ಸೋಮವಾರ, ಅಕ್ಟೋಬರ್ 5, 2015

ಪರ-ವಿರೋದ

                         
                                                  ಚರ್ಚೆಗಳು ....                                                                      

        ತ್ತೀಚಿನ ದಿನಗಳಲ್ಲಿ ನಾವೆಲ್ಲರೂ ರಾಜಕೀಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಯಾವ ರಾಜಕೀಯ ಪಕ್ಷ ನಮ್ಮ ಚಿಂತನೆಗೆ ಹತ್ತಿರವಾಗಿದೆಯೋ ಆ ಪಕ್ಷಗಳನ್ನು ನಾವು ಬೆಂಬಲಿಸುತ್ತೇವೆ. ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿದಿನವೂ ಯಾವುದಾದರು ಒಂದು ಸಮಾಜದ ವಿಷಯಗಳನ್ನು ಚರ್ಚೆಗೆ ತೆಗೆದುಕೊಂಡು, ಆ ವಿಷಯದ ಮೇಲೆ ತಮ್ಮ ನಿಲುವನ್ನು ವ್ಯಕ್ತಪಡಿಸಿ, ಆ ವಿಷಯಗಳ ಮೇಲೆ ಪಕ್ಷ-ಪಕ್ಷಗಳ ಮದ್ಯ  ಚರ್ಚೆಗಳನ್ನು ಆರಂಭಿಸುತ್ತವೆ. ಆ ಪಕ್ಷಗಳ   ಬೆಂಬಲಿಗರಾದ ನಾವು ಕೂಡ ನಮ್ಮದೇ ರೀತಿಯಲ್ಲಿ ಆ ವಿಷಯಗಳ ಬಗ್ಗೆ  ಸಮಾಲೋಚನೆ ಮಾಡುತ್ತೇವೆ. ಒಮ್ಮೊಮ್ಮೆ ಚರ್ಚೆಯಲ್ಲಿ ವಿಷಯದ ಪರವಿರುತ್ತೇವೆ , ಕೆಲವೊಮ್ಮೆ ವಿಷಯದ ವಿರುದ್ದವಿರುತ್ತೇವೆ. ಈ ರೀತಿಯ ಎಲ್ಲ ಚರ್ಚೆ-ಸಮಾಲೋಚನೆಗಳು ಪ್ರಜಾಪ್ರಭುತ್ವದಲ್ಲಿ ಬಹಳ ಆರೋಗ್ಯಕರ ಪಕ್ರಿಯೆ.

ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಚರ್ಚೆಗಳೆಲ್ಲ ಆರೋಗ್ಯಕರವಾಗಿವೆಯಾ ಎನ್ನುವ ಪ್ರಶ್ನೆ ನನಗೆ ಕಾಡಲು ಶುರುವಾಗಿದೆ. ನಮ್ಮ ರಾಜಕೀಯ ಪಕ್ಷಗಳು ಸಾಮಾಜಿಕ ಕಳಕಳಿ ಇರುವ ವಿಷಗಳ ಮೇಲೆ ಚರ್ಚೆಗಳನ್ನು  ಪ್ರಾರಂಭಿಸುತ್ತಿವೆಯಾ ? ಅದೇ ರೀತಿಯಾಗಿ ಆ ಪಕ್ಷಗಳ ಬೆಂಬಲಿಗರಾದ ನಾವು ಕೂಡ ಅದೇ ವಿಷಯಗಳ ಬಗ್ಗೆ  ಪ್ರಾಮಾಣಿಕವಾಗಿ ನಮ್ಮ ನಿಲುವುಗಳನ್ನು ವ್ಯಕ್ತಪಡಿಸುತ್ತೇದ್ದೆವೆಯೇ ? ನಮ್ಮ ಚರ್ಚೆಗಳು ಸಾರ್ವಜನಿಕೆ ವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ , ಮಾಧ್ಯಮಗಳಲ್ಲಿ ಸರಿಯಾದ ಹಾದಿಯಲ್ಲಿ ಸಾಗುತ್ತಿವೆಯೇ ? ಎಂದು ನಮ್ಮನ್ನು  ನಾವೇ  ಪ್ರಶ್ನೆ ಮಾಡಿಕೊಳ್ಳುವಂತಹ ವಾತಾವರಣವೂ ಕೂಡ ಈಗ ಹುಟ್ಟಿಕೊಂಡಿದೆ ಎಂಬುದು ನನ್ನ ಭಾವನೆ. 

ರಾಜಕೀಯ ಪಕ್ಷಗಳು ಯಾವಗಲು ತಮ್ಮ ರಾಜಕೀಯ ಬೇಳೆ  ಬೇಯಿಸಿಕೊಳ್ಳಲು ಸಾಮಾಜಿಕ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತವೆ. ಇದು ನಮಗೆ ಗೊತ್ತಿರುವ ಸಹಜ ವಿಷಯ. ಆ ವಿಷಯಗಳಿಗೆ ತಾತ್ವಿಕ ಅಂತ್ಯ ಯಾವ ರಾಜಕೀಯ ಪಕ್ಷಕ್ಕೂ, ಯಾವ ಕಾಲಕ್ಕೂ ಬೇಕಾಗಿರುವುದಿಲ್ಲ. ಆದರೆ ನಾವು ಆ ಪಕ್ಷಗಳ ಬೆಂಬಲಿಗರು ಎಂಬ ಒಂದೇ ಕಾರಣಕ್ಕೆ ನಮ್ಮ ಪಕ್ಷಗಳು ಮಾಡಿದ್ದನ್ನೆಲ್ಲ ಸಮರ್ಥಿಸಿಕೊಳ್ಳುವುದು, ವಿರೋದ ಅಭಿಪ್ರಾಯ ವ್ಯಕ್ತಪಡಿಸುವ ಬೇರೆಯವರನ್ನು  ನಿಂದಿಸುವುದು, ಮೂದಲಿಸುವುದು ಅದೆಷ್ಟು ಸರಿ. ಚರ್ಚೆಗಳೆಂದರೆ ವಿಷಯಗಳ  ಪರ-ವಿರೋದ ಸಹಜ ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಬಾಯಿಗೆ ಬಂದಂತೆ ಅರಚುವುದು, ನಮ್ಮ ಪಕ್ಷ ಮಾಡಿದ್ದೆಲ್ಲ ಸರಿ , ನಿನ್ನ ಪಕ್ಷ ಏನು ಮಾಡಿದರು ತಪ್ಪು, ನಮ್ಮ ನಾಯಕನೊಬ್ಬನೆ ಸರಿ , ನಿಮ್ಮ ನಾಯಕ ನೀಚ ಎನ್ನುವ ಚರ್ಚೆಗಳು ನಿಜವಾಗಿಯೂ ನಮ್ಮ ದೇಶದ ಏಳಿಗೆಗೆ ಸಹಕಾರಿಯಲ್ಲ. 

ಬಹುದಿನಗಳಿಂದ ಜಾತಿ ರಾಜಕೀಯ ಮಾಡುತ್ತಿದ್ದ ಪಕ್ಷಗಳು ಈಗ ಧರ್ಮ ರಾಜಕೀಯಕ್ಕೂ ಇಳಿದಿವೆ. ಒಂದು ಪಕ್ಷ ತಾನೇ ಒಂದು ಧರ್ಮದ ರಕ್ಷನಂತೆ ಬಿಂಬಿಸಿಕೊಂಡರೆ , ಮತ್ತೊಂದು ಪಕ್ಷ ಇನ್ನೊಂದು ಧರ್ಮ ಅದೇ ಪಕ್ಷಕ್ಕೆ ಸೇರಿದ್ದು ಬೇರೆ ಯಾರು ಕೂಡ ಈ ಧರ್ಮದ  ಬಗ್ಗೆಯೂ ಮಾತನಾಡಬಾರದು ಎನ್ನುತ್ತಿವೆ. ಇದು ಕೇವಲ ಕೆಟ್ಟ ರಾಜಕೀಯವಲ್ಲವೇ ಮತ್ತೇನು ? ಈ ಪಕ್ಷಗಳನ್ನು ಹಿಂಬಾಲಿಸುವ ನಾವು ಸಾಮಾಜಿಕ ಜಾಲತಾಣಗಳಲ್ಲಿ ಜಾತಿ-ಧರ್ಮದ ಬಗ್ಗೆ ಕೀಳು ಮಟ್ಟದ ಚರ್ಚೆಗಳಲ್ಲಿ ತೊಡಗುತ್ತೇವೆ. ಸಾಮಾಜಿಕ ಜಾಲತಾಣಗಳನ್ನು  ನಾವು ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳದೆ ವಿಷಯ ವಿರೋದಿಗಳನ್ನು ನಿಂದಿಸಲು, ಧರ್ಮವೆನ್ನುವ ಸೂಕ್ಷ್ಮ ವಿಷಯದಲ್ಲಿ ಮತ್ತೊಬ್ಬರ ನಂಬಿಕೆಗೆ ದಕ್ಕೆ ತರಲು, ಶಾಂತಿ ಕದಡುವ ಸಲ್ಲದ ಚರ್ಚೆಗಳನ್ನು ಮಾಡಲು, ಸ್ನೇಹಿತರನ್ನು ಕೆರಳಿಸಲು , ಪಕ್ಷಗಳ ನಡುವೆ, ಜನರ ನಡುವೆ , ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತಲು ಬಳಸಿಕ್ಕೊಳ್ಳುತ್ತಿಲ್ಲವೇ ? 

ವಿಷಯ ಅದೆಷ್ಟೇ ಸೂಕ್ಷ್ಮವಾಗಿದ್ದರು ಅದರ ಮೇಲೆ ಚರ್ಚೆಯಾಗಬೇಕು ನಿಜ, ಆದರೆ ಸಾರ್ವಜನಿಕ ಚರ್ಚೆಗಳು ಇನ್ನೊಬ್ಬರ ಭಾವನೆಗಳನ್ನು ಕೆರಳಿಸುವ ಮಟ್ಟಕ್ಕೆ ಇಳಿಯಬಾರದು. ನಾನೇ ಸರಿ, ನನ್ನ ಆಲೋಚನೆಯಷ್ಟೇ  ಶ್ರೇಷ್ಠ,  ನನ್ನ ಪಕ್ಷವೇ ನಿಜವಾದ ರಾಜಕೀಯ ಪಕ್ಷ, ನನ್ನ ನಾಯಕನೇ ನಿಜವಾದ ದೇಶಭಕ್ತ ಬೇರೆಯವರೆಲ್ಲ ಧರ್ಮ-ರಾಷ್ಟ್ರ ವಿರೋದಿಗಳು, ನನ್ನ ವಿಷಯಗಳನ್ನು ನೀನು ವಿರೋದಿಸಿದರೆ ನೀನು ಕೂಡ ರಾಷ್ಟ್ರವಿರೋದಿ ಎನ್ನುವುದು ಸರಿಯಲ್ಲ. ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶವಿದೆ,  ಯಾರೇ ಚರ್ಚೆ ಆರಂಭಿಸಿದರು ಆ ವಿಷಯಗಳನ್ನು ನಾವು ಅಳೆದು-ತೂಗಿ ಆ ವಿಷಯಗಳನ್ನು  ಒಪ್ಪಬಹುದು ಇಲ್ಲದಿದ್ದರೆ ಬಿಡಬಹುದು. ಆದರೆ ಎಲ್ಲರ ಮೇಲೂ ತಮ್ಮ ಚಿಂತನೆಗಳನ್ನೇ ಏರುವುದು, ರಾಜಕೀಯ ಪಕ್ಷಗಳು ಏನು ಮಾಡಿದರು ಅವುಗಳ ಮೇಲೆ ಕುರುಡು ವಿಶ್ವಾಸ ಇಡುವುದು, ವಿಷಯ ವಿರೋದಿಗಳ ದ್ವೇಷಿಸುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ.  

ನಿಮಗಾಗಿ 
ನಿರಂಜನ್

ಸೋಮವಾರ, ಆಗಸ್ಟ್ 31, 2015

ವಿಚಾರವಾದಕ್ಕಿರುವ ಬೆಲೆಯೆಷ್ಟು ??

                                                    ವಿಚಾರವಾದಕ್ಕಿರುವ ಬೆಲೆಯೆಷ್ಟು ?? 

ಸ್ನೇಹಿತರೆ, ವಿಚಾರವಾದವೆಂದರೆ "ಯಾವುದೇ ಒಂದು ವಿಷಯವನ್ನು ಕೇವಲ ನಂಬಿಕೆಯಾಧಾರದ ಮೇಲೆ ಅರ್ಥೈಸದೆ ,  ಸಂಶೋದನೆ, ಅದ್ಯಯನ ಹಾಗು ಅದರ ಮೂಲ ಸ್ವರೂಪದ ಆಧಾರದ ಮೇಲೆ ಆ ವಿಷಯವನ್ನು ಅರ್ಥೈಸುವುದು". ಆಗ ಸಿಗುವ ವಿಷಯದ ಅರ್ಥ ಅಥವಾ ಸತ್ಯ ಕೆಲವೊಮ್ಮೆ ನಮ್ಮ ಸಾಂಪ್ರದಾಯಿಕ ನಂಬಿಕೆಗಿಂತ ಬಿನ್ನವೂ ಆಗಿರಬಹುದು, ಕೆಲವೊಮ್ಮೆ ನಮ್ಮ ನಂಬಿಕೆಗಳಿಗೆ ನಿಕಟವೂ ಇರಬಹುದು, ವಿಚಾರ ಸತ್ಯವೂ ಆಗಿರಬಹುದು ಕೆಲವೊಮ್ಮೆ ಸತ್ಯಕ್ಕೆ ದೂರವು ಇರಬಹುದು. ಅಧ್ಯಯನದ ಆಧಾರದ ಮೇಲೆ ಅನೇಕ ವಿಚಾರಗಳನ್ನು ಚರ್ಚೆಗೆ ತಳ್ಳುವುದೇ  "ವಿಚಾರವಾದ". ಈ ರೀತಿಯ ಸಿದ್ದಾಂಥವನ್ನು ನಂಬಿ ವಿಷಯಗಳನ್ನು ವಿಬಿನ್ನ ದೃಷ್ಟಿಕೋನಗಳಲ್ಲಿ ನೋಡಿ ಸತ್ಯವನ್ನು ಅರಿಯುವವರು "ವಿಚಾರವಾದಿ"ಗಳು. ವಿಚಾರವಾದಿಗಳು ಪ್ರತಿಪಾದಿಸುವ ವಿಚಾರಗಳ ಮೇಲೆ ಚರ್ಚೆಗಳು ಆಗಬೇಕೆ ವಿನಃ ವಿಚಾರವಾದಿಗಳ ಕೊಲೆಗಳಲ್ಲ.  ಚರ್ಚೆಯ ಬಳಿಕ ಆ ಸತ್ಯವನ್ನು ಒಪ್ಪಿಕೊಳ್ಳುವುದು ಬಿಡುವುದು ನಮಗೆ ಬಿಟ್ಟ ವಿಷಯ.   


           ನಮ್ಮ ಸಮಾಜದಲ್ಲಿ ಅನೇಕ ವಿಚಾರವಾದಿಗಳು ಇದ್ದಾರೆ. ಕೆಲವರ ವಾದ  ನಮಗೆ ಇಷ್ಟವಾಗಬಹುದು, ಮತ್ತೆ ಕೆಲವರಿಗೆ ಇಷ್ಟವಾಗದೆಯೂ  ಇರಬಹುದು. ಈ ರೀತಿಯ ಬಿನ್ನತೆಯನ್ನು ನಮ್ಮ ಸಮಾಜ ಹೇಗೆ ಸ್ವೀಕರಿಸುತ್ತದೆ, ಹೇಗೆ ಆ ವಿಷಯವನ್ನು ಚರ್ಚಿಸುತ್ತದೆ ಎನ್ನುವುದರ ಮೇಲೆ ನಮ್ಮ ಸಮಾಜದ ಪ್ರೌಡತೆ ತಿಳಿಯುತ್ತದೆ. ವಿಚಾರವಾದ ಕೇವಲ ವಿವಾದಗಳನ್ನು ಹುಟ್ಟಿಹಾಕದೆ , ಒಂದು ವಿಷಯಕ್ಕೆ ತಾತ್ವಿಕ ಅಂತ್ಯವನ್ನು ನೀಡಬೇಕು. ಆ ರೀತಿಯ ವಿಚಾರವಾದವನ್ನು ಪ್ರತಿಪಾದಿಸುತ್ತಿದ್ದ ಅನೇಕ ಮಹಾನ್ ವ್ಯಕ್ತಿಗಳು ಶತಮಾನಗಳಿಂದಲೂ ನಮ್ಮ ಸಮಾಜದಲ್ಲಿ ಇದ್ದಾರೆ. ಆದರೆ ನಾವು ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎಂಬುದೇ ಒಂದು ದೊಡ್ಡ ಪ್ರಶ್ನೆ . ೧೨ನೆ ಶತಮಾನದಲ್ಲಿ ಬಸವಣ್ಣ ಹಾಗು ಅನೇಕ ವಚನಕಾರರು ವಿಚಾರವಾದಿಗಳಾಗಿದ್ದರೆ, ರಾಜಾರಾಂ ಮೋಹನ್ ರೋಯ್, ದಯಾನಂದ ಸರಸ್ವತಿ ಇನ್ನು ಅನೇಕ ಮಹನೀಯರು ವಿಚಾರವಾದದ  ಪರಂಪರೆಯನ್ನು ಪ್ರಾರಂಬಿಸಿದರು. ಆದರೆ ಅವರುಗಳನ್ನು ನಮ್ಮ ಸಮಾಜ ಹೇಗೆ ನಡೆಸಿಕೊಂಡಿದೆ ಎಂದು ನಮ್ಮ ಇತಿಹಾಸವೇ ಹೇಳುತ್ತದೆ. 



            ಅದು ಆಗಿನಕಾಲ, ಆದರೆ ಈ ೨೧ನೇ  ಶತಮಾನದಲ್ಲೂ ನಾವೇಕೆ ಇಷ್ಟೊಂದು ಕುಬ್ಜರಾಗಿದ್ದೇವೆ. ವಿಚಾರವಾದಕ್ಕೆ ನಮ್ಮ ಸಮಾಜದಲ್ಲಿ ಇನ್ನೂ ಬೆಲೆಯೇ ಇಲ್ಲವೇ ?  ವಿಚಾರವಾದಿಗಳನ್ನು ದ್ವೇಶಿಸುವುದರ ಬದಲು ಅವರು ಎತ್ತುವ ವಿಷಯಗಳ ಮೇಲೆ ನಾವು ಚರ್ಚಿಸಬೇಕಲ್ಲವೇ ?  ವಿಚಾರವಾದಿಗಳಿಗೆ ನೀನು ಎಡಪಂಕ್ತೀಯ , ನೀನು ಬಲಪಂಕ್ತೀಯ ಎಂಬ ಬಣ್ಣಗಳನ್ನು ಹಚ್ಚಿ, ಅವರ ವಿಚಾರಗಳಿಂದ ವಿವಾದಗಳನ್ನು  ಮಾತ್ರ ಸೃಷ್ಟಿಸುತ್ತಿದ್ದೆವೆಯೇ ಹೊರತು ಚರ್ಚೆ ಮಾಡುತ್ತಿಲ್ಲ.  ನಮ್ಮ ಸಮಾಜ ಇನ್ನೂ ಅದೆಷ್ಟು ಕೆಳಮಟ್ಟಕ್ಕೆ ಸರಿದಿದೆ ಎಂದರೆ ವಿಚಾರವಾದಕ್ಕೆ ಧರ್ಮ ಹಾಗು ಜಾತಿಗಳ ವಿಷ ಸೇರಿಸಿ ವಿಚಾರವಾದವೇ ಸರಿಯಲ್ಲ. ವಿಚಾರವಾದಿಗಳು ಆ ಧರ್ಮ ವಿರೋಧಿಗಳು, ಈ ಜಾತಿ ವಿರೋದಿಗಳು ಎಂದು ,  ಕೆಲವರಿಗೆ  ಜೀವ ಬೆದರಿಕೆ ಹಾಕಿದರೆ , ಮತ್ತೆ ಕೆಲವರ ಕೊಲೆಗಳೇ ಆಗಿ ಹೋಗಿವೆ. 

             ವಿಚಾರವಾದಿಗಳ ವಿಚಾರ ನಿಮಗೆ ಸರಿ ಅನ್ನಿಸದಿದ್ದಲ್ಲಿ ಅವುಗಳನ್ನು ನಾವು  ನಂಬುವ ಅವಶ್ಯಕತೆಯಿಲ್ಲ. ಆದರೆ ಅವರ ಆ ವಿಚಾರ ಮಾಡುವ ಮನೋಭಾವವೇ ಸರಿ ಅಲ್ಲ ಎಂದು ನಾವೇಕೆ ಅವರನ್ನು ಕೊಲ್ಲಬೇಕು ? ಈ ರೀತಿಯಾಗಿ ನಾವು ವಿಚಾರವಾದಗಳಿಗೆ  ಋಣಾತ್ಮಕವಾಗಿ ಸ್ಪಂದಿಸಿದರೆ ನಮ್ಮ ಸಮಾಜದ ಮುಂದಿನ ಗತಿಯೇನು ?.    

           ನಮ್ಮ ದೇಶ ಹಾಗೆ,  ಹೀಗೆ ಎಂದು ಹೆಮ್ಮೆಯಿಂದ  ವಾಕ್ ಸ್ವಾತಂತ್ರದ ಬಗ್ಗೆ ಮಾತನಾಡುವ ನಾವು , ಒಂದುಕಡೆ "ಸತ್ಯವೇ ದೇವರು" ಎಂದು  ಹೇಳಿದರೆ , ಮತ್ತೊಂದೆಡೆ  "ಸಿಹಿ ಸುಳ್ಳನ್ನಾದರು ಹೇಳು ಕಟು ಸತ್ಯವನ್ನು ಹೇಳಬೇಡ" ಎನ್ನುತ್ತೇವೆ. ಇದರ ಮೇಲೆ ಯಾರಾದರು ಯಾವುದೋ ಸತ್ಯವನ್ನು ಮಾತಾಡಿದರೆ ಇವನು ನಮ್ಮ ವಿರೋದಿ , ಇವನು ಅವರ ವಿರೋದಿ ಎಂದು, ಆ ವಿಚಾರ ಮಾಡಿದವನ ಜೀವಕ್ಕೆ ಕುತ್ತು ತರುತ್ತೇವೆ. ಬಿಬಿ ಕಲ್ಬುರ್ಗಿ ಕರ್ನಾಟಕದಲ್ಲಿ ಈ ದಿನ ಇದೆ ರೀತಿಯ ಹಗೆತನಕ್ಕೆ ಬಲಿಯಾದರೆ , ನರೇಂದ್ರ ಧಬೋಲ್ಕರ್ , ಗೋವಿಂದ್ ಪನ್ಸರೆ ಮಹಾರಾಷ್ಟ್ರದಲ್ಲಿ ತೀರ ಇತ್ತೀಚಿಗೆ ಬಲಿಯಾದವರು. ಇವರ ವಿಚಾರಗಳಿಗೆಲ್ಲ ಜಾತಿ,ಧರ್ಮದ ಬಣ್ಣ ಹಚ್ಚಿ,ಕೊನೆಗೆ ಜೀವ ತೆಗೆದ ನಮ್ಮ ಸಮಾಜ ನಿಜವಾಗಿಯೂ ವಿಚಾರವಾದಿಗಳಿಗೆ ಏನು ಸಂದೇಶ ನೀಡುತ್ತಿದೆ. ನಮ್ಮ ಸಮಾಜ ಇನ್ನು ವಿಚಾರಗಳನ್ನು ಜೀರ್ಣಿಕೊಳ್ಳದೊಷ್ಟು ಸಣ್ಣ ಮಟ್ಟದ್ದೆ ? 

          ಬಾಂಗ್ಲದೇಶದಲ್ಲಿ ಬರಹಗಾರ್ತಿ ತಸ್ಲಿಮ ನಸ್ರೀನ್ ವಿರೋದಿಸಿದ್ದಕ್ಕೆ , ಬ್ಲಾಗರ್ ನೆಲೊಯ್ ನೀಲ್ ಹತ್ಯಮಾಡಿದ್ದಕ್ಕೆ ಭಾರತ ಮೊಸಳೆ ಕಣೀರು ಸುರಿಸುತ್ತದೆ. ನಮ್ಮ ದೇಶಲ್ಲಿ ಹೀಗಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಆದರೆ ನಮ್ಮಲ್ಲೂ ಇದೆ ರೀತಿಯಲ್ಲೇ ಬಂಡಾಯ ಸಾಹಿತಿಗಳನ್ನು, ಬರಹಗಾರರನ್ನು ಹಾಗು ವಿಚಾರವಾದಿಗಳನ್ನು ಕೆಲವರು ಹೆದರಿಸುತ್ತಿದ್ದಾರೆ, ಹಲವರ  ಪ್ರಾಣವನ್ನು ಕೂಡ ನಮ್ಮ ಸಮಾಜದ ಕೆಲವು ಸಂಘಟನೆಗಳು ತೆಗೆದುಕೊಂಡಿವೆ. ಇಂಥಹ ಸಂಘಟನೆಗಳನ್ನು ಅನೇಕರು ಬೆಂಬಲಿಸುತ್ತಾರೆ.


              ಈ ರೀತಿಯಾದರೆ ಭಾರತಕ್ಕೂ, ಬಾಂಗ್ಲಕ್ಕೂ ಇರುವ ವ್ಯತ್ಯಾಸವೇನು ?, ಬಸವಣ್ಣನವರ ಪೂರ್ವಕಾಲಕ್ಕೂ ಹಾಗು ಬಸವಣ್ಣನವರ ನಂತರದ ಕಾಲಕ್ಕೂ ಆಗಿರುವ ಬದಲಾವಣೆಯಾದರು ಏನು ?? ಒಟ್ಟಾರೆ ಹೇಳುವುದಾದರೆ, ಕೇವಲ ನಂಬಿಕೆಯ ಮೇಲೆ , ಕಟ್ಟು ಕತೆಗಳ ಮೇಲೆ , ಸಾಂಪ್ರದಾಯಿಕ ಯೋಚನೆಗಳ ಮೇಲೆ ವಿಷಯವನ್ನು ನಂಬದೆ ಅದರ ಅರ್ಥ ಹಾಗು ಸತ್ಯದ ಮೇಲೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಲು, ನಮ್ಮನ್ನು ಸರಿ-ತಪ್ಪುಗಳ ತುಲನೆ ಮಾಡಲು ಈ ವಿಚಾರವಾದ ಪ್ರೇರೇಪಿಸುತ್ತದೆ.  ಆದರೆ ಈ ರೀತಿಯ ವಾದಗಳಿಗೆ , ಚರ್ಚೆಗಳಿಗೆ ಈ  ಪ್ರಾಣ ಹತ್ಯೆಯ ಘಟನೆಗಳು, ನಮ್ಮ ಸಮಾಜದ  ಮೇಲೆಯೇ ಹಲವಾರು ಅನುಮಾನವನ್ನು ಮೂಡಿಸುತ್ತವೆ.  ನಮ್ಮ ಸಮಾಜ ಇದನೆಲ್ಲ ವಿಚಾರ ಮಾಡುವಷ್ಟು ಪ್ರೌಡವಾಗಿದೆಯಾ?  ಎನ್ನುವ ಪ್ರಶ್ನೆಯನ್ನು ನಮ್ಮ ಮುಂದೆ ಬಂದು ನಿಲ್ಲುತ್ತದೆ.  


ನಿಮಗಾಗಿ 
ನಿರಂಜನ್ 

ಶನಿವಾರ, ಆಗಸ್ಟ್ 22, 2015

ಯಾರು ಹಿತವರು ನಿನಗೆ ಈ ಮೂವರೊಳಗೆ


                                          ಕಳ್ಳನೋ , ಸುಳ್ಳನೋ , ಮಳ್ಳನೋ ? 

ಸ್ನೇಹಿತರೆ , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಈ ಹಿಂದೆ ಬಂದಂತೆ ಮತ್ತೆ ಬಂತು, ಈ ದಿನ ಮುಗಿಯುತ್ತದೆ ಕೂಡ.  ನೀವು ಮತದಾನ ಮಾಡಿದ್ದೀರಿ, ಬದಲಾವಣೆಯನ್ನು ಸಹ ನಿರೀಕ್ಷಿಸುತ್ತಿದ್ದೀರಿ. ಅತಿಯಾದ ನಿರೀಕ್ಷೆಗಳನ್ನೂ ನೀವೇನಾದರು ಇಟ್ಟುಕೊಂಡಿದ್ದಾರೆ ಸ್ವಲ್ಪ ತಾಳಿ, ಈ ಚುನಾವಣೆಯ ಬಗ್ಗೆ ಹೇಳ್ತೀನಿ, ನಂತರ ನೀವೇ ತಿಳಿಸಿ ನಿಮ್ಮ ನಿರೀಕ್ಷೆಗಳ ಗತಿ ಏನಾಗುವುದು ಎಂದು.

          ಈಗಿನ ಚುನಾವಣೆಗಳು ಬಂದರೆ ಈ ರಾಜಕೀಯ ಪಕ್ಷಗಳಿಗೆ ಗೆಲ್ಲುವುದು ಒಂದೇ ಗುರಿಯಾದರೆ , ರಾಜಕೀಯ ಪುಡಾರಿಗಳಿಗೆ ಪಕ್ಷಗಳಿಂದ ಸಿಗುವ ಹಣ ಮಾತ್ರವೇ ಮುಖ್ಯ. ಚುನಾವಣೆಯಲ್ಲಿ ಪಕ್ಷಗಳ ಟಿಕೇಟ್ ಸಿಗಬೇಕೆಂದರೆ ಅಭ್ಯರ್ಥಿಯ ಪ್ರಾಮಾಣಿಕತೆ, ವಿದ್ಯಾಭ್ಯಾಸ , ಅವನ ಬುದ್ದಿವಂತಿಕೆ ಯಾವತ್ತು ಮಾನದಂಡ ಆಗುವುದಿಲ್ಲ. ಟಿಕೆಟ್ ಅಕಾಂಕ್ಷಿ  ಎಷ್ಟು ದುಡ್ಡು ಮಾಡಿದ್ದಾನೆ, ಅವನ ಹಿಂದೆ ಎಷ್ಟು ರೌಡಿಗಳಿದ್ದಾರೆ , ಪಕ್ಷಕ್ಕೆ ಅವನು ಎಷ್ಟು ದುಡ್ಡು ಕೊಡುತ್ತಾನೆ ಎಂಬುದು ಮಾತ್ರ ಪಕ್ಷಗಳಿಗೆ ಮುಖ್ಯ. ಅಂತವರಿಗೆ ಮಾತ್ರ ಪಕ್ಷದ ಟಿಕೇಟ್ ಖಚಿತ.    

         ರಾಜಕೀಯ ಪಕ್ಷಗಳಿಗೆ ಕಳ್ಳರುಗಳನ್ನು , ತಲೆಮರೆಸಿಕೊಂಡಿದ್ದ ರೌಡಿಗಳನ್ನು , ಪೊಲೀಸರಿಗೆ ಎಂದೂ ಸಿಗದ ಅಪರಾದಿಗಳನ್ನು ಸಮಾಜಸೇವಕರ ಹೆಸರಲ್ಲಿ ಸಮಾಜದ ಮುಖ್ಯವಾಹಿನಿಗೆ ತರಲು ಈ ಚುನಾವಣೆಗಳು ವೇದಿಕೆ ಆಗುತ್ತಿವೆ. ಪಕ್ಷಗಳು  ಅಭ್ಯರ್ಥಿಗಳಿಗೆ ಟಿಕೆಟ್ಟು ನೀಡುವ ನೆಪದಲ್ಲಿ ಕೋಟಿ ಕೋಟಿ ಹಣ ಮಾಡುತ್ತವೆ. ಅಭ್ಯರ್ಥಿಗಳು ಕೋಟಿ-ಕೋಟಿ ಹಣ, ಬ್ಯಾರಲ್ಲುಗಟ್ಟಲೆ ಹೆಂಡ ಹಂಚಿ ಮತದಾರನಿಂದ ಮತಗಳನ್ನು ಖರೀದಿಸುತ್ತಾರೆ. ತಲೆಮರಿಸಿಕೊಂಡಿದ್ದ ಕಳ್ಳ, ಸುಳ್ಳ, ಪಾತಕಿಗಳು ಚುನಾವಣೆಯಲ್ಲಿ ಜನ ನಾಯಕರಾಗಿ ಹೊರಹೊಮ್ಮುತ್ತಾರೆ. ಇಂಥವರಿಗೆ ಜನಪ್ರಿಯ ಪಕ್ಷಗಳ ಆಶಿರ್ವಾದ ಸಿಗುವುದರ ಜೊತೆಗೆ ತಮ್ಮ ಅಕ್ರಮ ಚಟುವಟಿಕೆಗಳಿಗೆ ಅಧಿಕಾರದ ಒಂದು ಭರ್ಜರಿ ಕವಚವೂ ಕೂಡ ಸಿಗುತ್ತದೆ. ಇದಕ್ಕಾಗಿಯೇ ಟಿಕೆಟ್ ಅಕಾಂಷಿಗಳು ಟಿಕೇಟಿಗಾಗಿ ಏನು ಮಾಡಲು ಸಿದ್ದರಿರುತ್ತಾರೆ.

           ಇಂಥ ಕಳ್ಳರು ಕೊನೆಗೆ ಟಿಕೆಟ್ಟು ಗಿಟ್ಟಿಸಿಕೊಂಡು ಚುನಾವಣೆಯಲ್ಲಿ ನಿಲ್ಲುತ್ತಾರೆ. ಇರುವ ಪಕ್ಷಗಳೆಲ್ಲ ಇಂತವರನ್ನೇ ಚುನಾವಣೆಗೆ ನಿಲ್ಲಿಸುತ್ತವೆ. ಮೂರು ಮುಖ್ಯ ಪಕ್ಷಗಳಿದ್ದರೆ  ಚುನಾವಣೆಯ ಕಣದಲ್ಲಿ ಮೂರು ಜನ ಸಮರ್ಥ ರೌಡಿಗಳೋ , ಭ್ರಷ್ಟಚಾರಿಗಳೋ ಕಣದಲ್ಲಿ ಇದ್ದೆ ಇರುತ್ತಾರೆ. ಇಂತವರಲ್ಲಿ ನಾವು ಒಬ್ಬರಿಗೆ ವೋಟು ನೀಡುತ್ತೇವೆ , ಸಮರ್ಥರಿಲ್ಲದ ಕಾರಣ ಇಂತವರಿಗೆ ವೋಟು ನೀಡುವುದು ಅನಿವಾರ್ಯ ಕೂಡ . ಇಂಥಹ ಸನ್ನಿವೇಶದಲ್ಲಿ ಕೆಲವು ಬುದ್ದಿವಂತ ಮತದಾರರು ಚುನಾವಣ ಕಣದಲ್ಲಿರುವ ಮೂವರಲ್ಲಿ ಸ್ವಲ್ಪ ಕಡಿಮೆ ಕಳ್ಳನೋ, ಸ್ವಲ್ಪ  ಭ್ರಷ್ಟಚಾರಿಗೋ ವೋಟು ಹಾಕಿದರೆ, ಸಾಮಾನ್ಯ ಜನರು ಪಕ್ಷಗಳನ್ನು ನೋಡಿಯೋ, ಅಭ್ಯರ್ಥಿಗಳ ಆಮಿಶಗಳಿಗೆ ಬಲಿಯಾಗಿಯೋ, ಜಾತಿಯಾದಾರದ ಮೇಲೋ ವೋಟು ಹಾಕುತ್ತಾರೆ. ಅಂತು ಇಂತು ಕೊನೆಗೆ ಗೆಲ್ಲುವುದು ಒಬ್ಬ ಕಳ್ಳನೇ. ಇಂಥವರಿಂದ ನಾವೇನು ನಿರೀಕ್ಷಿಸಲು ಸಾದ್ಯ ??.  ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿ ಕೋಟಿಗಟ್ಟಲೆ ಹಣ ಖರ್ಚು ಮಾಡಿರುತ್ತಾನೆ, ಗೆದ್ದಮೇಲೆ ಅವನು ಆ ಹಣವನ್ನು ವಾಪಾಸು ಪಡೆಯಲು ಭ್ರಷ್ಟಾಚಾರದಲ್ಲಿ ಭಾಗಿಯಾಗುತ್ತಾನೆ.  ಇಂಥಹ ಭ್ರಷ್ಟರಿಗೆ ನಮ್ಮ ಇಡೀ ವ್ಯವಸ್ತೆಯೇ ಜನರ ಹಣ ಕದಿಯಲು ಇಂಬು ನೀಡುತ್ತದೆ. ಈ ಪ್ರಕ್ರಿಯೇ ನಮ್ಮ ಸಮಾಜದ ಅಥವಾ ವ್ಯವಸ್ತೆಯ ಒಂದು  ಭಾಗವಾಗಿಯೆ ಹೋಗಿದೆ. 

        ಇಂಥಹ ವ್ಯವಸ್ತೆಯನ್ನು ನಮ್ಮ ಸಮಾಜವೇ ಒಂದು ರೀತಿಯಲ್ಲಿ ಒಪ್ಪಿಕೊಂಡಿದೆ. ಕೆಲವರು ಇದನ್ನು ವಿರೋದಿಸುತ್ತಾರೆ, ಮತ್ತೆ ಕೆಲವರು ಇದರ ವಿರುದ್ದ ಹೋರಾಟವನ್ನು ಕೂಡ ಮಾಡುತ್ತಾರೆ, ಇನ್ನು ಕೆಲವರು ಈ ಹಾಳು ವ್ಯವಸ್ತೆಯಿಂದ ದೂರವೇ ಉಳಿಯುತ್ತಾರೆ. ಕೆಟ್ಟ ವ್ಯವಸ್ತೆಯ ವಿರುದ್ದ ಹೋರಾಡುವವರಿಗೆ ನಾವು ಕೂಡ ಬೆಂಬಲ ನೀಡುವುದಿಲ್ಲ, ಕೆಲವೊಮ್ಮ ಅವರನ್ನು ನೋಡಿ ನಗುತ್ತೇವೆ. ಮಾದ್ಯಮಗಳು ಮತ್ತು ಜನರು ಕೆಟ್ಟ ವ್ಯವಸ್ತೆಯ ವಿರ್ರುದ್ದ ಹೊರಡುವವರಿಗೆ ಬೆಂಬಲ ನೀಡುವತನಕ, ಬುದ್ದಿವಂತರು, ಪ್ರಾಮಾಣಿಕರು ಚುನಾವಣೆಯಲ್ಲಿ ಭಾಗವಹಿಸುವ ತನಕ ಈ ಕೆಟ್ಟ ವ್ಯವಸ್ತೆ ಕೆಟ್ಟದ್ದಾಗಿಯೇ ಉಳಿಯುತ್ತದೆ. 

          ಇಂಥಹ ವಾತಾವರಣದಲ್ಲೂ ಕೂಡ ಇತ್ತೀಚಿಗೆ ಬೆರೆಳೆಣಿಕೆಯೊಷ್ಟು  ಸಮರ್ಥ ಸಾಮಾಜಿಕ ಕಾರ್ಯಕರ್ತರು , ಬುದ್ದಿವಂತರು, ವಿದ್ಯಾವಂತರು ರಾಜಕೀಯಕ್ಕೆ ಬಂದು ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಬಹು ಆಶಾದಾಯಕ ಬೆಳವಣಿಗೆ. ಇಂತವರನ್ನು ನಾವು ಗುರುತಿಸಿ, ಅಂತವರಿಗೆ ನಮ್ಮ ಅಮೂಲ್ಯ ವೋಟು ಹಾಕಿದರೆ ಮಾತ್ರ ರಾಜಕೀಯ ದುಷ್ಟಶಕ್ತಿಗಳನ್ನು ರಾಜಕೀಯದಿಂದ ನಾವು ದೂರವಿಡಲು ಸಾದ್ಯವಾಗದಿದ್ದರು ಸಹ,  ಅಧಿಕಾರದಿಂದ ದೂರವಿಡಬಹುದು. ಇಲ್ಲದಿದ್ದರೆ  ನಾವೆನಾದರು "ಯಾರು ಹಿತವರು ನಿಮಗೆ ಈ ಮೂವರೊಳಗೆ , ಕಳ್ಳನೋ , ಸುಳ್ಳನೋ, ಮಳ್ಳನೋ" ಎಂದು ಕೇಳಿದರೆ "ಕಡಿಮೆ ಕಳ್ಳ"  "ಸ್ವಲ್ಪ ಸುಳ್ಳ-ಮಳ್ಳ" ಎಂದು ಆಯ್ಕೆ ಮಾಡಿದರೆ, ನಮ್ಮ ನಿರೀಕ್ಷೆಗಳ  ಗತಿ ಏನಾಗಬಹುದೆಂದು  ನೀವೇ ಯೋಚಿಸಿ.
      


ನಿಮಗಾಗಿ 
ನಿರಂಜನ್

ಬುಧವಾರ, ಆಗಸ್ಟ್ 19, 2015

ರಾಮ ಮತ್ತು ಕೃಷ್ಣ ....


                                            
                                                                  ಶಾಶ್ವತ ಪ್ರೇಮ ....  

ರಾಮ ಮತ್ತು ಕೃಷ್ಣ  ಭಾಲ್ಯದಿಂದಲೂ ಸ್ನೇಹಿತರು.  ತುಂಬಾ  ಆತ್ಮೀಯರು.  ಅವರೆಷ್ಟು ಅತ್ಮೀಯರೆಂದರೆ ಒಬ್ಬರನ್ನೊಬ್ಬರು ಬಿಟ್ಟು ಒಂದು ದಿನವೂ ಕೂಡ ಇರುತ್ತಿರಲಿಲ್ಲ.  ಅದೆಷ್ಟೋ ಬಾರಿ ಸಣ್ಣ  ಪುಟ್ಟ ಜಗಳಗಳನ್ನು ಆಡಿದರೂ ಸಹ ಆ ಜಗಳಗಳು  ಕೇವಲ ಆ ಕ್ಷಣಗಳಿಗೆ  ಮಾತ್ರ ಸೀಮಿತವಾಗಿರುತ್ತಿದ್ದವು.

              ಈ ರೀತಿ ಇದ್ದ ರಾಮ ಹಾಗು ಕೃಷ್ಣರು  ದೊಡ್ಡವರಾದ ಮೇಲೆ ಉದ್ಯೋಗವನ್ನರಸಿ ತಮ್ಮ ಹುಟ್ಟೂರು ಬಿಟ್ಟು ಹೊರಟರು.  ಕೆಲಸವನ್ನು ಹುಡುಕುತ್ತ ಊರೂರು ಅಲೆದರು. ಇಬ್ಬರಿಗೂ ಒಟ್ಟಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಆದರೆ ಅವರ ಹುಡುಕಾಟ ಮಾತ್ರ ನಿಲ್ಲಲಿಲ್ಲ. ಸುತ್ತಲಿನ ಊರುಗಳು , ಪೇಟೆಗಳು, ಸುಮುದ್ರ ಬಂದರುಗಳು ಹಾಗು ಕಾಡುಗಳನ್ನು ಸುತ್ತಿದರು ಎಲ್ಲೂ ಕೆಲಸ ಸಿಗಲಿಲ್ಲ.  ಯಾರೋ ಹೇಳಿದ ಮಾತು ಕೇಳಿ ಅಲ್ಲಿರುವ ದೂರದ ಮರುಭೂಮಿಯನ್ನು  ದಾಟಿದರೆ, ಆಚೆ ಇರುವ  ಮತ್ತೊಂದು ಊರಿನಲ್ಲಿ ಕೆಲಸ ಸಿಗಬಹುದೆಂದು ನಂಬಿ , ಆ  ಮರುಭೂಮಿಯನ್ನು ದಾಟಲು ನಿರ್ಧರಿಸಿದರು.

              ಪ್ರಯಾಣ ಶುರುವಾಯಿತು, ಮರುಭೂಮಿಯನ್ನು ಅವರು ಕಾಲು ನಡಿಗೆಯಲ್ಲೇ ದಾಟಬೇಕಿತ್ತು. ನಡೆಯಲು ಭಾರ ಆಗದಿರಲಿ ಎಂದು ಸ್ವಲ್ಪ ಆಹಾರ ಹಾಗು ಒಂದು ಸಣ್ಣ  ಬಾಟಲಿಯಲ್ಲಿ ನೀರನ್ನು ತುಂಬಿಕೊಂಡಿದ್ದರು.  ಒಂದು ಪೂರ್ಣ ದಿನದ ಪ್ರಯಾಣದ ನಂತರ ಹಸಿವೆಯಾಯಿತು, ರಾಮನು ಕೃಷ್ಣನಿಗೆ ಚೀಲದಲಿದ್ದ ಆಹಾರದಲ್ಲಿ ಅರ್ಧ ಮಾತ್ರ ತಿನ್ನಲು ಹೇಳಿದನು.  ಅದೇ ರೀತಿ ಕೇವಲ ಅರ್ಧ ಆಹಾರವನ್ನು ಇಬ್ಬರು ಹಂಚಿಕೊಂಡು ತಿಂದರು.  ಮರುದಿನ ಇನ್ನರ್ಧ ಆಹಾರವನ್ನು ತಿಂದು ಮುಗಿಸಿದರು.ಅಷ್ಟೊತ್ತಿಗೆ ತಾವು ತಂದಿದ್ದ ನೀರು ಕೂಡ ಸ್ವಲ್ಪವೆ ಉಳಿದಿತ್ತು. ಮರುಭೂಮಿಯಲ್ಲಿ ಇನ್ನು ಎಲ್ಲೂ ಓಯಸಿಸ್ ಕಾಣುತ್ತಿಲ್ಲ. ಬಿಸಿಲಿನ ಬೇಗೆಯಿಂದ ಕೃಷ್ಣನಿಗೆ ತುಂಬಾ ಭಾಯಾರಿಕೆಯಾಗಿ ಬಳಲಿದ್ದ. ರಾಮನು ಕೃಷ್ಣನಿಗೆ" ಕೃಷ್ಣ ಉಳಿದಿರುವ ನೀರಿನಲ್ಲಿ ಅರ್ದವನ್ನು ಮಾತ್ರ ಕುಡಿ,ನೀರು ನಮಗೆ ಮುಂದೆ ಬೇಕಾಗುತ್ತದೆ ,  ನಮಗೆ ಮತ್ತೆಲ್ಲಿ ನೀರು ಸಿಗುತ್ತೋ ಗೊತ್ತಿಲ್ಲ" ಎಂದನು. ಆದರೆ ಭಾಯರಿಕೆಯಿಂದ ಕಂಗೆಟ್ಟಿದ್ದ ಕೃಷ್ಣ "ಇಲ್ಲ ನಾನು ಎಲ್ಲವನ್ನು ಕುಡಿಯುತ್ತೇನೆ , ಇಲ್ಲದಿದ್ದರೆ ನಾನು ಇಲ್ಲೇ ಸತ್ತೆ ಹೋಗುತ್ತೇನೆ " ಎಂದು ಕೋಪಗೊಂಡು ಹೇಳಿದ. ಅದಕ್ಕೆ ರಾಮ" ನೋಡು ಕೃಷ್ಣ ನಮ್ಮ ಮುಂದಿನ ಪ್ರಯಾಣಕ್ಕೆ ನೀರು ಮುಖ್ಯ, ಅಹಾರವಂತೂ ಖಾಲಿಯಾಗಿದೆ, ಓಯಸಿಸ್ ಸಿಗುವ ತನಕ  ನಮ್ಮಲ್ಲಿರುವ  ನೀರನ್ನೇ  ನಾವು ಸ್ವಲ್ಪ ಸ್ವಲ್ಪವೇ ಕುಡಿದು ಜೀವ ಉಳಿಸಿಕೊಳ್ಳಬೇಕು" ಎಂದನು. ಆದರೆ ಕೃಷ್ಣ ಇದನ್ನೆಲ್ಲಾ ಕೇಳದೆ ಎಲ್ಲ ನೀರನ್ನು ಕುಡಿಯಲು ಹೋದಾಗ , ರಾಮನಿಗೂ ಕೋಪ ಬಂದು ಇಬ್ಬರು ಜಗಳವಾಡಿದರು, ಆ ಜಗಳದಲ್ಲಿ ರಾಮನು ಕೃಷ್ಣನ ಕಪಾಳಕ್ಕೆ ಹೊಡೆದನು. ಕೃಷ್ಣನಿಗೆ ರಾಮನ ಮೇಲೆ ಎಲ್ಲಿಲ್ಲದ ಸಿಟ್ಟು ಬಂದಿತು. ಕೋಪಗೊಂಡು ಸುಮ್ಮನೆ ಕುಳಿತುಕೊಂಡ. ತನ್ನ ಮುಂದೆಯೇ ಇದ್ದ ಒಂದು ಸಣ್ಣ ಕಲ್ಲನ್ನು ತೆಗೆದುಕೊಂಡು ಮರಳಿನ ಮೇಲೆ " ನನ್ನ ಪ್ರಾಣ ಸ್ನೇಹಿತ ರಾಮ ನನ್ನ ಕಪಾಳಕ್ಕೆ ಹೊಡೆದ" ಎಂದು ದೊಡ್ಡದಾಗಿ ಬರೆದ. ರಾಮನಿಗೆ ಅದನ್ನು ನೋಡಿ ಬೇಜಾರು ಆಯಿತು ಆದರೂ ಸಹಿಸಿಕೊಂಡ.
 
                  ಕೆಲ ಸಮಯದ ನಂತರ ಪ್ರಯಾಣವನ್ನು ಮತ್ತೆ ಮುಂದುವರೆಸಿದರು , ಸ್ವಲ್ಪ ದೂರದಲ್ಲೇ ಒಂದು ಮರಳುಗಾಡಿನ ಓಯಸಿಸ್  ಕಾಣಿಸಿತು. ಗಿಡ-ಮರಗಳು, ಅವುಗಳ ನೆರಳು, ಕುಡಿಯಲು ಸಾಕೊಷ್ಟು ನೀರು ಅವರಿಗೆ ಹೋದ ಜೀವ ಮತ್ತೆ ಬಂದ  ಹಾಗೆ ಆಯಿತು. ಹೊಟ್ಟೆ ತುಂಬುವಷ್ಟು ನೀರು ಕುಡಿದರು, ನೆರಳಲ್ಲಿ ವಿಶ್ರಾಂತಿ ಪಡೆದರು. ನಂತರ ದಣಿದಿದ್ದ ದೇಹಗಳನ್ನು ತಂಪಾಗಿಸಲು ಅಲ್ಲೇ ಇದ್ದ ಒಂದು ಕೊಳದಲ್ಲಿ ಈಜಲು ಶುರು ಮಾಡಿದರು. ಆ ಕೊಳ ಸಣ್ಣದಿದ್ದರೂ ಆಳವಾಗಿತ್ತು. ಕೃಷ್ಣ ಏನನ್ನು ಲೆಕ್ಕಿಸದೆ ನೀರಿಗೆ ದುಮುಕಿದಾಗ, ಅದರ ಪಾತಾಳ ಸೇರಿದ, ಹೇಗೋ ಕಷ್ಟಪಟ್ಟು ಮೇಲೆ ಬಂದ. ಆದರೆ ದಡಕ್ಕೆ ಬರಲು ಕೃಷ್ಣನಿಗೆ ಸಾದ್ಯವಾಗಲಿಲ್ಲ. ಪ್ರಯಾಣದಲ್ಲಿ ದಣಿದಿದ್ದ ಕೈಕಾಲುಗಳು ಅವನಿಗೆ ಸಹಕರಿಸಲೇ ಇಲ್ಲ. ಜೋರಾಗಿ " ಕಾಪಾಡಿ , ಕಾಪಾಡಿ " ಎಂದು ಕೂಗಿಕೊಂಡ. ಪ್ರಾಣ ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ರಾಮ ನೀರಿಗೆ ದುಮುಕಿ ಕೃಷ್ಣನನ್ನು ಕಾಪಾಡಿ ದಡಕ್ಕೆ ಎಳೆದುಕೊಂಡು ಬಂದ. ತಾನು ಸತ್ತೆ ಹೋದೆ ಅಂತ ಅಂದುಕೊಂಡಿದ್ದ ಕೃಷ್ಣನ ಜೀವವನ್ನು ರಾಮ ಉಳಿಸಿದ್ದ. ರಾಮನನ್ನು ಆಲಂಗಿಸಿದ ಕೃಷ್ಣ " ರಾಮ ನೀ ನನ್ನ ಜೀವ ಉಳಿಸಿದೆ, ನೀ ನನ್ನ ನಿಜವಾದ ಪ್ರಾಣ ಸ್ನೇಹಿತ" ಎಂದನು.

                  ಆ ಕ್ಷಣದಲ್ಲೇ ಅಲ್ಲಿ ಇದ್ದ ಒಂದು  ಬಂಡೆಗಲ್ಲಿನ ಮೇಲೆ "ನನ್ನ ಪ್ರಾಣ ಸ್ನೇಹಿತ ರಾಮ ನನ್ನ ಜೀವ ಉಳಿಸಿದ" ಎಂದು ಕೃಷ್ಣ ಮತ್ತೆ ಕೆತ್ತಿದ್ದ. ಇದನ್ನು ನೋಡಿ ಆಶ್ಚರ್ಯ ಚಕಿತನಾದ ರಾಮನು ಕೃಷ್ಣನಿಗೆ ಕೇಳಿದ " ಕೃಷ್ಣ ಅಲ್ಲಿ ಮರಳಿನ ಮೇಲೆ ನನ್ನ ಸ್ನೇಹಿತ ನನ್ನನ್ನು  ಹೊಡೆದ ಅಂತ ಬರೆದೆ,  ಈಗ  ಬಂಡೆಗಲ್ಲಿನ ಮೇಲೆ ನನ್ನ ಸ್ನೇಹಿತ ನನ್ನ ಜೀವ ಉಳಿಸಿದ ಅಂತ ಬರೆದೆ, ಏಕೆ ಹೀಗೆ ಮಾಡಿದೆ ?" ಎಂದಾಗ , ಕೃಷ್ಣನು ಹೇಳುತ್ತಾನೆ " ನೋಡು ರಾಮ " ನೀ ನನ್ನ ಪ್ರಾಣ ಸ್ನೇಹಿತ, ನೀನು ನನ್ನ ಕಪಾಳಕ್ಕೆ ಹೊಡೆದಾಗ ಆ ಕ್ಷಣಕ್ಕೆ ನಾನು ಕೋಪಗೊಂಡು ಹಾಗೆ ಬರೆದಿದ್ದು ನಿಜ, ಅದು ಕೇವಲ ಕ್ಷಣಿಕ , ಬೇಕಾದರೆ ಈಗ ಹೋಗಿ ನೋಡು ಮರಳಿನ ಮೇಲೆ ಬರೆದದ್ದು ಗಾಳಿಯಿಂದ ಅಳಿಸಿ ಹೋಗಿರುತ್ತೆ. ನನ್ನ ಕೋಪ ಯಾವಗಲು ಕ್ಷಣಿಕ. ಈಗ ನಿಜವಾಗಿಯೂ ನಿನ್ನ ಮೇಲೆ ಪ್ರೀತಿಯಿಂದ ಬಂಡೆಗಲ್ಲಿನ ಮೇಲೆ ನಿನ್ನ ಒಳ್ಳೆಯತನದ ಬಗ್ಗೆ ಬರೆದಿರುವೆ ಇದು ಶಾಶ್ವತ, ಸದಾ ನೆನಪಿನಲ್ಲಿ ಇರುತ್ತದೆ, ಒಳ್ಳೆಯದನ್ನು ಮಾತ್ರ ನಾ ನೆನಪಿನಲ್ಲಿ ಇಟ್ಟುಕೊಳ್ಳು ಬಯಸುತ್ತೇನೆ" ಎಂದನು.

ಸ್ನೇಹಿತರೆ ನಾವು ಕೂಡ ಯಾವಾಗಲೂ ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಸಣ್ಣ ಪುಟ್ಟ ತಪ್ಪುಗಳನ್ನು ನೋಡಿಯೂ ನೋಡದಿರಬೇಕು , ಒಂದು ವೇಳೆ ನೋಡಿದರೂ ಸಹ ಮರೆಯಬೇಕು. 


ನಿಮಗಾಗಿ
ನಿರಂಜನ್

ಶುಕ್ರವಾರ, ಜುಲೈ 24, 2015

ಮದುವೆಯ ನಂತರವೂ



                       ಹೇಳಲಾಗದ ಒಂದು ಭಾವ  ...........                                                    

ನೋ ಬಿಟ್ಟು ಬಂದ ಭಾವ ಒಂದು ಕಡೆಯಾದರೆ, ತಿಂಗಳ ನಂತರ ಅವಳನ್ನು ನೋಡುವ ಖಾತರ ಮತ್ತೊಂದೆಡೆ. ಸಮಯ ಸಾಗುತ್ತಿಲ್ಲ, ಪ್ರಯಾಣ ಹಿತವಾಗಿದ್ದರು ನಿದ್ದೆ ಮಾತ್ರ ಬರುತ್ತಿಲ್ಲ. ಬೆಳಗಿನ ಜಾವ ಸುಮಾರು ೩ ಗಂಟೆ ಇರಬಹುದು, ಕಷ್ಟಪಟ್ಟು ಕಣ್ಣು ಮುಚ್ಚಿದೆ. ಗಗನಸಖಿಯೋ ಅಥವಾ ಗಗನಸಖನೋ  ಬಂದು ಏನೋ ಕೇಳಿದ ಹಾಗೆ ಆಯಿತು. ಕಣ್ಣು ಬಿಟ್ಟು ನೋಡಿದರೆ ಯಾರು ಇಲ್ಲ. ನಾ ಎಲ್ಲಿರಬಹುದೆಂದು ಕಿಟಕಿಯಲ್ಲಿ ನೋಡಿದರೆ ಬರಿ ಕತ್ತಲು. ಮತ್ತೆ ಕಣ್ಣುಮುಚ್ಚಿ ಮಲಗಿದೆ. ಸ್ವಲ್ಪ ಸಮಯದಲ್ಲೇ ಪೈಲಟ್ "ನಾವು ೩೦ ನಿಮಿಷಗಳಲ್ಲಿ ದೋಹಾ ತಲುಪುತ್ತೇವೆ " ಎಂದಾಗ ಒಂದು ಹಂತದ ಪ್ರಯಾಣ ಮುಗಿದಿತ್ತು. 

              ನಿದ್ದೆ ಇಲ್ಲದ ಆ ಅರೆಗಣ್ಣುಗಳಲ್ಲಿ ಕಿಟಕಿಯಲ್ಲಿ ನೋಡಿದೆ , ಸುತ್ತಲು  ನೀಲಾಕಾಶ, ಅಲ್ಲಲ್ಲಿ ಶುಭ್ರ ಬಿಳಿ ಮೋಡಗಳ ರಾಶಿಗಳು. ಬಂಗಾರದಳದಿಯ ಬಣ್ಣದಿಂದ ಕಂಗೊಳಿಸುತ್ತಿದ್ದ ಪೂರ್ವ ಸೂರ್ಯನಾಗಮನಕ್ಕೆ ಸಜ್ಜಾಗಿದ್ದ. ಅಮ್ಮ ಮತ್ತು ಆತ್ಮೀಯರನ್ನು ಬಿಟ್ಟು ಬಂದಾಗ ಆಗಿದ್ದ ದುಃಖಕ್ಕೆ ಈ ಅದ್ಬುತ ವಾತಾವರಣ  ಸ್ವಲ್ಪ ಕಡಿವಾಣ ಹಾಕುತಿತ್ತು. ನನ್ನ  ಮತ್ತು ನನ್ನವಳ ಆ ಒಂದು ತಿಂಗಳ ಅಗಲಿಕೆಯ ದುಃಖವೂ ಕೂಡ ಕತ್ತಲು ಕಳೆದಂತೆ ಕಳೆಯುತ್ತಿತ್ತು. ಅಷ್ಟರಲ್ಲೇ ವಿಮಾನ ದೋಹಾ ನಿಲ್ದಾಣವನ್ನು ತಲುಪಿತು. ಒಂದು ವಿಮಾನ ಇಳಿದು, ಲಂಡನ್ ಗೆ ತೆರೆಳುವ ಮತ್ತೊಂದು ವಿಮಾನವನ್ನು ನಾನು ಏರಿದಾಗ ನಿದ್ದೆ ಸಂಪೂರ್ಣ ಮಾಯವಾಗಿತ್ತು.  ಇನ್ನೇನು ನಾ ಲಂಡನ್ ತಲುಪುತ್ತೇನೆ , ಅವಳನ್ನು ನೋಡುತ್ತೇನೆ ಎನ್ನುವ ಹಂಬಲ ನನ್ನ  ಮನಸ್ಸಿನಲ್ಲೂ ಹುಟ್ಟಿತ್ತು, ಪೂರ್ವ ದಿಕ್ಕಿನಲ್ಲಿ ಎಳೆಯ ಸೂರ್ಯ ಉದಯಿಸಿದ ಹಾಗೆ.  ನೋಡು ನೋಡುತ್ತಿದ್ದಂತೆಯೇ ವಿಮಾನ ಮತ್ತೊಮ್ಮೆ ಅಕಾಶಕ್ಕೇರಿತು. ಮನಸ್ಸು ಹಗುರವಾಯಿತು, ವಿಮಾನ ತೇಲುತ್ತ ತೇಲುತ್ತಾ  ಆಕಾಶದಲ್ಲಿ ಸಾಗಿದಂತೆ, ನನ್ನ ಮನಸ್ಸು ಕೂಡ ನನ್ನವಳನ್ನು ಕಾಣುವ, ತಬ್ಬುವ ತವಕದಲ್ಲಿ ತೇಲುತಿತ್ತು. 

            ಎರೆಡನೆ ಹಂತದ ಪ್ರಯಾಣವನ್ನು ಶುರು ಮಾಡಿದ ಈ ವಿಮಾನ ಲಂಡನ್ ತಲುಪಲು ಇನ್ನು ಹತ್ತು ಗಂಟೆ ಬೇಕು. ಕಾಲ ಕಳೆಯುವುದು ಕಷ್ಟವಾಗುತ್ತಿದೆ. ಮುಂದಿದ್ದ ಮನೋರಂಜನೆಯ ಪರಿಕರಗಳು ನಿರುಪಯುಕ್ತವೆನಿಸುತ್ತಿವೆ. ನಿದ್ದೆ ಕಣ್ಣು ಬಿಟ್ಟಾಗ  ಮಾತ್ರ  ಬರುತ್ತಿದೆ , ಕಣ್ಣು ಮುಚ್ಚಿದರೆ ಹೋಗುತ್ತಿದೆ. ಆಗಾಗ ಅಲ್ಪ-ಸ್ವಲ್ಪ ನಿದ್ದೆ ಮಾಡಿ ಕಣ್ಣು ಬಿಟ್ಟು ನೋಡಿದರೆ ಇನ್ನು ಲಂಡನ್ ಬಹಳ ದೂರವೇ ಇದೆ. ಮತ್ತೊಮ್ಮೆ ವಿಮಾನ ಕತ್ತಲಲ್ಲಿ ಪ್ರವೇಶ ಮಾಡಿದಂತೆ ಭಾಸವಾಯಿತು. ನಿಜ ಮತ್ತೆ ಸ್ವಲ್ಪ ಕತ್ತಲು ಸುತ್ತಲು ಆವರಿಸಿತು. ಯುರೋಪ್ ಹಾಗು ಏಷ್ಯ ಖಂಡಗಳ ನಡುವಿರುವ ಸಮಯದ ಅಂತರವೇ ಇದಕ್ಕೆ ಕಾರಣ. ಕೆಲವು ನಿಮಿಷಗಳ ನಂತರ ನಿದಾನವಾಗಿ ಇನ್ನೊಂದು ಬಾರಿ ಸೂರ್ಯ ಉದಯಿಸಿದ ಹಾಗೆ  ಕಾಣಿಸಿತು. ಮತ್ತೊಮ್ಮೆ ನನ್ನ ಮನಸ್ಸಿನ್ನಲ್ಲಿ ಆಗ ತಾನೇ ಮಲಗಿದ್ದ ಭಾವನೆಗಳು ಮೇಲೆದ್ದವು. ಇನ್ನೂ  ೫ ಗಂಟೆಗಳ  ಕಾಲ ಪ್ರಯಾಣವಿದೆ ಲಂಡನ್ ತಲುಪಲು. ಕೇವಲ ಆರೇಳು ಗಂಟೆಗಳ ಅವದಿಯಲ್ಲೇ ಇದು ನನ್ನ ಎರೆಡನೆಯ  ಸೂರ್ಯೋದಯದ ದರ್ಶನ.
 
              ನನಗೇನೋ ಪ್ರಯಾಣ ಸಾಗಿದಂತೆ ಅನ್ನಿಸಲೇ ಇಲ್ಲ, ಆದರೂ  ಸಹ ನಮ್ಮ ಪೈಲಟ್ ನಿಗಧಿತ ಸಮಯಕ್ಕೂ ಮುನ್ನವೇ ಲಂಡನ್ನಿನ ಸರಹದ್ದಿಗೆ ತಲುಪಿದ್ದ. ಸಮಯಕ್ಕೂ ಮುಂಚಿತವಾಗಿಯೇ ನಮ್ಮ ವಿಮಾನ ಅಲ್ಲಿಗೆ  ಬಂದಿದ್ದರಿಂದ ATS ಲಂಡನ್  ಇಂದ ವಿಮಾನಕ್ಕೆ ಹೀತ್ರೋ ನಿಲ್ದಾಣದಲ್ಲಿ ಇಳಿಯಲು  ರಹದಾರಿ ಸಿಗಲಿಲ್ಲ. ಈ ಕಾರಣಕ್ಕಾಗಿ ಲಂಡನ್  ಸರಹದ್ದಿನಲ್ಲೇ,  ನೀಲಾಶದಲ್ಲಿ ಹದ್ದು ಹಾರಾಡಿದಂತೆ ನಮ್ಮ  ವಿಮಾನವು ಕೂಡ ರಹದಾರಿಗೆ ಕಾಯುತ್ತ ಆಕಾಶದಲ್ಲೇ ಹಾರಡತೊಡಗಿತು.  ಆ ವೇಳೆಗಾಗಲೇ ನನಗೆ  "ನಾ  ಅದೆಷ್ಟೋತ್ತಿಗೆ ವಿಮಾನ  ಇಳಿಯುತ್ತೇನೋ, ಯಾವಾಗ ಅವಳನ್ನು ನೋಡುತ್ತೇನೋ"  ಅನ್ನುವ ಆಸೆ ಅತಿಯಾಗಿತ್ತು. ಈ ಹಾರಾಟದಲ್ಲಿ ನನ್ನ ಕಣ್ಣುಗಳೆನೋ ಲಂಡನ್ನಿನ ಮೇಲ್ನೋಟವನ್ನು ಸವಿದವಾದರೂ, ಆ ಸಮಯದಲ್ಲಿ ಬೇರೆ ಏನೋ ಬಯಸುತ್ತಿದ್ದ ನನ್ನ ಮನಸ್ಸಿಗೆ ಅಷ್ಟೊಂದು ಮುದ ನೀಡಲಿಲ್ಲ. 

               ವಿಮಾನಕ್ಕೆ  ನಿಲ್ದಾಣದಲ್ಲಿ ಇಳಿಯುವ ತವಕ,  ನನಗೆ ನನ್ನವಳ ಸೇರುವ ತವಕ. ಕೆಳಗೆ ನೋಡಿದರೆ ನನ್ನ ಕಣ್ಣುಗಳಿಗೆ ಆ ವಿಮಾನ ನಿಲ್ದಾಣ ಕಾಣುತ್ತಿದೆ .  "ಅಲ್ಲಿ ನನ್ನವಳು ನನಗಾಗಿ ಕಾಯುತ್ತಿದ್ದಾಳೆ , ನಾನು ಅವಳನ್ನು ನೋಡಬೇಕು, ಅದೊಷ್ಟು ಬೇಗ ಅವಳನ್ನು ಸೇರ ಬೇಕು " ಎನ್ನುವ ಆಸೆ ಹುಚ್ಚಿನಂತೆ ಹೆಚ್ಚುತ್ತಿದೆ. ಹೇಗೆ ವಿಮಾನ ಒಂದೇ ಪಥದಲ್ಲಿ ಈ ಸರಹದ್ದನ್ನು ಸುತ್ತುತಿದೆಯೋ, ಹಾಗೆಯೇ ನನ್ನ ಮನಸ್ಸು ಕೂಡ ಅದೇ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿರುವ ನನ್ನವಳನ್ನು ಒಂದೇ ಸಮನೆ ಸುತ್ತುತಿದೆ.  ಒಂದೊಷ್ಟು ಸಮಯದ ನಂತರ ATS ಲಂಡನ್ ನಿಂದ ರಹದಾರಿ ಸಿಕ್ಕಿತು. ನಮ್ಮ  ವಿಮಾನ ಜೋರಾಗಿ ಭೂಮಿಗೆ ಹತ್ತಿರವಾಗುತ್ತಿದೆ, ನನ್ನ ಮನಸ್ಸು ಸಹ ನನ್ನವಳ ನಿಜ-ಸಾಂಗತ್ಯಕ್ಕೆ ಹತ್ತಿರವಾಗುತ್ತಿದೆ. ವೇಗದಲ್ಲಿ ವಿಮಾನ ಭೂಮಿಯ ಕಡೆ ಬಂದರೆ , ಅದಕ್ಕೆ ಹತ್ತುಪಟ್ಟು ವೇಗದಲೇ ನನ್ನವಳ ಮೇಲಿನ ನನ್ನ ಮೋಹ ಆಕಾಶಕ್ಕೆ ಏರುತ್ತಿದೆ. ಕೆಲವು ನಿಮಿಷದಲ್ಲೇ ವಿಮಾನ ನಿಲ್ದಾಣದಲ್ಲಿ ನಿಂತಿತು. ನನ್ನ ಮನಸ್ಸು ಮಾತ್ರ ಆಸೆಯ ಓಟ ಶುರು ಮಾಡಿತು.  

              ಸರಸರನೆ ಇಳಿದು , ಎಲ್ಲ ಹಂತದ ವ್ಯವಹಾರಗಳ ಮುಗಿಸಿ, ಹೀತ್ರೋ ವಿಮಾನ ನಿಲ್ದಾಣದಲ್ಲಿ ನನಗಾಗಿ ಕಾಯುತ್ತಿದ್ದ ನನ್ನವಳ ಮೊಬೈಲ್ಗೆ ಕರೆಮಾಡಿ ನನ್ನ ಕುಶಲೋಪರಿ ಹೇಳುತ್ತಾ, ನಿಲ್ದಾಣದಲ್ಲಿ ಅವಳಿರುವ ಕಡೆಗೆ ನಾನು ನೆಡೆಯುವಾಗ , ಏನೋ ಒಂದು ಹೇಳಲಾಗದ ಭಾವ, ಯಾವುದೋ ಮೋಹ ನನ್ನನ್ನು ಅವಳತ್ತ ಸೆಳೆಯುತ್ತಿದೆ. ಅದೇನು ಹುಚ್ಚು ಪ್ರೀತಿಯೋ, ಹೆಚ್ಚು ಪ್ರೇಮವೋ ಗೊತ್ತಿಲ್ಲ. ಆದರೂ ಅದೊಂದು ಸವಿಯಲೇಬೇಕಾದ ಅದ್ಭುತಭಾವ. ಕಣ್ಣಳತೆಯ ದೂರದಲ್ಲಿ ನನಗಾಗಿ ಕಾಯುತಿದ್ದ ಅವಳನ್ನು, ನನ್ನ ಕಣ್ಣುಗಳು ಒಂದೇ ಕ್ಷಣದಲ್ಲಿ ಪತ್ತೆ ಹಚ್ಚಿದವು. ಕಾಲಗಳು ತಮಗೆ ತಾವೇ ವೇಗ ಹೆಚ್ಚಿಸಿಕೊಂಡವು ಅವಳಿದ್ದ ಕಡೆಗೆ. ಅವಳು ಹತ್ತಿರವಾದಂತೆ ನನ್ನ ಕೈಗಳು ತಮ್ಮ ಹಿಡಿತದಲಿದ್ದ ಲಗ್ಗೇಜನ್ನು ತಾವೇ ಬಿಟ್ಟುವು. ಪ್ರಪಂಚದ ಅರಿವಳಿದು ನನ್ನ ಮಾತುಗಳು ಮರೆಯಾಗಿ, ನಾ ಮೋಹದಲಿ ನನ್ನವಳ ಮೈತಬ್ಬಿದೆ . 


ನಿಮಗಾಗಿ 
ನಿರಂಜನ್

ಸೋಮವಾರ, ಜುಲೈ 20, 2015

Dairy Farm Story ..........


ನನ್ನ ಕನಸನ್ನು ನಾ ಬೆನ್ನುಹತ್ತಿ .....

ನಗೆ  ಅನ್ನಿಸಿದ್ದನ್ನು ಮಾಡಬೇಕು, ನನ್ನ ಇಷ್ಟದಂತೆ ನಾನು ಜೀವಿಸಬೇಕು ಎನ್ನುವ ಹಂಬಲ ಯಾರಿಗೆ ತಾನೇ ಇರುವುದಿಲ್ಲ. ಈ ರೀತಿಯ ಹಂಬಲವೇನೋ ಎಲ್ಲರಿಗೂ ಇದ್ದೆ ಇರುತ್ತದೆ. ಸದ್ಯಕ್ಕೆ ಆ ತರಹದ ಹುಚ್ಚು ಕನಸುಗಳು ನಮಗೆ ಇಲ್ಲವಾದಲ್ಲಿ, ಮೊಂದೊಂದು ದಿನ ಅವೇ ಕನಸುಗಳು ತಾವಾಗಿಯೇ ನಮ್ಮನ್ನು ಬೆನ್ನುಹತ್ತಿ ಬಂದೆ ಬರುತ್ತವೆ. ಕನಸುಗಳು ಕೆಲವರಿಗೆ ಸ್ವಲ್ಪ ಜಲ್ದಿ, ಮತ್ತೆ ಕೆಲವರಿಗೆ ಸ್ವಲ್ಪ ತಡವಾಗಿ ಬೆನ್ನುಹತ್ತುತ್ತವೆ. 

               ಕನಸುಗಳನ್ನು ಸಾಕಾರಗೊಳಿಸಲು ನಮಗೆ ನೂರೆಂಟು ದಾರಿಗಳು ಇರುತ್ತವೆ, ಅದೇ ರೀತಿಯಾಗಿ ನೊರೆಂಟು ಅಡೆತಡೆಗಳು ಕೂಡ ಬರುತ್ತವೆ. ಕನಸಿನ ಆಸೆಯ ಬಗ್ಗೆ ರಿವಿದ್ದರೂ ಕೂಡ, ಆಸೆಯ ದಿಸೆಯಲ್ಲಿ ಸಾಗಲು ನಾವು ಅನೇಕ  ಬಾರಿ ಕೇವಲ ಯೋಚಿಸಿ ಕಾರ್ಯ ಪ್ರವೃತ್ತರಾಗಲು ಮಾತ್ರ ವಿಫಲವಾಗುತ್ತೇವೆ. ಇಚ್ಚಾಶಕ್ತಿಯ ಕೊರತೆ, ಸೋಲಿನ ಭಯ, ಸಾಮಾಜಿಕ ಹಾಗು ಕೌಟಂಬಿಕ ಒತ್ತಡಗಳು, ಸಮಾಜದ ಪ್ರತಿಕ್ರಿಯೆ, ಲಾಭ-ನಷ್ಟಗಳ ತುಲನೆ , ಇನ್ನು ಅನೇಕ ಋಣಾತ್ಮಕ  ಅಂಶಗಳು ನಮ್ಮ ಕನಸುಗಳನ್ನು  ಬೆನ್ನು ಹತ್ತಲು ಬಿಡುವುದಿಲ್ಲ. ಆದರೆ  ಇವೆಲ್ಲವನ್ನೂ ಲೆಕ್ಕಿಸದೆ , ಇವುಗಳನ್ನು ಮೀರಿ ನಡೆಯುವವ  ಮಾತ್ರ ತನ್ನ ಕನಸುಗಳನ್ನ ನನಸಾಗಿಸಿಕೊಳ್ಳುತ್ತಾನೆ. ಅಂತವರು ಮಾತ್ರ ಜೀವನದಲ್ಲಿ ಸಾರ್ತಕಭಾವವನ್ನು  ಒಂದಲ್ಲ ಒಂದು ದಿನ ಕಂಡೇ ಕಾಣುತ್ತಾರೆ.

              ಕೆಲವರಿಗೆ ವೃತ್ತಿಯಲ್ಲಿ ಏನೋ ಸಾದಿಸಬೇಕು ಎನ್ನುವ ಕನಸು, ಮತ್ತೆ ಕೆಲವರಿಗೆ ಪ್ರವೃತ್ತಿಯಲ್ಲಿ ಏನಾದರು ಸಾದಿಸುವ ಕನಸು.  ನಿಜವಾದ ಕನಸನ್ನು ಬೆನ್ನು ಹತ್ತುವವರಿಗೆ ಲಾಭ ನಷ್ಟಗಳ ಪರಿವೇ ಇರುವುದಿಲ್ಲ , ಇರಲು ಕೂಡದು. ಕಂಡ ಕನಸನ್ನು ಸಾಕಾರಗೊಳಿಸುವ ಆ ಹಾದಿಯಲ್ಲಿ ನಮಗೆ ಸಿಗುವ ಸಾರ್ಥಕತೆಯ ಭಾವ ಹಾಗು ನೆಮ್ಮದಿ ಮತ್ಯಾವ ಕೆಲಸದಲ್ಲೂ ನಾವು ಅನುಭವಿಸಲು ಸಾದ್ಯವಿಲ್ಲ.

             ಅದೇ ರೀತಿಯ ಆಸೆ ಹಾಗು ಕನಸು ಮೊದಲಿಂದಲೂ ಕೂಡ ನನಗೂ ಒಂದು ಇದೆ. ನನ್ನ ಬಹುಪಾಲು ಬಾಲ್ಯವನ್ನು  ಗ್ರಾಮೀಣ ಪ್ರದೇಶದಲ್ಲೇ ಕಳೆದ ನನಗೆ ನನ್ನ ಬೇರುಗಳು ಮಾತ್ರ ಇನ್ನು ಅಲ್ಲಿಯೇ ಇವೆ. ಹಳ್ಳಿಗಾಡಿನಲ್ಲಿಯೇ ಏನಾದರು ಮಾಡಬೇಕೆನ್ನುವ ಹಂಬಲ ಕೂಡ ನನಗಿದೆ. ದನಕರುಗಳ ಮೇಲಿನ ಪ್ರೀತಿ, ಏನಾದರು ವಿಬಿನ್ನವಾದ ಕೆಲಸವನ್ನು ಮಾಡುಬೇಕೆನ್ನುವ ಹಂಬಲದಿಂದ ನಾನು ಹೈನುಗಾರಿಕೆಯನ್ನು ನನ್ನ ಮತ್ತೊಂದು ಪ್ರವೃತ್ತಿಯನ್ನಾಗಿಸಿ ಪ್ರಾರಂಬಿಸಿದ್ದೇನೆ. ಇದೇ ಹೈನುಗಾರಿಕೆಯಲ್ಲಿ ಯಶಸ್ಸು ಕಾಣುವ ಕನಸನ್ನು ನಾನು ಸದ್ಯಕ್ಕೆ ಬೆನ್ನುಹತ್ತಿರುವೆ. ಹೈನುಗಾರಿಕೆಯನ್ನು ಪ್ರವೃತ್ತಿಯಾಗಿ ನಾನು ಪ್ರಾರಂಭ ಮಾಡಬೇಕು ಎಂದಾಗ  ನನ್ನ ಹೆಂಡತಿ, ನನ್ನ ಸಹೋದರ-ಸ್ನೇಹಿತರು ಹುಬ್ಬೇರಿಸಿದ್ದರು. "Mtech ಊದಿ ದನ ಕಾಯ್ತಾನೆ ಅಂತೆ" ಅಂತಾನು ಕೆಲವರು ಅಂದ್ರು. ಆದರು ಏನೋ ಒಂದು ಕೆಟ್ಟ ಹಟದಿಂದ ಮುನ್ನುಗ್ಗಿ ಅವರೆಲ್ಲರನ್ನು ಒಪ್ಪಿಸಿದೆ. ಇವರೆಲ್ಲರನ್ನು ಒಪ್ಪಿಸಿದ್ದೆ ನನ್ನ ಮೊದಲ ಸಾದನೆ. ಮೊದಲು ನನ್ನ ಹೆಂಡತಿ ಶೋಭಾ ಒಪ್ಪಿದಳು, ನಂತರ ನನ್ನ ಸಹೋದರ ಸುರೇಶ, ನಂತರ ತಮ್ಮ ಮೇಘ. ಹೀಗೆ ನನ್ನ ಪ್ರವೃತ್ತಿಯನ್ನು ಸಾಕಾರಗೊಳಿಸುವ ಹಾದಿಯಲ್ಲಿ ಎಲ್ಲರು ಒಟ್ಟಾಗಿ ನಡೆಯುತ್ತಿದ್ದೇವೆ.ಇವರೆಲ್ಲರ ಪರಿಶ್ರಮದಿಂದಲೇ ಕಳೆದ ತಿಂಗಳಿಂದ ನಮ್ಮ ಡೈರಿಫಾರ್ಮ್ ನಮ್ಮ ಹುಟ್ಟೂರಿನಲ್ಲಿ ಶುಭಾರಂಭಗೊಂಡಿದೆ. ವೈಜ್ಞಾನಿಕ ಅಂಶಗಳ ಅಳವಡಿಕೆಸಿಕೊಂಡು ಒಂದು ಮಾಧರಿ ಡೈರಿ ಫಾರ್ಮ ಮಾಡುವ ಉದ್ದೇಶ ನಮ್ಮದು. ನನ್ನ ಕನಸಿನ ಒಂದು ಹಂತವಂತೂ ಈಗ ಸಾಕಾರಗೊಂಡಿದೆ. ಆಸೆಯೊಂದಿದ್ದರೆ ಎಲ್ಲವನ್ನು ನಾವು ಮಾಡಿಯೇ ಮಾಡುತ್ತೇವೆ ಎಂಬುದು ನನಗೊಂತು ಸದ್ಯಕ್ಕೆ ಅರಿವಾಗಿದೆ.  


            ಪೇಟೆಯ ಜೀವನ, ಸಾಫ್ಟ್ವೇರ್ ವೃತ್ತಿ , ನೆಮ್ಮದಿ ಕೊಡದ ಸುಳ್ಳು ಸಡಗರದ ಜೀವನ ಶೈಲಿ, ಇನ್ನು ಅನೇಕ ಅಂಶಗಳು ಮೊಂದೊಂದು ದಿನ ನನಗೆ  ಸಾಕಪ್ಪ ಸಾಕು ಎನ್ನಿಸುವುದು ನಿಶ್ಚಿತ. ಆ ಸಮಯದಲ್ಲಿ ನಾನು ಫುಲ್ ಟೈಮ್ ದನಕಾಯುವ ಕೆಲಸ ಮಾಡಿಕೊಂಡಿರಬೇಕು ಎನ್ನುವುದೇ ನನ್ನ ಆಸೆ. ನಾನು ನನ್ನ ಹೊಲದಲ್ಲಿ ದನಕಾಯುವಾಗ ನನ್ನ ಹೆಂಡತಿ ನನಗೆ ಮಧ್ಯಾನದ ಊಟಕ್ಕೆ ರೊಟ್ಟಿ-ಬುತ್ತಿ ತಂದೆ ತರುತ್ತಾಳೆ ಎನ್ನುವುದು ನನ್ನ ಮತ್ತೊಂದು ಕನಸು.

ನಿಮಗಾಗಿ 
ನಿರಂಜನ್  

ಬುಧವಾರ, ಮಾರ್ಚ್ 25, 2015

ನಮ್ಮ ಸರ್ಕಾರ



ಹಣ 

ತಿಂದು ತೇಗ್ತಾರೆ
ನಮ್ಮ ಹಣ..
ಎದ್ದು ಕೇಳಿದರೆ
ಬೀಳುತ್ತೆ
ನಮ್ಮದೇ ಹೆಣ ...

ಆಚಾರ 

ಎಲೆಲ್ಲೂ ಬ್ರಷ್ಟಾಚಾರ
ಹೇಳುವುದು ಮಾತ್ರ
ಆಚಾರ ,
ಜನರ ಆಹಾಕಾರ
ಕೇಳಲ್ಲ ಸಿದ್ದು
ಸರ್ಕಾರ ...

ಮುದ್ದು

 ಮುದ್ದಿನಿಂದ 
 ಅಧಿಕಾರಕ್ಕೀರಿ'ಸಿದ್ದ'
 ಜನತೆಗೆ...
 ಸಿದ್ದುವಿನಿಂದ
 ಅನ್ಯಾಯ,ಅಕ್ರಮಗಳ ಗುದ್ದು ...


ನಿಮಗಾಗಿ
ನಿರಂಜನ್ 

ಶುಕ್ರವಾರ, ಮಾರ್ಚ್ 20, 2015

World Sparrow Day

                                           ಗುಬ್ಬಿಗಳು ಹಾಗು ಅವುಗಳ ಆವಾಸ ....

ಸ್ನೇಹಿತರೆ , ನಾವು ಚಿಕ್ಕವರಿದ್ದಾಗ ಕಾಗಕ್ಕ-ಗುಬ್ಬಕ್ಕನ ಕತೆಗಳನ್ನ ನಮ್ಮ ಅಜ್ಜಿಯರಿಂದ,ಅಪ್ಪ-ಅಮ್ಮನಿಂದ , ಪಂಚತಂತ್ರ ಕತೆಗಳಲ್ಲೂ ಬಹಳ ಕೇಳಿದ್ದೇವೆ. ಹಾಗೆಯೇ ಗುಬ್ಬಿಗಳ ಬಗ್ಗೆ ವಿಶೇಷವಾಗಿ ಅನೇಕ ಕಲ್ಪನೆಗಳನ್ನು ಮಾಡಿಕೊಂಡು, ಹಾರುವ ಹಕ್ಕಿ-ಪಕ್ಷಿಗಳನ್ನೂ ನೋಡಿ ಆನಂದವನ್ನು ಸಹ ಪಟ್ಟಿದ್ದೇವೆ. ನಮಗೆ ದಿನಬೆಳಗಾದರೆ ಮನೆಯ ಸುತ್ತಮುತ್ತಲಿನ ಗಿಡಗಳಲ್ಲಿ, ಹೂಬಳ್ಳಿ-ಬೇಲಿಗಳಲ್ಲಿ, ಎಲ್ಲೆಂದರಲ್ಲಿ ಗುಂಪು-ಗುಂಪು ಸುಂದರ ಗುಬ್ಬಿಗಳ ಕಾಣುತ್ತಿದ್ದವು. ಅವು ನಮ್ಮ ಜೊತೆ-ಜೊತೆಯಲ್ಲೇ ವಾಸಮಾಡುತ್ತಿದ್ದವು. ಅವುಗಳಿಂದ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಅನೇಕ ಉಪಯೋಗಗಳು ಸಹ ಇದ್ದವು. ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಗುಬ್ಬಿಗಳು ಸಹ ತಮ್ಮ ಕಾರ್ಯ ನಿರ್ವಹಿಸುತ್ತಿದ್ದವು.  ಆದರೆ ಈಗ ಪರೀಸ್ತಿತಿ ಸಂಪೂರ್ಣ ಬದಲಾಗಿದೆ, ಅಲ್ಲವೇ ?



ಕೆಲವು ವರ್ಷಗಳ ಹಿಂದೆ, ನಮ್ಮ ಅದೃಷ್ಟಕ್ಕಾದರು  ಕತೆಗಳಲ್ಲಿ ಕೇಳಿದ ಗುಬ್ಬಿಗಳನ್ನು ನಮ್ಮ ಕಣ್ಣಲ್ಲೇ, ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿ ನೋಡುವ ಅವಕಾಶವಾದರೂ ಇತ್ತು. ಆದರೆ ಈಗ ಕಾಗಕ್ಕ ಅಲ್ಲಿ-ಇಲ್ಲಿ ಕಂಡರೂ , ಗುಬ್ಬಕ್ಕನ ಮಾತ್ರ ಕಾಣ ಸಿಗುವುದಿಲ್ಲ. ಕಾರಣ , ನಾಗರೀಕತೆಯ ಉತ್ತುಂಗದ ಶಿಖರವೇರುವ ಹಾತುರದಲ್ಲಿ , ನಾವು ಗುಬ್ಬಿಗಳ ಆವಾಸಕ್ಕೆ ದಕ್ಕೆ ತಂದಿದ್ದವೆ. ಸಂಪೂರ್ಣ ನಗರೀಕರಣ, ಮರಗಿಡಗಳ ನಾಶ, ಮನೆಯ ಸುತ್ತಮುತ್ತ ಸ್ವಲ್ಪವೂ ಹಸಿರು ಬೆಳೆಯಲು ಬಿಡದೆ ಕಾಂಕ್ರೀಟುಕರಣ ಮಾಡುವುದರ  ಫಲವಾಗಿ, ನಮಗೆ ಇಂದು ಗುಬ್ಬಿಗಳು ನಗರ ಪ್ರದೇಶದಲ್ಲಿ ಕಾಣ ಸಿಗುತ್ತಿಲ್ಲ, ಒಂದು ಅರ್ಥದಲ್ಲಿ ನಗರಗಳಲ್ಲಿ ಗುಬ್ಬಿಗಳೇ ನಾಶವಾಗಿವೆ. ಹಳ್ಳಿಗಳಲ್ಲಿ ಕೂಡ ಅವುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ.  

ಇದನ್ನು ಅರಿತ ಭಾರತದ ಒಂದು ಸಂಸ್ಥೆ " Nature Forever Society" ಮಾರ್ಚ್ ೨೦ ನ್ನು ಪ್ರಪಂಚದ ಗುಬ್ಬಿ ದಿನವನ್ನಾಗಿ ಆಚರಿಸುವುದರ ಜೊತೆಗೆ , ಜನರಲ್ಲಿ ಗುಬ್ಬಿಗಳ ಹಾಗು ಅವುಗಳ ಆವಾಸದ ಬಗ್ಗೆ ಜಾಗೃತಿ ಮೂಡಿಸಲು ಒಂದು ಒಳ್ಳೆಯ ಚಿಕ್ಕ ಹೆಜ್ಜೆಯನ್ನಿಟ್ಟಿತು. ಕಳೆದ ೫ ವರ್ಷಗಳ ಕೆಳಗೆ ಭಾರತದಲ್ಲಿನ ಈ ಒಂದು ಚಿಕ್ಕ ಸಂಸ್ಥೆ ಪ್ರಾರಂಬಿಸಿದ ಈ ಗುಬ್ಬಿ ದಿನಾಚರಣೆ ಹಾಗು ಅದರ ಉದ್ದೇಶವನ್ನು ಅರಿತ ಅನೇಕ ಅನೇಕ ರಾಷ್ಟ್ರಗಳು, ಇಂದು ತಮ್ಮ ದೇಶಗಳಲ್ಲೂ ಗುಬ್ಬಿಗಳ ಹಾಗು ಇತರೆ ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು " World Sparrow Day" ಎಂದು ಘೋಷಿಸಿ , ಆಚರಣೆಯನ್ನು ಮಾಡುತ್ತಾರೆ. 

ಗುಬ್ಬಿಗಳು ನಮ್ಮ ಬೆಳೆಗಳಲ್ಲಿನ ಕೀಟಗಳನ್ನು ತಿನ್ನುವುದರಿಂದ ರೈತನಿಗೆ ಸಹಾಯವಾಗಿವೆ. ಅದೇ ರೀತಿ ಮನೆಯ ಸುತ್ತಮುತ್ತಲಿನ ಗಿಡಗೆಂಟೆಗಳಲ್ಲಿನ ಅನೇಕ ಕೀಟಗಳನ್ನು ತಿಂದು ನಮ್ಮ ಸುತ್ತಲಿನ ಸ್ವಾಸ್ಥ್ಯ ಕಾಪಾಡುತ್ತವೆ. ಅತಿಯಾದ ನಗರೀಕರಣ, ಗಿಡ ಮರಗಳ ನಾಶ, ಅತ್ಯಾದುನಿಕ ತಾಂತ್ರಿಕತೆ, ಗುಬ್ಬಿಗಳ ಆವಾಸಕ್ಕೆ ದಕ್ಕೆ ಮಾಡುತ್ತಿವೆ ಎಂಬುವುದರಲ್ಲಿ ಎರಡು ಮಾತಿಲ್ಲ.ನಗರ ಪ್ರದೇಶಗಳಲ್ಲಿ ಪಕ್ಷಿಗಳಿಗೆ ಕುಡಿಯುವ ನೀರು,ತಿನ್ನಲು ಆಹಾರ ಸಿಗುತ್ತಿಲ್ಲ,ಗೂಡು ಕಟ್ಟಲು ಮರ ಗಿಡಗಳಿಲ್ಲ. ಹಾಗಾಗಿ ಅವುಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಇದು ಹೀಗೆಯೇ ಮುಂದುವರೆದರೆ ಮುಂದೊಂದು ದಿನ, ಕತೆ ಹಾಗು ಚಿತ್ರಪಟಗಳಲ್ಲಿ ಮಾತ್ರ ನಾವು ಗುಬ್ಬಿಗಳನ್ನು ನೋಡಬೇಕಾಗುತ್ತದೆ. 



ಗುಬ್ಬಿಗಳು ನಮ್ಮ ಪ್ರಕೃತಿಯಿಂದ ಸಂಪೂರ್ಣ ನಾಶವಾಗುವ ಮೊದಲು ನಾವು ಎಚ್ಚೆತ್ತುಕೊಂಡು, ನಮ್ಮ ಕೈಲಾದ ರೀತಿಯಲ್ಲಿ  ಅವುಗಳ ಸಂರಕ್ಷಣೆ ಮಾಡುವ ದಿಸೆಯಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ನಾವು ಮಾಡಬಹುದಾದಂತ ಸಣ್ಣ ಪುಟ್ಟ ಕೆಲಸಗಳೆಂದರೆ , 

೧.  ಸಣ್ಣ ಸಣ್ಣ ಗುಬ್ಬಿ ಗೂಡುಗಳನ್ನು ನಿರ್ಮಿಸಿ ಮನೆಯ ಕೈದೋಟಗಳಲ್ಲಿ, ಸುತ್ತಲ್ಲಿನ ಗಿಡ-ಮರಗಳಲ್ಲಿ, ಕಂಪೌಂಡಿನ ಅಂಚುಗಳಲ್ಲಿ ಇಟ್ಟರೆ, ಗುಬ್ಬಿಗಳು ಅವುಗಳನ್ನು ತಮ್ಮ ಆವಾಸವಾಗಿ ಪರಿವರ್ಥಿಸಿಕೊಳ್ಳುತ್ತವೆ. ಈ ರೀತಿಯ ಪ್ರಯೋಗ ಸಂಶೋದನೆಗಳಿಂದ ಕೂಡ ದೃಡ ಪಟ್ಟಿದೆ. 
೨. ಬೇಸಗೆಯ ಸಮಯವಾದ್ದರಿಂದ, ಮನೆಯ ಅಂಗಳಗಳಲ್ಲಿ, ಅಂಚುಗಳ ಮೇಲೆ, ಮನೆಯ ತಾರಾಸಿನ ಮೇಲೆ ಬಟ್ಟಲುಗಳಲ್ಲಿ ನೀರು ತುಂಬಿ ಇಡುವುದು. 
೩. ಕಾಳು-ಕಡೆಗಳನ್ನು ಕಸದ ಪುಟ್ಟಿಗೆ ಹಾಕುವ ಬದಲು ಪಕ್ಷಿಗಳು ತಿನ್ನುವಂಥಹ ಜಾಗಳಲ್ಲಿ ಹಾಕಬೇಕು. 
೪. ಚಿಕ್ಕ ಮಕ್ಕಳಲ್ಲಿ ಗುಬ್ಬಿ ಹಾಗು ಇತರ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವುದು, ಕುತೂಹಲ ಬೆಳೆಸುವುದು. 
೫. ಮನೆಯ ಸುತ್ತಲಿನ ಖಾಲಿ ಜಾಗಗಳನ್ನು ಕಾಂಕ್ರೀಟುಕರಣಗೊಳಿಸದೆ , ಗಿಡ-ಬಳ್ಳಿಗಳನ್ನು ನೆಡುವುದು. 

ಹೀಗೆ ಇನ್ನು ಅನೇಕ ರೀತಿಗಳಲ್ಲಿ ನಮ್ಮ ಮನೆಯ ಸುತ್ತ ನಾವು ಗುಬ್ಬಿಗಳಿಗೆ  ಜೀವಿಸಲು ಯೋಗ್ಯವಾದ ವಾತಾವರಣವನ್ನು ನಿರ್ಮಿಸಿದರೆ, ನಾವು ಕೂಡ ಅವುಗಳ ಜೊತೆಗೆ ಜೀವಿಸಬಹುದು. ಇಲ್ಲವಾದರೆ ಅವುಗಳ ಅವಾಸವನ್ನು ಕಸಿದುಕೊಂಡ ಪಾಪಕ್ಕೆ ನಾವು ಗುರಿಯಾಗುವುದಂತೂ ಖಂಡಿತ. ಜೊತೆಗೆ ನಾವು ಮುಂದಿನ ಪೀಳಿಗೆಗೆ ಅಸಮತೋಲನ ಪ್ರಕೃತಿಯನ್ನು ಬಿಟ್ಟು ಹೋಗಬೇಕಾಗುತ್ತದೆ ಕೂಡ.


 
ನಿಮಗಾಗಿ 
ನಿರಂಜನ್ 

ಸೋಮವಾರ, ಮಾರ್ಚ್ 16, 2015

ದಾರಿ ತಪ್ಪಿತೇ ಆಮ್ ಆದ್ಮಿ ಪಕ್ಷ ???

                                                   
ಮ್ ಆದ್ಮಿ ಪಕ್ಷ ತಾನು ಹುಟ್ಟಿದಾಗಿನಿಂದ ತಾನೇನೋ  ಬೇರೆ ಪಕ್ಷಗಳಿಗಿಂತ ಬಹು ಬಿನ್ನ ಹಾಗು ನಾನು ಹುಟ್ಟಿರುವುದೇ ಸ್ವಚ್ಚ ಹಾಗು ಪಾರದರ್ಶಕ ರಾಜಕೀಯ ಮಾಡಲು ಎಂದು ಸಾರಿ ಸಾರಿ ಹೇಳಿಕೊಳ್ಳುತಿತ್ತು. ಅದೇ  ಕಾರಣಕ್ಕಾಗಿ ಅನೇಕ ಚಿಂತಕರು, ದೇಶದ ಯುವಜನತೆ ಹಾಗು ಹೋರಾಟಗಾರರು ನೂರಾರು ಕನುಸುಗಳೊಂದಿಗೆ, ಬಹಳ ಆಶಾವಾದದಿಂದ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು.

              ಮಳೆಬಂದಾಗ ಭೂಮಿಯಿಂದ ಮೇಲೇಳುವ  ನಾಯಿ ಕೊಡೆಗಳಂತೆ ಅಥವಾ ಅಣಬೆಗಳಂತೆ, ನಮ್ಮ ದೇಶದಲ್ಲೂ ಪ್ರತಿ ವರ್ಷ ಅನೇಕ ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಮೇಲೇಳುತ್ತವೆ ಹಾಗೆಯೇ ಚುನಾವಣೆಯ ನಂತರ ಮರೆಯೂ ಆಗುತ್ತವೆ. ಆಮ್ ಆದ್ಮಿ ಪಕ್ಷ   ಹುಟ್ಟಿದಾಗ ಕೂಡ ಅದೇ ರೀತಿಯಾಗಿ ಮರೆಯಾಗುವ ತಾತ್ಕಾಲಿಕ ಪಕ್ಷಗಳಲ್ಲಿ ಇದೂ ಒಂದು ಎಂದು ಅನೇಕ ಮಂದಿ ವಿಶ್ಲೇಷಿಸಿದರು. ಕಾಂಗ್ರೇಸ್ ಹಾಗು  ಬಿಜೆಪಿ ಪಕ್ಷಗಳು ಕೂಡ ಹಾಗೆಯೇ ಊಹಿಸಿ , ಆಮ್ ಆದ್ಮಿ ಪಕ್ಷವನ್ನು ಲಘುವಾಗಿ ಪರಿಗಣಿಸಿ ಅಣಕವಾಡಿದ್ದರು ಕೂಡ. ಆದರೆ AAP ಆ ರೀತಿಯ ಎಲ್ಲಾ ಊಹೆಗಳನ್ನು ಹುಸಿಮಾಡಿ, ಸ್ಪರ್ದಿಸಿದ ಮೊದಲ ಚುನಾವಣೆಯಲ್ಲೇ ಭರ್ಜರಿ ಗೆಲುವಿನಿಂದ ದೆಹೆಲಿಯಲ್ಲಿ ನೆಲೆಯೂರಿತು. ಆ ಭಾರಿ ಅದು ಚುನಾವಣಾ ಸ್ಪರ್ದಿಸಿದ ರೀತಿ, ಪ್ರಚಾರದಲ್ಲಿ ಬಳಸಿದ ವಿಧಾನಗಳು ಹಾಗು AAP ಸ್ಪರ್ದಿಗಳು ಎದುರಾಳಿಗಳನ್ನು ಹಣಬಲವಿಲ್ಲದಿದ್ದರು ಸೋಲಿಸಿದ ರೀತಿ ನಿಜಕ್ಕೂ ಒಂದು ಬಗೆಯ ಹೊಸ ರಾಜಕೀಯಕ್ಕೆ ನಾಂದಿ ಹಾಡಿತ್ತು. ಆ ಅಭೂತಪೂರ್ವ ಗೆಲುವಿಗೆ ಕಾರಣ ಬರಿ ಆ ಪಕ್ಷದ ಹೋರಾಟದ ತಳಹದಿಯೂ ಅಲ್ಲ, ಹಾಗೆಯೇ ದೈತ್ಯ ನಾಯಕ ಅರವಿಂದ್ ಕೆಜ್ರಿವಾಲ್ ಕೂಡ ಅಲ್ಲ. 


              ನನ್ನ ಪ್ರಕಾರ ಆಪ್ ಗೆಲುವಿಗೆ ಹಾಗು ಅದರ ಜನಪ್ರಿಯತೆಗೆ ಅನೇಕ ಪ್ರಮುಖ ಕಾರಣಗಳಿದ್ದವು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ , ಆಮ್ ಆದ್ಮಿ ಪಕ್ಷ ಹುಟ್ಟಿದ ತಳಹದಿ, ತತ್ವ- ಸಿದ್ದಾಂತಗಳು , ಪಾರದರ್ಶಕತೆ , ಸಾಮಾನ್ಯನೂ ಕೂಡ ನಾಯಕರ ನೈತಿಕತೆಯನ್ನು  ಪ್ರಶ್ನಿಸಬಹುದಾಗಿದ್ದ ಆಂತರಿಕ ಪ್ರಜಾಪ್ರಭುತ್ವ, ಸ್ವಚ ರಾಜಕೀಯ ಮಾಡುವ ಪಕ್ಷದ ಹಿಂಗಿತ. ಅದೇ ರೀತಿ ಅಂದಿನ ರಾಜಕೀಯ ಪರಿಸ್ಥಿತಿ ಕೂಡ, ಹಾಗೆ ತಾನೇ ಹುಟ್ಟಿದ್ದ ಆಮ್ ಆದ್ಮಿ ಪಕ್ಷಕ್ಕೆ ಬಹಳ ಅನುಕೂಲಕರ ವಾತಾವರಣವನ್ನು ಕಲ್ಪಿಸಿತ್ತು. ಸತತ ೧೫ ವರ್ಷ ಅಧಿಕಾರದಲಿದ್ದ ಶೀಲ ದೀಕ್ಷಿತ್ ಸರ್ಕಾರ ಮಾಡಿದ್ದ ಶೇಷ ಅಬಿವೃದ್ದಿ, ಅನೇಕ ಅಕ್ರಮ ಹಗರಣಗಳು ಹಾಗೆಯೇ ಆ ಹಗರಣಗಳನ್ನು ಸರಿಯಾದ ರೀತಿಯಲ್ಲಿ ವಿರೋದಿಸದ ಮತ್ತು ಸರ್ಕಾರ ವಿರೋದಿ ಅಲೆಯನ್ನು ಸದುಪಯೋಗ ಪಡಿಸಿಕೊಳ್ಳಲೂ ಅಸಮರ್ಥವಾಗಿದ್ದ ದೆಹೆಲಿಯ ಪ್ರಾದೇಶಿಕ ಬಿಜೆಪಿ ಬಳಗ ಕೂಡ ಆಮ್ ಆದ್ಮಿ ಪಕ್ಷದ ಚಿಂತನೆ ಸಮಾಜದಲ್ಲಿ ಬೇರೂರಲು ಸಹಕಾರ ಮಾಡಿದ್ದವು. ಇನ್ನು ಅನೇಕ ವಿಷಯಗಳು ಆಪ್ ಉಗಮಕ್ಕೆ ಹಾಗು ಜನರು ಅದರತ್ತ ನೋಡಲು ಸಹಕಾರಿಯಾದವು ಎಂದು ಹೇಳಿದರೆ ತಪ್ಪಾಗಲಾರದು.  

             ತನ್ನ ಮೊದಲ ಚುನಾವಣೆಯಲ್ಲೇ ನಿರೀಕ್ಷೆಗೂ ಮೀರಿ ಜನಮನ್ನಣೆ ದೊರೆತ ನಂತರ  ಪತ್ರಕರ್ತರು, ಹೋರಾಟಗಾರರು, ರಾಜಕೀಯ ವಿಶ್ಲೇಷಕರು ಆಮ್ ಆದ್ಮಿ ಪಕ್ಷವನ್ನು ಇತರ ಪಕ್ಷಗಳಿಗಿಂತ ವಿಬಿನ್ನವೆಂಬಂತೆ  ಮಾದ್ಯಮದಲ್ಲಿ ಬಿಂಬಿಸಿದರು. ಆಪ್ ಮ್ ಆದ್ಮಿ ಪಕ್ಷ ಕೇವಲ ಒಂದು ಪಕ್ಷವಲ್ಲ ಇದೊಂದು ಹೋರಾಟ, ಜನಸಮಾನ್ಯರ  ಕನಸು, ದೇಶದ ಸಾಂಪ್ರದಾಯಿಕ ರಾಜಕೀಯ ವ್ಯವಸ್ತೆಯನ್ನೇ ಬುಡಮೇಲು ಮಾಡುವ ಪರ್ಯಾಯ ರಂಗವೆಂದೆ ಜನರು ಭಾವಿಸಿದರು.  ಆಮ್ ಆದ್ಮಿ ಪಕ್ಷ ಕೂಡ ಆ ಸಮಯಕ್ಕೆ ಅದೇ ಮೂಲ ಮೌಲ್ಯಗಳನ್ನು ಅಳವಡಿಸಿಕೊಂಡು, ಜನರಿಗೆ ನಿಜವಾಗಿಯೂ ಹತ್ತಿರವಾಗುತ್ತಿತ್ತು. ನಾಯಕರ ಸರಳತೆ, ೪೯ ದಿನ ಅದಿಕಾರದಲ್ಲಿದ್ದಾಗ ಮಾಡಿದ್ದ ಜನಪ್ರಿಯ ಕೆಲಸಗಳು,  ರಾಜನಾಮೆ ನೀಡಿ ಮಾಡಿದ್ದ ತಪ್ಪುಗಳಿಗೆ ಬಹಿರಂಗವಾಗಿ ಕ್ಷಮೆ ಕೇಳಿದ ರೀತಿ ನಿಜವಾಗಿಯೂ ಆಪ್ ಪಕ್ಷಕ್ಕೆ ಮತ್ತೆ ನಡೆದ ವಿಧಾನಸಬೆಯಲ್ಲೂ ಕೂಡ ಅಚ್ಚರಿಯ ಗೆಲುವನ್ನು ತಂದುಕೊಟ್ಟವು.ಆಮ್ ಆದ್ಮಿ ಪಕ್ಷ  ಎರಡನೇ ಬಾರಿಗೆ  ಸಂಪೂರ್ಣ ಬಹುಮತದಿಂದ ಅದಿಕಾರಕ್ಕೆ ಬಂದಿತು. ಈ ಭಾರಿಯೂ ಕೂಡ ಆಮ್ ಆದ್ಮಿ ಪಕ್ಷದ ಅಭೂತಪೂರ್ವ ಗೆಲುವಿಗೆ ಕಾರಣ ಕೂಡ  ಕೇವಲ ಒಬ್ಬ ವ್ಯಕ್ತಿಯಲ್ಲ. ಬದಲಾಗಿ ಇಡೀ ಪಕ್ಷ, ಪಕ್ಷದ ಸದ್ಯಸ್ಯರು ಹಾಗು ಅದರ ಕಾರ್ಯಕರ್ತರು ಒಗ್ಗಟ್ಟಾಗಿ ಚುನಾವಣೆಯಲ್ಲಿ ದುಡಿದ ರೀತಿ, ಧನಾತ್ಮಕ ಪ್ರಚಾರ, ನಾಯಕರ ಒಗ್ಗಟ್ಟಿನ ಚುನಾವಣ ತಂತ್ರಗಳು ನಿಜವಾಗಿಯೂ  ಆಮ್ ಆದ್ಮಿ ಪಕ್ಷಕ್ಕೆ ತಾನೇ  ನಂಬಲಾಗದ ರೀತಿಯಲ್ಲಿ ಗೆಲುವು ತಂದು ಕೊಟ್ಟವು. ಇದರ ಫಲವಾಗಿ ಎರಡನೇ ಬಾರಿಗೆ ಅರವಿಂದ್ ಕೆಜ್ರಿವಾಲ್ ಮುಖ್ಯಮಂತ್ರಿಯೂ ಆದರು. ದೆಹಲಿಯ ಜನರು ಸುಭದ್ರ ಸರ್ಕಾರದೊಂದಿಗೆ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕೇಜ್ರಿವಾಲ್ ಸರ್ಕಾರದಿಂದ ನಿರೀಕ್ಷಿಸಿತ್ತಿದ್ದರು. ಜನರ ಸಮಸ್ಯಗಳು ಇನ್ನೇನು ಕೆಲವೇ ದಿನಗಳಲ್ಲಿ ದೂರವಾಗುವುವು, ಆಪ್ ಸರ್ಕಾರ ಜನರ ಆಶೋತ್ತರಗಳಿಗೆ ಮಿಡಿಯುವುದರ ಜೊತೆಗೆ ದೆಹೆಲಿಯನ್ನು ಒಂದು ಮಾಧರಿ ನಗರವನ್ನಾಗಿ ನಿರ್ಮಿಸಿ, ಇಡೀ ದೇಶವೇ ದೆಹೆಲಿಯ ಕಡೆಗೆ ನೋಡುವಂತೆ ಮಾಡುತ್ತದೆ ಎಂದು ಬಹಳವಾಗಿ ಭರವಸೆಗಳನ್ನು ಇಟ್ಟುಕೊಂಡಿದ್ದರು. ದೇಶಕ್ಕೆ ದೇಶವೇ ಆಮ್ ಆದ್ಮಿ ಪಕ್ಷವನ್ನು ಹಾಗು ಅದರ ಸರ್ಕಾರವನ್ನು ಸೂಕ್ಷ್ಮವಾಗಿ ಪ್ರತಿದಿನವೂ ಗಮನಿಸತೊಡಗಿದರು. ಆದರೆ ಇತೀಚಿನ ಕೆಲವು ದಿನಗಳಿಂದ ಆಮ್ ಆದ್ಮಿ ಪಕ್ಷದಲ್ಲಿ ನಡೆಯುತ್ತಿರುವ ಘಟನಾವಳಿಗಳು ಜನರಲ್ಲಿ ತೀರ ನಿರಾಸೆ ಮೂಡಿಸಿವೆ. ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಬಿನ್ನಬಿಪ್ರಾಯದ ಬೆಂಕಿ ಕಾಣಿಸಿದೆ. ಪಕ್ಷದಲ್ಲಿನ ಈ ಬಿನ್ನಬಿಪ್ರಾಯದ ಜ್ವಾಲೆ ಸರ್ಕಾರದ ಮೇಲೆ ಯಾವ ಪರಿಣಾಮ ಬೀರಬಹುದೆಂದು ಕಾಲವೇ ಹೇಳಬೇಕಿದೆ.

                 ಆಮ್ ಆದ್ಮಿ ಪಕ್ಷದ ಈ ಒಳಜಗಳಕ್ಕೆ ಅನೇಕ ಕಾರಣಗಳಿರಬಹುದು, ಇದೊಂದು ಬೇರೆ ರೀತಿಯ ಪಕ್ಷವೆಂದೇ ಭಾವಿಸಿದ್ದ ಜನರಿಗೆ ನಿರಾಸೆ ಹಾಗು ದುಃಖ ಉಮ್ಮಳಿಸಿ ಬರತೊಡಗಿದೆ. ಚುನಾವಣೆಗು ಮೊದಲು ಕಾಣಿಸಿದ್ದ ಆ ನಾಯಕರ ಒಗ್ಗಟ್ಟು ಅದಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮುರಿದುಬಿದ್ದಿದೆ. ಕೆಲವು ನಾಯಕರುಗಳಲ್ಲಿ ಪರಸ್ಪರ ನಂಬಿಕೆಯ ಕೊರತೆ ಎದ್ದು ಕಾಣುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಜನರಿಗೆ, ಪಕ್ಷ ಪ್ರೇಮಿಗಳಿಗೆ ತಮ್ಮ ಪಕ್ಷ ಮೂಲ ಸಿದ್ದಾಂತಗಳನ್ನೇ ಗಾಳಿಗೆತೂರಿದೆ ಎನ್ನುವ ಭಾವ ಕಾಡತೊಡಗಿದೆ. ಪ್ರತಿದಿನವೂ ಆರೋಪ, ಪ್ರತ್ಯಾರೋಪಗಳ ಮಳೆಯೇ ಸುರಿಯುತ್ತಿದೆ ಎಲ್ಲೆಂದರಲ್ಲಿ. ಟ್ವಿಟ್ಟರ್, ಫೇಸ್ಬುಕ್ , ಟೀವಿ ಹಾಗು ದಿನಪತ್ರಿಕೆಗಳಲ್ಲಿ ನಾಯಕರ ಕೆಸರೆರಚಾಟ , ಆಶಾಭರಿತನಾಗಿದ್ದ ಜನಸಾಮಾನ್ಯನಿಗೆ ಹೇಸಿಗೆ ಬರಿಸಿದೆ. ನಾಯಕರ ಈ ಕಿತ್ತಾಟ ಆಮ್ ಆದ್ಮಿ ಪಕ್ಷದ ಬುಡವನ್ನೇ ಇಬ್ಬಾಗವಾಗಿ ಸೀಳುವುದರ ಜೊತೆಗೆ ಕಾರ್ಯಕರ್ತರ ಆತ್ಮ ವಿಶ್ವಾಸವನ್ನೇ ಕುಂದಿಸಿದೆ. ಈ ಎಲ್ಲಾ ಬೆಳವಣಿಗೆಗಳು ಸದಸ್ಯರನ್ನು , ಕಾರ್ಯಕರ್ತರನ್ನು ತೀರ ಮುಜುಗರಕ್ಕೀಡು ಮಾಡಿವೆ ಕೂಡ. ತಿಂಗಳ ಹಿಂದೆಯಷ್ಟೇ ಹಾಡಿ ಹೋಗಳಿದ್ದ ಸುದ್ದಿವಾಹಿನಿಗಳು, ಪತ್ರಕರ್ತಕರು ಈಗ ಮನಸೋ ಇಚ್ಚೆ ಉಗಿಯುವೊಷ್ಟು ಕೀಳುಮಟ್ಟದ ರಾಜಕೀಯ ಮಾಡುತಿದೆ  ಆಮ್ ಆದ್ಮಿ ಪಕ್ಷ. ಇದೊಂದು ತುಂಬಾ ವಿಷಾದದ ಸಂಗತಿ. ನಿಜವಾಗಿಯೂ ಇದೊಂದು ದುರಾದೃಷ್ಟಕರ ಬೆಳವಣಿಗೆಯೂ ಕೂಡ. ಜನರು,ಮತದಾರರು ಕಟ್ಟಿದ ಕನಸುಗಳು ನುಚ್ಚು ನೂರಾಗಿವೆ. ಪಕ್ಷದ ಅದಿನಾಯಕರು ತಮ್ಮ ಅಹಮ್ಮುಗಳನ್ನು ಬಿಟ್ಟು, ತಮ್ಮ ತಮ್ಮ ಜವಾಬ್ದಾರಿಯನ್ನು ತಾವು ಅರಿತುಕೊಂಡರೆ ಮಾತ್ರ ಪಕ್ಷ ಉಳಿಯಬಹುದೇ ಹೊರತು ಈ ರೀತಿಯ ಕೀಳು ಮಟ್ಟದ, ಸಂಕುಚಿತ ರಾಜಕೀಯ ಮಾಡಿದರೆ, ಮುಂದೊಂದು ದಿನ ಜನಸಾಮಾನ್ಯರು ಪಕ್ಷದಿಂದ ದೂರ ಸರಿಯುವುದಂತು ನಿಜ. ತತ್ವ ಸಿದ್ದಾಂತಗಳನ್ನು ಬಿಟ್ಟಮೇಲೆ ಒಬ್ಬ ಕಾರ್ಯಕರ್ತ ಯಾವ ಕಾರಣಗಳಿಗೆ ಆಮ್ ಆದ್ಮಿ ಪಕ್ಷಕ್ಕೆ ದುಡಿಯಬೇಕು ?? ಬೇರೆ ಪಕ್ಷಗಳಿಗಿಂತ ನಾವು ವಿಬಿನ್ನ ಎನ್ನುತ್ತಿದ್ದ ನಾಯಕರು ಈಗ ಆಗುತ್ತಿರುವ ಬೆಳವಣಿಗೆಗಳಿಗೆ ಏನೆಂದು ಉತ್ತರ ಕೊಡುತ್ತಾರೆ ?? ಈ ಜಗಳದಿಂದ ನಿಜವಾಗಿಯೂ ಪಕ್ಷಕ್ಕೆ ಒಳ್ಳೆಯದಾಗುವುದೇ ?? ಎಂದು ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪಕ್ಷವು ತಾನು ತುಳಿಯುತ್ತಿರುವ ಹಾದಿಯ ಬಗ್ಗೆ ಸ್ವಲ್ಪ ಯೋಚಿಸಿ, ಚಿಂತನೆ ಮಾಡಿಕೊಳ್ಳಬೇಕಿದೆ. ನಾಯಕರು ಈ ತಕ್ಷಣಕ್ಕೆ ತಮ್ಮ ವರ್ತನೆಗಳನ್ನು ಬದಾಲಾಯಿಸಿಕೊಳ್ಳದಿದ್ದರೆ, ತಮ್ಮ ಮೂಲ ತತ್ವ ಸಿದ್ದಾಂತಗಳಿಗೆ ತಿಲಾಂಜಲಿ ನೀಡದೆ, ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಟ್ಟರೆ ಮಾತ್ರ ಆಮ್ ಆದ್ಮಿ ಪಕ್ಷ ಒಂದು ವಿಬಿನ್ನ ಪಕ್ಷವಾಗಿ ಉಳಿಯುತ್ತದೆ. ಆಮ್ ಆದ್ಮಿ ಪಕ್ಷ ಕೂಡ ಬೇರೆ ಪಕ್ಷಗಳಂತೆ ಕೇವಲ ಒಂದು ಸಮಾನ್ಯ ಪಕ್ಷವಾದರೆ ಜನರು ಆಮ್ ಆದಿ ಪಕ್ಷವನ್ನು ಮತ್ತೆಂದು ಬೆಂಬಲಿಸುವುದಿಲ್ಲ. ಮಾಡಿದ ತಪ್ಪುಗಳಿಗೆ ಕ್ಷಮೆಕೇಳಿ, ಮತ್ತೆಂದೂ  ಈ ರೀತಿಯ ತಪ್ಪುಗಳು ಉದ್ಭವಿಸದಂತೆ, ಎಲ್ಲಾ ನಾಯಕರು ಒಟ್ಟಾಗಿ ಮುನ್ನೆಡೆಯ ಬೇಕಿದೆ. ಎಲ್ಲರನ್ನು ತಮ್ಮೊಂದಿಗೆ  ತೆಗೆದುಕೊಂಡು, ದಕ್ಷವಾಗಿ ಮುನ್ನೆಡೆಯುವ ಮನಸ್ಥಿಯನ್ನು ಪಕ್ಷದ ಅದಿನಾಯಕರು ತುರ್ತಾಗಿ ಬೆಳೆಸಿಕೊಳ್ಳದಿದ್ದರೆ ನಿಜವಾಗಿಯೂ ಈ ಪಕ್ಷಕ್ಕೆ ಕೆಟ್ಟ ಹೆಸರು ಬರುವುದು ನಿಶ್ಚಿತ. ಪಕ್ಷ ಕೆಟ್ಟು ಹೋಗಿ, ಎಷ್ಟೇ ವರ್ಷ ಆದಿಕಾರದಲಿದ್ದು ಎಂಥಹ ಘನಕಾರ್ಯಗಳನ್ನು ಮಾಡಿದರು ಜನರು  ಆಮ್ ಆದ್ಮಿ ಪಕ್ಷವನ್ನು  ಮತ್ತೆಂದೂ  ಒಪ್ಪುವುದಿಲ್ಲ, ಸ್ವೀಕರಿಸುವುದೂ ಇಲ್ಲ.  

              ಚುನಾವಣೆಯಲ್ಲಿ ಬರಿ ಗೆಲ್ಲುವುದೇ ಒಂದು ಪಕ್ಷದ ಮಾನದಂಡವಾಗುವುದಿಲ್ಲ. ಮೂಲ ಸಿದ್ದಾಂತಗಳು, ನಾಯಕರ ನೈತಿಕತೆ,  ಪಾರದರ್ಶಕ ರಾಜಕೀಯ, ಆಂತರಿಕ ಪ್ರಜಾಪ್ರಭುತ್ವ  ಯಾವುದೇ ಪಕ್ಷದ ಬೆನ್ನೆಲುಬು. ಅದೇ ರೀತಿ ಆಮ್ ಆದ್ಮಿ ಪಕ್ಷವು ಕೂಡ ವಿಬಿನ್ನ ಪಕ್ಷವಾಗುವುದಕ್ಕೆ ಮೂಲ ಕಾರಣ ಅದರ  ನೀತಿ ಸಿದ್ದಾಂತಗಳು ಮಾತ್ರ. ಇದನ್ನು ಮರೆತರೆ ಆಮ್ ಆದ್ಮಿ ಪಕ್ಷವೂ ಕೂಡ ಭಾರತದ ಮತ್ತೊಂದು ಸಮಾನ್ಯ ಪಕ್ಷದ ಸಾಲಿಗೆ ಸೇರುತ್ತದೆ. ಚುನಾವಣೆಯಲ್ಲಿ ಗೆಲ್ಲುವುದೊಂದೇ ಗುರಿಯನ್ನಾಗಿಸಿಕೊಳ್ಳದೆ, ಒಳ್ಳೆಯ ನೀತಿ-ಸಿದ್ದಾಂತಗಳೊಂದಿಗೆ, ಎಲ್ಲ ನಾಯಕರು  ಒಗ್ಗಟ್ಟಾಗಿ ಮುನ್ನೆಡೆದು, ಸಾಮನ್ಯ  ಜನರ ದ್ವನಿಯಾದರೆ ಮಾತ್ರ ಆಮ್ ಆದ್ಮಿ ಪಕ್ಷದ ಹುಟ್ಟಿಗೆ ಸಾರ್ತಕತೆ ಸಿಗುತ್ತೆದೆ ಹಾಗು ಲಕ್ಷಾಂತರ ನಿಸ್ವಾರ್ಥ ಕಾರ್ಯಕರ್ತರ ಕನಸು ನನಸಾಗುತ್ತದೆ.

ನಿಮಗಾಗಿ 
ನಿರಂಜನ್ 

ಮಂಗಳವಾರ, ನವೆಂಬರ್ 4, 2014

News channels

                            ದಾರಿ ತಪ್ಪಿಸುತ್ತಿರುವ ಖಾಸಗಿ ಸುದ್ದಿ ವಾಹಿನಿಗಳು  ???

ನಾವೆಲ್ಲ ನಮ್ಮಸುದ್ದಿ ಮಾದ್ಯಮಗಳನ್ನು  ನಮ್ಮ ದೇಶದ ನಾಲ್ಕನೇ ಆಧಾರ ಸ್ತಂಬವೆಂದು ಭಾವಿಸಿದ್ದೇವೆ  ಹಾಗು ಅಕ್ಷರಶಃ ಹಾಗೆಯೇ ಒಪ್ಪಿಕೊಂಡಿದ್ದೇವೆ ಕೂಡ. ನಮ್ಮ ಮಾದ್ಯಮಗಳು ಸತ್ಯದಿಂದ , ಪ್ರಾಮಾಣಿಕತೆಯಿಂದ , ನಿಷ್ಟೂರತೆಯನ್ನೂ  ಕೂಡ ಲೆಕ್ಕಿಸದೆ ಸಮಾಜದ  ಏಳಿಗೆಗಾಗಿ ದುಡಿಯುತ್ತವೆ ,  ಇದರಿಂದ ಸಮಾಜದ ಅರೋಗ್ಯ ಹೆಚ್ಚುತ್ತದೆ , ಹಲವು ಸಮಸ್ಯಗಳ ಮೇಲೆ ಮಾಧ್ಯಮದವರು ಬೆಳಕು ಚೆಲ್ಲಿ , ನಿಷ್ಪಕ್ಷಪಾತ ವರದಿಗಳನ್ನು ನೀಡುತ್ತಾರೆ , ಸರ್ಕಾರಗಳನ್ನು ಎಲ್ಲ ಸಮಯದಲ್ಲಿ ಹೆಚ್ಚರಿಸುತ್ತಾರೆ , ನೊಂದವರ ದ್ವನಿಯಾಗುತ್ತಾರೆ , ಜನರಲ್ಲಿ ಜಾಗೃತಿ ಮೂಡಿಸುತ್ತಾರೆ , ಒಟ್ಟಾರೆ ಸಮಾಜದ  ಏಳಿಗೆಗಾಗಿ , ಅಬಿವೃದ್ದಿಗಾಗಿ ದುಡಿಯುತ್ತಾರೆ  ಎಂದು ನಾವು ಭಾವಿಸಿದ್ದೇವೆ . ಆದರೆ ನಮ್ಮ ಎಲ್ಲಾ  ಸುದ್ದಿ ಮಾಧ್ಯಮಗಳು  ಅದರಲ್ಲೂ , ಖಾಸಗಿ ದೃಶ್ಯ ಮಾದ್ಯಮಗಳು ಈ  ರೀತಿಯಾಗಿ ನಿಜವಾಗಿಯೂ  ಕಾರ್ಯ ನಿರ್ವಹಣೆ ಮಾಡುತ್ತಿವೆಯಾ ?? ನಾವು ಅಂದುಕೊಂಡ ಹಾಗೆ  ತಾರತಮ್ಯವಿಲ್ಲದೆ , ನಿಷ್ಪಕ್ಷಪಾತವಾಗಿ , ಪ್ರಾಮಾಣಿಕವಾಗಿ  ಮಾದ್ಯಮಗಳು  ಸಮಾಜದ ಉದ್ದಾರಕ್ಕಾಗಿ ದುಡಿಯುತ್ತಿವೆಯಾ ?? .

ಇತೀಚಿನ ದಿನಗಳಲ್ಲಿ  ನನಗೆ ಈ ರೀತಿಯ ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ . ನಮ್ಮ  ಸುತ್ತ ನಡೆದ ಅನೇಕ ಘಟನೆಗಳನ್ನು  ನಮ್ಮ ಸುದ್ದಿ ಮಾದ್ಯಮಗಳು ಹೇಗೆ ಜನರಿಗೆ  ಮುಟ್ಟಿಸಿದವು, ಮಾದ್ಯಮದ ಮಂದಿ  ಹೇಗೆ ಆ ವಿಷಯಗಳನ್ನು ಅವಲೋಕಿಸಿದರು,  ಎಷ್ಟರ ಮಟ್ಟಿಗೆ  ಮಾದ್ಯಮಗಳು ಆ ವಿಷಯಗಳ ಮೇಲೆ ಬೆಳಕು ಚೆಲ್ಲಿದವು ಎಂದು  ನೋಡಿದರೆ ನನಗೆ  ಈ ಸುದ್ದಿ ಮಾದ್ಯಮಗಳ ಮೇಲೆಯೇ ಅದರಲ್ಲೂ  ಈ ಖಾಸಗಿ ಒಡೆತನದ ಸುದ್ದಿ  ಮಾದ್ಯಮಗಳು, ಅದರಲ್ಲೂ  ದೃಶ್ಯ ಮಾಧ್ಯಮಗಳ  ಮೇಲೆ ಒಂದು ರೀತಿಯ ಅಪನಂಬಿಕೆ ಮೂಡಿರುವುದು ನಿಜ .

ಎಲ್ಲ ಮಾಧ್ಯಮಗಳು ಹಾಗೆಯೇ ಎಂದು ನಾನು ಹೇಳುವುದಿಲ್ಲ , ಪತ್ರಿಕೋದ್ಯಮ ಇನ್ನು ತನ್ನ ನೈತಿಕತೆಯನ್ನು ಉಳಿಸಿಕೊಂಡಿದೆ.  ಆದರೆ  ಖಾಸಗಿ ಸುದ್ದಿ ವಾಹಿನಿಗಳು ಮಾತ್ರ , ಅದರಲ್ಲೂ ಇತ್ತೀಚಿಗೆ  ಪ್ರಾರಂಭವಾಗಿರುವ , ಅನೇಕ ಟೀವಿ ಚಾನೆಲ್ಲುಗಳು , ತಾರತಮ್ಯ ಮಾಡುವ ವಾಹಿನಿಗಳಾಗಿ ಮಾರ್ಪಟ್ಟಿವೆ ಅನ್ನುವುದು ನನ್ನ ಭಾವನೆ. ಕನ್ನಡದಲ್ಲಿ ಸುಮಾರು  ಏಳೆಂಟು  ಟೀವಿ ನ್ಯೂಸ್ ಚಾನೆಲ್ಲುಗಳಿವೆ .  ಸಮಾಜದಲ್ಲಿ ಯಾವುದೇ ವಿಷಯಗಳು  ಉದ್ಭವಿಸಲಿ , ಹಗರಣವೇ ಆಗಿರಲಿ ಮತ್ಯಾವ ವಿಷಯವೇ ಆಗಿರಲಿ , ಈ ಎಲ್ಲ ವಾಹಿನಿಗಳು ತತ್ಕ್ಷಣಕ್ಕೆ  ಎರೆಡು  ಗುಂಪುಗಳಾಗಿ  ಇಬ್ಬಾಗವಾಗಿ  , ಒಂದು  ಗುಂಪು  ಒಂದು ವಿಷಯದ ಪರವಾಗಿ ಮಾತ್ರ  ಸುದ್ದಿ ಬಿತ್ತರ ಮಾಡಿದರೆ  , ಮತ್ತೊಂದು ಗುಂಪು ಅದೇ ವಿಷಯದ ವಿರುದ್ದವಾಗಿ ನಿಲ್ಲುತ್ತವೆ. ಆ ವಿಷಯದ ಸರಿ-ತಪ್ಪು ಗಳನ್ನೂ ಚರ್ಚಿಸದೆ ತಮ್ಮ ಅನಿಸಿಕೆಗಳನ್ನು ಮಾತ್ರ ಜನರ ಮುಂದಿಡುತ್ತವೆ .  ಈ ರೀತಿಯ ಪಕ್ರಿಯೆಯಲ್ಲಿ  ಪ್ರೇಕ್ಷಕನಿಗೆ ಅಥವಾ ಜನರಿಗೆ ಕೇವಲ ವಿಷಯದ ಒಂದೇ ಮುಖ ತಿಳಿಯುತ್ತದೆ. ಇದು ಸಮಾಜದ ಒಳಿತಿಗೆ ಮಾರಕವಾಗುವುದಿಲ್ಲವೇ ?? .

ನಮಗೆಲ್ಲ ಗೊತ್ತಿರುವಂತೆ ,  ಹಲವು ಸೂಕ್ಷ್ಮ  ವಿಷಯಗಳ ಬಗ್ಗೆ  ಸುದ್ದಿ ವಾಹಿನಿಗಳೇ  ಆಗಲಿ ,  ಸಾಮಾನ್ಯ ಜನರೇ ಆಗಲಿ ಮಾದ್ಯಮದ ವೇದಿಕೆಯಲ್ಲಿ ಕುಳಿತು , ಆ ವಿಷಯಗಳ  ಬಗ್ಗೆ ಚರ್ಚಿಸಬಹುದು ಅಥವಾ ತಮ್ಮ  ವೈಯುಕ್ತಿಕ  ನಿಲುವುಗಳನ್ನು  ವ್ಯಕ್ತ  ಪಡಿಸಬಹುದೇ   ಹೊರತು , ಆ ವಿಷಯದ  ಬಗ್ಗೆ  ತಮ್ಮ ಮೂಗಿನ ನೇರಕ್ಕಷ್ಟೇ  ಚರ್ಚಿಸಿ ತೀರ್ಪನ್ನು ಕೊಡುವುದು ಅದೆಷ್ಟು ಸರಿ ?? . ಆದರೆ ಈಗ  ಆಗುತ್ತಿರುವುದು ಹಾಗೆಯೇ ಅನೇಕ ವಿಷಯಗಳ ಬಗ್ಗೆ ವಾಹಿನಿಗಳ ಮಂದಿಯೇ ತೀರ್ಪನ್ನು ಕೊಟ್ಟು ಬಿಡುತ್ತಾರೆ , ಆ ತೀರ್ಪೇ  ಅಂತಿಮ ತೀರ್ಪು , ಅದೇ ಸರಿ ಕೂಡ ಎಂಬಂತೆಯೂ  ವಾದ ಮಾಡುತ್ತಾರೆ. ಇದು ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು. ಹಲವು  ವಿಷಯಗಳಲ್ಲಿ  ಕೆಲವು ವಾಹಿನಿಗಳು   ತೆಗೆದೆಕೊಳ್ಳುವ ನಿಲುವು , ಚರ್ಚಿಸುವ ವಿಧಾನ , ಚರ್ಚಿಸುವ  ವೈಖರಿ ನೋಡಿದರೆ ,   ಒಬ್ಬ ಪ್ರೇಕ್ಷಕನಾದ  ನನಗೆ ಅಥವಾ ಎಂಥವರಿಗೂ ಒಂದು ಕ್ಷಣ ಆ ವಾಹಿನಿಗಳ ಮೇಲೆಯೇ ಅನುಮಾನ  ಮೂಡುವುದು ಸಹಜ. ಕೆಲವೊಂದು  ವಾಹಿನಿಗಳೊಂತು  ಕೆಲವು ವಿಷಯಗಳ ಬಗ್ಗೆ ಮಾತೆ ಆಡುವುದಿಲ್ಲ , ಕೆಲವು ವಾಹಿನಿಗಳು ಕೇವಲ ಕೆಲವೇ ವಿಷಯಗಳ ಬಗ್ಗೆ ಮಾತ್ರ  ಗಮನ ನೀಡುವುದು. ಇನ್ನೂ ಕೆಲವು   ವಾಹಿನಿಗಳೊಂತು ಕೆಲವು ಆರೋಪಿಗಳ ಪರ ವಕಾಲತ್ತೇ  ವಹಿಸುವರು, ಅವರದ್ದು ತಪ್ಪೇ ಇಲ್ಲ ಎಂಬಂತೆ  ವಾದಿಸಿ , ತಮ್ಮ ತೀರ್ಪನ್ನು ಕೊಟ್ಟೆ ಬಿಡುವರು , ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಪ್ರತಿವಾದಿಯನ್ನು ನಿಂದಿಸುವರ ಜೊತೆಗೆ  ,ಅವರ ನೈತಿಕ ಸ್ಥೈರ್ಯವನ್ನು ಕೂಡ ಕುಗ್ಗಿಸುತ್ತಾರೆ. ಇವೆಲ್ಲವನ್ನೂ ಗಮನಿಸಿದರೆ ನಿಜವಾಗಿಯೂ ಯಾವುದು ಸರಿ ,ಯಾವುದು ತಪ್ಪು ಅನ್ನುವುದೇ ಜನರಿಗೆ ಅರ್ಥವಾಗದಂತೆ ಮಾಡುತ್ತವೆ ನಮ್ಮ ದೃಶ್ಯ ಮಾದ್ಯಮಗಳು.

ಇತೀಚಿನ ಹಗರಣ ಹಾಗು ಬಹು ಚರ್ಚಿತ ವಿಷಯಗಳಾದ  KPSC ಸ್ಕಾಮ್ , ಮೈತ್ರಿ  ಹಾಗು ಸದಾನಂದ ಗೌಡರ ಪುತ್ರನ ವಿಷಯ , ನಿತ್ಯಾನಂದ ಸ್ವಾಮಿ  , ರಾಘವೇಶ್ವರ ಸ್ವಾಮಿಗಳ ವಿಷಯ , ಸೃಷ್ಟಿ ಯ ಗುರುಮೂರ್ತಿ ವಿಷಯ , ರಾಜಕಾರಣಿಗಳ, ನಮ್ಮ ಇನ್ನು ಅನೇಕ ಸ್ವಾಮಿಗಳ ಪರ ವಿರೋದ ಚರ್ಚೆಗಳು , ಜನರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿವೆಯೇ ಹೊರತು , ನಿಜ ವಿಷಯ ಮಾತ್ರ ಬಿತ್ತರವಾಗುವುತ್ತಿಲ್ಲ, ಮತ್ತು ಅರ್ಥವೂ ಆಗುತ್ತಿಲ್ಲ .

ಒಂದು  ಖಾಸಗಿ ಟೀವಿ ಚಾನೆಲ್ ಒಬ್ಬ ಪ್ರಭಾವಿ ವ್ಯಕ್ತಿಯ ಹಗರಣವನ್ನು ಬಯಲು ಮಾಡುತ್ತೆ , ಇನ್ನೊದು ಚಾನೆಲ್ ಅದೇ ವ್ಯಕ್ತಿ ಏನು ಮಾಡಿಲ್ಲ ಎಂಬುವಂತೆ ಬಿಂಬಿಸುತ್ತೆ. ಒಬ್ಬ ವ್ಯಕ್ತಿ ಒಂದು ಆಸ್ಪತ್ರೆಯ ಹಗರಣದಲ್ಲಿ   ಜೈಲು ಸೇರುತ್ತಾನೆ , ನೂರಾರು ಜನ ಆತನ ಬಗ್ಗೆ  ಕೇಸು ದಾಖಲಿಸುತ್ತಾರೆ ಆದರು ಆತನ ಆಸ್ಪತ್ರೆಯ ಬಗ್ಗೆ ಮತ್ತೊಂದು ಚಾನೆಲ್ ನಲ್ಲಿ  ನೇರ ಪ್ರಸಾರ ಬರುತ್ತೆ,  ಅದೇನೋ ಭಾರಿ ಒಳ್ಳೆಯ ಆಸ್ಪತ್ರೆ ಎಂದು. ಒಬ್ಬರು ಅದೇ ವ್ಯಕ್ತಿಯನ್ನು ಜೀವ ತೆಗೆಯುವ ದೇವರು ಎಂಬಂತೆ ಬಿಂಬಿಸುತ್ತಾರೆ ಮತ್ತೊಬ್ಬರು ಅವನೊಬ್ಬ ಕಿರಾತಕ ಎಂದು ಪ್ರತಿಪಾದಿಸುತ್ತಾರೆ .

ನಿಜ ಹೇಳಬೇಕೆಂದರೆ  ಜನರಿಗೆ ತಲುಪಿಸಲು ಮಾದ್ಯಮಗಳಿಗೆ  ಅನೇಕ ವಿಷಯಗಳಿವೆ ,  ರಾಜ್ಯದ , ದೇಶದ  ಅಬಿವೃದ್ದಿಯ ಬಗ್ಗೆ , ಸಮಾಜದಲ್ಲಿ ಏನು ನಡೆಯುತ್ತೋ ಅದನ್ನೇ ತಾರತಮ್ಯವಿಲ್ಲದೆ ತೋರಿಸಿದರೆ ಸಾಕು  ಅವರ ಕೆಲಸಕ್ಕೆ ಒಂದು ಸಾರ್ಥಕತೆ ಸಿಗುತ್ತೆ . ಆದರೆ  ಅದನ್ನು ಬಿಟ್ಟು , ಸ್ವಜನ ಪಕ್ಷಪಾತ , ತಮಗೆ ಹಿತವೆನಿಸಿದವರನ್ನು ಮಾತ್ರ ವೈಭವೀಕರಿಸುವುದು , ಮತ್ತೊಬ್ಬರನ್ನು ತೆಗೆಳುವುದು , ತಮಗೆ ಮತ್ತು ತಮ್ಮ ಚಾನೆಲ್ ಗೆ ವೈಯುಕ್ತಿಕ ಲಾಭವಾಗುವ ವಿಷಯಗಳನ್ನು ಮಾತ್ರ ಬಿತ್ತರಿಸುವುದು ,ಆರೋಪ ಹೊತ್ತ ರಾಜಕಾರಣಿಗಳೊಂದಿಗೆ ಚರ್ಚಿಸಿ , ಆರೋಪದ ತೀವ್ರತೆಯನ್ನೇ ಲಘುವಾಗಿ ಪರಿವರ್ತಿಸುವುದು. ಅವರೊಂದಿಗೆ ಸೇರಿಕೊಂಡು ತನಿಖೆಯ ಮೇಲೆ ಪ್ರಭಾವ ಬೀರುವುದು ಮಾತ್ರ ಇವರ ಕೆಲಸವಾಗಿವೆ.

ಇವೆಲ್ಲ ಬಿಟ್ಟರೆ , ಜನರಿಗೆ ಸುದ್ದಿ ಮಾಧ್ಯಮದವರು ತೋರಿಸಿವುದು  ಕೆಟ್ಟ  ಕ್ರೈಂ ಸ್ಟೋರಿಗಳು ,  ಹಾಳು ಜ್ಯೋತಿಷ್ಯ , ಹಳೆಯ ಜನ್ಮ ಜನ್ಮಾಂತರದ  ಕತೆಗಳು , ಉಹಾಪೋಹಗಳು , ಹೇಸಿಗೆ ಬರುವ ಚಿತ್ರ ಸುದ್ದಿಗಳು . ಇವೆಲ್ಲದರ ಬದಲಾಗಿ ನಮ್ಮ ಹೆಮ್ಮೆಯ ವಿಜ್ಞಾನಿಗಳ ಬಗ್ಗೆ , ವಿಜ್ಞಾನ ಜಗತ್ತಿನ ಆಗು ಹೋಗುಗಳ ಬಗ್ಗೆ , ಸಾಮಾಜಿಕ ಹೊರಾಟಗಳ ಬಗ್ಗೆ,  ದೇಶದ ಒಳಿತಿಗಾಗಿ ಹೋರಾಡುವ ಹೋರಾಟಗಾರರ ಬಗ್ಗೆ , ಪ್ರೇಕ್ಷರಿಗೆ , ಮಕ್ಕಳಿಗೆ ಸ್ಪೂರ್ತಿ ತುಂಬುವಂಥಹ  ಅನೇಕ ಸಾಧಕರ ಬಗ್ಗೆ   ಕಾರ್ಯಕ್ರಮಗಳನ್ನು ರೂಪಿಸಿ , ಬಿತ್ತರಿಸಿದರೆ , ಸಮಾಜಕ್ಕೆ ಒಳ್ಳೆಯದಾಗುವುದು , ಜೊತೆಗೆ ತಾವು ಮಾಡುವ ಕೆಲಸಕ್ಕೆ ಸಾರ್ಥಕತೆಯು ದೊರೆಯುತ್ತದೆ.

ಪತ್ರಿಕೋದ್ಯಮ ಮಾತ್ರ ತನ್ನ ನೀತಿ - ಸಿದ್ದಾಂಥಗಳಿಗೆ ಇನ್ನು ಬದ್ದವಾಗಿರುವುದು ನಿಜವಾಗಿಯೂ ನಮಗೆ ಹೆಮ್ಮೆ ಮೂಡಿಸುತ್ತದೆ ಜೊತೆಗೆ  ಪತ್ರಿಕೋದ್ಯಮ ತನ್ನ ನಂಬಿಕೆಯನ್ನು ಕಾಪಾಡಿಕೊಂಡಿದೆ. ಎಲ್ಲವು ಅಲ್ಲದಿದ್ದರೂ , ಕೆಲವು ದೃಶ್ಯ ಮಾದ್ಯಮದವರು , ಅದರಲ್ಲೂ ಕೆಲವು  ಖಾಸಗಿ ಸುದ್ದಿ ವಾಹಿನಿಗಳು ಇತೀಚಿನ ದಿನಗಳಲ್ಲಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೋ ಇಲ್ಲವೋ , ಅವರೇ ಪರಾಮರ್ಶಿಸಿಕೊಳ್ಳಬೇಕು. ಇಂಥವರ ಮದ್ಯಯು ಅನೇಕ ಒಳ್ಳೆಯ ಸುದ್ದಿ ವಾಹಿನಿಗಳಿವೆ , ಒಳ್ಳೆಯ ಕಾರ್ಯಕ್ರಮಗಳು , ಚರ್ಚೆಗಳು ಅವರಿಂದ ನಡೆಯುತ್ತಿವೆ , ಸಮಸ್ಯೆಗಳ ಬಗ್ಗೆ ಎದ್ದು ಬೀಳುವ ಅವರ ನೀತಿಗೆ ನನ್ನ ಸಹಮತವು ಇದೆ, ಅವರ ಬಗ್ಗೆ ನನಗೆ ಅಪಾರ ಗೌರವವು ಕೂಡ ಇದೆ . ಎಲ್ಲ ಮಾದ್ಯಮಗಳು ಹೀಗೆಯೇ ಪ್ರಾಮಾಣಿಕರಾದರೆ ಅದೆಷ್ಟು ನಮ್ಮ ಏಳಿಗೆ ಆಗುತ್ತೆ ಅಲ್ಲವೇ .... 


ಶನಿವಾರ, ಆಗಸ್ಟ್ 23, 2014

ಅನಂತಮೂರ್ತಿ ....



                                                            ಅನಂತ ಮೌನಿ ....


ಮೂರ್ನಾಲ್ಕು ದಿನಗಳ ಹಿಂದೆ , ಅನಂತಮೂರ್ತಿಯವರ ಭಾರತೀಪುರ ಕತೆಯನ್ನು ನನ್ನ ಹೆಂಡತಿ ಶೋಭಾಳಿಗೆ ವಿವರವಾಗಿ ಹೇಳಿ ಮುಗಿಸಿದ್ದೆ . ಅದೇ ಸಮಯದಲ್ಲಿ ಅನಂತಮೂರ್ತಿಯವರ ಕತೆಗಳ ಬಗ್ಗೆ , ಅವರ ಹೋರಾಟಗಳ ಬಗ್ಗೆ , ಅವರ ಸುತ್ತ ಹುಟ್ಟಿದ್ದ ವಿವಾದಗಳ ಬಗ್ಗೆ ನಾವಿಬ್ಬರು ಗಂಟೆಗಳ ಕಾಲ ಚರ್ಚಿಸಿದ್ವಿ . ಯಾರು ಏನು ಹೇಳಲಿ ಬಿಡಲಿ , ಯಾರು ಅವರನ್ನು ಒಪ್ಪಲಿ ಬಿಡಲಿ , ಅವರ ವಿಚಾರಧಾರೆಗಳು ಮತ್ತು ಯೋಚನೆಗಳು ನಮ್ಮನ್ನು ಪ್ರಭಾವಿಸದೆ ಬಿಡವು. ಅದೇ ರೀತಿಯಾಗಿ ಮೂರ್ತಿಯವರು ನನ್ನನ್ನು ಅನೇಕ ವಿಷಯಗಳಲ್ಲಿ ಪ್ರಭಾವಿಸಿದ್ದಾರೆ ಹಾಗು ನಾನು ಅವರಿಂದ ಸಾಹಿತ್ಯಿಕವಾಗಿ, ವೈಚಾರಿಕವಾಗಿ, ತಾತ್ವಿಕವಾಗಿ ಬಹುವಾಗಿ ಪ್ರೇರೇಪಿತಗೊಂಡಿರುವುದು ನಿಜ . 

 
             ಪ್ರತಿದಿನದಂತೆ ನಾನು  ಮತ್ತು ನನ್ನ ಶೋಭ  ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ , ನಮ್ಮ  ಮನೆಯಲ್ಲಿ ಒಂದು ರೀತಿಯ ಮೌನ ಆವರಿಸಿತ್ತು . ನಮ್ಮ ಅಮ್ಮ ನನಗೆ ಮೂರ್ತಿಯವರ ಸಾವಿನ ಸುದ್ದಿ ಹೇಳಿದರು ,, ಸ್ನೇಹಿತರೆ ನನಗೇನು ಅವರು ಸ್ನೇಹಿತರಲ್ಲ , ಸಂಭಂದಿಯೂ ಅಲ್ಲ , ಆದರೂ  ಆ ಕ್ಷಣದಲ್ಲಿ ನನಗೆ ಭೂಮಿಯೇ ಕುಸಿದಂತಾಯಿತು , ಮೊನ್ನೆ ಮೊನ್ನೆ ಶಿವರುದ್ರಪ್ಪರನ್ನು ಕಳೆದುಕೊಂಡ ನಮಗೆ ಮತ್ತೊಂದು ಆಘಾತ ಇದಾಗಿತ್ತು. ನಿಜವಾಗಿಯೂ ಅವರು ನನ್ನನ್ನು ಅತಿಯಾಗಿ ಆಕ್ರಮಿಸಿದ್ದರು ಅನೇಕ ವೈಚಾರಿಕ ವಿಷಗಳಲ್ಲಿ ಅವರ ನೇರ ಪ್ರಭಾವು ಇದೆ . ನಾನು ಇಷ್ಟಪಡುವ ಅನೇಕ ಲೇಖಕರಲ್ಲಿ ಇವರೂ  ಕೂಡ ಅಗ್ರ ಗಣ್ಯರು. 

                 ಒಬ್ಬ ಲೇಖಕರಾಗಿ ಮೂರ್ತಿಯವರು ಸಾಹಿತ್ಯದ ಮೂಲಕ ಸಮಾಜಕ್ಕೆ ಕೊಟ್ಟ ಕೊಡುಗೆ ಅಪಾರ .  ಸಾಹಿತ್ಯ ಅವರಿಗೆ  ಬರೀ  ಕತೆ ಕಟ್ಟುವುದು , ಭ್ರಮೆ ಸೃಷ್ಟಿಸುವುದು ಹಾಗು ಕೇವಲ ತನ್ನ ಯೋಚನೆಗಳನ್ನು ಇತರರ ಮೇಲೆ ಏರುವುದಷ್ಟೇ ಆಗಿರಲಿಲ್ಲ. ಸಾಹಿತ್ಯ ಮೂರ್ತಿಯವರಿಗೆ ಒಂದು ಬದುಕಾಗಿತ್ತು , ಸಾಹಿತ್ಯ ಅವರ ಹೋರಾಟಗಳಿಗೆ  ವೇದಿಕೆಯಾಗಿತ್ತು, ಪ್ರಸ್ತುತ ಬೆಳವಣಿಗೆಗಳೊಂದಿಗೆ ಸಾಹಿತ್ಯ ಅವರನ್ನು ಸದಾ ಬೆಸೆಯುತ್ತಿತ್ತು. ತಮ್ಮ ನಿಜ ಚಿಂತನೆಗಳನ್ನು, ಸಮಾಜದಲ್ಲಿ ನಡೆಯುವ ಅನ್ಯಾಯ , ಮೂಡನಂಬಿಕೆ , ಗೊಡ್ಡು ಸಂಪ್ರದಾಯಗಳ ಬಗ್ಗೆ ಓದುಗರಲ್ಲಿ ಅರಿವು ಮೂಡಿಸಲು ಅವರು ತಮ್ಮ ಸಾಹಿತ್ಯವನ್ನು ಸರಿಯಾಗಿ, ಸ್ಪುಟವಾಗಿ ಉಪಯೋಗಿಸಿಕೊಂಡರು. ಸಂಸ್ಕಾರ, ಭವ , ಭಾರತೀಪುರ , ಸೂರ್ಯನಕುದುರೆ , ಮೌನಿ , ಆಕಾಶ ಮತ್ತು ಬೆಕ್ಕು , ಅವಸ್ತೆ , ಇವೆಲ್ಲ ನಾನು ಓದಿದ ಅವರ ಕೆಲವು ಪುಸ್ತಕಗಳು , ಇವು ಕೇವಲ ಕತೆಗಳು ಮಾತ್ರ ಆಗಿರಲಿಲ್ಲ. ನಿಜಕ್ಕೂ ಆ ಕೃತಿಗಳು ತತ್ವ , ಹೋರಾಟ , ವಿಡಂಬನೆ, ವಿಚಾರಗಳ ಕಣಜಗಳೆ ಆಗಿದ್ದವು. ಈ ಎಲ್ಲಾ ಕೃತಿಗಳು ನನ್ನ ಮೇಲೆ ಅದೆಷ್ಟು ಪರಿಣಾಮ ಬೀರಿದ್ದವೆಂದರೆ ನನಗೆ ಮೂರ್ತಿಯವರು ಅಂದಿನಿಂದ ಮಾನಸ ಗುರುಗಳೇ ಆಗಿ  ಬಿಟ್ಟರು.

               ಕೇವಲ ಸಾಹಿತ್ಯಕಾರ ಮಾತ್ರ ಆಗಿರದ ಮೂರ್ತಿಯವರು ಒಬ್ಬ ಹೋರಾಟಗಾರ ಕೂಡ ಹೌದು. ಸಾಹಿತ್ಯದಲ್ಲೂ ಹಾಗು ನಿಜ ಜೀವದಲ್ಲೂ ತಮ್ಮನ್ನು ತಮ್ಮದೇ ಆದ ರೀತಿಯಲ್ಲಿ ಅನೇಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಸಿಕ್ಕ ಅವಕಾಶ, ವೇದಿಕೆಗಳನ್ನ ಅವರು ತಮ್ಮ ಹೋರಾಟಗಳಿಗೆ ಸರಿಯಾಗಿಯೇ ಉಪಯೋಗಿಸಿಕೊಂಡರು. ಅರಣ್ಯ, ನದಿ ಒತ್ತುವರಿಗಳು, ಗಣಿ ಹೋರಾಟಗಳು , ಸಮಾಜದಲ್ಲಿನ ಜಾತಿ ಪದ್ದತಿ, ರಾಜಕೀಯ ವ್ಯವಸ್ತೆ  ಹಾಗು ಸಮಾಜವಾದ ಚಳುವಳಿಗಳಲ್ಲೂ ಸಹ ಮೂರ್ತಿಯವರು ಸಕ್ರಿಯಾವಾಗಿ ತೊಡಗಿಸಿಕೊಂಡಿದ್ದರು.

            ಸಾಂಪ್ರದಾಯಿಕ ಸಾಹಿತಿಗಳಂತೆ ಒಂದೇ ಸಿದ್ದಾಂತ , ಒಂದೇ ಯೋಚನೆ , ಒಂದೇ ನಿಲುವುಗಳಿಗೆ ತಮ್ಮನ್ನು ತಾನು ಎಂದೂ ಅಂಟಿಸಿಕೊಳ್ಳದ ಮೂರ್ತಿಯವರು , ಹೊಸ ಚಿಂತನೆಗಳಿಗೆ , ಹೊಸ ಯೋಚನೆಗಳಿಗೆ , ಹೊಸ ವಿಚಾರಗಳಿಗೆ  ಬಹುವಾಗಿ ಸ್ಪಂದಿಸುತ್ತಿದ್ದರು. ಒಳ್ಳೆಯ ವಿಷಯಗಳನ್ನು ಸದಾ ಒಪ್ಪುತ್ತಿದ್ದರು. ಕೆಲವು ಸಾಂಪ್ರದಾಯಿಕ ಸಿದ್ದಾಂತಗಳನ್ನು ಅಷ್ಟೇ ಕಟುವಾಗಿ ಖಂಡಿಸಿ, ವಾದ ವಿವಾದಗಳ ನಂತರ ಅದೇ ವಿಷಯವನ್ನು ಒಪ್ಪುತಿದ್ದರು. ಮನಸ್ಸಿನ್ನಲ್ಲಿರುವುದನ್ನೇ ತಾವು ಸದಾ ಮಾತಾಡುತ್ತಿದ್ದರು.  ಒಳಗೊಂದಾಗಲಿ-ಹೊರಗೊಂದಾಗಲಿ ಎಂದು ಅವರು ಮಾತನಾಡುತ್ತಿರಲಿಲ್ಲ. ಯಾವುದೇ ವಿಷಯಗಳನ್ನು ಚಿಂತನ-ಮಂಥನಗಳಿಲ್ಲದೆ ಒಪ್ಪಿಕೊಳ್ಳುವ ಮನಸ್ಸು ಕೂಡ ಅವರದ್ದಾಗಿಲಿಲ್ಲ .

            ಒಬ್ಬ ದೊಡ್ಡ ಮಾನವತವಾದಿಯಾಗಿ, ಸಮಜಾವಾದಿಯಾಗಿ,  ಬರಹಗಾರನಾಗಿ , ನಮ್ಮವರೇ ಆಗಿ,  ಮೂರ್ತಿಯವರು ನಮ್ಮನ್ನು ಒಂದಲ್ಲ ಒಂದು ರೀತಿಯಾಗಿ ಯೋಚನೆಗಳಿಗೆ ತಳ್ಳಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಅವರು ಪ್ರಭಾವಿಸಿದ್ದಾರೆ ಕೂಡ. ಕನ್ನಡಕ್ಕೆ ಅಪಾರ ಹೆಸರು ತಂದಿದ್ದಾರೆ . ಕನ್ನಡ ಹಾಗು ಸಾಹಿತ್ಯಕ್ಕೆ ದುಡಿದಿದ್ದಾರೆ. ಇಂತಹ ವ್ಯಕ್ತಿ ನಮ್ಮನ್ನು ಅಗಲಿರುವುದು ನಿಜಕ್ಕೂ ಒಂದು ದುಃಖದ ಸಂಗತಿ. ಇಂಥವರು ಇನ್ನುಮುಂದೆ ನಮ್ಮೊಂದಿಗೆ ಇರುವುದಿಲ್ಲ ಎಂಬುದು ಎಷ್ಟು ಕಹಿ ಸತ್ಯವೋ , ಅವರ ಚಿಂತನೆಗಳು, ಆಲೋಚನೆಗಳು ಮಾತ್ರ ಸಮಾಜದಿಂದ ದೂರವಾಗುವುದಿಲ್ಲವೆಂಬುದು ಒಂದು ಸಿಹಿ ಸತ್ಯ .  ದೇವರು ಆ ಅನಂತ ಮೌನಿಯ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ , ನನ್ನ ಮಾನಸು ಗುರುವಿಗೆ ನನ್ನ ಅನಂತ ನಮನಗಳು..... 

ನಿಮಗಾಗಿ 
ನಿರಂಜನ್ 

ಮಂಗಳವಾರ, ಜೂನ್ 10, 2014

ನಾವ್ ನೋಡಿದ ....

 
                                                                 ಒಗ್ಗರಣೆ  .... 
 
ನಾನೇನು ಚಿತ್ರ ವಿಮರ್ಶಕನಲ್ಲ , ಪತ್ರಕರ್ತನೂ ಅಲ್ಲ , ಒಬ್ಬ ಸಾಮಾನ್ಯ ಚಿತ್ರ ರಸಿಕ ,  ಆದರೂ ಸಹ ಈ ದಿನ ನಾ ನೋಡಿದ ಒಂದು  ಅದ್ಭುತ ಕನ್ನಡ  ಚಿತ್ರದ ಬಗ್ಗೆ ನಿಮಗೆ ಹೇಳಲೇ ಬೇಕ್ಕೆನ್ನಿಸುತ್ತಿದೆ.  ಇದೇನಪ್ಪ ಕನ್ನಡದಲ್ಲಿ  ಅದ್ಭುತ ಚಿತ್ರ  ??? ಆಶ್ಚರ್ಯವೇ ?? ತಮಾಷೆಯೇ ?? ಇಲ್ಲ ಇಲ್ಲ . ಇದು ನಿಜ ಸ್ನೇಹಿತರೆ , ಒಂದು ಅದ್ಭುತ ಸಿನೆಮಾ ಬಗ್ಗೆನೆ ನಾ ಹೇಳಬೇಕು... ಅದ್ಭುತ ಚಿತ್ರ ಎಂದಾಕ್ಷಣ ನಿಮಗೆ   ನಾನೇನು  ಡಾ. ರಾಜ್ ಚಿತ್ರದ ಬಗ್ಗೆ ಹೇಳುವುದಿಲ್ಲ, ಬದಲಾಗಿ  ಈಗಷ್ಟೇ  ಪ್ರಕಾಶ್ " ರಾಜ್ " ಹಾಕಿರುವ ಒಗ್ಗರಣೆ ಹಾಗು ಅದರ ಗಮ್ಮತ್ತಿನ ಬಗ್ಗೆ ನಿಮಗೆ ಹೇಳಬೇಕು . 
 
                 ಮುಂಗಾರು ಮಳೆ, ಅದಾದ ನಂತರ ಕೇವಲ ಕೆಲವೇ ಚಿತ್ರಗಳ ತಕ್ಕಮಟ್ಟಿಗೆ ನನಗೆ ರುಚಿಸಿದವಾದರೂ, ಆಮೇಲೆ ಸಾಲು ಸಾಲಾಗಿ ಬಂದ  ಚಲನಚಿತ್ರಗಳೊ , ಹಳಸಿದ ಚಿತ್ರನ್ನಾಗಳು.  ಈ ಸಿನೆಮಾಗಳ ಸಹವಾಸವೇ ಸಾಕು ಸಾಕೆನಿಸಿ ,  ಚಿತ್ರ ಸವಿಯುವ  ನನ್ನ ರುಚಿ ಮೊಗ್ಗುಗಳು ಕೂಡ ಬಾಡಿದ್ದವು ಇತ್ತೀಚಿಗೆ.  ನನ್ನ ಹೆಂಡತಿ ರೀ  " ಕನ್ನಡ ಫಿಲಂ ಗೆ ಹೋಗೋಣ " ಎಂದಾಗಲೆಲ್ಲ , ಹೇಗೋ ಸಮಾಧಾನ ಮಾಡಿ ಮನೆಯಲ್ಲಿ ಡಾ. ರಾಜ್ ಚಿತ್ರ ತೋರಿಸುತ್ತಿದ್ದೆ. ಆದರೆ ಮೊನ್ನೆ ಹೀಗೆ ಜಾಲಹಳ್ಳಿ ಕ್ರಾಸ್ ಬಳಿ  ಹೋಗುವಾಗ ,  ಪ್ರಕಶ್ ರೈ ನಿರ್ದೇಶನದ ಒಗ್ಗರಣೆ ಚಿತ್ರದ  ಒಂದು  ಚಿಕ್ಕ ಪೋಸ್ಟರ್ , ಪಕ್ಕದಲ್ಲೇ ಇದ್ದ  rockline ಮಾಲ್ ಬಳಿ ಕಂಡಿತು. ನೋಡಿದ ತಕ್ಷಣವೇ ಒಗ್ಗರಣೆಯ ಪದಾರ್ಥಗಳಾದ ಪ್ರಕಾಶ್ ರಾಜ್ , ಮಂಡ್ಯ ರಮೇಶ್ , ಅಚ್ಯುತ್ ಕುಮಾರ್ , ಸ್ನೇಹ , ಇಳೆಯರಾಜ, ಜಯಂತ್ ಕಾಯ್ಕಿಣಿ  ಇನ್ನು ಅನೇಕರು  ನನ್ನನ್ನು ಆ ಚಿತ್ರವನ್ನು ನೋಡಲು ಸೆಳೆದವು .
 
 
 
               ತಕ್ಷಣವೇ ಟಿಕೆಟ್ ಕೌಂಟರ್ ಹೋಗಿ " ಎರೆಡು  ಒಗ್ಗರಣೆ ಕೊಡಿ " ಎಂದಾಗ , ನನ್ನ ಹೆಂಡತಿ ಕಿಸಕ್ಕನೆ ನಕ್ಕಳು , ಚಿತ್ರದ ಹೆಸರಿನಲ್ಲಿರುವ ಈ ರೀತಿಯ  ಹೊಸತನವಿದೆ ನೋಡಿ.  ಚಿತ್ರ ಶುರುವಾಯಿತು ,  ನಾನು ನನ್ನ ಹೆಂಡತಿ ಶೋಭಾ ಚಿತ್ರ ನೋಡ ತೊಡಗಿದೆವು. ಅಭ್ಹಾ ಎಂಥಹ ಹಾಡಿನೊಂದಿಗೆ ಚಿತ್ರ ಶುರು ವಾಯಿತು , ಕೈಲಾಶ್ ಕೇರ್ ದ್ವನಿ , ಕಾಯ್ಕಿಣಿ ಸಾಹಿತ್ಯ ,ಸಂಗೀತ ಮಾಂತ್ರಿಕ ಇಳೆಯರಾಜ ರ ಸಂಗೀತ  ಒಟ್ಟಾಗಿ ಬೆರೆತು , ಇಡೀ ನಮ್ಮ ಕರ್ನಾಟಕದ ತಿಂಡಿ ತೀರ್ಥ , ಭಕ್ಷ್ಯಗಳ  ಚಿತ್ರಣವನ್ನೇ ನಮ್ಮ ಮುಂದಿಟ್ಟಾಗ ನನ್ನ ಬಾಯಲ್ಲಿ ನೀರು "ತೊಟ್ " ಅಂತ ಹೊರ ಹೊಮ್ಮಿತ್ತು.  ನಂತರದಲ್ಲಿ  ಮಂಡ್ಯ ರಮೇಶ್ ಹಾಗು ಅಚ್ಯುತ್  ಕುಮಾರರ ಹಿತವಾದ ಹಾಸ್ಯ , ಒಗ್ಗರಣೆಯಲ್ಲಿ ನಯವಾಗಿ ಸಾಸಿವೆ ಉರಿದಂತಿತ್ತು. ಅನಂತರ  ಬರುವ  ಮದ್ಯ ವಯಸ್ಕರರ ಪ್ರೇಮ -ಸಲ್ಲಾಪಗಳು , ಮುಜುಗರಗಳು, ಮೂದಲಿಕೆಗಳು ,  ಪ್ರೀತಿ ಹುಟ್ಟಿದಾಗ  ನಾಯಕ -ನಾಯಕಿಯರಲ್ಲಾಗುವ ಬದಲಾವಣೆಗಳು , ಕಾಲೆಳದಾಟಗಳು , ಆಗಾಗ ಬಂದೋಗುವ ಭಾವನಾತ್ಮಕ ಸನ್ನಿವೇಶಗಳು , ಅಡುಗೆ ತಯಾರಿಸುವ ಹಾಗು ತಿನ್ನುವ ತುಣುಕುಗಳು  ನಿಜವಾಗುಯೂ  ನಮ್ಮನ್ನು ಆಕರ್ಷಿಸಿದವು. 
 
                ಒಟ್ಟಾಗಿ ಇದೊಂದು  ನನಗೆ ಇಷ್ಟವಾದ ಇತ್ತೆಚಿನ ಚಿತ್ರಗಳಲ್ಲಿ ಒಂದು. ಗೀರೀಶ್ ಕಾಸರವಳ್ಳಿ ಮಗಳು ಅನನ್ಯ ಕಾಸರವಳ್ಳಿ  ಕೂಡ ಇದಕ್ಕೆ ಸಹ ನಿರ್ದೇಶನ ಮಾಡಿದ್ದಾರೆ. ಒಳ್ಳೆಯ ಪದಾರ್ಥಗಳೊಂದಿಗೆ ಪ್ರಕಶ್ ರಾಜ್ ಉತ್ತಮ ಚಿತ್ರವನ್ನು ನಮಗೆ ನೀಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.   ನೀವು ಕೂಡ ಹೋಗಿ ಬನ್ನಿ , ನಿಜವಾಗಿಯೂ ನಿಮಗೆ ಖುಷಿ ಕೊಡುವ ಚಿತ್ರ ಇದು. ನಿಜವಾಗಿಯು ಎಲ್ಲರು ನೋಡ ಬಹುದಾದ ಚಿತ್ರ. ಆಶ್ಲೀಲ ಸಂಭಾಷಣೆಗಳಿಲ್ಲ , ಅನಗತ್ಯ ಹಾಸ್ಯ ಸನ್ನಿವೇಶಗಳಿಲ್ಲ , ಸುಮ್-ಸುಮ್ನೆ ನಿರ್ಮಾಪಕರ ತೆವಲಿಗೆ  ನಮಗೆಲ್ಲ ತೋರಿಸುವ ಐಟಂ ಸಾಂಗ್ ಗಳಿಲ್ಲ , ಮಚ್ಚು - ಲಾಂಗುಗಳೋ ಇಲ್ಲವೇ ಇಲ್ಲ .  ಇವೆಲ್ಲ ಇಲ್ಲದಿರುವುದೇ ಈ ಚಿತ್ರದ ಪ್ಲಸ್ ಪಾಯಿಂಟ್....  
 
 
ನಿಮಗಾಗಿ
ನಿರಂಜನ್  

ಗುರುವಾರ, ಜೂನ್ 5, 2014

ಮಹಾತಾಯಿ

                                                           ಮತ್ತೊಮ್ಮೆ ಕ್ಷಮಿಸು  .....


ನಿಜ  ತಿಳಿದವರು  ಹೇಳುವಂತೆ , ನಿನ್ನ ಮಗನಾಗಿ  ನನಗೆ ತಿಳಿದಂತೆ , ನಿನ್ನದು ತುಂಬಾ ವಿಶಾಲ ಹೃದಯ , ಬಹು ತಾಳ್ಮೆಯ ಒಡಲು ,  ಕೋಟ್ಯಾಂತರ ಜೀವ ಜಂತುಗಳನ್ನು ನಿನ್ನ ಮಡಿಲಿನಲ್ಲಿ ಇಟ್ಟುಕೊಂಡು , ಸದಾ ಕಾಪಾಡುತ್ತಿರುವೆ.  ಹಲವು  ವರ್ಷಗಳಿಂದ  ಎಲ್ಲರನ್ನು ಸಲಹುತ್ತಲೂ ಇರುವೆ   ಮತ್ತು   ಸಹಿಸಿಕೊಳ್ಳುತ್ತಲೂ ಇರುವೆ . ಹೆತ್ತತಾಯಿಯಾದರು ಒಮ್ಮೊಮ್ಮೆ ತಾಳ್ಮೆ ಕಳೆದುಕೊಳ್ಳುವಳು  ಆದರೆ  ನಮ್ಮೆಲ್ಲರ  ಅದೆಷ್ಟೋ  ತಪ್ಪುಗಳನ್ನೆಲ್ಲ ನೀನು  ಸಾವಿರಾರು ವರ್ಷಗಳಿಂದಲೂ ಸಹನಯಿಂದಲೇ ಮನ್ನಿಸಿರುವೆ , ನಮ್ಮೆಲ್ಲರ ಆಸೆ , ದುರಾಸೆ  ಮತ್ತು ಅಜ್ಞಾನಗಳು ಮುಗಿಲು ಮುಟ್ಟಿದರು  ಕೂಡ , ನಮ್ಮನ್ನು ನೀ  ಕೈ ಬಿಡದೆ  , ಎಲ್ಲವನ್ನು  ನಿನ್ನ ಒಡಲಾಳದಲ್ಲೇ   ನುಂಗಿಕೊಂಡು , ಹಾಗೆಯೇ ಮರೆತು , ನಮ್ಮನ್ನು ಸದಾ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿರುವ ನೀನು ನಿಜವಾಗಿಯೂ  ಬರೀ  ತಾಯಿಯಲ್ಲ  "ಮಹಾ ತಾಯಿ".  ನಮ್ಮೆಲರ ಜೀವ ಗಳನ್ನೂ ಸಲಹುತ್ತಿರುವ  ಮಹಾತಾಯಿ  "ಪರಿಸರ"ವೇ  ನಿನಗೆ ನಾನು  ಈ ದಿನ , ನಾ ಮಾಡಿದ ಪ್ರಮಾದಗಳ ವರದಿಯನ್ನು ಒಪ್ಪಿಸಿ ,  ಪ್ರತಿಬಾರಿಯೂ  ಕೇಳುವಂತೆ , ಮತ್ತೊಮ್ಮೆ ಕ್ಷೆಮೆ ಕೇಳಲೇ ಬೇಕಾಗಿದೆ . ನನ್ನ ಎಲ್ಲ ತಪ್ಪುವಪ್ಪುಗಳನ್ನು ಮನ್ನಿಸಲು ಕಳಕಳಿಯಿಂದ ನಿನ್ನ ಕಾಲಿಗೆ ಬಿದ್ದು ಕ್ಷೆಮೆಯಾಚಿಸಬೇಕಾಗಿದೆ.

 
 
                   ನನ್ನನ್ನು ಹೆತ್ತವಳು  ತಾಯಿ  , ಅವಳು  ನನಗೆ ಬರಿ  ಜೀವ ಕೊಟ್ಟಿಹಳು  , ಆದರೆ ಈ ಜೀವವನ್ನು ಸಲಹುವಳು ನೀನು , ಹಾಗಾಗಿ ನೀನು ನನ್ನ "ಮಹಾತಾಯಿ ".  ಈ  ದಿನವನ್ನು ಪ್ರಪಂಚದಲ್ಲಿ ಕೆಲವರು  ನಿನ್ನ ದಿನವನ್ನಾಗಿ ಆಚರಿಸುತಿಹರು  , ನೀ ನಮಗೆ ಮಾಡುವ ಉಪಕಾರಗಳನ್ನು , ನಿನ್ನ ಕುಶಲೋಪರಿಗಳ ಬಗ್ಗೆ ಹಲವರು  ಮಾತಾಡುವರು , ಅದರಲ್ಲಿ ಕೆಲವರು ನಿನ್ನ ಬಗ್ಗೆ ಕಾಳಜಿಯನ್ನೂ  ಕೂಡ ತೋರುವರು . ಆದರೆ ನಾನು ಮಾತ್ರ ನಿನಗಾಗಿ  ಏನನ್ನು  ಮಾಡುಲಿಲ್ಲ.. ನಿನಗೆ ಸರಿಯಾದ ಮಗನಾಗಲಿಲ್ಲ ಎಂಬ ಸಂಕಟ ನನ್ನನ್ನು ತುಂಬುತ್ತಿದೆ.  ನಿನ್ನನ್ನು ಸಂಪೂರ್ಣವಾಗಿ ನಾ ನಿರ್ಲಕ್ಷಿಸಿದೇ ಎನ್ನುವ  ಪಾಪ ಪ್ರಜ್ಞೆ ನನ್ನನ್ನು ಹಿಡಿಹಿಡಿಯಾಗಿ  ಹಿಂಡುತಿದೆ. ಕಳೆದ ಬಾರಿ ನಾ ನಿನಗೆ ಕೊಟ್ಟ ಮಾತುಗಳನ್ನು , ಮಾಡಿದ  ಪ್ರಮಾಣಗಳನ್ನೂ  ಮರೆತು ಅದೆಷ್ಟೋ  ಪ್ರಮಾದಗಳನ್ನು ಮತ್ತೆ ಮಾಡಿ ನಿನಗೆ ನಾ  ಮೋಸ ಮಾಡಿದೆ.  ಈ ದಿನ ನಾನು ನಿನ್ನಲ್ಲಿ ಕ್ಷೆಮೆ ಕೇಳಲೇಬೇಕು ,  
 
 
ಮಹಾತಾಯಿಯೇ  ಮನ್ನಿಸು ... 
  
                 ನೀ ನನ್ನನ್ನು ನಿನ್ನ ಮಗನಂತೆ ಉಣಿಸಿದೆ , ಆದರೆ ನಾನು ನಿನಗೆ ಸಾಕೊಷ್ಟು ಪ್ಲಾಸ್ಟಿಕ್ ಹಾಗು ಕರಗದ ಘನ ತ್ಯಾಜ್ಯವನ್ನು ನಿನ್ನ ಒಡಲಿಗೆ ಸುರಿದೆ.  ನಿನ್ನ ಆರೋಗ್ಯಕ್ಕೆ ಕುತ್ತು ತರುವ  ಅನೇಕ ವಸ್ತುಗಳನ್ನು ನನ್ನ ದೈನಂದಿನ ಕೆಲಸಗಳಿಗೆ ಉಪಯೋಗಿಸಿ ನಿನ್ನ ಆರೋಗ್ಯಕ್ಕೆ ನಾ  ದಕ್ಕೆ ತಂದೆ. ಪ್ಲಾಸ್ಟಿಕ್ ಗೆ ಅನೇಕ  ಪರ್ಯಾಯಗಳಿದ್ದರು ಅವುಗಳ ಸದ್ಬಳಕೆ ಮಾಡದೆ , ನಿನಗೆ  ಮೋಸ ಮಾಡಿದೆ . .. 
 
ಮಹತಾಯಿಯೇ  ಮನ್ನಿಸು .. 
             
               ನೀ ನನಗೆ ಒಳ್ಳೆಯ ಗಾಳಿ ನೀಡಿದೆ , ನಾ ಆ ಗಾಳಿಯನ್ನು ಕುಡಿದು , ನಿನಗೆ  ಬರಿ ಹೊಗೆಕುಡಿಸಿ , ನಿನಗೆ ದ್ರೋಹ ಬಗೆದು , ನಿನ್ನ ಬೇರೆ ಮಕ್ಕಳಿಗೂ ಆ ಹೊಗೆಯಿಂದ ಹಾನಿಯುಂಟು ಮಾಡಿದೆ. ಬೇಕೆಂದಾಗ ನನಗೊಬ್ಬನಿಗೆ ದೊಡ್ಡ ವಾಹನ ಉಪಯೋಗಿಸಿದೆ. ಅವಶ್ಯಕತೆ ಇಲ್ಲದಿದ್ದರೂ ವಾಹನ ಉಪಯೋಗಿಸಿ ,  ನಿನ್ನ ಉಸಿರನ್ನು ಕಲುಷಿತಗೊಳಿಸಿದ ಪಾಪಿಯಾದೆ .  ಪರ್ಯಾಯ ಸಂಚಾರಿ ವ್ಯವಸ್ತೆಗಳಿದ್ದರು  ಉಪಯೋಗಿಸದೆ ನಿನಗೆ ನಾ ಉಸಿರುಗಟ್ಟಿಸಿದೆ ... 
 
ಮಹತಾಯಿಯೇ ಮನ್ನಿಸು 
            
              ನೀ ನನಗೆ , ನನ್ನ ಸುತ್ತಮುತ್ತಲು ಒಳ್ಳೆಯ ವಾತವರಣವನ್ನು ಕರುಣಿಸಿದೆ , ಆದರೆ ನಾ ಬೇಕಾಬಿಟ್ಟಿ , ಕೆಟ್ಟ ವಸ್ತುಗಳನೆಲ್ಲ , ಎಲ್ಲೆಂದರಲ್ಲಿ ಚಲ್ಲಿ .  ಆ  ವಾತಾವರಣದ  ಹಾಳು  ಮಾಡಿದೆ .  ಹಸಿರುಗಿಡಕ್ಕೆ ಒಮ್ಮೆಯೂ ನೀರು ಹಾಕಲಿಲ್ಲ , ಒಂದು ಗಿಡವನ್ನು ನಾ ನೆಡಲಿಲ್ಲ . ಮರಗಿಡ ಕಡಿಯುವಾಗ ನಾ " ಏಕೆ ಕಡಿಯುವಿರಿ ? " ಎಂದು ಪ್ರಶ್ನಿಸಲಿಲ್ಲ .. ನೀರು ಪೋಲು ಮಾಡಿದೆ . ನೀರು ಕಲುಷಿತ ಮಾಡಿದೆ. ಅಗತ್ಯಕ್ಕಿಂತಲೂ ಹೆಚ್ಚು ನೀರು ಉಪಯೋಗಿಸಿ ನಾ ತಪ್ಪು ಮಾಡಿದೆ.
                  
 
ಮಹತಾಯಿಯೇ ಮನ್ನಿಸು 
 
            ನನ್ನ ಮುಂದಿನ ಪೀಳಿಗೆಗೆ ನಿನ್ನ ಬಗ್ಗೆ ಒಂದಿಷ್ಟು ಜಾಗೃತಿ ಮೂಡಿಸುವ  ಕೆಲಸವವನ್ನಾದರು ಸಹ ನಾ ಮಾಡಬಹುದಿತ್ತು . ಆದರೆ ನಾ ಅದನ್ನು ಮರೆತು ನಿನ್ನನ್ನು ನಿರ್ಲಕ್ಷಿಸಿದೆ.  ನೀ ನನಗೆ  ನಿನ್ನ ಮಡಿಲಲ್ಲೇ ಅನೇಕ ಪಾಠಗಳನ್ನು ಹೇಳಿಕೊಟ್ಟೆ . ನಾನು  ಅವುಗಳನ್ನು ಕಲಿತೆನೇ  ಹೊರತು , ಮುಂದಿನವರಿಗೆ ತಿಳಿಹೇಳಲಿಲ್ಲ, ನಿನ್ನ ಬಗ್ಗೆ ಜಾಗೃತಿ ಮೂಡಿಸಲಿಲ್ಲ , ನಿನ್ನನ್ನು ನನ್ನವಳೆಂದು ಭಾವಿಸಲಿಲ್ಲ. ನಾನು ನಿನಗೆ ಮಾಡಿದ ದೊಡ್ಡ ಮೊಸವಿದು ಮಹಾತಾಯಿ.      
 
              
             ನನಗೆ ಗೊತ್ತು , ಇಷ್ಟೆಲ್ಲಾ ಮೋಸಗಳನ್ನು ನಾ ನಿನಗೆ ಮಾಡಿದರು ಸಹ ನಿ ನಿನ್ನ ಶಕ್ತಿ ಮೀರಿ ನನ್ನನು ಪೋಷಿಸುವೆ . ನನಗಿಂದು ನಾಚಿಕೆ ಯಾಗುತಿದೆ ಮಹಾತಾಯಿ . ನಿನ್ನಿಂದ ಬರಿ ಪ್ರಯೋಜನ ಪಡೆಯುವ ನಾನು ನಿನಗಾಗಿ ಏನನ್ನು  ಮಾಡಲಿಲ್ಲವಲ್ಲವೆಂದು . ಇದೊಮ್ಮೆ  ಮಾತ್ರ ನನ್ನನು ಕ್ಷಮಿಸು , ನನಗೆ ನನ್ನ ತಪ್ಪಿನ ಹರಿವಾಗಿದೆ , ಸಾದ್ಯವಾದೊಷ್ಟು ಒಳ್ಳೆಯ ಕೆಲಸಗಳನ್ನು ಇನ್ನು ಮುಂದೆಯಾದರೂ ಮಾಡುತ್ತೇನೆ ,ತಪ್ಪುಗಳನ್ನು  ಆದೊಷ್ಟು  ಕಡಿಮೆ ಮಾಡುತ್ತೇನೆ .  ನಿನಗೆ ಒಳ್ಳೆಯ ಮಗನಾಗಿ ಇನ್ನುಮುಂದೆಯಾದರು ನಾನು ಇರಲು ಬಯಸುತ್ತೇನೆ .  
 
ನಿಮಗಾಗಿ 
ನಿರಂಜನ್  

ಶನಿವಾರ, ಏಪ್ರಿಲ್ 26, 2014

ಅವಳ (ಸಂ)ದರ್ಶನ ...


                                                                  ಅವಳ (ಸಂ)ದರ್ಶನ  ...
                                                    
ಸಾಂಪ್ರದಾಯದಂತೆ  ಮೊದಲ ಸುತ್ತಿನ ಬೇಟಿ ಆಗಿತ್ತು , ಆಮೇಲೆ ಬೆಂಗಳೂರಿನಲ್ಲಿ ನಮ್ಮದೇ ಶೈಲಿಯಲ್ಲಿ ನಾವು ಮತ್ತೊಮ್ಮೆ ಬೇಟಿಯಾಗಿ  ಪರಸ್ಪರ ಮಾತಾನಾಡಿಕೊಂಡಿದ್ದೆವು. ಪರಸ್ಪರ  ಅರಿಯಲು ಸಾಕೊಷ್ಟು ಸಮಯವನ್ನು ನಮ್ಮವರು ಕೊಡದೆ ಹೋದರು , ನಾವು ಸಮಯ ಮಾಡಿಕೊಂಡು ಮಾತಾಡಿ , ನಮ್ಮ ಮುಂದಿನ ಭವಿಷ್ಯದ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದ್ದೆವು. ಇದೆಲ್ಲದರ ಬಳಿಕ  ನಾವೆಲ್ಲರೂ  ಅವಳ ಊರಿಗೆ  ಮೊಗದೊಮ್ಮೆ ಹೋಗಿ, ನಮ್ಮ ಕುಟುಂಬದ ಎಲ್ಲರೂ  ಅವಳನ್ನು ಇನ್ನೊಮ್ಮೆ ಸರಿಯಾಗಿ ನೋಡಿ, ಅವಳೊಂದಿಗೆ  ಸಾಕೊಷ್ಟು ಮಾತನಾಡಿ , ಆಮೇಲೆ ನಮ್ಮ ಒಪ್ಪಿಗೆಯನ್ನು ಅವರಿಗೆ ತಿಳಿಸಲು ಮುಂದಾಗಿದ್ದರು . ನಾನು ಕೂಡ ಮತ್ತೆ ಹೊಸ ಹುರುಪಿನಲ್ಲಿ ಅವಳೂರಿಗೆ ಹೋಗಲು ಅಣಿಯಾದೆನು  .   
 
 
                 ಬಾಲ್ಯದ ಗೆಳೆಯನೊಬ್ಬ ವಿದೇಶದಿಂದ ಬಂದಿದ್ದ , ಅವನು ಮತ್ತು  ಅವನ ಪತ್ನಿಯೂ  ಕೂಡ ನಮ್ಮನ್ನು ಸೇರಿದರು , ಅವಳ ಊರಿಗೆ ಪ್ರಯಾಣವನ್ನು ನಮ್ಮ ಊರಾದ ದಾವಣಗೆರೆಯಿಂದಲೇ ನಾವು ಶುರುಮಾಡಿದೆವು. ಆ ರಸ್ತೆಯನ್ನು ನೋಡಿ ನಾವು ಹೇಳಿದ ಸಮಯಕ್ಕಿಂತಲೂ   ಬಹಳ ತಡವಾಗಿಯೇ ಅವಳೂರು ಸೇರುವುದು ಖಚಿತವಾಯಿತು. ರಸ್ತೆ ಸರಿ ಇಲ್ಲದಿದ್ದರೂ , ಸುತ್ತಲಿನ ಪ್ರಕೃತಿ  ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು.. ನನ್ನೂರಿಗೆ ಮತ್ತು ಅವಳೂರಿಗೆ ಅಂತರ ಕಡಿಮೆಯಿದ್ದರೂ  ಸಹ ರಸ್ತೆಯ ಅದೊಗತಿಯಿಂದ  ನಮಗೆ ಪ್ರಯಾಣ ಆಯಾಸವಾಗಿತ್ತು. ಅಂತು-ಇಂತು ಮದ್ಯಾನದೋಷ್ಟತ್ತಿಗೆ  ನಾವು ಅವಳೂರು  ತಲುಪಿದೆವು . ಅದೇ ಊರಿನಲ್ಲಿ ಇರುವ ನಮ್ಮ ಸಂಬಂದಿಕರ ಮನೆಯಲ್ಲಿ ಸ್ವಲ್ಪ ಸುಧಾರಿಸಿಕೊಂಡು , ದಣಿದ ದೇಹಗಳನ್ನು ತಣಿಸಿಕೊಂಡು , ಬೆಳಗಿನ ಪ್ರಯಾಸದ ಪಯಣವನ್ನು ಆ ಕ್ಷಣಕ್ಕೆ ಮರೆತು , ನನ್ನ  ಜೀವನ ಪಯಣಕ್ಕೆ ಅವಳನ್ನು ಸಹ ಚಾರಿಣಿಯನ್ನಾಗಿಸಿಕೊಳ್ಳುವ ತವಕದಲ್ಲೇ ಅವಳ ಮನೆಯ ಕಡೆ ಹೊರೆಟೆವು. 
 
 
                 
                     ಅವಳಪ್ಪ  ನಮ್ಮನ್ನು ನಗುಮೊಗದಲ್ಲೇ ಸ್ವಾಗತಿಸಿದರು ಅವಳ ಮನೆ ಬಾಗಿಲ್ಲಲ್ಲಿ , ಅವಳಕ್ಕ ಲವಲವಿಕೆಯಿಂದ  ನಮಗೆ ತಣ್ಣನೆಯ ಜ್ಯೂಸು ಕೊಟ್ಟರು.  ಮನೆಯೆಲ್ಲ ಸ್ವಚ್ಚವಾಗಿ , ಸಡಗರದ ವಾತಾವರಣದಿಂದ ಕೂಡಿತ್ತು. ಅವಳ ಚಿಕ್ಕಪ್ಪ , ಚಿಕ್ಕಮ್ಮ , ಅಪ್ಪ , ಅಮ್ಮ , ಅವಳಕ್ಕನ ಚಿಕ್ಕ ಮಗು ನಮ್ಮನ್ನು ಖುಷಿಯಿಂದ ಮಾತನಾಡಿಸಿದರು. ನಮ್ಮ ಹಿರಿಯರೊಂದಿಗೆ ಅವಳಪ್ಪ ಮತ್ತು ಚಿಕ್ಕಪ್ಪ ನಮ್ಮ ಕ್ಷೇಮ ಸಮಾಚಾರ , ಸಂಬಂದಗಳು , ಇನ್ನಿತರ  ಮಾತುಗಳನ್ನು ಆಡತೊಡಗಿದರು . ನನಗೆ ಅಷ್ಟರಲ್ಲಿ ಅವಳನ್ನು ನೋಡುವ ಕುತುಹಲ ಕೆರಳಿ , ಕಣ್ಣುಗಳು   ಕೋಣೆಗಳ ಕಡೆಗೆ ಕದ್ದು-ಮುಚ್ಚಿ ನೋಡ-ತೊಡಗಿದವು. ಇರುವ ೪ ಕೋಣೆಗಳು , ಒಂದು ಅವರಪ್ಪನ ಆಫೀಸ್ ಆಗಿ ಮಾರ್ಪಟ್ಟಿತ್ತು , ಮತ್ತೊಂದು ಅವಳಕ್ಕನ ಮಗುವಿಗೆ ಮೀಸಲಾಗಿತ್ತು. ಇನ್ನೊಂದು ಖಾಲಿ-ಖಾಲಿ ಕಾಣುತಿತ್ತು, ಮತ್ತೊಂದು ಮಾತ್ರ ಸದ್ದಿಲ್ಲದೇ , ಕದ ಮುಚ್ಚಿದ ಸ್ಥಿಯಲ್ಲಿ ಕಂಡಿತು.  ಅವಳು ಆ ಕೋಣೆಯಲ್ಲೇ ಇರಬಹುದೆಂದು ಊಹಿಸಿತು ನನ್ನ ಮನಸ್ಸು. ಈಗಿನ ಕಾಲದಲ್ಲಿ ಯಾವ ಹುಡುಗಿ ಇಂಥಹ ಸಮಯದಲ್ಲಿ ಅಮ್ಮನಿಗೆ ಸಹಯಾಮಾಡಲು ಅಡುಗೆ ಮನೆಯಲ್ಲಿ ಇರುವಳು ??. ಪಾಪ ಅವರ ಸೀರೆ , ಮೇಕಪ್ ಹಾಳಾಗೋದಿಲ್ವೆ !!! . ಇವೆಲ್ಲ ಕಾರಣಗಳಿಂದ  ಅವಳು ಅಲ್ಲೇ, ಅದೇ ಕೋಣೆಯಲ್ಲೇ  ಇರುವಳೆಂದು ನನಗೆ ಖಾತ್ರಿಯೂ ಆಯಿತು. ಅಷ್ಟೊತ್ತಿಗೆ ಸುಮಾರು ಸಮಯ ಕಳೆದಿತ್ತು . ಅವಳನ್ನು ನೋಡ ಬಂದ  ನಮ್ಮ ಮನೆಯವರೆಲ್ಲ ಮಾತಿಗಿಳಿದು , ನಾವು ಬಂದ  ಕೆಲಸವನ್ನೇ ಮರೆತಿರುವರು ಎಂದು ನನಗೆ ಅನ್ನಿಸುತಿತ್ತು. ನನಗೋ ಎಷ್ಟೊತ್ತಿಗೆ ಅವಳನ್ನು ನೋಡುತ್ತೇನೋ  ಅನ್ನುವ ಬಯಕೆಯಾದರೆ , ದೊಡ್ಡವರೆಲ್ಲ ತಮ್ಮ ತಮ್ಮ ಮಾತುಗಳಲ್ಲೇ ತೊಡಗಿದ್ದರು . ಒಬ್ಬರಿಗೂ ಹುಡುಗಿಯ ನೋಡುವ ಹಾತುರವಿರಲಿಲ್ಲ . 
 
                     ನನಗೆ ಅವಳನ್ನು ನೋಡುವ ಆ ಹಂಬಲ , ಕಾಯುವ ನನ್ನ ತಾಳ್ಮೆಯನ್ನು ಸೋಲಿಸತೊಡಗಿತ್ತು , ಆದರೂ  ನನ್ನ ಕೈಯಲ್ಲಿ ಏನೂ  ಇರಲಿಲ್ಲ . ಅಷ್ಟರಲ್ಲಿ ಅವಳಮ್ಮ ಈಗ " ತಿಂಡಿ ತಿನ್ನಿ ಆಮೇಲೆ ನೀವು ಎಷ್ಟಾದರೂ ಮಾತನಾಡಬಹುದು" ಎಂದರು , ನನಗಾಗ ಎಲ್ಲಿಲ್ಲದ ಸಂತಸವಾಯಿತು , " ಅಬ್ಬಾ ಈಗಲಾದರೂ ಅವಳು ಬರುತ್ತಾಳೆ  ತಿಂಡಿ ತಟ್ಟೆಯ ಇಡಿದು"  ಎಂದು   ಮನಸ್ಸಿನಲೇ ಖುಶಿಯನ್ನು ಅನುಭವಿಸುತ್ತ ನೋಡಿದರೆ,  ಅವಳಪ್ಪ ಮತ್ತೆ ಚಿಕ್ಕಪ್ಪ ತಿಂಡಿ ತರೋದ ?  ... ಇದೇನು ಅವಳಿನ್ನು ಹೊರಗೆ ಬರಲೇ ಇಲ್ಲವಲ್ಲವೆಂದು  ಆ ಕ್ಷಣಕ್ಕೆ ಬೇಸರ ಆಯಿತು . ತಿಂಡಿ ತಿನ್ನುತ್ತ ಮತ್ತೆ ಬರೀ ಅದೇ ಮಾತುಗಳಾದವು , ಅವಳದು ಮಾತ್ರ  ಸದ್ದಿಲ್ಲ. ಯಾರು ಕೂಡ ಅವಳ ಬಗ್ಗೆ  ಮಾತಾಡುತ್ತಿಲ್ಲ , ಅವಳನ್ನು ಕರೆಯುತ್ತಲು ಇಲ್ಲ. ಚೆನ್ನಾಗಿ ತಿಂಡಿ ಮಾತ್ರ ತಿನ್ನುತ್ತಿದ್ದಾರೆ ..  ನನಗೋ ಆತುರ ಅತೀಯಾಗಿ , ದೊಡ್ಡವರ ಬರೀ ಮಾತುಗಳಿಂದ ಬೇಸರವೂ  ಬರತೊಡಗಿತ್ತು . ಒಂದರ್ದ ಗಂಟೆಯಲ್ಲಿ  ತಿಂಡಿ  ತಿನ್ನುವ ಕಾರ್ಯಕ್ರಮವೂ  ಆಯಿತು ಆದರೆ ಅವಳದು ಮಾತ್ರ ಇನ್ನೂ  ಸದ್ದಿಲ್ಲ. ನನಗೆ ಅವಳು ಬೆಂಗಳೂರಿನಿಂದ ನಿಜವಾಗಿಯೂ ಬಂದಿಹಳೋ ಅಥವಾ ಇಲ್ಲವೋ ಎನ್ನುವ ಅನುಮಾನವೂ ಹುಟ್ಟಿತು.
 
                    ಅವಸರದಲ್ಲಿ ಸ್ವಲ್ಪ ತಿಂಡಿ ತಿಂದು , ನಾನು  ನಮ್ಮಣನ ಮಗಳನ್ನು ಎತ್ತಿಕೊಂಡು ಸ್ವಲ್ಪ ಹೊರಗೆ ಹೋದೆ.  ಗಾಳಿ ಚೆನ್ನಾಗಿದ್ದರಿಂದ ವಾತಾವರಣ ಹಿತವೆನಿಸಿತು  , ಸ್ವಲ್ಪ ತಣ್ಣಗಾಗಿ , ನಮ್ಮಣ್ಣನನ್ನು ಕೂಗಿ ಹೊರ ಕರೆದು , " ನಾವು ಬಂದಿರುವುದು ಹುಡುಗಿಯ ನೋಡೋಕಾ ಅಥವಾ ಬರೀ ಮಾತಾಡಿ , ತಿಂಡಿ ತಿಂದು ಹೋಗೋಕಾ ?? ,, ಹುಡುಗಿಯ ಸುದ್ದಿನೇ ಇಲ್ಲ ಅಲ್ಲೋ ? .. ಯಾರು ಹುಡುಗಿಯ ಸುದ್ದಿಯೇ ತಗಿತಿಲ್ಲ , ಒಂದು ಸಾರಿ ಹೊರಗಡೆ ಕರೆಸಿ ತೋರುಸ್ರೋ " ಎಂದು ಮನದ ಸಂಕಟವನ್ನು ಬಿಚ್ಚಿಟ್ಟೆನು . ನನ್ನ ಕುತೂಹಲ ಸಂಕಟಗಳು ಅವನಿಗೆ ಅರ್ಥವಾದರೂ ಕೂಡ  ನಮ್ಮಣ್ಣನ ಕೈಯಲ್ಲೂ ಏನು ಮಾಡಲು ಆಗುತ್ತಿರಲಿಲ್ಲ . ಅವರಾಡುವ ಮಾತು ಕೇಳುವುದಷ್ಟೇ ಆಗಿತ್ತು  ಆ ದಿನ ನಮಗೆ  . ಅಷ್ಟರಲ್ಲಿ ನನಗೆ ಈ  ದಿನ ಅವಳನ್ನು ನೋಡುತ್ತೇನೆ ಎನ್ನುವ ಆಸೆಯೂ ಕಮರಿ ಹೋಯಿತು , ಅವರು ನನಗವಳನ್ನು ತೋರಿಸುತ್ತಾರೆನ್ನುವ ಆಸೆಯು  ಸರಿದಿತ್ತು , ಹಾಗೆಯೇ ನಮ್ಮಣ್ಣ ಮಗಳನ್ನು ಆಟ ಆಡಿಸಿಕೊಳ್ಳುತ್ತ ತಣ್ಣನೆ ಗಾಳಿಯಲ್ಲಿ ವಿಹರಿಸತೊಡಗಿದೆ..  ಇದಾದ ಒಂದೈದು ನಿಮಿಷದಲ್ಲಿ ಒಳಗಿನಿಂದ ನಮ್ಮಮ್ಮ ನನ್ನನ್ನು ಕೂಗಿ  ಕರೆದ ಹಾಗಾಯಿತು , ಹೋಗ್ಲೋ ಬೇಡ್ವೋ ಅಂತ ಒಂದೊಂದೇ ಹೆಜ್ಜೆ ಇಟ್ಟು ಒಳನೆಡೆದೆ , ಎಲ್ಲರ ಕೈಯಲ್ಲೂ ಕಾಫಿ ಲೋಟಗಳಿದ್ದವು. ಅಷ್ಟರಲ್ಲಿ ಅವಳಮ್ಮ "ಅವರಿಗೂ ಕಾಫೀ ಕೊಡಮ್ಮ "   ಎಂದಾಗ , ಪ್ರತ್ಯಕ್ಷಳಾದಳು ಅವಳು. ಕೈಯಲ್ಲಿ ಕಾಫೀ , ತಿಳಿ ನೀಲಿ ಬಣ್ಣದ ಸೀರೆಯುಟ್ಟಿದ್ದಳು , ನಾಚಿಕೆಯಲ್ಲೇ ನನ್ನ ಕಡೆ ಬಂದು , ಕಾಫೀ ಕೊಟ್ಟಳು. ಮುಗುಳುನಗೆಯನ್ನೂ ಕೂಡ ಬೀರಿದಳು. ಆ ಕ್ಷಣಮಾತ್ರದಲ್ಲೇ ಅವಳನ್ನು ನನ್ನ ಕಣ್ಗಳಲ್ಲಿ ಸೆರೆ ಇಡಿದುಕೊಂಡೆನು .. ಮನಸ್ಸಿಗೆ ಇಷ್ಟು ಹೊತ್ತು  ಕಾದದ್ದು  ಕೂಡ ಸಾರ್ಥಕವೆನಿಸಿತು .. ಅಗಾದವಾಗಿ ಆದ  ಸಂತೋಷವನ್ನು  ಆ ಕ್ಷಣಕ್ಕೆ ಸುಧಾರಿಸಿಕೊಂಡು  ಮತ್ತೊಮ್ಮೆ ಆ ಕಡೆಗೆ ತಿರುಗಿ ನೋಡುವೊಷ್ಟರಲ್ಲಿ  ಅವಳು ಮತ್ತೆ  ಆ  ಜಾಗದಲ್ಲಿ  ಇರಲಿಲ್ಲ, ಮತ್ತೆ ಕಾಣಿಯಾಗಿದ್ದಳು . ಅವಳನ್ನು ನಾನು ಮಾತನಾಡಿಸುವ ಹಂಬಲಕ್ಕೆ  ಇನ್ನೊಮೆ  ನೆಲಕಚ್ಚಿತ್ತು.
 
                      ನೆಲಕಚ್ಚಿದ ಆಸೆಗೆ ಮಣ್ಣೆಳೆದು ,  ಮನಸ್ಸಿನಲೇ ಕುಹಕ ನಗೆ ಬೀರಿಕೊಂಡು "ಒಂದು ವಾರ ಕಾದು , ಅಷ್ಟು ದೂರದಿಂದ ಬಂದು , ಏನೆಲ್ಲಾ ಅಂದುಕೊಂಡಿದ್ದ  ನನಗೆ ಕೇವಲ ಕೆಲವೇ ಕೆಲವು  ಸೆಕೆಂಡುಗಳ ಕಾಲ ಅವಳನ್ನು ತೋರಿಸಿ ಬಚ್ಚಿಟ್ಟರಲ್ಲ" ಎಂದು  ಕೋಪವು ಮತ್ತೆ ಒತ್ತರಿಸಿ  ಬಂತು, ಆದರೆ ಬಂದ ಕೋಪವನ್ನು  ತೋರಿಸಿಕೊಳ್ಳುವ ಸಂದರ್ಭವೂ  ಅದಲ್ಲವೆಂದು  ನನ್ನನ್ನು ನಾನೇ ಸಮಾಧಾನವಾಗಿಸಿಕೊಂಡೆನು . ಆದರೂ  ನಾನು  ಒಂದು ಸಾರಿ ನಮ್ಮ ಅಮ್ಮ ಮತ್ತು ಅಣ್ಣಂದಿರ ಮುಖಗಳನ್ನು ನನಗಾದ  ಸಂಕಟದ ತೀವ್ರತೆಯಲ್ಲೇ ಗುರಾಯಿಸಿದೆ ಅಥವಾ ಕೆಕ್ಕರಿಸಿ ನೋಡಿದೆ. ಒಂದೆರೆಡು ಗಂಟೆಗಳ ನಂತರ ನನ್ನ ಕಷ್ಟ ಅವರಿಗೆ  ಅರಿವಾಯಿತು. ಆಗ ನಮ್ಮ ಅಮ್ಮನೇ " ಇನ್ನೋದ್ನು ಸಾರಿ ಅವಳೊಡನೆ  ಮಾತಾಡ್ತೀಯೇನೋ ?? " ಎಂದು ಕೇಳಿದರು. ನನಗೆ  ಏನು ಹೇಳಬೇಕೋ ತಿಳಿಯಲಿಲ್ಲ , ಅವಳೊಂದಿಗೆ ಮಾತಾಡ್ತೀನಿ  ಅನ್ನೋಕೆ ಸಂಕೋಚ , ಮಾತಾಡೋಲ್ಲ  ಅನ್ನೋಕೆ  ಸಂಕಟ , ತಕ್ಷಣಕ್ಕೆ  ಹೊಳೆದ  ಯೋಚನೆಯಂತೆ  " ನಾನು ಮಾತಾಡೋದು ಏನು ಇಲ್ಲ , ನೀವೇ ಕರೆದು ಏನಾದರು ಮಾತಾಡಿ "ಎಂದೆನು . ಆಗ  ನಮ್ಮ ಅಮ್ಮ ಅವಳನ್ನು ಕರೆದು ಮಾತಾಡಿದರು , ನನ್ನೆದೆರು ಕೂರಿಸಿದರು , ನನ್ನದು ಮಾತಿಲ್ಲ ಕತೆಯಿಲ್ಲ , ಆಗಾಗ ಅವಳನ್ನು ದಿಟ್ಟಿಸುವುದು ,  ಅವಳನ್ನು ನೋಡಿ ನಗುವುದಷ್ಟೇ ಆಗಿತ್ತು ,  ಅವಳೂ ಕೂಡ ಆಗೊಮ್ಮೆ ಈಗೊಮ್ಮೆ  ನನ್ನ ಕಡೆ ಕಣ್ಣಾಡಿಸಿ ನಗುತ್ತಿದ್ದಳು. ಅಂತು ಇಂತು  ಒಂದರ್ದಗಂಟೆ ಕಾಲ ಅವಳ ಮಾತುಗಳನ್ನು  ಕೇಳಿ , ಕೋಪವೆಲ್ಲ ಹಿಂಗಿಹೋಗಿ  ,   ನಾನು ಮಾತಿಗಿಳಿಯುವ ಮುನ್ನವೇ , ನಮ್ಮ ಚಿಕ್ಕಪ್ಪ  " ಸರಿ  ನಮಗಿನ್ನು ಹೊತ್ತಾಯಿತು   , ನಾವಿನ್ನು ಹೊರಡುತ್ತೇವೆ , ನಮ್ಮನ್ನು ಬೀಳ್ಕೊಡಿ " ಎಂದಾಗ  , ಅವಳಿಗೂ  ನನ್ನ ಸಂಕಟ ಅರ್ಥವಾಗಿ,  ಚುಡಾಯಿಸಿವಂತೆ ಕಿರುನಗೆ ಬೀರಿ , ಕೂತಿದ್ದ ಜಾಗದಿಂದ ಮೇಲೆದ್ದಳು .   
ನಿಮಗಾಗಿ
ನಿರಂಜನ್       

ಶುಕ್ರವಾರ, ಫೆಬ್ರವರಿ 7, 2014

ಜಾಲಹಳ್ಳಿಯಲ್ಲಿ

                                                               ಜಾಗ್ವಾರ್ ನುಗ್ಗಿದ್ದು ....

ಬೆಳ್ಳಂಬೆಳ್ಳಿಗ್ಗೆ ,  ಮೋಡ ಮುಚ್ಚಿದ ದಿನ,  ಗಾಂಧೀ ಕೃಷಿ ವಿಶ್ವವಿದ್ಯಾಲಯದಲ್ಲಿ ಜಾಗಿಂಗ್ ಮುಗಿಸಿ , ಹತ್ತಿರವಿರುವ  ಜಾಲಹಳ್ಳಿಯ ನಮ್ಮ HMT ರಸ್ತೆಯಲ್ಲಿ ನಾನು ಮತ್ತು ನನ್ನ ತಮ್ಮ "ಮದುಸೂಧನ " ಹೀಗೆ  ನೆಡೆದು ಬರ್ತಾ ಇದ್ವಿ.  ಬೆಳಗಿನಿಂದ ನೆಡೆದು ನೆಡೆದು ದಣಿದಿದ್ದ ನಮಗೆ ಅಲ್ಲೇ ಇರುವ ಕಾಮತ್ ಹೋಟೆಲ್ ಅಲ್ಲಿ ಏನಾದರು ತಿನ್ನುವ ಬಯಕೆ ಆಗಿತ್ತು ... ಅಷ್ಟರಲ್ಲಿ  ಒಂದು ವಿಚಿತ್ರ ಘಟನೆಯ ನಡೆಯುತ್ತೆ , ನಿಮಗೆ ಅದರ ಬಗ್ಗೆ  ಹೇಳ ಬಯಸುತ್ತೇನೆ... ಆ ಘಟನೆ  ರೊಚಕವಾಗಿಯೆನೋ ಇದೆ , ಅದು ಇನ್ನು ರೊಚಕವಾಗಬೇಕೆಂದರೆ ,  ನಾನು  ನಿಮಗೆ ಮೊದಲು ನಮ್ಮ ಜಾಲಹಳ್ಳಿ ಮತ್ತು ಅದರ ಸುತ್ತ ಮುತ್ತಲಿನ ಪರಿಸರದ  ಬಗ್ಗೆ ಸ್ವಲ್ಪ  ಹೇಳಲೇ ಬೇಕು .. ಆಗ ನಾ ಹೇಳುವ ಕತೆಯ ಬಗ್ಗೆ ಸ್ವಲ್ಪ ಕಲ್ಪನೆಯೂ ನಿಮಗೆ ಬಂದು ಕತೆ ಇನ್ನು ಮಜಾ ಕೊಡುತ್ತೆ... 
 
              ಹೆಸರಿಗೆ ತಕ್ಕಂತೆ ಜಾಲಹಳ್ಳಿ ಥೇಟ್ ಹಳ್ಳಿಯೇ .. ಬೆಂಗಳೂರಿನಲ್ಲಿದ್ದರು ಇನ್ನು ಅದು ಹಳ್ಳಿಯಾಗಿಯೇ ಉಳಿದಿದೆ. ಸುತ್ತಲು ಮರ ಗಿಡಗಳು , ಕಡಿಮೆ ಜನಸಂದಣಿ , ದೊಡ್ಡ ದೊಡ್ಡ ಖಾಲಿ ಜಾಗಗಳು ..  ಒಂದು ಕಡೆ HMT ವಾಚ್ ಕಂಪನಿ , ಮತ್ತೊಂದು ಕಡೆ  BEL ಕಂಪನಿ. ಇಲ್ಲಿಯ ಹಳ್ಳಿಯಂತಹ ಪ್ರಕೃತಿ ಉಳಿವಿಕೆಗೆ ಈ ಎರೆಡು ಕಂಪನಿಗಳು ಸಹ ತಮ್ಮದೇ  ರೀತಿಯಲ್ಲಿ  ಕಾಣಿಕೆ ನೀಡಿವೆ. ದೊಡ್ಡ ದೊಡ್ಡ ಉದ್ಯಾನವನಗಳು , ನೀಟಾದ ರಸ್ತೆಗಳು , ರಸ್ತೆಯ ಇಕ್ಕೆಲಗಳಲ್ಲೂ ಈ ಕಂಪನಿಯೇ ನಿರ್ವಹಿಸುವ ಮರ ಗಿಡಗಳು ನಮ್ಮ ಜಾಲಹಳ್ಳಿಗೆ ಒಂದು ರೀತಿಯ ಅಂದವನ್ನು ತಂದುಕೊಟ್ಟಿವೆ...  ಬೆಂಗಳೂರಿನ ಬೇರೆ ಯಾವುದೇ ಭಾಗದಿಂದ ಬರುವ ಜನರಿಗೆ ಜಾಲಹಳ್ಳಿ ಒಂದು ರೀತಿಯಾಗಿ ಕಾಡಿನಂತೆ ಕಾಣುತ್ತೆ , ಅಲ್ಲಿ ಬೀದಿ ಬೀದಿ ಸುತ್ತುವ ನಾವೆಲ್ಲರೂ ಕಾಡು ಜನರಂತೆ ಕಾಣುತ್ತೇವೆ...  ಈ ವಾತಾವರಣಕ್ಕೆ  ಮಾರುಹೋಗಿಯೇ ನಾವು ಮೊದಲು ಬೆಂಗಳೂರಿಗೆ ಬಂದ ಸಮಯದಲ್ಲಿ ಸುಮಾರು 8-10 ವರ್ಷಗಳ ಕಾಲ ಇಲ್ಲಿಯೇ ವಾಸಮಾಡಿದ್ದೆವು. ಒಂದು ತರಹ ಜಾಲಹಳ್ಳಿ ನನಗೆ ತವರು ಮನೆ ಇದ್ದಂತೆ ಅಂತಲೂ ಹೇಳಬಹುದು.  ನಾವು ಎಲ್ಲಿಗೆ ಹೋದರು , ಬೆಂಗಳೂರಿನ ಯಾವ ಭಾಗದಲ್ಲಿ ಇದ್ದರೂ  ಸಹ ನಾನು  ಜಾಲಹಳ್ಳಿಗೆ  ವಾರಕ್ಕೆ ಒಮ್ಮೆಯಾದರೂ  ಬೇಟಿ ಕೊಡಲೇಬೇಕು. ಈಗಲೂ  ಜಾಲಹಳ್ಳಿಯಲ್ಲಿಯೆ  ಇರುವ  ನಮ್ಮ ತಮ್ಮ  ಮದು ಜೊತೆ  ಜಾಲಹಳ್ಳಿಯ ಬೀದಿ ಬೀದಿಗಳಲ್ಲಿ ನಾವಿಬ್ಬರೂ ಸುತ್ತಲೇಬೇಕು. ಹಾಗೆ  ಸುತ್ತಿ ಬಂದರೆ ಮಾತ್ರ  ನನಗೆ ಏನೋ ಒಂದು ತರಹದ ನೆಮ್ಮದಿ ಹಾಗು ಸಮಾಧಾನ.. ಅಲ್ಲಿಯ ವಾತಾವರಣ , ಕಡಿಮೆ ಜನಸಂದಣಿ , ವಿಶಾಲವಾದ HMT ಹಾಗು BEL ರಸ್ತೆಗಳು , ಸುತ್ತಲಿನ ಮರಗಿಡಗಳು , ಸಾಂಪ್ರದಾಯಿಕ ಜನರು , ಅಲ್ಲಿರುವ ಉದ್ಯಾನವನಗಳು , ದೇವಸ್ತಾನಗಳು  , ಸಂಜೆಯ ನಂತರ ಸಿಗುವ ತಿಂಡಿ-ತಿನಿಸುಗಳು ಮೊದಲಿನಿಂದಲೂ ನನ್ನನ್ನು ಆಕರ್ಷಿಸುತ್ತಲೇ ಇವೆ...
 
                    ಇತ್ತೆಚಿಗೆ ಅಲ್ಲಿ ಇಲ್ಲಿ  ಉದ್ದನೆಯ ಕೆಲವು appartments ಗಳೂ  ಎದ್ದಿರುವುದು ಬಿಟ್ಟರೆ  ಜಾಲಹಳ್ಳಿ  ಇನ್ನು ತನ್ನ ಹಳೆಯ ಮಜಲನ್ನೆ ಉಳಿಸಿಕೊಂಡಿದೆ ಎಂದರೆ ತಪ್ಪಾಗಲಾರದು . ಅನೇಕ ಮರಗಿಡಗಳು ಈ ಜಾಲಹಳ್ಳಿಯನ್ನು ಇನ್ನೂ  ಆವರಿಸಿಕೊಂಡಿವೆ.  ಒಂದತ್ತು ವರ್ಷದ ಇಂದೇ BEL ಕಂಪನಿಯ ಹತ್ತಿರ , HMT ಸುತ್ತಮುತ್ತ ಚಿರತೆಗಳು ಕೂಡ ಹಾಗೊಮ್ಮೆ ಹೀಗೊಮ್ಮೆ  ಕಾಣಿಸಿಕೊಳ್ಳುತ್ತ  ಇದ್ವಂತೆ,  ಅವುಗಳ ಬಗ್ಗೆಯೂ  ರೋಚಕ ಕತೆಗಳು  ಇವೆ.
 
                   ಮಲ್ಲೇಶ್ವರಂನ ಮಂತ್ರಿ ಮಾಲು , ಗರುಡ ಮಹಲ್ಲು , ಫೋರಂಗಳು ಕೊಡದ ಮಜವನ್ನು ನಮಗೆ ಈ ಜಾಲಹಳ್ಳಿ ಇಷ್ಟು ದಿನ  ಉದಾರವಾಗಿ ಕೊಟ್ಟಿದೆ.. ಇಂತಹ ವಾತವರಣದಲ್ಲಿ ಆದಿನ ನಾ ಮತ್ತೆ ಮದು , ಅದೇ ರೀತಿಯ  ಮಜವನ್ನು ಅನುಭವಿಸುತ್ತ HMT ಮೈನ್ ರೋಡಲ್ಲಿ , ಕಾಮತ್ ಹೋಟೆಲ್ಲು  ಬಳಿ , ಯಾವುದೋ ಒಂದು ವಿಷಯ ಮಾತಾಡ್ಕೊಂಡು BEL ಕಡೆಯಿಂದ ಬರ್ತಾ ಇದ್ವಿ . ಯಾರೋ ಹಿಂದಿನಿಂದ  " ಹೇ ನಿರಂಜನ್ , ಮಗಾ ... ನಿರಂಜನ್ " ಎಂದು  ಕೂಗಿದಂತಾಯಿತು. ಕೂಗಿನ ದಿಕ್ಕಿನಲ್ಲಿ  ತಿರುಗಿ  ನೋಡಿದೆ , ಅದು ನಮ್ಮ ಜಾಲಹಳ್ಳಿಯ ನಂಜೇಶ .."  . ನಂಜೇಶ ನನ್ನ ಒಳ್ಳೆಯ ಸ್ನೇಹಿತ , ಆತ  ಕೂಡ ಜಾಲಹಳ್ಳಿಯ ಮೂಲನಿವಾಸಿಯೇ. ನಾವಿಬ್ರು ಒಂದೊಷ್ಟು ದಿನ ಒಂದೇ  ಕಂಪನಿಯಲ್ಲಿ  ಕೆಲಸ ಮಾದಿದ್ವಿ.ನಮ್ಮ ಏರಿಯದ ಹುಡುಗ ಆದ್ದರಿಂದ  ಸ್ವಲ್ಪ  ಜಾಸ್ತಿ ಸ್ನೇಹನೇ  ನಮ್ಮಿಬ್ಬರ ನಡುವೆ ಬೆಳೆದಿತ್ತು. ನಾ ಜಾಲಹಳ್ಳಿಗೆ ಹೋದಾಗ  ಹಾಗೊಮ್ಮೆ ಹೀಗೊಮ್ಮೆ ಸಿಗ್ತಾನೆ ಇರ್ತಾನೆ. ಅದೇ ರೀತಿ ಮತ್ತೆ ಆದಿನ ಕೂಡ ಸಿಕ್ಕಿದ್ದ. ಉಭಯ ಕುಶೊಲೊಪರಿಗಳ ನಂತರ  " ಬಾ ಮಗ ಟೀ ಕುಡಿಯೋಣ , ಕಾಮತ್ ಅಲ್ಲಿ "ಎಂದಾಗ , ತಕ್ಷಣಕ್ಕೆ ನಾ ಒಪ್ಪಿ ,ಕಾಮತ್ ಹೊಳಗೆ ನಡೆದೆವು.
  
                ಜಾಲಹಳ್ಳಿಗೆ ಹಳಬನಾದ ನಂಜೇಶ ತನ್ನ ಭಾರಿ ಹವಾ ತೋರಿಸುತ್ತ , ಕಾಮತ್ ಹೋಟೆಲ್ಲಿನಲ್ಲಿ ನಮಗೆ ಒಳ್ಳೆಯ ಜಾಗ ಗಿಟ್ಟಿಸಿದ ಕೂತು ತಿನ್ನಲು . ನಾವು ಲೇಟ್ ಆಗ ಬಹುದೆಂದು ಬರಿ ಟೀ ಕುಡಿಯಲು ನಿರ್ಧರಿಸಿ, ಮಾಣಿಗೆ ಕೇವಲ ಟೀ  ತರಲು ಹೇಳಿದೆವು... ಈ ಹೊಟೇಲುಗಳಲ್ಲಿ  3 ಟೀ ಹೇಳಿದರು ಅಷ್ಟೇ ಕೊಡುತ್ತಾರೆ , 2/3 ಹೇಳಿದರು 3 ಟೀ ಕೊಡುವೊಷ್ಟೇ ಕೊಡುತ್ತಾರೆ , ಹಾಗಾಗಿ ನಾವು 2/3 ಟೀ ಗೆ ಹೇಳಿ ಕೂತೆವು. ಅಷ್ಟರಲ್ಲಿ  ನಮ್ಮ ನಂಜೇಶ " ಇವರೆಲ್ಲ ನಮ್ಮ ಹುಡುಗ್ರು ಕಣೋ , ಸ್ವಲ್ಪ ಟೀ ಚೆನ್ನಾಗಿ , ಸಕ್ಕರೆ ಹಾಕಿ  ಕುದಿಸಿ , ಸೋಸಿ ತಾ " ಎಂದು ತನ್ನದೆ ಆದ  ಒಂದು ಗತ್ತಿನಲ್ಲಿ ಮಾಣಿಗೆ  ಹೇಳಿದ. ಮಾಣಿ  " ಸರಿ ಅಣ್ಣ " ಎಂದು ಸ್ವಲ್ಪ ಭಯ-ಭಕ್ತಿಯಿಂದಲೇ ಟೀ ತರಲು  ಹೋದ. ಆ  ಮಾಣಿ ಈ ರೀತಿ ಭಯ ಭಕ್ತಿ ತೋರಿಸಲು  ನಮ್ಮ ನಂಜೇಶ ತೊಟ್ಟಿದ್ದ ತಿಳಿ-ಬಿಳಿ ಬಣ್ಣದ ಖಾದಿ ಶರ್ಟ್ ಕಾರಣವಿರಬಹುದು...

              ಬಿಸಿ-ಬಿಸಿ ಟೀ ಬಂತು , ಸುತ್ತಲು ಹಸಿರು ಮರಗಿಡಗಳು , ಪಕ್ಕೆಕ್ಕೆ ದೊಡ್ಡ ಪಾರ್ಕ್ , ಸ್ವಲ್ಪ ಮುಂದೆ ಕಣ್ಣಾಯಿಸಿದರೆ HMT ಕಾಂಪೌಂಡ್ , ಅದರಲ್ಲಿ ಹಳೆಯ ಬಾರಿ ಮರಗಳು , ಆ ಮರಗಳು  ಬೀಸುವ ಗಾಳಿಗೆ ಬೇಸಣಿಗೆಯಂತೆ ಬೀಗುತ್ತಿದ್ದವು.. ಮೊದಲೇ ಹೇಳಿದ ಹಾಗೆ ನಮ್ಮ ಸುತ್ತಲು ಕಾಡಿನಂತಹ ವಾತಾವರಣವೇ ಇತ್ತು , ನಮಗೆ ನಾವೆಲ್ಲೋ ಯಾವುದೋ ಕಾಡ ಮಡಿಲಲ್ಲಿ ಬಿಸಿ ಬಿಸಿ ಟೀ ಕುಡಿಯುವಂತೆ ಆಗುತ್ತಿತ್ತು... ಪಿಂಗಾಣಿ ಸಾಸರ್ ನಲ್ಲಿ ಇದ್ದ ಟೀಯನ್ನು  15 ಸೆಕೆಂಡ್ಗೊಮ್ಮೆ ಸ್ವಲ್ಪ ಸ್ವಲ್ಪವೆ ಹೀರುತ್ತಾ , ನಂಜೇಶನ  ಹಾಸ್ಯ ಬರಿತ ಡೈಲಾಗುಗಳನ್ನು ಕೇಳುತ್ತ , ಸುತ್ತಲಿನ ಕಾಡಿನಂತಹ ವಾತಾವರಣದ ಸವಿಯುತ್ತ , ಕಾಲ ಕಳೆಯುತ್ತಿದ್ದೆವು ನಾನು ಮತ್ತು ಮದು .. ಇಲ್ಲಿಯವರೆಗೂ ಅದು ಇದು ಹೇಳಿ ನಮ್ಮನ್ನು ನಗಿಸುತ್ತಾ ಇದ್ದ ನಮ್ಮ ನಂಜೇಶ ಇದ್ದಕಿದ್ದಂತೆ ..



"ಮಗಾ , ಮೊನ್ನೆ ಇಲ್ಲಿ ಒಂದು ಜಾಗ್ವಾರ್  ಬಂದಿತ್ತು ,  ಬಂದು ಇಲ್ಲೇ ಒಂದು ಮನೆಗೆ ನುಗ್ಗಿತ್ತು ಕಣೋ " ಎಂದ . ಆ ಕ್ಷಣಕ್ಕೆ ಹೌಹಾರಿದ ನಾನು ಮತ್ತೆ ಮದು  "ಹೋದೇನೋ  ??. .. ಅದೇಗೋ  ಇಲ್ಲಿಗೆ  ಬಂತು  ?? " ಎಂದು ಪ್ರಶ್ನಿಸಿದೆವು .. "ಮಗ ನೀವು ನೋಡ್ಬೇಕು ಅದು ಹೇಗೆ ಆ ಮನೆಗೆ ನುಗ್ಗಿದೆ ಅಂತ ,, ಊಷ್ ಹಾಗ್ತೀರ ಅಷ್ಟೇ ,,, " ಎಂದ .. ನಾವು  ಬರಿ ಅವನ ಮುಖಭಾವವನ್ನು  ನೋಡಿಯೇ ಬೆಚ್ಚಿದೆವು.. ಕುತೂಹಲ ಹೆಚ್ಚಾಯಿತು ,, " ಅಲ್ಲೋ  ನಂಜೇಶ  ಅದು ಹೇಗೋ ಇಲ್ಲಿಗೆ ಬಂತು , ಅದರಲ್ಲೂ  ಇಂತಾ  ಜಾಗಕ್ಕೆ ?? "... ಅದಕ್ಕೆ  ನಮ್ಮ ಮದು ಸಮಾಧಾನದಲ್ಲಿ " ಬಂದ್ರು  ಬಂದಿರಬಹುದು ಕಣೋ, ಹೀಗೆನು ಎಲ್ಲ ಕಡೆ ಇವೆ ಅವು " ಎಂದನು.. ನನ್ನ ಮನಸ್ಸಿನಲು ಇದ್ದರು ಇರಬಹುದು  ಎಂದು   " ಮೊದಲೇ ಇಲ್ಲಿ ,, ಎಲ್ಲಿ ನೋಡಿದರು ಅಲ್ಲಿ ಮರಗಿಡಗಳು , ಜನಸಂದಣಿಯೊಂತು ಬಲು ಕಡಿಮೆ , ಜಾಗ್ವಾರ್  ಬಂದಿದ್ದರೂ  ಬಂದಿರ ಬಹುದು "ಅಂತ ಮನಸ್ಸಿನಲ್ಲೇ ಅಂದುಕೊಂಡೆ ...

             ಆದರೆ ಆ ಜಾಗ್ವಾರ್  " ಇಲ್ಲಿಗೆ ಯಾವ ಕಡೆಯಿಂದ ಬಂದಿರಬಹುದು , ಅದೇಗೆ ಇತ್ತು "  ಎನ್ನುವ ಸಂಶಯ ಶುರುವಾಯಿತು ,  " ಅಲ್ಲ ಮಗ ಅದು ಯಾವ ಕಡೆಯಿಂದ  ಬಂತು , ಅಷ್ಟೊತ್ತಲ್ಲಿ ಯಾರು ಜನರು ಇರಲೇ ಇಲ್ಲವ ??? " ಎಂದು ನಾ ಕೇಳಿದೇನು ...

" ಇಲ್ಲ ಮಗ ಬೇಜಾನ್ ಜನ ಇದ್ರೂ , ನಾವು ಕೂಡ ಇಲ್ಲೇ ಕ್ರಿಕೆಟ್ ಆಡ್ತಾ ಇದ್ವಿ , ಹೋಟೆಲ್ ಮುಂದೆ ಇದೆಯಲ್ಲ ಅದೇ ಗ್ರೌಂಡಲ್ಲಿ , ಜಾಗ್ವಾರ್  ಆ ಕಡೆಯಿಂದಲೇ  ಬಂತಂತೆ , ನನ್ ಫ್ರೆಂಡ್ಸ್ಸ ಕೂಡ ನೋಡಿದ್ರಂತೆ " ಎಂದು HMT ವಾಚ್ ಫ್ಯಾಕ್ಟರಿ ಕಡೆ ಕೈ ತೋರಿಸಿದ ... ನಾ ತಕ್ಷಣಕ್ಕೆ ಬೆಚ್ಚಿ ಬಿದ್ದೆ , ಯಾಕೆಂದ್ರೆ  ಆ ಕಡೆ ಜನ ಸಂದಣಿ ಇರುವುದೇ ಇಲ್ಲ , ಬಾರಿ ಮರಗಳು , ಎತ್ತಲು ಬರಿ ಪೊದೆಗಳು , ಆಕಡೆಯಿಂದ ಬಂದಿದ್ದರು ಬಂದಿರಬಹುದು ಎಂದು ನನಗೆ ಅನ್ನಿಸಿತು.. ಆ ಕ್ಷಣಕ್ಕೆ ಸ್ವಲ್ಪ  ಭಯವೂ  ಆಯಿತು , ನಾನು ಮತ್ತು ಮದು ಅದೇ   HMT ವಾಚ್ ಫ್ಯಾಕ್ಟರಿ ಕಡೆಗೆ ಬಹುವಾಗಿ ವಾಕ್ ಹೋಗ್ತಾ ಇದ್ವಿ ಹೊತ್ತು-ಗೊತ್ತೆನ್ನದೆ.. "ಯಪ್ಪಾ ನಾವಿಬ್ಬರೇ ಇದ್ದ್ದಾಗ ಜಾಗ್ವಾರ್ ಬಂದಿದ್ದಾರೆ ಏನ್ ಆಗ್ತಾ ಇತ್ತು " ಎಂದು ಭಯವಾಯಿತು... "ಮೊನ್ನೆ ಮೊನ್ನೆಯ ತನಕ ನಮ್ಮ ಅಮ್ಮ ಕೂಡ ಆ ಕಡೆ ವಾಲ್ಕಿಂಗ್ ಗೆ  ಅಂತ ಹೋಗಿ , ಪೊದೆಗಳನ್ನೆಲ್ಲ ಬೆದಕಿ , ದೇವರಿಗೆ ಅಂತ ಹೂವು ತರ್ತ ಇದ್ರೂ , ಸದ್ಯ ಆಗ ಬಂದಿಲ್ಲ , ಈ ಪ್ರಾಣಿ " ಅಂತ ಅಂದುಕೊಂಡೆ

" ಪುಣ್ಯಕ್ಕೆ  ಮಗಾ ,  ಆ ಜಾಗ್ವಾರ್ ಅವರ ಮನೆಗೆ ನುಗ್ಗಿದಾಗ ಅವರು ಮನೆಯಲ್ಲಿ  ಇರಲಿಲ್ಲ  ನೋಡು , ಬಚಾವ್ದರು  ಅವರು..  ಈ ಮೈಸೂರ್ ಗೆ ಹೋಗಿದ್ರಂತೆ ಯಾರದೋ ಸೀಮಂತ ಕಾರ್ಯ ಅಂತ "  ಎಂದು  ನನಗೆ ಆ ಮನೆಯವರ ಗುರುತು ಹೇಳಿದ .. ಅಷ್ಟೊತ್ತಿಗೆ ನನಗೆ ಆ ಮನೆ ಯಾವುದು ಎಂದು ತಿಳಿದಿತ್ತು... ಇದನೆಲ್ಲ ನಂಜೇಶ ನನಗೆ ಹೇಳುವಾಗ " ಅದು ಹೇಗೆ ಬಂದಿರಬಹುದು , ಇಲ್ಲಿಗೆ ಯಾಕೆ ಬಂತು , ಯಾವ ಕಾಡಿನಿಂದ ಬಂತು " ಎನ್ನುವ ಪ್ರಶ್ನೆಗಳೆಲ್ಲ ಕಾಡ  ತೊಡಗಿದವು ...

"ನಂಜೇಶ ಅದು ,, ಇಲ್ಲಿಗೆ ಹೇಗೋ ಬಂತು , ?? ಇಲ್ಲಿಗೆ ಬಾರೋ ತನಕ ಯಾರ ಕಣ್ಣಿಗೂ ಬೀಳಲೇ ಇಲ್ಲವಾ ?? " ಎಂದಾಗ .. "ಹೇ ಮಗಾ , ಅದು ಇಲ್ಲಿಗೆ ಯಾವಾಗ್ಲೂ ಬರ್ತಾ ಇತ್ತು ಕಣೋ , ನಾವು ಬೇಜಾನ್ ಸರಿ ನೋಡಿದ್ವಿ , ಆ ಮರಗಳಿಲ್ವಾ  , ಅಲ್ಲೇ ನೆರಳಲ್ಲಿ ನಿಂತಿರ್ತ ಇತ್ತು " ಎಂದನು ... ಅದಕ್ಕೆ ನಾ " ಅಂದ್ರೆ ನೀವು ಅದನ್ನು ಮೊದ್ಲೇ ನೋಡಿದ್ರ ??? " ಎಂದಾಗ " ಹೌದು ಮಗ , ಇಲ್ಲೇ ಓಡಾಡ್ಕೊಂಡು  ಇರ್ತಿತ್ತು ,, ಅದು ಇಲ್ಲಿ ಜಾಲಹಳ್ಳಿ ಕ್ರಾಸ್  ಅನು ಸೋಲಾರ್ ಇದೆಯಲ್ಲ , ಅದರ ಓನರ್  ಮಗಂದು ಎಂದಾಗ ... "ಅಯ್ಯೋ ಆ ಮುಂಡೆ  ಮಗ ಯಾಕೆ  ಈ ನಾಯಿ-ಪಾಯಿ ಸಾಕ ಬಿಟ್ಟು ,  ಈ ಜಾಗ್ವಾರ್ ಸಾಕಿದ , ಇಲ್ಲಿಗೆ  ಯಾಕೆ ಅದನ್ನ ಕರ್ಕೊಂಡು ಬರ್ತಿದ್ದ " ಅಂತ ಆಶ್ಚರ್ಯ ಆಯ್ತು , ಭಯದಲ್ಲಿ ... ಅರಣ್ಯಾದಿಕಾರಿಗಳು  ಇವನು ಜಾಗ್ವಾರ್ ಸಾಕೋಕೆ ಹೇಗೆ ಲೈಸೆನ್ಸ್ ಕೊಟ್ರು ಎಂದು ಯೋಚಿಸುತ್ತಾ ...  " ಅಲ್ಲ ನಂಜೇಶ ಅವನಿಗೆ ಅದನ್ನು ಇಟ್ಕೊಳೋಕೆ ಲೈಸನ್ಸ್ ಇತ್ತಾ  " ಎಂದಾಗ , " ಏನೋ ಮಗ ಹಿಂಗೆ ಅಂತೀಯ , ಅವಾ ಬಾರಿ ಖುಳ ಕಣೋ ,, ಬೇಜಾನ್ ಮಡಿಗಿದಾನೆ " ಎಂದನು .. "ಆದರೂ  ಅದೇಗೆ ಆವಾ ಜಾಗ್ವಾರ್ ಸಾಕಿದ ಅಂತ ನಾ ಯೋಚಿಸುತ್ತಲೇ ಇದ್ದೆ .. ಅಷ್ಟೊತ್ತಿಗೆ ನಂಜೇಶ " ಮಗ ಇಲ್ಲೇ ಆಟ ಆಡ್ತಾ ಇದ್ವಿ ಕಣೋ , ನಮ್ಮ ಹುಡುಗ ತೋರಿಸಿದ , ನೋಡೋ ಜಾಗ್ವಾರ್ ಅಂತ , ನಾವು ಇದೇನೋ ಹೀಗೆ ಬರ್ತಾ ಇದೆ ಅಂತ ನೋಡ್ತಾನೆ ಇದ್ವಿ ,, ನೋಡ್ತಾ ನೋಡ್ತಾ ನಮ್ಮ ಮುಂದೇನೆ ಹೋಯ್ತು , ಹಂಗೇ  ಹೋಗಿ , ಆ ದೊಡ್ಡ ಚರಂಡಿ ಹಾರಿ ನುಗ್ಗೆ ಬಿಡ್ತು ಕಣೋ ಆ ಮನೆಗೆ " ಎಂದಾಗ ನಾ ಅಲ್ಲೇ ಸುಸ್ತಾಗಿದ್ದೆ....

" ಆಮೇಲೆ ಸ್ವಲ್ಪ ಹೊತ್ತಿಗೆ ಜನ ಸೇರಿದ್ರು , ಜಾಗ್ವಾರ್ ನ ಸೀಜ್ ಮಾಡಿ , ಎತ್ತಕ್ಕೊಂಡು ಹೋದರು " ಎಂದು ಏನೋ ಒಂದು ರೀತಿಯ ಭಾವದಲ್ಲಿ ನಮಗೆ ಹೇಳಿದ.. ನಾ ಅಂತೂ  " ಜಾಗ್ವಾರ್ ಅವನಿಗೆ ಹೇಗೆ ಸಿಗ್ತು , ಅವನಿಗೆ ಹೇಗೆ ಲೈಸನ್ಸ್ ಸಿಕ್ತು ಅದುನ್ನ ಸಾಕಲು , ಯಾವ್ ಕಡೆಯಿಂದ ಬಂದು ಅದು ಈ ಮನೆಗೆ ನುಗ್ತು , ಬರ್ಬೇಕಾದ್ರೆ ಜನಕ್ಕೆ ಏನು ತೊಂದ್ರೆ ಮಾಡಲಿಲ್ಲವ .. ಸದ್ಯ ನಾವು ಸಿಕ್ಕಲಿಲ್ಲ ಅದಕ್ಕೆ " ಅಂತ ಅಂದುಕೊಳ್ತಾ ಇದ್ದೆ.. ಅಷ್ಟರಲ್ಲಿ  ನಮ್ಮ ನಂಜೇಶ  "ನೋಡು ಮಗ ಅದರ ಫೋಟೋ ತಕ್ಕೊಂಡಿದಿನಿ.. ಮಸ್ತ್ ಬಂದಿದೆ ,,, ಫೇಸ್ ಬುಕ್ ಅಲ್ಲಿ ಅವತ್ತೇ  ಶೇರ್ ಮಾಡಿದ್ದೆ,,, ನೊಡಿರ್ಲಿಲ್ಲವಾ " ಎಂದು ಬೇಜಾನ್ ಸಮದಾನದಲ್ಲಿ ಹೇಳಿದ..  ನಾ ಅದಕ್ಕೆ " ಹೌದೇನೋ , ಜಾಗ್ವಾರ್ ಬಂತು ಅಂತೀಯ , ಅವರ ಮನೆಗೆ ನಮ್ ಕಣ್ಣ್ಮುಂದೆನೇ  ನುಗ್ತು ಅಂತೀಯ , ಫೋಟೋ ಬೇರೆ ತೆಗೆದೇ ಅಂತೀಯ , ಭಯ ಆಗ್ಲಿಲ್ಲೆನೊ"  ಅಂದ್ರೆ .. " ಅದ್ರಲೇನು ಭಯ ಮಗ  , ನೋಡು ಹೇಗೆ ಬಂದಿದ್ದೆ ಫೋಟೋ , awesome ಆಗಿದೆ ಅಲ್ವ "  ಎಂದ ನಮಗೆ ಆ ಫೋಟೋ ತೋರಿಸಿದ ...



              ಭಾರಿ ಕುತೂಹಲದಿಂದ  , ಅಶ್ಚರ್ಯದಿಂದ , ಭಯದಿಂದ  ಫೋಟೋ ನೋಡಿದ ಮೇಲೆನೇ  ನನಗೆ ಗೊತ್ತಾಗಿದ್ದು ಇಷ್ಟೋ ತನಕ  ನಮ್ಮ ಜಾಲಹಳ್ಳಿ ನಂಜೇಶ  ಗುಣಗಾನ ಮಾಡಿದ್ದು  ಜಾಗ್ವಾರ್ ಅನ್ನೋ  ಪ್ರಾಣಿಯ ಬಗ್ಗೆ ಅಲ್ಲ ಎಂದು ...  ಅಂತು ಇಂತು ಜಾಗ್ವಾರ್ ಕತೆ ಹೇಳಿ ಮುಗಿಸಿದ ನಂಜೇಶ  ,  ಕತೆ ಕೇಳಿ , ಸುಮ್ಮನೆ ಏನೆಲ್ಲಾ ಯೋಚಿಸಿ ನಾ ಸುಸ್ತಾಗಿದ್ದೆ , ನಂಜೇಶನಿಗೆ ನಗುತ್ತಲೇ  ನಮಸ್ಕಾರ ಹೇಳಿ ನಾನು ಮತ್ತೆ ಮದು ಮನೆಗೆ ವಾಪಸ್ ಆದೆವು ಮನಸಿನ್ನಲ್ಲೆ  ಹುಸಿ ನಗೆ ಬೀರುತ್ತ ....


ನಿಮಗಾಗಿ
ನಿರಂಜನ್