಳನ್ನೆಲ್ಲ ನೋಡಲು ಕೆಲ ದಿನಗಳೆ ನಮಗೆ ಬೇಕಾಗಬಹುದು.ಅವಸರದಲ್ಲೇ ಕೆಲವು ದೇವಾಲಯಗಳನ್ನು ಮಾತ್ರ ನೋಡಿ , ಅವುಗಳ ಬಗ್ಗೆ ತಿಳಿದುಕೊಂಡು ನಾವು ಅಲ್ಲಿಂದ ಪಟ್ಟದಕಲ್ಲಿ ಗೆ ನೆಡೆದೆವು.
          ಇಹೊಳೆ ನಂತರ ನಾವು ನೋಡಿದ ಪಟ್ಟದಕಲ್ಲು,ಮಹಕೂಟ ಮತ್ತು ಬಾದಾಮಿಗಳು ಕೂಡ ಅಷ್ಟೇ ಸುಂದರ ಮತ್ತು ಶ್ರೀಮಂತ ಇತಿಹಾಸವುಳ್ಳ ಜಾಗಗಳು. ಇವುಗಳ ಬಗ್ಗೆ ಅನೇಕರು ಬರೆದಿದ್ದಾರೆ, ಅವುಗಳ ವೈಭವವನ್ನು ವರ್ಣಿಸಿದ್ದಾರೆ , ನಿಜಕ್ಕೂ ನಮಗೆ ಆ ದೇವಾಲಯಗಳನ್ನು ನೋಡಿ ತುಂಬಾ ಸಂತೋಷವಾಯಿತು ಹಾಗೆ ಇನ್ನೂ ಇವುಗಳ ಬಗ್ಗೆ ತಿಳಿಯುವ ಹಂಬಲವು ಕೂಡ  ಹೆಚ್ಚಾಯಿತು.
       ಸ್ನೇಹಿತರೆ ನಿಜ ಹೇಳಬೇಕೆಂದರೆ, ಆ ದೇವಾಲಯಗಳನ್ನು ವರ್ಣಿಸಲು ಅಸಾಧ್ಯ. ಅಷ್ಟೊಂದು ಸುಂದರವಾದ ದೇವಾಲಯಗಳು ನಿಜಕ್ಕೂ ನಮ್ಮ ನಾಡಿನಲ್ಲಿ ಇರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಆ ಕಲಾವಿದರ ಬುದ್ದಿವಂತಿಕೆ,ಕೌಶಲ್ಯ ಎಲ್ಲವೂ ನಮ್ಮ ಯೋಚನೆಗೂ ನಿಲುಕದಂತವು . ಇವೆಲ್ಲ ಸೇರಿ ನಮ್ಮ ಕರ್ನಾಟಕಕ್ಕೆ ಒಂದು ರೀತಿಯ ಸೊಬಗು ಮತ್ತೆ ಗೌರವ ತಂದುಕೊಟ್ಟಿರುವುದಂತೂ ನಿಜ. ಆದರೆ ಎಲ್ಲೋ ಒಂದು ಕಡೆ ನಾವು ಅವುಗಳನ್ನು ಸಂರಕ್ಷಿಸುವುದರಲ್ಲಿ ಸಂಪೂರ್ಣ ವಿಪಲರಾಗಿದ್ದೇವೆ ಮತ್ತು ಅವುಗಳನ್ನು ಜನರಿಗೆ ಪರಿಚಯಿಸುವುದರಲ್ಲಿ ಕೂಡ ನಮ್ಮ ಪ್ರವಾಸೋದ್ಯಮ ಇಲಾಖೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಹುಪಾಲು ಪ್ರವಾಸಿಗರ ನೋವಾಗಿದೆ. ಅದೇನೇ ಇರಲಿ ನಾವಂತೂ ಈ ಪ್ರವಾಸದಿಂದ ತುಂಬಾ ತಿಳಿದುಕೊಂಡೆವು ಎಂಬುದರಲಿ ಎರೆಡು ಮಾತಿಲ್ಲ. ನಿಜಕ್ಕೂ ಈ ಪ್ರವಾಸ ನಾ ಮಾಡಿದ ಅನೇಕ ಪ್ರವಾಸಗಳಿಗಿಂತ ಬಿನ್ನಾವೂ ಆಗಿತ್ತು. ಬರಿ ಮನೋರಂಜನೆಗಾಗಿ ಮಾಡುತಿದ್ದ ಪ್ರವಾಸಕ್ಕು ಹಾಗೂ ಇದಕ್ಕೂ ತುಂಬಾ ವ್ಯತ್ಯಾಸವು ಇತ್ತು.  ಬಾದಾಮಿ ನೋಡುವಷ್ಟರಲ್ಲಿ  ಸಂಜೆಯಾಗುತ್ತಾ ಬಂದಿತ್ತು. ನಾವು ಅಲ್ಲಿಂದ ಬಾಗಲಕೋಟೆಗೆ ಬಂದು ಅಲ್ಲಿಂದ ಬಸ್ಅಲ್ಲಿ ಬೆಂಗಳೂರಿಗೆ ಬರಬೇಕಿತ್ತು. ಹಾಗಾಗಿ ಸಂಜೆ ೬ ಕ್ಕೆ ಅಲ್ಲಿಂದ ಹೊರಟು, ಬಾಗಲಕೋಟೆಯಲ್ಲಿ ರೊಟ್ಟಿ ಊಟ ಮುಗಿಸಿ , ಬೆಂಗಳೂರಿನ ಕಡೆ ಹೊರಟೆವು.




    









ನಿಮಗಾಗಿ.......
ನಿರಂಜನ್

1 ಕಾಮೆಂಟ್‌: